ರೇಪ್ ಮಾಡಿ ಬ್ಲಾಕ್‌ಮೇಲ್ ಆರೋಪ: ಹುಡುಗಿ ಮೊಬೈಲ್‌ನಿಂದ ಮೆಸೇಜ್ ಮಾಡಿ ಕರೆಸಿ ಕೊಲೆ

By Anusha KbFirst Published Jul 9, 2024, 4:33 PM IST
Highlights

ದೆಹಲಿಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಯುವಕನೋರ್ವನನ್ನು ಪ್ರೀತಿಯ ನೆಪದಲ್ಲಿ ಕರೆಸಿ ಯುವತಿ ಮನೆಯವರು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.

ನವದೆಹಲಿ: ದೆಹಲಿಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಯುವಕನೋರ್ವನನ್ನು ಪ್ರೀತಿಯ ನೆಪದಲ್ಲಿ ಕರೆಸಿ ಯುವತಿ ಮನೆಯವರು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಆದರೆ ಯುವತಿ ಮನೆಯವರು ಬೇರೆಯದೇ ಆರೋಪ ಮಾಡಿದ್ದಾರೆ. ಆತ ತಮ್ಮ ಮಗಳ ಮೇಲೆ ರೇಪ್ ಮಾಡಿ ಬಳಿಕ ಬ್ಲಾಕ್‌ಮೇಲ್ ಮಾಡುತ್ತಿದ್ದ ಇದೇ ಕಾರಣಕ್ಕೆ ಆತನನ್ನು ವಿಚಾರಿಸಿಕೊಳ್ಳಲು ಕರೆಸಿದ್ದೆವು ಎಂದು ಯುವತಿಯ ಪೋಷಕರು ಹೇಳಿದ್ದಾರೆ. ಆದರೆ ಈ ಆರೋಪವನ್ನು ಯುವಕನ ತಾಯಿ ಅಲ್ಲಗಳೆದಿದ್ದಾರೆ. 

ಕೊಲೆಯಾದ ಯುವಕನನ್ನು ಹಿಮಾಂಶು ಶರ್ಮಾ ಎಂದು ಗುರುತಿಸಲಾಗಿದೆ. ಈಶಾನ್ಯ ದೆಹಲಿಯಲ್ಲಿ ವಾಸ ಮಾಡ್ತಿದ್ದ ಈತನನ್ನು ಯುವತಿ ಕಡೆಯವರು ಯುವತಿ ಮೊಬೈಲ್‌ನಿಂದಲೇ ಮೆಸೇಜ್ ಮಾಡಿ ಕರೆಸಿ ಬಳಿಕ ದೆಹಲಿಯಿಂದ ಉತ್ತರ ಪ್ರದೇಶದ ಬಾಘ್‌ಪತ್‌ಗೆ ಅಪಹರಿಸಿದ್ದಾರೆ. ಬಳಿಕ ಅಲ್ಲಿ ಚೆನ್ನಾಗಿ ಆತನಿಗೆ ಬಾರಿಸಿದ್ದು, ಪರಿಣಾಮ ತರುಣ ಹಲ್ಲೆಯಿಂದಾಗಿ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 7 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. 

Latest Videos

ಮರ್ಯಾದೆ ಹತ್ಯೆ: ತಂದೆಯಿಂದಲೇ ಮಗಳ ಕೊಲೆ, ಪ್ರೇಮಿ ಆತ್ಮಹತ್ಯೆ!

ಹಿಮಾಂಶುವಿಗೆ ಶನಿವಾರ ಸಂಜೆ ಹುಡುಗಿ ಫೋನ್‌ನಿಂದ ಕರೆ ಬಂದಿತ್ತು.  ಆತ ಮನೆ ಬಿಡುತ್ತಿದ್ದಂತೆ ಯುವತಿ ಕಡೆಯ ನಾಲ್ಕರಿಂದ 5 ಜನ ಆತನನ್ನು ಉತ್ತರ ಪ್ರದೇಶದ ಬಾಘಪತ್‌ಗೆ ಅಪಹರಿಸಿದ್ದಾರೆ. ನಂತರ ಕೊಲೆ ಮಾಡಿದ್ದಾರೆ. ಯುವತಿ ಕಡೆಯವರು ಮಾಡುತ್ತಿರುವ ಅತ್ಯಾಚಾರ ಆರೋಪವೆಲ್ಲ, ಸುಳ್ಳು ಎಂದು ಹಿಮಾಂಶು ಚಿಕ್ಕಪ್ಪ ಅನಿಲ್‌ಕುಮಾರ್ ಶರ್ಮಾ ಆರೋಪಿಸಿದ್ದಾರೆ.

ಕೊಲೆಯಾದ ಹಿಮಾಂಶು, ತಮ್ಮ 19 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ಇತ್ತ ಯುವತಿ ತಾಯಿ ದೂರು ನೀಡಿದ್ದಾರೆ ಎಂದು ಬಾಘ್‌ಪತ್ ಎಎಸ್‌ಪಿ ಎನ್‌ಪಿ ಸಿಂಗ್ ಹೇಳಿದ್ದಾರೆ. ಹಿಮಾಂಶುವಿನ ಈ ಬ್ಲಾಕ್‌ಮೇಲ್  ವಿಚಾರವನ್ನು ಹುಡುಗಿ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ತನ್ನ ಸೋದರನಿಗೆ ತಿಳಿಸಿದ್ದಳು. ಇದಾದ ನಂತರ ಅವರು ಕೆಲ ಸಂಬಂಧಿಕರನ್ನು ಕರೆದುಕೊಂಡು ದೆಹಲಿಗೆ ಬಂದಿದ್ದಾರೆ. ಬಳಿಕ ಯುವತಿಯ ಫೋನ್‌ನಿಂದ ಹಿಮಾಂಶುವಿಗೆ ಮೆಸೇಜ್ ಮಾಡಿ ಕರೆಸಿಕೊಂಡಿದ್ದಾರೆ. ಆತನಿಗೆ ಎರಡು ಬಾರಿಸಿ ಬುದ್ಧಿ ಹೇಳಲು ಅವರು ಮುಂದಾಗಿದ್ದರು. ಆದರೆ ಥಳಿತ ವಿಪರೀತವಾಗಿದ್ದು, ತರುಣ ಪ್ರಾಣ ಬಿಟ್ಟಿದ್ದಾನೆ.  

ಒಕ್ಕಲಿಗ ಯುವಕನ ಮದುವೆಯಾದ ಐದೇ ದಿನಕ್ಕೆ ಮಸಣ ಸೇರಿದ ದಲಿತ ಯುವತಿ: ಕೊಡಗಿನಲ್ಲಿ ನಡೆಯಿತಾ ಮರ್ಯಾದ ಹತ್ಯೆ?

12 ವರ್ಷಗಳ ಹಿಂದೆಯೇ ಹಿಮಾಂಶುವಿನ ತಂದೆ ಹೆಂಡತಿ ಮಕ್ಕಳನ್ನು ತೊರೆದು ಹೋಗಿದ್ದು, ಅಂದಿನಿಂದಲೂ ಹಿಮಾಂಶು ತಾಯಿ ರಜನಿ ಒಬ್ಬರೇ ಹಿಮಾಂಶು ಹಾಗೂ ಆಕೆಯ ಸೋದರಿಯನ್ನು ಸಾಕುತ್ತಿದ್ದರು. ಸಣ್ಣದೊಂದು ದಿನಸಿ ಅಂಗಡಿಯ ಜೊತೆ ಟೈಲರಿಂಗ್ ಮಾಡುವ ಮೂಲಕ ಮಕ್ಕಳನ್ನು ಸಾಕಿದ್ದರು. ಆದರೆ ಈಗ ಮಗ ಹಿಮಾಂಶುವಿನ ಕೊಲೆ ಆಗಿದ್ದು ಆಕೆಗೆ ದಿಕ್ಕೆ ತೋಚದಂತಾಗಿದೆ. ಘಟನೆಗೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 140 ಹಾಗೂ 103 ಅಡಿ ಕೊಲೆ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ.

click me!