'ಆತ್ಮ ನಿರ್ಭರತೆ'ಗೆ ಮೋದಿ ಕರೆ: ಲಾಭದಾಯಕವಾಗುತ್ತಾ ಕೃಷಿ ಕ್ಷೇತ್ರ?

By Kannadaprabha NewsFirst Published May 15, 2020, 1:03 PM IST
Highlights

ಜಾಗತೀಕರಣದ ಗ್ಲೋಬಲ್ ರಾಗ ಅಲಾಪಿಸುತ್ತಿದ್ದ ಫಲಾನುಭವಿಗಳೆಲ್ಲ ಈಗ ದೇಸಿ ರಾಗ ನುಡಿಸುತ್ತಿದ್ದಾರೆ. ಸ್ವಯಮೇವ ಅಮೆರಿಕವೂ ಮುಕ್ತ ಮಾರುಕಟ್ಟೆಬೇಡ ಎಂದು ಆರ್ಥಿಕ ಗೋಡೆ ಕಟ್ಟುವ ಬಗ್ಗೆ ಮಾತನಾಡತೊಡಗಿದೆ. ಹೀಗಾಗಿ ಭಾರತಕ್ಕೆ ಇದು ಅನಿವಾರ್ಯ ಮತ್ತು ಅವಕಾಶ ಕೂಡ ಹೌದು.

ಜಾಗತೀಕರಣದ ಗ್ಲೋಬಲ್ ರಾಗ ಅಲಾಪಿಸುತ್ತಿದ್ದ ಫಲಾನುಭವಿಗಳೆಲ್ಲ ಈಗ ದೇಸಿ ರಾಗ ನುಡಿಸುತ್ತಿದ್ದಾರೆ. ಸ್ವಯಮೇವ ಅಮೆರಿಕವೂ ಮುಕ್ತ ಮಾರುಕಟ್ಟೆಬೇಡ ಎಂದು ಆರ್ಥಿಕ ಗೋಡೆ ಕಟ್ಟುವ ಬಗ್ಗೆ ಮಾತನಾಡತೊಡಗಿದೆ. ಹೀಗಾಗಿ ಭಾರತಕ್ಕೆ ಇದು ಅನಿವಾರ್ಯ ಮತ್ತು ಅವಕಾಶ ಕೂಡ ಹೌದು.

ದೇಶದಲ್ಲಿ ಒಂದು ಸರ್ಕಾರವಾಗಿ ಮೊದಲು ಸ್ವದೇಶಿ ಎಂದು ಮಾತನಾಡಿದ್ದು 1977ರಲ್ಲಿ ಜಾಜ್‌ರ್‍ ಫರ್ನಾಂಡಿಸ್‌. ಕೋಕಾಕೋಲಾ ಮತ್ತು ಐಬಿಎಂನಂಥ ಗ್ಲೋಬಲ… ಕಂಪನಿಗಳನ್ನು ಜಾರ್ಜ್ ನಿರ್ದಾಕ್ಷಿಣ್ಯವಾಗಿ ಹೊರಹಾಕಿದರೂ ಕೂಡ ಅವೆರಡೂ ಇನ್ನಷ್ಟುದೊಡ್ಡ ರೂಪ ತಳೆದು ಒಳಗಡೆ ಬಂದವು. ತಾನೇ ಸೃಷ್ಟಿಸಿದ ಮೇಕ್‌ ಇನ್‌ ಇಂಡಿಯಾ ಸಿಂಹವನ್ನು ಜೋರಾಗಿ ಗರ್ಜಿಸುವಂತೆ ಮಾಡಲು ಮೋದಿ ಇದಕ್ಕೆ ‘ಆತ್ಮ ನಿರ್ಭರತೆ’ ಎಂಬ ಹೊಸ ರೂಪ ನೀಡಿದ್ದಾರೆ.

ಕೊರೊನಾ ಯುದ್ಧವೇ ಮೋದಿ ಮುಂದಿರುವ ಅಗ್ನಿಪರೀಕ್ಷೆ..!

ಉದ್ದೇಶವೇನೋ ಒಳ್ಳೆಯದೇ. ಆದರೆ ಸ್ವದೇಶಿ ಉತ್ಪನ್ನಗಳು ಉತ್ತಮ ಗುಣಮಟ್ಟದಲ್ಲಿ ತಯಾರಾಗಬೇಕಾದರೆ ಸ್ಪರ್ಧಾತ್ಮಕ ತಂತ್ರಜ್ಞಾನ, ಅಗ್ಗದ ವರ್ಕ್ಫೋರ್ಸ್‌, ಭೂಮಿ, ನೀರು, ವಿದ್ಯುತ್‌ ಬೇಕು, ವ್ಯಾಪಕ ಬಂಡವಾಳ ಬೇಕು. ಇದಕ್ಕೆ ವಿದೇಶಿ ಸಹಭಾಗಿತ್ವ ಬೇಕು. ಇದಕ್ಕಾಗಿ ಸರ್ಕಾರಗಳು ಕೆಲಸ ಮಾಡುವ ವಿಧಾನ ಬದಲಾಗಬೇಕು. ಭ್ರಷ್ಟಾಚಾರ ಕಡಿಮೆ ಆಗಬೇಕು. ಇವೆಲ್ಲ ಮಾತನಾಡಿದಷ್ಟುಸುಲಭವಲ್ಲ. ಆದರೆ ಪ್ರಯತ್ನ ಮಾಡೋದರಲ್ಲಿ ತಪ್ಪಿಲ್ಲ.

ಗ್ರಾಮೀಣ ಭಾರತಕ್ಕೊಂದು ಅವಕಾಶ

ಜಾಗತೀಕರಣ ಶುರು ಆದಾಗಿನಿಂದ ವೇಗವಾಗಿ ಶಿಥಿಲಗೊಂಡಿದ್ದು ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಭಾರತ. ಒಂದು ಕಡೆ ಕೃಷಿ ಅವಲಂಬಿತ ಬದುಕು ಅನಿಶ್ಚಿತವಾಗತೊಡಗಿದರೆ, ಇನ್ನೊಂದೆಡೆ ಗ್ರಾಮೀಣ ಭಾರತ ವಲಸೆಯಿಂದಾಗಿ ಸೊರಗತೊಡಗಿತು. ಆದರೆ ಕೊರೋನಾ ಕಾಲದಲ್ಲಿ ಶಹರಗಳು ತಮ್ಮ ಗಾತ್ರದ ಕಾರಣದಿಂದ ಭಯ ಹುಟ್ಟಿಸುತ್ತಿರುವಾಗ ಪುನರಪಿ ಹಳ್ಳಿಗಳಿಗೆ ಒಂದು ಅವಕಾಶ ಅನಾಯಾಸವಾಗಿ ಸಿಕ್ಕಿದೆ.

ಕೊರೋನಾ ಜೀವಂತ ಇರುವವರೆಗೆ ಎಷ್ಟೇ ಪ್ರಯತ್ನಪಟ್ಟರೂ ಶತ ಪ್ರತಿಶತ ಮೊದಲಿನ ಚಕಾ ಚೌಂದ್‌ಗೆ ಹೋಗುವುದು ಕಷ್ಟ. ದೊಡ್ಡ ದೊಡ್ಡ ಕಾರ್ಖಾನೆಗಳು, ಮಾಲ್‌ಗಳು, ಮಾರುಕಟ್ಟೆಗಳು 100 ಪರ್ಸೆಂಟ್‌ ಸಹಜತೆಗೆ ಮರಳಬೇಕಾದರೆ ಕೊರೋನಾ ಭಯ ಇಲ್ಲವಾಗಬೇಕು. ಆದರೆ ಹಳ್ಳಿಗಳಲ್ಲಿ ಆ ಸಮಸ್ಯೆ ಇಲ್ಲ. ಕೃಷಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಹಜವಾಗೇ ಬಂದುಬಿಟ್ಟಿದೆ.

ನಗರಗಳಲ್ಲಿದ್ದ ಕೋಟ್ಯಂತರ ಕಾರ್ಮಿಕರು ಮರಳಿ ಹಳ್ಳಿಗೆ ಬಂದಿದ್ದು, ಕೆಲಸ ಮಾಡುವ ಕೈಗಳಿಗೆ ಅಲ್ಲಿ ಉದ್ಯೋಗ ನೀಡುವುದು ಕೃಷಿಯೇ. ಹೀಗಾಗಿ ಸರ್ಕಾರ ಸ್ವಲ್ಪ ಪ್ರಯತ್ನ ಹಾಕಿ ಕೆಲಸ ಮಾಡಿ ಹಣ ನೇರವಾಗಿ ಕೊಟ್ಟು ತಂತ್ರಜ್ಞಾನ ತಂದರೆ, ಮಾರುಕಟ್ಟೆಕಲ್ಪಿಸಿದರೆ ಕೃಷಿ ಲಾಭದಾಯಕವಾಗಿ ಹೊಸ ಆಕರ್ಷಣೆಯೂ ಆಗಬಹುದು. ಆಧುನಿಕ ಮನುಷ್ಯ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಎಂದರೆ ನಿಸ್ಸಂದೇಹವಾಗಿ ಕೃಷಿಯ ಪುನರುತ್ಥಾನ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!