ಆಂಧ್ರ, ಹಿಂದೂ ಯುವಕನ ‘ಮರ್ಯಾದಾ ಹತ್ಯೆ’: ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆ!

By Suvarna NewsFirst Published May 6, 2022, 6:00 AM IST
Highlights

* ಅಂತರ್‌ ಧರ್ಮೀಯ ವಿವಾಹ ಮಾಡಿಕೊಂಡಿದ್ದಾತನ ಕೊಲೆ

* ಹೆಂಡತಿ ಕಡೆಯವರು ಅಮಾನುಷವಾಗಿ ಕೊಂದು ‘ಮರ್ಯಾದಾ ಹತ್ಯೆ’

* ಪತ್ನಿ ಫಾತೀಮಾ ಕುಟುಂಬದವರಿಂದಲೇ ಕೊಲೆ

ಹೈದರಾಬಾದ್‌(ಮೇ.06): ಆಂಧ್ರಪ್ರದೇಶ ರಾಜಧಾನಿಯಲ್ಲಿ ಅಂತರ್‌ ಧರ್ಮೀಯ ವಿವಾಹ ಮಾಡಿಕೊಂಡಿದ್ದ ನಾಗರಾಜು ಎಂಬುವನನ್ನು ಆತನ ಹೆಂಡತಿ ಕಡೆಯವರು ಅಮಾನುಷವಾಗಿ ಕೊಂದು ‘ಮರ್ಯಾದಾ ಹತ್ಯೆ’ ನಡೆಸಿದ ಘಟನೆ ನಡೆದಿದೆ. ಪತ್ನಿ ಫಾತೀಮಾ ಸಮ್ಮುಖದಲ್ಲೇ ನಾಗರಾಜ್‌ ಹೆಣವಾಗಿದ್ದಾನೆ.

10ನೇ ತರಗತಿಯಿಂದಲೇ ಇಬ್ಬರಿಗೂ ಪರಸ್ಪರ ಪರಿಚಯವಿರುವ ನಾಗರಾಜು ಮತ್ತು ಫಾತೀಮಾ ಇಬ್ಬರು ಸಹ ಮನೆಯವರ ವಿರೋಧದೊಂದಿಗೆ ಕಳೆದ ಜನವರಿ ಆರ್ಯ ಸಮಾಜದ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಗೆ ಫಾತೀಮಾ ಕುಟುಂಬದವರು ಒಪ್ಪಿರಲಿಲ್ಲ.

ಬುಧವಾರ ಸಮೀನಾಳೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ನಾಗರಾಜನನ್ನು ಅಡ್ಡಗಟ್ಟಿಇಬ್ಬರು ವ್ಯಕ್ತಿಗಳು ಕಬ್ಬಿಣದ ಕಂಬಿಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳು ಅವರ ಪತ್ನಿಯ ಸೋದರರಾಗಿದ್ದು, ಅವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾರ್ವಜನಿಕರ ಎದುರಲ್ಲೇ ನಾಗರಾಜು ಅವರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಸಾಕ್ಷಿದಾರರು ಮೊಬೈಲ್‌ನಲ್ಲಿ ಶೂಟ್‌ ಮಾಡಿದ್ದಾರೆ.

ಈ ಘಟನೆಯನ್ನು ವಿರೋಧಿಸಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿದರು.

ಯುವಕನ ಶವ ಪತ್ತೆ, ಮರ್ಯಾದಾ ಹತ್ಯೆ ಶಂಕೆ

 

ಸ್ನೇಹಿತರ ಜತೆಗೆ ಮಂಗಳವಾರ ರಾತ್ರಿ ಪಾರ್ಟಿಗೆಂದು ಹೋದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಬರಗೂರು ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದ್ದು, ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಯುವಕನನ್ನು ಗ್ರಾಮದ ದಾನೇಶ ಕರಿಹನುಮಂತಪ್ಪ (24) ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ತನ್ನ ಸ್ನೇಹಿತರ ಜತೆಗೆ ಪಾರ್ಟಿಗೆಂದು ಮನೆಯಿಂದ ಹೊರಹೋಗಿದ್ದ ಯುವಕ ಬೆಳಗ್ಗೆ ಗ್ರಾಮದ ಸಮೀಪ ಮುಷ್ಟೂರು ರಸ್ತೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಗ್ರಾಮದ ಕೆಲವರೊಂದಿಗೆ ಕೆಲವು ದಿನಗಳ ಹಿಂದೆ ಪ್ರೀತಿ ವಿಷಯವಾಗಿ ಮೃತ ಯುವಕ ದಾನೇಶ ಜಗಳ ಮಾಡಿಕೊಂಡಿದ್ದು, ಇದೀಗ ಬೆಳಕಿಗೆ ಬಂದಿದೆ. ಸೇಡಿಗಾಗಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌, ಡಿವೈಎಸ್‌ಪಿ ಆರ್‌.ಎಸ್‌. ಉಜ್ಜನಕೊಪ್ಪ, ಗಂಗಾವತಿ ಸಿಪಿಐ ಉದಯರವಿ, ಕಾರಟಗಿ ಪಿಎಸ್‌ಐ ಕೆ. ಮಲ್ಲಪ್ಪ ನೇತೃತ್ವದ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಶ್ವಾನದಳ ಕರೆಸಿದ್ದು ತನಿಖೆ ಚುರುಕುಗೊಳಿಸಲಾಗಿದೆ.

ಮೃತನ ತಂದೆ ಕರಿಹನುಮಂತಪ್ಪ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಕಾರಟಗಿ ಪೊಲೀಸರು, ಗ್ರಾಮದ ಯುವತಿ, ತಂದೆ-ತಾಯಿ ಹಾಗೂ ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಶಂಕೆ:

ಕಳೆದ ಕೆಲವು ವರ್ಷಗಳಿಂದ ಗ್ರಾಮದ ಯುವತಿಯೊಬ್ಬಳನ್ನು ದಾನೇಶ ಪ್ರೀತಿಸುತ್ತಿದ್ದ. ಬೇರೆ ಜಾತಿಯಾಗಿರುವುದರಿಂದ ಯುವತಿ ಮನೆಯವರ ವಿರೋಧವಿತ್ತು. ಯುವಕನಿಗೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇಬ್ಬರ ಪ್ರೀತಿ ನಿರಂತರವಾಗಿ ಸಾಗಿದ್ದರಿಂದ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

click me!