ಗೋಮಾಂಸ ತಿನ್ನುವಂತೆ ಬಲವಂತ: ಪನ್ನು ಹತ್ಯೆ ಸಂಚು ಆರೋಪಿ ನಿಖಿಲ್ ಗುಪ್ತಾ ಅಳಲು

By Kannadaprabha NewsFirst Published Dec 16, 2023, 9:33 AM IST
Highlights

ಚೆಕ್‌ ಗಣರಾಜ್ಯದಲ್ಲಿ ಭಾರತೀಯನನ್ನು ಬಂಧಿಸಿ ಚಿತ್ರಹಿಂಸೆ ಆರೋಪ. ಗೋಮಾಂಸ ತಿನ್ನುವಂತೆ ಬಲವಂತ ಮಾಡಿರುವ ಆರೋಪ.

ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಅಮೆರಿಕದಲ್ಲಿ ಹತ್ಯೆ ಮಾಡುವ ಸಂಚು ಪ್ರಕರಣದಲ್ಲಿ ಚೆಕ್‌ ಗಣರಾಜ್ಯದಲ್ಲಿ ಬಂಧಿತನಾಗಿರುವ ಭಾರತೀಯ ನಿಖಿಲ್‌ ಗುಪ್ತಾನನ್ನು, ಚೆಕ್‌ ಜೈಲಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಗೋಮಾಂಸ ತಿನ್ನುವಂತೆ ಬಲವಂತ ಮಾಡಿ ಆತನ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆತನ ಕುಟುಂಬ ಭಾರತದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಈ ವಿವರ ಬಹಿರಂಗಗೊಂಡಿದೆ.

ಅದರಂತೆ ನಿಖಿಲ್‌ ಗುಪ್ತಾನನ್ನು ಜೂ.30ರಂದು ಪರಾಗ್ವೆ ವಿಮಾನ ನಿಲ್ದಾಣಕ್ಕೆ ಕರೆದೊಯ್ದ ನಂತರ ಆತನನ್ನು ಕಪ್ಪು ಬಣ್ಣದ ಎಸ್‌ಯುವಿ ಕಾರಿನಲ್ಲಿ ಹತ್ತಿಸಿ ಅಲ್ಲಿಯೇ 3 ಗಂಟೆಗಳ ಕಾಲ ತಿರುಗಾಡುತ್ತಲೇ ವಿಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆತನ ಮೊಬೈಲನ್ನು ವಶಪಡಿಸಿಕೊಂಡು ಅದರಲ್ಲಿನ ಮಾಹಿತಿಯನ್ನು ಕದ್ದಾಲಿಕೆ ಮಾಡಲಾಗಿದೆ. ಇದರ ಜೊತೆಗೆ ಆತನಿಗೆ ದನದ ಮಾಂಸವುಳ್ಳ ಆಹಾರವನ್ನು ತಿನ್ನುವಂತೆ ಒತ್ತಾಯಪಡಿಸಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆತನ ಪೋಷಕರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಡಿ.13ರಂದು ಸಂಸತ್‌ ಮೇಲೆ ದಾಳಿ, ಖಲಿಸ್ತಾನಿ ಉಗ್ರ ಪನ್ನು ಎಚ್ಚರಿಕೆ!

ಚೆಕ್ ಕೋರ್ಟಿಗೆ ಹೋಗಿ: ಪನ್ನು ಹತ್ಯೆ ಸಂಚು ಆರೋಪಿಗೆ ಸುಪ್ರೀಂ ಸೂಚನೆ
ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನನ್ನು ಅಮೆರಿಕದಲ್ಲಿ ಹತ್ಯೆ ಮಾಡುವ ಸಂಚಿನ ಪ್ರಕರಣದಲ್ಲಿ ಚೆಕ್‌ ಗಣರಾಜ್ಯದಲ್ಲಿ ಬಂಧಿತನಾಗಿರುವ ನಿಖಿಲ್‌ ಗುಪ್ತಾನನ್ನು ರಕ್ಷಿಸುವಂತೆ ಚೆಕ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎಂದು ಭಾರತದ ಸುಪ್ರೀಂ ಕೋರ್ಟ್‌, ನಿಖಿಲ್‌ ಗುಪ್ತಾ ಪೋಷಕರಿಗೆ ಸೂಚಿಸಿದೆ.

ಮಗನ ರಕ್ಷಿಸಲು ಕೋರಿ ಗುಪ್ತಾ ಪೋಷಕರು ಸಲ್ಲಿಸಿದ ಮನವಿ ಆಲಿಸಿದ ನ್ಯಾ। ಸಂಜೀವ್‌ ಖನ್ನಾ, ‘ಸುಪ್ರೀಂ ಕೋರ್ಟ್‌ನ ಪರಿಧಿಯ ಹೊರಗೆ ನಿಖಿಲ್‌ ಖನ್ನಾ ಬಂಧನವಾಗಿರುವುದರಿಂದ ಈ ನ್ಯಾಯಾಲಯಕ್ಕೆ ಈ ಕುರಿತು ತೀರ್ಪು ನೀಡಲು ಬರುವುದಿಲ್ಲ. ಈ ಕುರಿತು ನೀವು ಆತನ ಬಂಧನವಾಗಿರುವ ಚೆಕ್‌ ಗಣರಾಜ್ಯದ ನ್ಯಾಯಾಲಯಕ್ಕೇ ಮೊರೆ ಹೋಗಬೇಕು. ಅದರ ಜೊತೆಗೆ ಭಾರತ ಸರ್ಕಾರಕ್ಕೂ ಈ ವಿಚಾರದಲ್ಲಿ ಸಹಾಯ ಮಾಡುವಂತೆ ಅರ್ಜಿ ಸಲ್ಲಿಸಬಹುದು’ ಎಂದು ತಿಳಿಸಿ ವಿಚಾರಣೆಯನ್ನು ಜನವರಿಗೆ ಮುಂದೂಡಿತು.

ಪನ್ನೂನ್‌ ಹತ್ಯೆ ಮಾಡಿದರೆ ಗುಜರಾತ್‌ ಕೇಸಿಂದ ಮುಕ್ತಿ : ಆರೋಪಿಗೆ ಭಾರತದ ಆಮಿಷ: ಅಮೆರಿಕಾ ಆರೋಪ

ನಿಖಿಲ್‌ ಗುಪ್ತಾನ ಪೋಷಕರು ತಮ್ಮ ಮಗನನ್ನು ಸಕಾರಣವಿಲ್ಲದೆ ಚೆಕ್‌ ಗಣರಾಜ್ಯದ ಪರಾಗ್ವೆಯಲ್ಲಿ ಸೆರೆ ಹಿಡಿದಿರುವುದರಿಂದ ರಕ್ಷಣೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

click me!