Air Pollution| ಮಾಲಿನ್ಯಕ್ಕೆ ದಿಲ್ಲಿ ತಲ್ಲಣ: 5 ವರ್ಷದಲ್ಲೇ ಗರಿಷ್ಠ!

By Kannadaprabha NewsFirst Published Nov 7, 2021, 6:27 AM IST
Highlights

* ವಾಯು ಗುಣಮಟ್ಟಸೂಚ್ಯಂಕ 462ಕ್ಕೆ, 5 ವರ್ಷದಲ್ಲೇ ಗರಿಷ್ಠ

* ಮಾಲಿನ್ಯಕ್ಕೆ ದಿಲ್ಲಿ ತಲ್ಲಣ

* ಕೃಷಿ ತ್ಯಾಜ್ಯ ಸುಡುವಿಕೆ, ಪಟಾಕಿ ಸಿಡಿತದಿಂದ ಮಾಲಿನ್ಯ ಹೆಚ್ಚಳ

* ಮಾಲಿನ್ಯ ತಡೆಗೆ ಸ್ಮಾಗ್‌ ಗನ್‌ ಬಳಸಿ ನೀರು ಸಿಂಪಡಣೆ

ನವದೆಹಲಿ(ನ.07):: ಒಂದೆಡೆ ದೀಪಾವಳಿ ವೇಳೆ ಪಟಾಕಿ (Firecrackers) ಸಿಡಿತ, ಮತ್ತೊಂದೆಡೆ ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ (ಕೂಳೆ) ಸುಡುವಿಕೆಯಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿ (National Capital Delhi) ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯ ಗಂಭೀರ ಸ್ಥಿತಿಗೆ ತಲುಪಿದೆ. ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೀಪಾವಳಿ (Diwal 2021) ಹಬ್ಬದ ಬಳಿಕ ದೆಹಲಿ ವಾಯು ಗುಣಮಟ್ಟಸೂಚ್ಯಂಕ (ಎಕ್ಯೂಐ), ಅತಿ ಗಂಭೀರ ಎನ್ನಬಹುದಾದ 462ಕ್ಕೆ ಶುಕ್ರವಾರ ಏರಿದೆ.

ಇದರ ಬೆನ್ನಲ್ಲೇ ದಟ್ಟಧೂಳಿನ ಕಣಗಳನ್ನು ಚದುರಿಸುವ ಮತ್ತು ನಿಯಂತ್ರಿಸಲು ದೆಹಲಿ ಸರ್ಕಾರ 114 ನೀರಿನ ಟ್ಯಾಂಕರ್‌ಗಳ ಮುಖಾಂತರ ನಗರದ ರಸ್ತೆಗಳ ಮೇಲೆ ಚಿಮುಕಿಸುತ್ತಿದೆ. ಮತ್ತೊಂದೆಡೆ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ 92 ಕಟ್ಟಡಗಳ ನಿರ್ಮಾಣಕ್ಕೂ ತಡೆ ಒಡ್ಡಲಾಗಿದೆ. ಈ ನಡುವೆ ಶನಿವಾರ ಹೆಚ್ಚಿನ ಗಾಳಿ ಬೀಸಿದ್ದು, ಇದರ ಪರಿಣಾಮ, 449ಕ್ಕೆ ಎಕ್ಯುಐ ಸುಧಾರಿಸಿದೆ.

ಆದಾಗ್ಯೂ, ನ.7ರ ಬಳಿಕವಷ್ಟೇ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಾಯುಮಾಲಿನ್ಯದಿಂದ (Air Pollution) ಮುಕ್ತಿ ಹೊಂದಿ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು ಎಂದು ವಾಯು ಗುಣಮಟ್ಟಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಎಎಫ್‌ಎಆರ್‌) ಹೇಳಿದೆ.

ಪಕ್ಕದ ವಸ್ತುಗಳೂ ಕಾಣದ ಸ್ಥಿತಿ:

ಪಂಜಾಬ್‌, ಹರಾರ‍ಯಣ ಸೇರಿ ಇತರ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವಿಕೆ ಕಡಿಮೆ ಆಗುತ್ತಿದೆ ಎಂದು 3 ದಿನದ ಹಿಂದಷ್ಟೇ ವರದಿಯೊಂದು ಹೇಳಿತ್ತು. ಆದರೆ ಇದರ ಬೆನ್ನಲ್ಲೇ ಸರ್ಕಾರದ ಸೂಚನೆ, ಕೋರ್ಟ್‌ ಆದೇಶಗಳನ್ನೂ ಮೀರಿ ದಿಲ್ಲಿ ಜನರು ದೀಪಾವಳಿ ಪಟಾಕಿಗಳನ್ನು ಹಾರಿಸಿದ್ದಾರೆ. ಇದರ ಪರಿಣಾಮ, ಶುಕ್ರವಾರ ಹಾಗೂ ಶನಿವಾರ ದಿಲ್ಲಿಯಾದ್ಯಂತ ಭಾರೀ ಹೊಗೆಯ ವಾತಾವರಣ ಕಂಡುಬಂತು. ಜನರು ಮನೆಗಳಲ್ಲಿ ‘ವಾಯುಶುದ್ಧಿ ಯಂತ್ರ’ಗಳನ್ನು ಬಳಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

‘ರಸ್ತೆಗಳಲ್ಲಿ ಪಕ್ಕದಲ್ಲಿರುವ ವಾಹನಗಳೂ ಕಾಣದಷ್ಟುವಾತಾವರಣ ಮಸುಕಾಗಿತ್ತು’ ಎಂದು ವಾಹನ ಸವಾರರು ಹೇಳಿದ್ದಾರೆ. ‘ಈ ಮಂದ ಬೆಳಕಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮತ್ತೆ ಸಮ-ಬೆಸ ವಾಹನ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಕೆಲವರು ಅಭಿಪ್ರಾಯಪಟ್ಟರು.

5 ವರ್ಷದ ಗರಿಷ್ಠ:

2020ರಲ್ಲಿ ದೀಪಾವಳಿ ಮಾರನೇ ದಿನ ಎಕ್ಯೂಐ ಪ್ರಮಾಣ 435, 2019ರಲ್ಲಿ 368, 2018ರಲ್ಲಿ 390, 2017ರಲ್ಲಿ 403, 2016ರಲ್ಲಿ ಎಕ್ಯೂಐ 445ರಷ್ಟುಇತ್ತು. ಈ ದಾಖಲೆಯನ್ನು ಶುಕ್ರವಾರದ ಎಕ್ಯುಐ 469ಕ್ಕೆ ಏರಿ, ಅಳಿಸಿ ಹಾಕಿದೆ.

ಆರೋಗ್ಯಕ್ಕೆ ಅಪಾಯಕಾರಿ:

ಈ ಬಗ್ಗೆ ಪ್ರತಿಕ್ರಿಯಿಸಿದ ಹೃದಯ ತಜ್ಞರಾದ ಡಾ. ಅರುಣ್‌ ಮೊಹಾಂತಿ ಅವರು, ‘ಇಂಥ ವಾಯು ಗುಣಮಟ್ಟವು ಜನರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ. ಈಗಾಗಲೇ ಎದೆನೋವು ಮತ್ತು ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಪೀಡಿತರ ಆರೋಗ್ಯಕ್ಕೆ ಇದು ದೊಡ್ಡ ಗಂಡಾಂತರವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಾಯು ಗುಣಮಟ್ಟದ ಅಳತೆ ಹೇಗೆ?

0-50 ಉತ್ತಮ

51-100 ಸಮಾಧಾನಕರ

101-200 ಅತಿರೇಕವಲ್ಲದ್ದು

201-300 ಕಳಪೆ

301-400 ತೀರಾ ಕಳಪೆ

401-500 ಅತಿ ಗಂಭೀರ ಮಾಲಿನ್ಯ

ಆಗಿರುವುದೇನು?

1. ಪಟಾಕಿ ಸಿಡಿತ, ಕೃಷಿ ತ್ಯಾಜ್ಯ ಸುಡುವಿಕೆಯಿಂದ ಮಾಲಿನ್ಯ ಹೆಚ್ಚಳ

2. ದೆಹಲಿ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟಹೊಗೆಯ ವಾತಾವರಣ

3. ಪಕ್ಕದಲ್ಲಿ ಹೋಗುವ ವಾಹನವೂ ಸ್ಪಷ್ಟವಾಗಿ ಕಾಣಿಸದಂಥ ಪರಿಸ್ಥಿತಿ

4. 114 ಟ್ಯಾಂಕರ್‌ ಮೂಲಕ ನೀರು ಸಿಂಪಡಿಸಿ ಮಾಲಿನ್ಯ ತಡೆಗೆ ಯತ್ನ

5. ಮಾಲಿನ್ಯ ತಗ್ಗಿಸಲು 92 ಕಟ್ಟಡ ನಿರ್ಮಾಣಕ್ಕೂ ದಿಲ್ಲಿ ಸರ್ಕಾರ ತಡೆ

click me!