ಕಳಚಿ ಬೀಳುತ್ತಿರುವ ಚೀನಾ ಮುಖವಾಡ; ಆದ್ರೂ ಬಿಟ್ಟಿಲ್ಲ ಆಟಾಟೋಪ

By Kannadaprabha NewsFirst Published May 1, 2020, 12:11 PM IST
Highlights

ಕೊರೋನಾ ವೈರಸ್‌ಅನ್ನು ಪ್ರಾಣಿಯಿಂದ ಮನುಷ್ಯನಿಗೆ ಹರಡಿಸಿ ಜಗತ್ತನ್ನು ಕಂಗಾಲಾಗಿಸಿದರೂ ಚೀನಾ ಅಟಾಟೋಪ ಮಾತ್ರ ತಣ್ಣಗಾಗಿಲ್ಲ. ಕೊರೋನಾ ಕೊಟ್ಟಿದ್ದಕ್ಕೆ ಅಮೆರಿಕದ ಕಟುಟೀಕೆಗೆ ಪ್ರತಿಯಾಗಿ ಚೀನಾ ಅಮೆರಿಕಾದ ಮಿತ್ರ ಆಸ್ಪ್ರೇಲಿಯಾಕ್ಕೆ ಆರ್ಥಿಕ ದಿಗ್ಬಂಧನದ ಧಮಕಿ ಹಾಕಿದೆ. 

‘ಜಟ್ಟಿಕೆಳಗೆ ಬಿದ್ದರೂ ಮೀಸೆ ಮಣ್ಣಾಗದು’ ಎಂಬ ಕನ್ನಡದ ಗಾದೆ ಚೀನಾ ನೀತಿಗೆ, ಅದು ಸೃಷ್ಟಿಸುವ ಅವಾಂತರಕ್ಕೆ, ಅದು ತೋರಿಸುವ ಧಿಮಾಕಿಗೆ ಸರಿಯಾಗಿ ಹೋಲುತ್ತದೆ. ಕೊರೋನಾ ವೈರಸ್‌ಅನ್ನು ಪ್ರಾಣಿಯಿಂದ ಮನುಷ್ಯನಿಗೆ ಹರಡಿಸಿ ಜಗತ್ತನ್ನು ಕಂಗಾಲಾಗಿಸಿದರೂ ಚೀನಾ ಅಟಾಟೋಪ ಮಾತ್ರ ತಣ್ಣಗಾಗಿಲ್ಲ. ಕೊರೋನಾ ಕೊಟ್ಟಿದ್ದಕ್ಕೆ ಅಮೆರಿಕದ ಕಟುಟೀಕೆಗೆ ಪ್ರತಿಯಾಗಿ ಚೀನಾ ಅಮೆರಿಕಾದ ಮಿತ್ರ ಆಸ್ಪ್ರೇಲಿಯಾಕ್ಕೆ ಆರ್ಥಿಕ ದಿಗ್ಬಂಧನದ ಧಮಕಿ ಹಾಕಿದೆ.

ಜಗತ್ತು ಆರೋಗ್ಯ ಮತ್ತು ಆರ್ಥಿಕತೆಯ ನಡುವೆ ಸಿಕ್ಕಿಕೊಂಡು ಒದ್ದಾಡುತ್ತಿರುವಾಗ ಚೀನಾ ಮಾತ್ರ ದಕ್ಷಿಣ ಚೀನಾ ಸಮುದ್ರದಲ್ಲಿ ಮಲೇಷಿಯಾ, ಇಂಡೋನೇಷಿಯಾ, ವಿಯೆಟ್ನಾಂನಲ್ಲಿ ಸಣ್ಣ ಸಣ್ಣ ದ್ವೀಪಗಳ ಮೇಲೆ ಸ್ವಾಮ್ಯ ಸಾಧಿಸಲು ಹೊರಟಿದ್ದು, ಸೌತ್‌ ಚೀನಾ ಸಮುದ್ರ ಮುಂದಿನ ರಣಭೂಮಿ ಎನ್ನುವ ದೃಷ್ಟಿಯಿಂದ ಜಗತ್ತು ನೋಡುತ್ತಿದೆ. ಚೈನಾದ ಮಿತ್ರ ಫಿಲಿಪೈನ್ಸ್‌ ಮತ್ತು ಬಹುಕಾಲದ ಶತ್ರು ತೈವಾನ್‌ ಕೂಡ ಗಟ್ಟಿದನಿಯಲ್ಲಿ ಚೈನಾದ ಮಹತ್ವಾಕಾಂಕ್ಷೆಯನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿವೆ.

ಲಾಕ್‌ ಡೌನ್ ನಂತರ ಮೊದಲು ವಿಮಾನ ಹಾರಾಡುತ್ತಾ? ರೈಲು ಓಡುತ್ತಾ?

ಒಂದಂತೂ ಸತ್ಯ; ಏಷ್ಯಾದಲ್ಲಿ ಯಾವುದೇ ರಾಷ್ಟ್ರವೂ ಕೂಡ ಏಕಾಂಗಿಯಾಗಿ ಚೀನಾ ಮಿಲಿಟರಿ ಸಾಮರ್ಥ್ಯವನ್ನು ಕೆಣಕುವ ಸಾಹಸಕ್ಕೆ ಹೋಗುವುದು ಕಷ್ಟ. ಹೀಗಾಗಿ ಭಾರತ, ಜಪಾನ್‌, ಆಸ್ಪ್ರೇಲಿಯಾ, ಫ್ರಾನ್ಸ್‌ ನಡುವಿನ ಮಿಲಿಟರಿ ಮೈತ್ರಿಗೆ ಅಮೆರಿಕದ ಬೆಂಬಲ ಸಿಕ್ಕರೆ ಮಾತ್ರ ಚೀನಾವನ್ನು ಸ್ವಲ್ಪ ಹಿಂದೆ ಹೆಜ್ಜೆ ಇಡುವಂತೆ ಮಾಡಬಹುದೇನೋ? ಆದರೆ ವೈರಸ್ಸಿಗೆ ಖಜಾನೆಗೆ ಖಜಾನೆಯೇ ಬರಿದಾಗಿರುವಾಗ ಚೀನಾ ವಿರುದ್ಧ ಕಾಲು ಕೆದರಿಕೊಂಡು ಹೋಗಲು ಯಾರೂ ತಯಾರಿಲ್ಲ.

ಹಿಂದೆ ದಕ್ಷಿಣ ಕೊರಿಯಾ ಮತ್ತು ನಾರ್ವೆ ವಿರುದ್ಧ ಚೀನಾ ಆರ್ಥಿಕವಾಗಿ ಹಣ್ಣು ಮಾಡುವ ತೀರ್ಮಾನ ತೆಗೆದುಕೊಂಡಾಗ ‘ನಮಗೇಕೆ ಇಲ್ಲದ ಉಸಾಬರಿ’ ಎಂದು ಬೇರೆ ರಾಷ್ಟ್ರಗಳು ಸುಮ್ಮನಿದ್ದವು. ಆದರೆ ಇದೇ ಚೀನಾದ ಮಹತ್ವಾಕಾಂಕ್ಷೆಯ ಅತೀ ವಿಶ್ವಾಸ ಮುಂದಿನ ದಿನಗಳಲ್ಲಿ ಮಿಲಿಟರಿ ಅಥವಾ ಆರ್ಥಿಕ ಯುದ್ಧಕ್ಕೆ ನಾಂದಿ ಹಾಡಿದರೂ ಆಶ್ಚರ್ಯ ವಿಲ್ಲ. ಇಲ್ಲಿಯವರೆಗೆ ಚೀನಾ ಭಾರತದ ಉಸಾಬರಿಗೆ ಬಂದಿಲ್ಲ ಹೌದು. ಆದರೆ ಡೊಕ್ಲಾಂನಲ್ಲಿ ಏನಾಯಿತು ಎಂದು ಗೊತ್ತಿದ್ದರೂ, ನಾವು ಎಷ್ಟುದಿನ ಎಂದು ನಮಗೆ ಸಂಬಂಧ ವಿಲ್ಲ ಎಂದು ತಣ್ಣಗೆ ಕೂರಬಹುದು. ಕಷ್ಟಕಷ್ಟ!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!