
ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ವಾರ ಸಾವನ್ನಪ್ಪಿದ 10 ಆನೆಗಳ ಗುಂಪಿನ ಭಾಗವಾಗಿದ್ದ ಮರಿಯಾನೆಯೊಂದು ತಾಯಿಯನ್ನು ಹುಡುಕುತ್ತಾ ಸಾಗಿ ನಾಪತ್ತೆಯಾಗಿತ್ತು. ಆ ಆನೆ ಮರಿಯೀಗ 70 ಕಿಲೋ ಮೀಟರ್ ದೂರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಪತ್ತೆಯಾಗಿದೆ. ಎರಡು ವರ್ಷದ ಮರಿ ಇದಾಗಿದ್ದು, ತಾಯಿಯನ್ನು ಹುಡುಕುತ್ತಾ ಅಲೆಯುವ ವೇಳೆ ದಾರಿ ತಪ್ಪಿತ್ತು.
ಶೀಲಿಂಧ್ರ ಸೋಂಕಿಗೆ ಒಳಗಾಗಿದ್ದ (kodo millets ಹರ್ಕಾ)ವನ್ನು ಸೇವಿಸಿದ ಪರಿಣಾಮ ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಅರಣ್ಯದಲ್ಲಿ ಒಟ್ಟು 10 ಆನೆಗಳು ದಾರುಣವಾಗಿ ಸಾವನ್ನಪ್ಪಿದ್ದವು. ಈ ಸಾವನ್ನಪ್ಪಿದ ಆನೆಗಳಲ್ಲಿ ಒಂದು ಈ ಎರಡು ವರ್ಷದ ಆನೆ ಮರಿಯ ತಾಯಿಯಾಗಿದ್ದು, ಅವರೆಲ್ಲರೂ ಒಂದೇ ಆನೆ ಹಿಂಡಿನ ಭಾಗವಾಗಿದ್ದರು. ಹೀಗಾಗಿ ತಾಯಿಯನ್ನು ಹುಡುಕುತ್ತಾ ಸಾಗಿದ ಎರಡು ವರ್ಷದ ಮರಿ ನಂತರ ನಾಪತ್ತೆಯಾಗಿತ್ತು. ಅಲೆಯುತ್ತಾ ಅಲೆಯುತ್ತಾ ಅದು 70 ಕೀಲೋ ಮೀಟರ್ ಸಾಗಿದ್ದು, ಘಟನೆ ನಡೆದ ಸ್ಥಳದಿಂದ 70 ಕಿಲೋ ಮೀಟರ್ ದೂರದಲ್ಲಿ ಈ ತಬ್ಬಲಿ ಮರಿಯಾನೆ ಪತ್ತೆಯಾಗಿದೆ.
ಅರಣ್ಯ ಇಲಾಖೆಗೆ ಈ ವಿಚಾರ ತಿಳಿಯುವ ವೇಳೆಗಾಗಲೇ ಹೀಗೆ ಅಲೆಯುವ ವೇಳೆ ಈ ಪುಟ್ಟ ಮರಿಯಾನೆ ಬಾಂಧವಗಢ ಜಿಲ್ಲೆಯ ಹಲವು ಬೆಟ್ಟಗಳು, ಭತ್ತದ ಗದ್ದೆಗಳು ಹಾಗೂ ಗ್ರಾಮಗಳನ್ನು ದಾಟಿ ಮುಂದೆ ಸಾಗಿದೆ. ಸ್ಥಳೀಯರು ಈ ಹಾದಿ ತಪ್ಪಿದ ತಬ್ಬಲಿ ಕಂದ ಗಾಬರಿಯಿಂದ ಅಳುತ್ತಿರುವ ವೀಡಿಯೋಗಳನ್ನು ಕಳುಹಿಸಿದ್ದರು.
ಸಾವನ್ನಪ್ಪಿದ 10 ಆನೆಗಳ ಗುಂಪಿಗೆ ಈ ಪುಟ್ಟಾನೆ ಸೇರಿತ್ತು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಲ್ ಕೃಷ್ಣಮೂರ್ತಿ ಹೇಳಿದರು. ಒಟ್ಟಾರೆ ಈ ದುರಂತದಲ್ಲಿ ನಾಲ್ಕು ಆನೆ ಮರಿಗಳು ಸತ್ತಿವೆ. ಈ ಮರಿಯಾನೆ ಹಾಗೂ ಸುಮಾರು 3 ರಿಂದ 4 ವರ್ಷ ವಯಸ್ಸಿನ ಇನ್ನೊಂದು ಮರಿ ಹಾಗೂ ಒಂದು ದೊಡ್ಡ ಆನೆ ಬದುಕುಳಿದಿದೆ. ಅದು ಗಂಡೋ ಹೆಣ್ಣೋ ಎಂಬುದು ನಮಗೆ ತಿಳಿದಿಲ್ಲ, ಪುಟ್ಟ ಮರಿಯನ್ನು ರಕ್ಷಿಸಲು ನಾವು ನಮ್ಮ ಇಡೀ ತಂಡವನ್ನು ಸಜ್ಜುಗೊಳಿಸಿದ್ದೇವೆ ಎಂದು ಕೃಷ್ಣಮೂರ್ತಿಯವರು ಹೇಳಿದರು.
ಬಾಂಧವಗಢ ಮತ್ತು ಕನ್ಹಾ ಹುಲಿ ಸಂರಕ್ಷಿತ ಪ್ರದೇಶಗಳಿಂದ ಬದುಕುಳಿದ ಆನೆಗಳ ರಕ್ಷಣೆಗಾಗಿ ಪಶುವೈದ್ಯರು ಮತ್ತು ಇತರರಿರುವ ರಕ್ಷಣಾ ತಂಡವನ್ನು ಕರೆತರಲಾಗಿದೆ ಎಂದು ವರದಿಯಾಗಿದೆ. ಈ ತಪ್ಪಿಸಿಕೊಂಡ ಆನೆ ಮರಿಯನ್ನು ಹುಡುಕುತ್ತಿದ್ದ ತಂಡಕ್ಕೆ ಈ ಆನೆ ಮರಿ ತನ್ನ ಮೂಲ ಸ್ಥಳವಾದ ಕತ್ನಿಯಿಂದ 70ರಿಂದ 80 ಕಿಲೋ ಮೀಟರ್ ದೂರದಲ್ಲಿ ಪತ್ತೆಯಾಗಿದೆ. ವಿಸ್ಮಯಕಾರಿ ಎಂದರೆ ಈ ಆನೆಮರಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸುದೀರ್ಘ ಅಲೆದಾಟದ ನಂತರ ಬದುಕುಳಿದಿದೆ. ಹೀಗೆ ರಕ್ಷಣಾ ತಂಡಕ್ಕೆ ಸಿಕ್ಕಿದ ಆನೆಮರಿಗೆ ಹುಲ್ಲು, ಬಿದಿರು ಹಾಗೂ ನೀರನ್ನು ಕೊಡಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ವನ್ಯಜೀವಿ ತಜ್ಞರು, ರೇಂಜರ್ಗಳಯ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.
ಆನೆಗಳ ರಕ್ಷಣಾ ಕಾರ್ಯಾಚರಣೆ ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ, ಇವುಗಳು ಹೇಗೆ ವರ್ತಿಸುತ್ತವೆ ಎಂದು ಹೇಳಲಾಗದು. ಹೀಗಾಗಿ ಆನೆ ಮರಿಗೆ ಸಣ್ಣ ಪ್ರಮಾಣದ ನಿದ್ರೆ ಮತ್ತಿನ ಇಂಜೆಕ್ಷನ್ ನೀಡಿ ಆಕೆಯನ್ನು ಮರಳಿ ಕರೆತರಲಾಯ್ತು. ಪ್ರಸ್ತುತ ಈ ಆನೆ ಮರಿಯನ್ನು ಜನರು ಹೆಚ್ಚಿಲ್ಲದ ಸ್ಥಳದಲ್ಲಿ ತಜ್ಷರು ಮೇಲುಸ್ತುವಾರಿಯಲ್ಲಿ ಬಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ