ಅಯೋಧ್ಯೆ ರಾಮಮಂದಿರದ ವಾಸ್ತುಶಿಲ್ಪಿ: ಇವರು ಹೆಜ್ಜೆಗಳಿಂದಲೇ ಭೂಮಿ ಅಳೆಯುತ್ತಿದ್ದ ಚಾಣಾಕ್ಷ

By Anusha KbFirst Published Jan 21, 2024, 2:39 PM IST
Highlights

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಭೂಮಿ ಪೂಜೆಯಾಗಿ  41 ತಿಂಗಳ ಅಂತರದಲ್ಲಿ ರಾಮಜನ್ಮಭೂಮಿಯಲ್ಲಿ ಬೃಹತ್ ದೇಗುಲ ತಲೆ ಎತ್ತಿ ನಿಂತಿದೆ. ಹೀಗಿರುವಾಗ ಈ ಮಂದಿರದ ವಾಸ್ತುಶಿಲ್ಪಿ ಯಾರು ಎಂಬ ಕುತೂಹಲವೂ ಹಲವರದ್ದು, ಅವರ ಬಗ್ಗೆ ಡಿಟೇಲ್ಡ್ ಸ್ಟೋರಿ ಇಲ್ಲಿದೆ.

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. 2024ರಲ್ಲಿ ದೇಶದ ಅತ್ಯಂತ ದೊಡ್ಡ ಐತಿಹಾಸಿಕ ಕ್ಷಣ ಇದಾಗಲಿದ್ದು, 500 ವರ್ಷಗಳ ಕಾಯುವಿಕೆಗೆ ತೆರೆ ಬೀಳಲಿದೆ. 2020ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಈ ಅಯೋಧ್ಯೆ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಇದಾಗಿ 41 ತಿಂಗಳ ಅಂತರದಲ್ಲಿ ರಾಮಜನ್ಮಭೂಮಿಯಲ್ಲಿ ಬೃಹತ್ ದೇಗುಲ ತಲೆ ಎತ್ತಿ ನಿಂತಿದೆ. ಹೀಗಿರುವಾಗ ಈ ಮಂದಿರದ ವಾಸ್ತುಶಿಲ್ಪಿ ಯಾರು ಎಂಬ ಕುತೂಹಲವೂ ಹಲವರದ್ದು, ಅವರ ಬಗ್ಗೆ ಡಿಟೇಲ್ಡ್ ಸ್ಟೋರಿ ಇಲ್ಲಿದೆ.

ಚಂದ್ರಕಾಂತ್ ಸೋಮಪುರ್ ಎಂಬುವವರೇ ಬೃಹತ್ ಅಯೋಧ್ಯೆ ರಾಮ ಮಂದಿರದ ವಾಸ್ತುಶಿಲ್ಪಿ, ಇವರ ಕುಟುಂಬಕ್ಕೆ ದೇಶದ ಹಲವು ಖ್ಯಾತ ದೇಗುಲಗಳ ನಿರ್ಮಾಣದ ಹಿನ್ನೆಲೆ ಇದೆ. ಅಯೋಧ್ಯೆ ರಾಮ ಮಂದಿರದ ಪ್ರಮುಖ ವಾಸ್ತುಶಿಲ್ಪಿ ಎನಿಸಿರುವ  ಸೋಮನಾಥ್‌ ಅವರ ಕುಟುಂಬ ದೇಶಾದ್ಯಂತ ಒಟ್ಟು 200ಕ್ಕೂ ಹೆಚ್ಚು ದೇಗುಲಗಳನ್ನು ನಿರ್ಮಿಸಿದೆ.  ಚಂದ್ರಕಾಂತ್ ಸೋಮಪುರ್ ಅವರ ಬಗ್ಗೆ ತಿಳಿಯುವ ಮೊದಲು ನಾವು ಅಯೋಧ್ಯೆಯ ರಾಮಮಂದಿರದ ವಾಸ್ತುಶಿಲ್ಪ ವಿಶೇಷತೆಯ ಬಗ್ಗೆಯೂ ತಿಳಿಯಬೇಕು.  ಒಟ್ಟು 70 ಎಕರೆ ಪ್ರದೇಶದಲ್ಲಿ ರಾಮಮಂದಿರಕ್ಕೆ ಸೇರಿದ ಸ್ಥಳವಿದ್ದು,ಇದರಲ್ಲಿ 2.77 ಎಕರೆಯಲ್ಲಿ ರಾಮಮಂದಿರ ಹಬ್ಬಿದೆ. ದೇವಾಲಯದ ಉದ್ದ 380 ಅಡಿ, ಎತ್ತರ 161 ಅಡಿ, 392 ಕಂಬಗಳು, 44 ಬಾಗಿಲುಗಳು ಮತ್ತು ಮೂರು ಮಹಡಿಗಳನ್ನು ದೇಗುಲ ಒಳಗೊಂಡಿದೆ.

Latest Videos

ರಾಮ ಮಂದಿರ ನಿರ್ಮಾಣಕ್ಕೆ ಜೀವನಾಧಾರದ ಜಮೀನು ಬಿಟ್ಟುಕೊಟ್ಟ ದಲಿತ ರಾಮದಾಸ

ಈಗ ಈ ಬೃಹತ್ ದೇಗುಲದ ಪ್ರಮುಖ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ್ ಅವರನ್ನು ಪರಿಚಯಿಸುವ ಸಮಯ. ಚಂದ್ರಕಾಂತ್ ಸೋಮಪುರ್ ಅವರು  ಅಯೋಧ್ಯೆ ರಾಮಮಂದಿರದ ಮುಖ್ಯ ವಾಸ್ತುಶಿಲ್ಪಿ ಆಗುವ ಮೂಲಕ  ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಮಾಡಿದ್ದಾರೆ. ದೇಶದ ಹೆಸರಾಂತ ದೇಗುಲಗಳನ್ನು ನಿರ್ಮಿಸಿರುವ ಖ್ಯಾತಿ ಹೊತ್ತಿರುವ ಹಿನ್ನೆಲೆಯ ಕುಟುಂಬದಿಂದ ಬಂದ ಚಂದ್ರಕಾಂತ್ ಸೋಮಪುರ ಅವರು ಸುಮಾರು ಮೂರು ದಶಕಗಳ ಹಿಂದೆಯೇ  ಈ ಸ್ಥಳವನ್ನು ಮಾಸ್ಟರ್‌ ಪ್ಲಾನ್‌ಗಾಗಿ ತಮ್ಮ ಹೆಜ್ಜೆಗಳಿಂದಲೇ  ಅಳೆದ ವ್ಯಕ್ತಿ. ತಮ್ಮ ವಾಸ್ತುಶಿಲ್ಪ ಹಿನ್ನೆಲೆಯ ಕುಟುಂಬದ 15ನೇ ತಲೆಮಾರಿನವರು ಈ ಚಂದ್ರಕಾಂತ್ ಸೋಮಪುರ್ ಹಾಗೂ ಇವರ ಕುಟುಂಬ ಭಾರತದಲ್ಲಿ ದೇಗುಲ ನಿರ್ಮಿಸಿದ ಸುಧೀರ್ಘ ಇತಿಹಾಸ ಹೊಂದಿದೆ. 

ಹಲವು ದಾಖಲೆಗಳ ಪ್ರಕಾರ ಸೋಮಪುರ್ ಕುಟುಂಬ ಭಾರತದಾದ್ಯಂತ 200ಕ್ಕೂ ಹೆಚ್ಚು ದೇಗುಲಗಳನ್ನು ನಿರ್ಮಿಸಿದೆ. ಗುಜರಾತ್‌ನಲ್ಲಿರುವ ಸೋಮನಾಥ ದೇಗುಲ, ಗುಜರಾತ್‌ನಲ್ಲಿರುವ ಅಕ್ಷರಧಾಮ ದೇಗುಲ, ಮುಂಬೈನಲ್ಲಿರುವ ಸ್ವಾಮಿನಾರಾಯಣ ಮಂದಿರ, ಕೋಲ್ಕತ್ತಾದಲ್ಲಿರುವ ಐತಿಹಾಸಿಕ ಬಿರ್ಲಾ ದೇಗುಲ ಇವು ಇವರು ನಿರ್ಮಿಸಿದ ಪ್ರಮುಖ ದೇಗುಲಗಳ ಪಟ್ಟಿಯಲ್ಲಿದ್ದು, ಇದರಲ್ಲೇ ದೇಗುಲ ವಾಸ್ತುಶಿಲ್ಪದಲ್ಲಿ ಇವರ ಕುಟುಂಬ ಎಷ್ಟು ಪಳಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. 

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಅರ್ಧ ದಿನ ರಜೆಗೆ ವಿರೋಧ: ನಿರ್ಧಾರ ಹಿಂಪಡೆದ ಏಮ್ಸ್‌ ಆಸ್ಪತ್ರೆ

ಇನ್ನು ಈ ಅಯೋಧ್ಯೆ ದೇಗುಲ ನಿರ್ಮಾಣ ಕಾರ್ಯದಲ್ಲಿ ಚಂದ್ರಕಾಂತ್‌ ಸೋಮಪುರ್ ಅವರ ಜೊತೆ ಮಕ್ಕಳಾದ ನಿಖಿಲ್ ಸೋಮಪುರ ಮತ್ತು ಆಶಿಶ್ ಸೋಮಪುರ ಕೆಲಸ ಮಾಡಿದ್ದಾರೆ.  ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಚಂದ್ರಕಾಂತ್‌ ಸೋಮಪುರ ಅವರು, ಈ ಹಿಂದೆ ವಿಹೆಚ್‌ಪಿ ನಾಯಕರಾಗಿದ್ದ ದಿವಂಗತ ಅಶೋಕ್ ಸಿಂಘಾಲ್ ಅವರು ತಮ್ಮನ್ನು ಸಂಪರ್ಕಿಸಿದ ವಿಚಾರವನ್ನು ಬಹಿರಂಗಪಡಿಸಿದ್ದರು. ಹೀಗಾಗಿ ಅಲ್ಲಿನ ಭೂಮಿಯನ್ನು ನೋಡಲು ಅಯೋಧ್ಯೆಗ ಹೋಗಿದ್ದರು. ಹಾಗೂ ಭಾರಿ ಭದ್ರತೆ ಇದ್ದ ಕಾರಣಕ್ಕೆ ಅವರು ಹೇಗೆ ಭಕ್ತನಂತೆ ವೇಷ ಧರಿಸಿ ತೆರಳಿದ್ದರು ಎಂಬುದನ್ನು ಚಂದ್ರಕಾಂತ್ ಸೋಮಪುರ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಹೆಜ್ಜೆಗಳಿಂದಲೇ ಭೂಮಿ ಅಳತೆ ಮಾಡ್ತಿದ್ದ ಚಾಣಾಕ್ಷ

ನಿಮ್ಮನ್ನೇ ಏಕೆ ಅಶೋಕ್ ಸಿಂಘಾಲ್ ಅವರು ದೇಗುಲ ನಿರ್ಮಾಣಕ್ಕೆ ಸಂಪರ್ಕಿಸಿದ್ದರು ಎಂದು ಸಂದರ್ಶನಕಾರರು ಕೇಳಿದಾಗ ಪ್ರತಿಕ್ರಿಯಿಸಿದ ಚಂದ್ರಕಾಂತ್ ಸೋಮಪುರ, ಏಕೆಂದರೆ ಅಶೋಕ್ ಸಿಂಘಾಲ್ ಅವರಿಗೆ ನಾನು ಹೆಜ್ಜೆಗಳಿಂದಲೇ ಭೂಮಿಯನ್ನು ಅಳತೆ ಮಾಡುವುದರ ಬಗ್ಗೆ ಗೊತ್ತಿತ್ತು. ನನ್ನ ಈ ಪರಿಣತಿಯಿಂದ ಅವರು ಬಹಳ ಪ್ರಭಾವಿತರಾಗಿದ್ದರು ಇದರ ಜೊತೆಗೆ ತಾವೇ ನಿರ್ಮಿಸಿದ  ಕೋಲ್ಕತ್ತಾದ ಬಿರ್ಲಾ ಮಂದಿರದ ವಾಸ್ತುಶಿಲ್ಪವನ್ನು ನೋಡಿ ಅವರು ಬೆರಗಾಗಿದ್ದರು ಎಂದು ಹೇಳಿಕೊಂಡಿದ್ದಾರೆ.  ಅಲ್ಲದೇ 1990 ರ ದಶಕದ ಆರಂಭದಲ್ಲಿ ಸಂತರು ಮತ್ತು ಗುರುಗಳಿಂದ ಅಂಗೀಕರಿಸಲ್ಪಟ್ಟ ತನ್ನ ಈ ಮಾಸ್ಟರ್ ಪ್ಲಾನ್ ಅನ್ನು ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ತೀರ್ಪು ಮತ್ತು ಟೆಂಪಲ್ ಟ್ರಸ್ಟ್‌ನ ನಿರ್ಧಾರ ಬಂದಾಗ ನಾನು ಈ ಭೂಮಿ ಮೇಲಿದ್ದ ಅತ್ಯಂತ ಖುಷಿಯ ವ್ಯಕ್ತಿಯಾಗಿದ್ದೆ ಎಂದು ಚಂದ್ರಕಾಂತ್ ಹೇಳಿದ್ದಾರೆ. 

Ram Mandir: ಏನು ಹೇಳುತ್ತಿದೆ ತುಳಸಿದಾಸರ ಅಯೋಧ್ಯೆಯ ಇತಿಹಾಸ? ಅದೊಂದು ವರದಿಗಾಗಿ ವರ್ಷಗಟ್ಟಲೆ ಕಾದಿತ್ತೇಕೆ ಸರ್ಕಾರ..?

30 ವರ್ಷದ ಹಿಂದೆಯೇ ಸಿದ್ಧವಾಗಿತ್ತು ನೀಲ ನಕಾಶೆ 

ಅಲ್ಲದೇ ಈ ಬೃಹತ್ ದೇಗುಲದ ನೀಲ ನಕಾಶೆಯನ್ನು ಇವರು 30 ವರ್ಷದ ಹಿಂದೆಯೇ ಸಿದ್ಧಪಡಿಸಿಟ್ಟಿದ್ದರು ಎಂಬುದು ಮತ್ತೊಂದು ಅಚ್ಚರಿ. ಆದರೆ ವಿವಾದ ನ್ಯಾಯಾಲಯದಲ್ಲಿದ್ದಿದ್ದರಿಂದ ಮಂದಿರ ನಿರ್ಮಾಣ ವಿಳಂಬವಾಗಿತ್ತು. ಆದರೆ ತೀರ್ಪು ವಿಳಂಬವಾದರೂ ಚಂದ್ರಕಾಂತ್ ಅವರ ವಿನ್ಯಾಸ ಆಯ್ಕೆಯಾಗಿತ್ತು. ಆದರೆ ಇದೇ ವೇಳೆ ಇದು ದೇಗುಲದ ದೀರ್ಘ ಬಾಳಿಕೆ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿತ್ತು.  ಆದರೂ ಇತ್ತೀಚಿನ ಸಂದರ್ಶನದಲ್ಲಿ ಅವರು ಈ ಅಯೋಧ್ಯ ರಾಮಮಂದಿರಕ್ಕೆ ಮುಂದಿನ 2500 ವರ್ಷಗಳವರೆಗೂ ಯಾವುದೇ ಭೂಕಂಪನವಾದರೂ ಹಾನಿಯಾಗುವುದಿಲ್ಲ ಎಂದು ಹೇಳಿದ್ದರು.

ಎಟಿಎಸ್ ಕಮಾಂಡೋ, ಐಪಿಎಸ್, ಪಿಪಿಎಸ್.. ಕಂಟೋನ್ಮೆಂಟ್ ಝೋನ್‌ನಂತಾದ ಅಯೋಧ್ಯೆ

ಅಯೋಧ್ಯೆ ರಾಮಮಂದಿರದ ವಾಸ್ತುಶಿಲ್ಪದ ವಿನ್ಯಾಸವು ಸಾಂಪ್ರದಾಯಿಕ ಭಾರತೀಯ ನಾಗರ ಶೈಲಿಯಾದ್ದಾಗಿದ್ದು, ಈ ನಾಗರ ಶೈಲಿಯೂ 5 ನೇ ಶತಮಾನಕ್ಕೂ ಹಿಂದಿನ ಇತಿಹಾಸ ಹೊಂದಿದೆ. ಅಯೋಧ್ಯೆಯ ರಾಮ ಮಂದಿರದ ನಿರ್ಮಾಣದ ಹೊಣೆಯನ್ನು ಲಾರ್ಸೆನ್ ಅಂಡ್ ಟೂಬ್ರೊ ನಿರ್ಮಾಣ ಕಂಪನಿಗೆ ನೀಡಲಾಗಿತ್ತು. ಇದರ ಜೊತೆಗೆ ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಲಿಮಿಟೆಡ್ ಇಲ್ಲಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕಂಪನಿಯಾಗಿ ಸೇವೆ  ಸಲ್ಲಿಸಿದೆ. ಹಾಗೆಯೇ ರಾಮಮಂದಿರದ ವಿನ್ಯಾಸಕ್ಕೆ ಸಲಹೆ ನೀಡಿದ ಸಂಸ್ಥೆಗಳ  ಪಟ್ಟಿಯಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ನ್ಯಾಷನಲ್ ಜಿಯೋ ರಿಸರ್ಚ್ ಇನ್ಸ್ಟಿಟ್ಯೂಟ್ ಹೈದರಾಬಾದ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್, ಐಐಟಿ ಗುವಾಹಟಿ, ಐಐಟಿ ಚೆನ್ನೈ, ಐಐಟಿ ಬಾಂಬೆ, ಎನ್ಐಟಿ ಸೂರತ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ರೂರ್ಕಿ ಸೇರಿವೆ.

 

click me!