Health: 15 ವರ್ಷದೊಳಗಿನ ಮಕ್ಕಳಿಗೆ ಮೆದುಳು ಜ್ವರ ಬಾಧೆ ಪೋಷಕರೇ ಎಚ್ಚರ

By Sathish Kumar KHFirst Published Nov 30, 2022, 4:23 PM IST
Highlights

* ರಾಜ್ಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಮೆದುಳು ಜ್ವರ
* ಡಿಸೆಂಬರ್‍‌ ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗುವ ಆತಂಕ
* ಮೆದುಳು ಜ್ವರ ಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಲಸಿಕಾಕರಣ ಅಭಿಯಾನ
* ಜ್ವರ ನಿಯಂತ್ರಣಕ್ಕೆ ಪಾಲಕರು ಕೈಗೊಳ್ಳಬೇಕಾದ ಕ್ರಮಗಳೇನು?

ವರದಿ: ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು ( ನ.30): ವಾತಾವರಣದ ಏರುಪೇರಿನಿಂದ ಸಹಜವಾಗಿ ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅದರಲ್ಲಿಯೂ ಕೆಲವು ದಿನಗಳಿಂದ ಮಕ್ಕಳಲ್ಲಿ ಮೆದುಳು ಜ್ವರ ಹೆಚ್ಚಳವಾಗುತ್ತಿದೆ. ಚಿಕ್ಕ ಮಕ್ಕಳಲ್ಲಿ (1 ರಿಂದ 15 ವರ್ಷ) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮೆದುಳು ಜ್ವರ ತಡೆಗಟ್ಟಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದಕ್ಕಾಗಿ ಲಸಿಕಾಕರಣ ಅಭಿಯಾನಕ್ಕೆ ಸಿದ್ದತೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಡಿಸೆಂಬರ್ 5 ರಿಂದ ಜೆಇ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. 

ಮಕ್ಕಳನ್ನು ಮೆದುಳು ಜ್ವರದಿಂದ ರಕ್ಷಿಸುವಂತೆ ಆರೋಗ್ಯ ಇಲಾಖೆ ಪೋಷಕರಲ್ಲು ಮಾನವಿ ಮಾಡಿದೆ. 1 ರಿಂದ 15 ವರ್ಷದ ವಯಸ್ಸಿನ ಮಕ್ಕಳನ್ನು ಮೆದುಳು ಜ್ವರದಿಂದ ರಕ್ಷಿಸಿ 'ಜಪಾನೀಸ್ ಎನ್ಸೆಫಲೈಟಿಸ್' ಲಸಿಕೆ ಹಾಕಿಸಿ ಎಂದು ಮನವಿ ಮಾಡಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ಮೆದುಳು ಜ್ವರ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಲಸಿಕೆ ಹಾಕಿಸಲು ತಯಾರಿ ನಡೆಸಿದೆ. ಡಿಸೆಂಬರ್ 5 ರಿಂದ ರಾಜ್ಯದ  ಬಾಗಲಕೋಟೆ, ಕಲಬುರಗಿ, ಗದಗ, ಹಾವೇರಿ, ಉಡುಪಿ, ತುಮಕೂರು, ಹಾಸನ, ದಕ್ಷಿಣ ಕನ್ನಡ, ರಾಮನಗರ, ಯಾದಗಿರಿ ಹೀಗೆ 10 ಜಿಲ್ಲೆಗಳಲ್ಲಿ ಈ ಲಸಿಕಾಕರಣ ಅಭಿಯಾನ ನಡೆಯಲಿದೆ. 

ಕೋಲಾರ ಜಿಲ್ಲೆಯಲ್ಲಿ ಮೆದುಳು ಜ್ವರ ಪತ್ತೆ: ಆತಂಕದಲ್ಲಿ ಜನತೆ..!

ಮೆದುಳು ಜ್ವರ ನಿಯಂತ್ರಣಕ್ಕೆ ಕ್ರಮಗಳೇನು?
1. ಮೆದುಳು ಜ್ವರ : ಮೆದುಳು ಜ್ವರವು ವೈರಾಣುಗಳಿಂದ ಉಂಟಾಗುತ್ತದೆ. ಹೆಚ್ಚಾಗಿ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ ಕೆಲವರಿಗೆ ನರ ದೌರ್ಬಲ್ಯ ಮತ್ತು ಬುದ್ದಿ ಮಾಂದ್ಯತೆ ಉಂಟಾಗುವುದು.
2. ಹರಡುವ ವಿಧಾನ : ಮೆದುಳು ಜ್ವರದ ವೈರಾಣುಗಳನ್ನು ಹೊಂದಿದ ಹಂದಿ/ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗವು ಹರಡುತ್ತದೆ.
3. ಹರಡುವ ಕಾಲ: ಸೆಪ್ಟೆಂಬರ್‌ನಿಂದ ಡಿಸೆಂಬರ್ ತಿಂಗಳಲ್ಲಿ ಮೆದುಳುಜ್ವರವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 
4. ರೋಗ ಲಕ್ಷಣಗಳು: ಪ್ರಾರಂಭದಲ್ಲಿ ವಿಪರೀತ ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈನಡುಕ ಮತ್ತು ಎಚ್ಚರ ತಪ್ಪುವುದು. ಈ ಲಕ್ಷಣಗಳು ಕಾಣಿಸಿದ ತಕ್ಷಣ ಆಸತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯುವುದು.

5. ಮೆದುಳು ಜ್ವರ ತಡೆಗಟ್ಟಲು ಏನು ಮಾಡಬೇಕು: 
* ಮೆದುಳುಜ್ವರ ನಿರೋಧಕ ಲಸಿಕೆ ಚಾಲ್ತಿಯಲ್ಲಿರುವ ಜಿಲ್ಲೆಗಳಲ್ಲಿ ಮಕ್ಕಳಿಗೆ (9ನೇ ಮತ್ತು 18ನೇ ತಿಂಗಳಲ್ಲಿ) ತಪ್ಪದೇ ಲಸಿಕೆ ಹಾಕಿಸಬೇಕು.
* ಹಂದಿಗಳನ್ನು ಜನರ ವಾಸ ಸ್ಥಳದಿಂದ ಮೂರು ಕಿಲೋ ಮೀಟ‌ರ್ ದೂರದಲ್ಲಿ ಸ್ಥಳಾಂತರಿಸಬೇಕು.
* ಈ ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿ ಹೊರಾಂಗಣ ಕೀಟನಾಶಕ ಧೂಮೀಕರಣ ಮಾಡುವುದು.
* ಹಂದಿ ಗೂಡುಗಳಿಗೆ ಕೀಟನಾಶಕ ಸಿಂಪಡಣೆ ಮಾಡುವುದು ಮತ್ತು ಸೊಳ್ಳೆ ನಿರೋಧಕ ಜಾಲರಿ ಹಾಕುವುದು.
* ತಪ್ಪದೇ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು.
* ಸಂಜೆ ವೇಳೆ ಮಕ್ಕಳು ಮೈತುಂಬಾ ಬಟ್ಟೆ ಧರಿಸುವುದು.
* ನೀರು ನಿಂತ ಸ್ಥಳಗಳಲ್ಲಿ ಲಾರ್ವಾಹಾರಿ ಮೀನು ಬಿಡುವುದು.  
* ಬೇವಿನ ಮಿಶ್ರಣದ ಗೊಬ್ಬರವನ್ನು ಗದ್ದೆಗಳಲ್ಲಿ ಉಪಯೋಗಿಸುವುದು.

click me!