ಯಾದಗಿರಿ: ಚಿಕುನ್ ಗುನ್ಯಾ ಖಾಯಿಲೆಗೆ ಹಾಸಿಗೆ ಹಿಡಿದ ಇಡೀ ಗ್ರಾಮ, ಅಧಿಕಾರಿಗಳ ನಿರ್ಲಕ್ಷ್ಯ!

By Gowthami KFirst Published May 21, 2023, 4:31 PM IST
Highlights

ಯಾದಗಿರಿ ಜಿಲ್ಲೆಯ ಒಂದೇ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಜನರಿಗೆ ಚಿಕುನ್ ಗುನ್ಯಾ ಬಾಧಿಸಿದೆ. ಗ್ರಾಮದ ಮನೆ, ದೇವಾಲಯ, ರಸ್ತೆ ಬಳಿಯೇ ರೋಗಿಗಳು ಮಲಗಿದ್ದಾರೆ.

ಯಾದಗಿರಿ (ಮೇ.21): ಯಾದಗಿರಿ ಜಿಲ್ಲೆಯ ಒಂದೇ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಜನರಿಗೆ ಚಿಕುನ್ ಗುನ್ಯಾ ಬಾಧಿಸಿದೆ. ಇಲ್ಲಿನ ಹುಣಸಗಿ ತಾಲೂಕಿನ ಬೈಲಾಪುರ ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಬೈಲಾಪುರ ತಾಂಡಾದಲ್ಲಿ ಪ್ರತಿ ಮನೆಯವರಿಗೂ ಚಿಕುನ್ ಗುನ್ಯಾ ಬಂದಿದೆ. ಬೈಲಾಪುರ ತಾಂಡಾದಲ್ಲಿ ಸುಮಾರು 150 ಕುಟುಂಬಗಳಿವೆ. ಅದರಲ್ಲಿ 100ಕ್ಕೂ ಅಧಿಕ ಜನರಿಗೆ ಚಿಕುನ್ ಗುನ್ಯಾ ಖಾಯಿಲೆ ಬಂದಿದೆ. ಮಾತ್ರವಲ್ಲ ನಡೆಯಲಾಗದ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಹಾಸಿಗೆ ಹಿಡಿದಿದ್ದಾರೆ.  ಜ್ವರ, ಕೈ-ಕಾಲು ನೋವು, ತಲೆ ನೋವು ಬಾಧಿಸಿದೆ. ಗ್ರಾಮದ ಮನೆ, ದೇವಾಲಯ, ರಸ್ತೆ ಬಳಿಯೇ ರೋಗಿಗಳು ಮಲಗಿದ್ದಾರೆ.  ಜಿಲ್ಲೆಯ ಹಲವು ಗ್ರಾಮಗಳಲ್ಲಿ ಚಿಕುನ್ ಗುನ್ಯಾ , ಡೆಂಗ್ಯೂ ನಿಂದ ಜನರು ತತ್ತರಿಸಿದ್ದಾರೆ.

ಖಾಯಿಲೆಯಿಂದ ಹಾಸಿಗೆ ಹಿಡಿದವರಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದಲ್ಲಿ ಎರಡು ನೀರಿನ ಓವರ್ ಹೆಡ್ ಟ್ಯಾಂಕ್ ಗಳಿವೆ. ಈ ಟ್ಯಾಂಕ್ ನೀರು ಯೋಗ್ಯವಲ್ಲ ಎಂದು ವರದಿ ಬಂದಿದೆ. ಈಗ ತಾತ್ಕಾಲಿಕವಾಗಿ ಟ್ಯಾಂಕ್ ನಿಂದ ನೀರು ಪೊರೈಕೆ ಸ್ಥಗಿತಗೊಳಿಸಿದ್ದಾರೆ. ಉನ್ನತ ಅಧಿಕಾರಿಗಳು ಬೈಲಾಪುರ ಗ್ರಾಮಕ್ಕೆ ಭೇಟಿ ನೀಡಿಲ್ಲ. ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ  ಕೊಟ್ಟಿಲ್ಲ. ಆರೋಗ್ಯ ಶಿಬಿರ ಮಾಡಿ, ರೋಗಿಗಳಿಗೆ ಟ್ರಿಟ್ಮೆಂಟ್ ನೀಡಲ್ಲ ಎಂದು ವೈಧಾದಿಕಾರಿಗಳ ಹಿಂದೇಟು ಹಾಕಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕನ್‌ಗನ್ಯಾ ವೈರಾಣುವು ಡೆಂಗೇ ಜ್ವರಕ್ಕೆ ಹೋಲುವಂಥ ಲಕ್ಷಣಗಳಿರುವ ಕಾಯಿಲೆಯನ್ನು ಉಂಟುಮಾಡುತ್ತದೆ. ವೈರಸ್ ಸೋಂಕಿನಿಂದ ಉಂಟಾಗುವ ಚಿಕುನ್‌ ಗುನ್ಯಾ ಸಾಮಾನ್ಯವಾಗಿ ಮುಂಗಾರಿನ ಸಮಯದಲ್ಲಿ ಕಾಣಿಸಿಕೊಳ್ಳುವ ರೋಗಗಳಲ್ಲಿ ಒಂದಾಗಿದೆ. ಚಿಕುನ್‌ ಗುನ್ಯಾ ವೈರಸ್‌ ಅನ್ನು ಹರಡುವ ಸೊಳ್ಳೆಯು ಕಡಿದಾಗ ಮಾನವರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಎಯ್ಡೀಸ್ ಇಜಿಪ್ಟಿ ಮತ್ತು ಎಯ್ಡೀಸ್ ಆಲ್ಬೋಪಿಕ್ಟಸ್ ಸೊಳ್ಳೆಗಳು ಈ ವೈರಸ್ ಅನ್ನು ಹಬ್ಬಿಸುತ್ತವೆ.

ಬಿಸಿಲ ಝಳಕ್ಕೆ ತತ್ತರಿಸಿದ ಯಾದಗಿರಿ, ನವಜಾತ ಶಿಶುಗಳು, ಮಕ್ಕಳು ಆಸ್ಪತ್ರೆಗೆ ದಾಖಲು!

ಇನ್ನೊಂದೆಡೆ  ರಾಜ್ಯದಲ್ಲೇ ಯಾದಗಿರಿಯಲ್ಲಿ ಅತ್ಯಧಿಕ ಬಿಸಿಲು ದಾಖಲೆಯಾಗಿದೆ.  ರಣಬಿಸಿಲಿಗೆ ಯಾದಗಿರಿ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದೊಂದು ವಾರದಿಂದ 45.6 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ಪ್ರಖರತೆಗೆ ನವಜಾತ ಶಿಶುಗಳು ಅಸ್ವಸ್ಥರಾಗಿದ್ದಾರೆ. ನಿರ್ಜಲೀಕರಣಕ್ಕೆ ಒಳಗಾಗಿ ನವಜಾತ ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ನಿತ್ಯವೂ ಆಸ್ಪತ್ರೆಗೆ  ಹತ್ತಾರು ಮಕ್ಕಳು ದಾಖಲಾಗುತಿದ್ದಾರೆ. ಯಾದಗಿರಿಯ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳನ್ನು ದಾಖಲಿಸಲಾಗಿದೆ. 

ಏಷ್ಯನ್ ಟೈಗರ್ ಸೊಳ್ಳೆ ಕಚ್ಚೋದರಿಂದ ಸಾವು ಸಂಭವಿಸಬಹುದು ಜೋಪಾನ!

ಕಳೆದ 5-6 ದಿನದಿಂದ ಆಸ್ಪತ್ರೆಗೆ ದಾಖಲಾಗುತ್ತಇರುವ ಮಕ್ಕಳ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬಿಸಿಲಿಗೆ ಮಕ್ಕಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದೆ. ಮಾತ್ರವಲ್ಲ ನೀರಿನ ಅಂಶ ಕಡಿಮೆಯಾಗಿ ಮಕ್ಕಳಿಗೆ ಕಿಡ್ನಿ ವೈಫಲ್ಯವೂ ಆಗುತ್ತಿದೆ. 1 ವರ್ಷದಿಂದ 7 ವರ್ಷದೊಳಗಿನ ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತಿದೆ.

click me!