ಎಲ್ಲಿ ಬೆಳೆಯುತ್ತಾರೆ?:
ಉತ್ತರ ಕನ್ನಡದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ, ರಿಪ್ಪನ್ಪೇಟೆಗಳ ಕಾಡಂಚಿನಲ್ಲಿ ಯಛೇಚ್ಛವಾಗಿ ಅಪ್ಪೆ ಬೆಳೆಯುತ್ತಿತ್ತು. ಅಪ್ಪೆಮಿಡಿ ಮೊದಲು ನದಿ ಹಾಗೂ ಹೊಳೆಯಂಚಿನಲ್ಲಿ ಬೆಳೆಯುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದರ ಮಹತ್ವ ಅರಿತು ಎಕ್ರೆಗಟ್ಟಲೆ ಪ್ಲಾಂಟೇಶನ್ ಮಾಡಿದವರೂ ಇದ್ದಾರೆ. ಒಂದು ಹಂತದಲ್ಲಿ ಕೈತುಂಬಾ ಕಾಸು ಗಳಿಸಿದರೂ ಈಗ ಮಾರಾಟಕ್ಕಲ್ಲ, ಮನೆ ಖರ್ಚಿಗೆ ಮಿಡಿ ಬೇಕೆಂದರೂ ಸಿಗುತ್ತಿಲ್ಲ.
ಯಾಕೆ ಹೀಗಾಯ್ತು?:
ಅಪ್ಪೆಮಿಡಿ ಬೆಳೆ ಬಾರದೇ ಇರಲು ಪ್ರಮುಖ ಕಾರಣ ಹವಾಮಾನ ವೈಪರಿತ್ಯ. ಪ್ರಕೃತಿಯಲ್ಲಿ ದಿನ ದಿನವೂ ಉಂಟಾಗುವ ಏರುಪೇರಿನಿಂದಾಗಿ ಹವಾಮಾನದಲ್ಲಿ ಸ್ಥಿರತೆಯೇ ಇಲ್ಲವಾಗಿದೆ. ಮಾವು ಹೂವು ಬಿಡುವ ಸಂದರ್ಭದಲ್ಲಿ ಒಂದು ದಿನ ಚಳಿ ಇದ್ದರೆ ಮರುದಿನವೇ ಮೋಡದ ವಾತಾವರಣ, ಮತ್ತೆ ಮರುದಿನ ಇಬ್ಬನಿ ಬೀಳುತ್ತದೆ. ಇದರಿಂದ ಮರದಲ್ಲಿ ಹೂವು ಬೀಡುವುದೇ ಕಷ್ಟವಾಗಿದೆ, ಹೂವು ಬಂದರೂ ನಿಲ್ಲದೇ ಉದುರಿ ಹೋಗುತ್ತಿದೆ ಅಥವಾ ಕೀಟಗಳ ದಾಳಿಗೆ ತುತ್ತಾಗಿ ಫಸಲು ನಿಲ್ಲುತ್ತಿಲ್ಲ ಎಂಬುದು ತಜ್ಞರ ಅಭಿಪ್ರಾಯ.