ಭದ್ರಾ ವನ್ಯಜೀವಿ ಅಭಯಾರಣ್ಯಕ್ಕೆ 25ರ ಸಂಭ್ರಮ: ಹುಲಿ, ಆನೆಗಳ ಎಷ್ಟಿದೆ ಗೊತ್ತಾ?

First Published Oct 2, 2024, 6:04 PM IST

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 
ಚಿಕ್ಕಮಗಳೂರು (ಅ.02): 
ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವು ಅಪರೂಪದ ಸಸ್ಯಸಂಪತ್ತು ಮತ್ತು ವನ್ಯಜೀವಿಗಳಿಗೆ ನೆಲೆಯಾಗಿದೆ. ಈ ಅಭಯಾರಣ್ಯವು 25ನೇ ಪ್ರಾಜೆಕ್ಟ್ ಟೈಗರ್ ರಿಸರ್ವ್ ಆಗಿ ಇತ್ತೀಚೆಗೆ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿದೆ. ಪ್ರಾಣಿಗಳ ಸಂಖ್ಯೆಯಲ್ಲಿನ ಗಮನಾರ್ಹ ಏರಿಕೆಯು ಈ ಅರಣ್ಯದ ಸಂರಕ್ಷಣಾ ಪ್ರಯತ್ನಗಳ ಯಶಸ್ಸಿಗೆ ಸಾಕ್ಷಿಯಾಗಿದೆ. ಇಲ್ಲಿ ಹುಲಿ, ಆನೆ, ಚಿರತೆಗಳ ಸಂಖ್ಯೆ ಎಷ್ಟಿದೆ ಗೊತ್ತಾ?

ಹಸಿರ ಆಲಯ, ನಿಸರ್ಗ ಮಾತೆಯ ಭವ್ಯ ಭೂಸ್ವರ್ಗ, ಅನನ್ಯ ಕಾಡು ಪ್ರಾಣಿಗಳ ಆವಾಸಸ್ಥಾನ, ನಿತ್ಯ ನಿರ್ಮಲ ಪರಿಸರದೋಕುಳಿಯಲ್ಲಿ ಮಿಂದೇಳುವ ಮೃಗಗಳು, ಇಂತಹುದೊಂದು ಅಪರೂಪದ ಅಮೋಘ ಸಸ್ಯಸಂಪತ್ತಿನ ಖಣಿ ಇರುವ ಚಿಕ್ಕಮಗಳೂರಿ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಳ್ಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ  ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಇಲ್ಲಿನ  ಹಚ್ಚಹಸಿರಿನ ಸಮೃದ್ದಿ ಅರಣ್ಯ ಪ್ರದೇಶಕ್ಕೆ ಸಾಕ್ಷಿಯಾಗಿದೆ.

25ನೇ ಪ್ರಾಜೆಕ್ಟ್ ಟೈಗರ್ ರಿಸರ್ವ್  ಫಾರೆಸ್ಟ್ ಗೆ 25ರ ಸಂಭ್ರಮ : ಭದ್ರಾ ವನ್ಯಜೀವಿ ಅಭಯಾರಣ್ಯ, ಒಂದು ಸಂರಕ್ಷಿತ ಅರಣ್ಯ ಪ್ರದೇಶ. 38 ಕಿಮೀ. ವ್ಯಾಪ್ತಿಯಲ್ಲಿ ಪ್ರಾಜೆಕ್ಟ್ ಟೈಗರ್ ರಿಸರ್ವ್ ಕೂಡ ಆಗಿದೆ. ಭದ್ರ ಅಭಯಾರಣ್ಯ ಎರಡು ಪಕ್ಕದ ವಿಭಾಗಗಳನ್ನು ಒಳಗೊಂಡಿದೆ. ಅಭಯಾರಣ್ಯ ಬೆಟ್ಟಗಳಿಂದ ಮತ್ತು ಕಡಿದಾದ ಇಳಿಜಾರು ಸುತ್ತುವರೆದಿದ್ದು ಮುಳ್ಳಯ್ಯನಗಿರಿ , ಹೆಬ್ಬೆಗಿರಿ, ಗಂಗೆಗಿರಿ ಮತ್ತು ಬಾಬಾಬುಡನ್ ಗಿರಿ ಬೆಟ್ಟ ಶ್ರೇಣಿಗಳ ಅಪರೂಪದ ನೋಟವಿದು. ಒಟ್ಟು 499 ಚದರ ಕಿ.ಲೊಮೀಟರ್ ವ್ಯಾಪ್ತಿಯಲ್ಲಿ ಸಾವಿರಾರು ಪ್ರಾಣಿಗಳಿಗೆ ಆಶ್ರಯ ನೀಡಿವೆ.

Latest Videos


1952 ರಲ್ಲಿ 'ಜಾಗರ ವ್ಯಾಲಿ ವನ್ಯಜೀವಿ ಅಭಯಾರಣ್ಯ' ಎಂದು ಘೋಷಿಸಲಾಗಿತ್ತು. 1974ರಲ್ಲಿ ಸಸ್ಯ ಮತ್ತು ಪ್ರದೇಶದ ಪ್ರಾಣಿ, ಅದರ ಸುತ್ತಮುತ್ತಲ ಒಂದು ವ್ಯವಸ್ಥಿತ ಸಮೀಕ್ಷೆ ನಡೆಸಿದ ನಂತರ, ಪ್ರದೇಶವನ್ನು ವಿಸ್ತರಿಸಲಾಯಿತು. ಜೊತೆಗೆ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಮರುನಾಮಕರಣ ಮಾಡಲಾಯಿತು. ವನ್ಯಧಾಮ 1998 ದೇಶದ 25ನೇ ಪ್ರಾಜೆಕ್ಟ್ ಟೈಗರ್ ರಿಸರ್ವ್ ಎಂದು ಘೋಷಿಸಲಾಯಿತು.

ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳ :

ಏಷ್ಯಾದಲ್ಲೇ ಪ್ರಾಣಿಗಳಿಗೆ ಹೆಚ್ಚು ಸುರಕ್ಷಿತ ಎಂಬ ಹೆಗ್ಗಳಿಕೆ ಹೊಂದಿದ ಭದ್ರಾ ಅಭಯಾರಣ್ಯದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ  ಭದ್ರಾ ಹುಲಿ ಅಭಯಾರಣ್ಯದಲ್ಲಿ ಕೇವಲ ವ್ಯಾಘ್ರಗಳ ಸಂತತಿ ಮಾತ್ರ ಹೆಚ್ಚುತ್ತಿಲ್ಲ, ಬದಲಾಗಿ ಆನೆಗಳು, ಜಿಂಕೆ, ಚಿರತೆ , ಕಾಡಾಮ್ಮೆ, ಕಾಡುಕುರಿ  ಸೇರಿದಂತೆ ಹಲವು ಪ್ರಾಣಿಗಳ  ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅರಣ್ಯ ಇಲಾಖೆಯ ಪ್ರಕಾರ ವರ್ಷದಿಂದ ವರ್ಷಕ್ಕೆ  ಪ್ರಾಣಿಗಳು ಸಂಖ್ಯೆ ಹೆಚ್ಚಳವಾಗುತ್ತಿದೆ.

ಜಿಲ್ಲೆಯಲ್ಲಿ ನಾಲ್ಕು ಅರಣ್ಯ ವೃತ್ತಗಳಿದ್ದು ಲಕ್ಕವಳ್ಳಿ, ಮುತ್ತೋಡಿ, ತಣಿಗೆಬೈಲ್, ಹೆಬ್ಬೆ ಅರಣ್ಯ ಪ್ರದೇಶಗಳಿವೆ. 1998ರಲ್ಲಿ ಟೈಗರ್ ರಿಸರ್ವ್ ನಲ್ಲಿ ಕೇವಲ 8 ಹುಲಿಗಳು ಮಾತ್ರ ಇತ್ತು. ಇದೀಗ 35 ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. ಸಮೀಕ್ಷೆ ಪ್ರಕಾರ ಸುಮಾರು 360 ಆನೆಗಳು, 110 ರಿಂದ 119ಚಿರತೆಗಳಿವೆ. ಇವುಗಳಿಗೆ ಆಹಾರವಾಗಿರುವ ಕಾಡು ಕುರಿ, ಜಿಂಕೆ,ಕಡಾವೆ ಸೇರಿದಂತೆ ಪ್ರಮುಖ ಪ್ರಾಣಿಗಳ ಸಂಖ್ಯೆಯು ಹೆಚ್ಚಳವಾಗಿರುವುದು ಪರಿಸರಾಸಕ್ತರಲ್ಲಿ ಹರ್ಷ ಮೂಡಿಸುತ್ತಿದೆ.

ಒಟ್ಟಾರೆಯಾಗಿ ಭದ್ರಾ ಹುಲಿ ಅಭಯಾರಣ್ಯಕ್ಕೆ 25 ರ ಸಂಭ್ರಮದಲ್ಲಿ 2004ರಲ್ಲಿ ಕಾಡ್ಗಿಚ್ಚುನಿಂದ ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗಿತ್ತು.ಇದರಕ ಕರಿನರಳಿನ ನಡುವೆಯೂ ಇದೀಗ ಭದ್ರಾ ಅಭಯಾರಣ್ಯದಲ್ಲಿ ಸಮೃದ್ದಿಯಾಗಿ ಅರಣ್ಯ ಪ್ರದೇಶ ಬೆಳೆದು ನಿಂತಿದೆ.

click me!