ಶೃಂಗೇರಿಯ ಸಿರಿಗೆ ಮತ್ತೊಂದು ಗರಿ: ಮಾರುತಿ ಬೆಟ್ಟದಲ್ಲಿ ಆದಿ ಶಂಕರಾಚಾರ್ಯರ ಬೃಹತ್ ಪ್ರತಿಮೆ ಸ್ಥಾಪನೆ

First Published Nov 6, 2023, 10:56 AM IST

 ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸಂಕಲ್ಪದಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದ ಶ್ರೀ ಮಾರುತಿ ಬೆಟ್ಟದಲ್ಲಿ ಶಂಕರ ಪ್ರತಿಮೆ ನಿರ್ಮಾಣವಾಗಿದೆ. ಈ ನವೆಂಬರ್‌ 10ರಂದು ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆ ನೆರವೇರಲಿದೆ.

ಶಾರದಾ ಪೀಠದಿಂದ 2 ಕಿ.ಮೀ. ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಾಣವಾಗಿರುವ 32 ಅಡಿ ಎತ್ತರದ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಉದ್ಘಾಟನೆ ನವೆಂಬರ್ 10ರಂದು ನೆರವೇರಲಿದೆ. ಭವ್ಯಮೂರ್ತಿ ಸ್ಥಾಪಿಸುವ ಆಶಯದಿಂದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿ 2013ರ ಜೂ.3ರಂದು ಮಾರುತಿ ಬೆಟ್ಟದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಶ್ರೀ ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದಲ್ಲಿಯೇ ಶಂಕರರ ಪ್ರತಿಮೆ ಜತೆಗೆ ಅವರ ಶಿಷ್ಯರಾದ ಜಗದ್ಗುರು ಶ್ರೀ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯರ ಮೂರ್ತಿಗಳು ಅನಾವರಣಗೊಳ್ಳಲಿವೆ. 

ಮಾರುತಿ ಬೆಟ್ಟದಲ್ಲಿ ಎತ್ತರದ ಸಿಮೆಂಟ್ ವೇದಿಕೆ ಮೇಲೆ ಪ್ರತಿಷ್ಠಾಪಿಸಲಾಗುತ್ತಿರುವ ಶ್ರೀ ಆದಿ ಶಂಕರಾಚಾರ್ಯರ ಬೃಹತ್ ಶಿಲಾ ಪ್ರತಿಮೆಯ ಪ್ರತಿಷ್ಠಾಪನೆ ಕಾರ್ಯ ನಡೆದಿದೆ. ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರು 12 ಶತಮಾನಗಳ ಹಿಂದೆ ನಮ್ಮ ಪವಿತ್ರ `ಭಾರತ ದೇಶದಲ್ಲಿ ಅವತರಿಸಿ ಸನಾತನ ವೇದಿಕಾ ಧರ್ಮ ಮತ್ತು ಅದ್ವೇತ ಸಿದ್ದಾಂತವನ್ನು ಉದ್ದಾರ ಮಾಡಿ ಅವುಗಳ ನಿರಂತರ ಪ್ರಚಾರಕ್ಕಾಗಿ ಭಾರತದ 4 ದಿಕ್ಕುಗಳಲ್ಲಿ 4  ಪೀಠಗಳನ್ನು ಸ್ಥಾಪನೆ ಮಾಡಿದ್ದರು. ಚತುರಾಮ್ನಾಯ ಪೀಠಗಳಲ್ಲಿ ದಕ್ಷಿಣಾನ್ಮಾಯ ಶೃಂಗೇರಿ ಶ್ರೀ ಶಾರದಾ ಪೀಠವು ಶ್ರೀ ಸುರೇಶ್ವರಾಚಾರ್ಯರು, ಶ್ರೀ ವಿದ್ಯಾರಣ್ಯರು ಮುಂತಾದ ಮಹಾಪುರುಷರಿಂದ ಪ್ರತಿಷ್ಠಾಪಿಸಲ್ಪಟ್ಟು ಇಂದಿಗೂ ಅವಿಚ್ಛಿನ್ನ ಗುರುಪರಂಪರೆಯೊಂದಿಗೆ ಕಂಗೊಳಿಸುತ್ತಿದೆ.

ಪೀಠದ 36 ನೇ ಅಧೀಪತಿಗಳಾದ ಜಗದ್ಗುರು ಶ್ರೀ `ಭಾರತೀ ತೀರ್ಥ ಮಹಾಸ್ವಾಮಿಗಳವರು ಆನಂದ ನಾಮ ಸಂವತ್ಸರದ ಆಶ್ವಯುಜ ಕೃಷ್ಣ ದ್ವಾದಶಿ 1974 ರ ನವೆಂಬರ್‌ 11 ರಂದು ಸನ್ಯಾಸ ಸ್ವೀಕಾರ ಮಾಡಿ 50 ವರ್ಷಗಳಿಂದ ಸನಾತನ `ಧರ್ಮ ಪ್ರಚಾರ ಕಾರ್ಯವನ್ನು ಮಾಡಿ ರಾರಾಜಿಸುತ್ತಿದ್ದಾರೆ. ಅವರ ಸನ್ಯಾಸ ಸ್ವೀಕಾರದ 50ನೇ ವರ್ಷದ ಸ್ವರ್ಣ ಮಹೋತ್ಸವನ್ನು ಆಶ್ವಯುಜ ಮಾಸದಿಂದ ಮುಂದಿನ ವರ್ಷದ ಆಶ್ವಯುಜ ಮಾಸದ ವರೆಗೆ (2023-2024) ಆಚರಿಸಬೇಕೆಂಬ ಅವರ ಶಿಷ್ಯರಾದ ಕಿರಿಯ ಶ್ರೀ ವಿಧೀಶೇಖರ `ಭಾರತೀ ಸ್ವಾಮೀಜಿಗಳು ಸಂಕಲ್ಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕವಾದ ಅನೇಕ ಕಾರ್ಯಕ್ರಮಗಳು ಶ್ರೀ ಮಠದಲ್ಲಿ ನಡೆಯಲಿದೆ.

ಶ್ರೀ ಶಂಕರ `ಭಗವತ್ಪಾದರ ಸರ್ವೋ ಉತ್ಕೃಷ್ಠವಾದ  ಮಹಿಮೆಯನ್ನು ತಿಳಿಸಬೇಕೆಂಬ ಉದ್ದೇಶದಿಂದ ಶ್ರೀ `ಭಾರತೀ ತೀರ್ಥ ಮಹಾಸ್ವಾಮಿಗಳು 2013 ರಲ್ಲಿ ಶೃಂಗೇರಿ ಪಟ್ಟಣದ ಹೊರವಲಯದ ಮಾರುತೀ ಬೆಟ್ಟದಲ್ಲಿ ಶ್ರೀ ಶಂಕರಾಚಾರ್ಯರ 32 ಅಡಿ ಎತ್ತರದ ಕುಳಿತಿರುವ `ಭಂಗಿಯ ಭವ್ಯವಾದ ಶಿಲಾಮಯ ಮೂರ್ತಿಯನ್ನು ಸ್ಥಾಪನೆ ಮಾಡಬೇಕೆಂದು ಸಂಕಲ್ಪ ಮಾಡಿದ್ದರು. ಇದೀಗ ಶಂಕರರ ಪ್ರತಿಮೆ ಜತೆಗೆ ಅವರ ಶಿಷ್ಯರಾದ ಜಗದ್ಗುರು ಶ್ರೀ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಾಮಲಕಾಚಾರ್ಯ, ತೋಟಕಾಚಾರ್ಯರ ಮೂರ್ತಿಗಳ ನಿರ್ಮಾಣ ಕಾರ್ಯ ಸಮಾಪ್ತವಾಗಿದೆ. ಇದರ ಜೊತೆಗೆ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಪೀಠದ 12ನೇ ಅಪತಿಗಳಾದ ಶ್ರೀ ವಿದ್ಯಾರಣ್ಯರ ಮೂರ್ತಿಯ  ನಿರ್ಮಾಣ, ವಸ್ತು ಪ್ರದರ್ಶನ ಮಾಡಲಾಗಿದೆ.
 

 45 ಕೋಟಿ ರೂ. ವೆಚ್ಚದಲ್ಲಿ ಸುಮಾರು 2ಎಕರೆ ಜಾಗದಲ್ಲಿ ಮೂರ್ತಿ ನಿರ್ಮಾಣವಾಗಿದ್ದು, ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆಯನ್ನು ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಸರಿಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ. ಈ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು ಮತ್ತು ಇಳಿಯಲು ಎಸ್ಕಲೇಟರ್ ಅಳವಡಿಸಲಾಗಿದೆ ಶ್ರೀ ಶಂಕರಾಚಾರ್ಯರ ಶಿಲಾಮಯ ವಿಗ್ರಹದ ಪ್ರತಿಷ್ಠಾನ,ಧಾರ್ಮಿಕ ಕಾರ್ಯಕ್ರಮದ ಜೊತೆಗೆಅಭಿಷೇಕ ಹಾಗೂ ಇತರ ಕಾರ್ಯಗಳು ನವೆಂಬರ್ 10 ರಂದು ನಡೆಯಲಿದೆ. ಈಗಾಗಲೇ ಶ್ರೀ ಮಠದಲ್ಲಿ ಅತಿರುದ್ರ ಮಹಾಯಾಗ  ಆರಂಭಗೊಂಡಿದ್ದು ನವೆಂಬರ್ 6 ರಂದು ಸಹಸ್ರ ಚಂಡಿ ಮಹಾಯಾಗಕ್ಕೆ ಜಗದ್ಗುರುಗಳು ಚಾಲನೆ ನೀಡಲಿದ್ದಾರೆ.ಜಗದ್ಗುರುಗಳ ಸಂಕಲ್ಪದಂತೆ ಮಾರುತೀ ಬೆಟ್ಟದಲ್ಲಿ ಆದಿ ಶಂಕರಾಚಾರ್ಯರ ಶಿಲಾಮಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು ನವೆಂಭೃರ್ 10 ರಂದು ಜಗದ್ಗುರುಗಳು ಉದ್ಘಾಟಿಸಲಿದ್ದಾರೆ.

click me!