ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!

First Published Oct 25, 2024, 1:49 PM IST

'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ..' ಎಂದು ಸಂತಸವಾಗಿದ್ದ ಬಾಲಕೃಷ್ಣ ಪೂಜಾರಿಯನ್ನು ಆತನ ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನ ಮುಂದೆ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡುತ್ತಲೇ ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ.

 ಅಗ್ನಿಸಾಕ್ಷಿಯಾಗಿ ಪಂಚಭೂತಗಳ ಸಮ್ಮುಖದಲ್ಲಿ ತಾಳಿ ಕಟ್ಟಿಸಿಕೊಂಡು ಮದುವೆ ಮಾಡಿಕೊಂಡ ಗಂಡನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಾ 'ಕರಿಮಣಿ ಮಾಲೀಕ ನೀನಲ್ಲ...' ಎಂದು ಹಲವು ಬಾರಿ ಹೆಂಡತಿ ವಿಡಿಯೋ ಮಾಡಿದ್ದಾಳೆ. ಆದರೆ, ಗಂಡ ಮಾತ್ರ ರೀಲ್ಸ್‌ನ ಒಳಮರ್ಮವನ್ನೇ ಪತಿ ಅರ್ಥ ಮಾಡಿಕೊಂಡಿಲ್ಲ. ಮನೆಯಲ್ಲಿ ಮಹಾರಾಣಿಯಂತೆ ಮೆರೆಸುವ ಗಂಡನಿದ್ದರೂ ಹೆಂಡತಿ ಪ್ರಿಯಕರನೊಂದಿಗೆ ಅನೈತಿಕ ಸಂಬಂಧಕ್ಕಾಗಿ ಗಂಡನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಮದುವೆಯಾಗಿ ಸುಖ ಸಂಸಾರ ಮಾಡುತ್ತಿದ್ದ ದಂಪತಿಗೆ ಅದೊಂದು ಅನೈತಿಕ ಸಂಬಂಧದ ಶುರುವಾಗಿದೆ. ಮನೆಯಲ್ಲಿ ಮನ್ಮಥನಂತಹ ಗಂಡನಿದ್ದರೂ ಮನದರಸಿ ಮಾತ್ರ ಪರ ಪರುಷನಿಗೆ ತನ್ನ ಮನಸ್ಸು ಹಾಗೂ ಮೈಯನ್ನು ಒಪ್ಪಿಸಲು ಮುಂದಾಗಿದ್ದಳು. ಆದರೆ, ತಮ್ಮ ಅನೈತಿಕ ಸಂಬಂಧಕ್ಕೆ ಸ್ವತಃ ತನ್ನ ಪತಿಯೇ ಅಡ್ಡಿಯಾಗುತ್ತಾನೆ ಎಂದು ಆತನನ್ನು ಕೊಲೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾಳೆ. ಹೇಗಾದರೂ ಮಾಡಿ ಗಂಡನನ್ನು ಕೊನೆಗಾಣಿಸಿದರೆ, ಪ್ರಿಯಕರನೊಂದಿಗೆ ಜೀವನಪೂರ್ತಿ ನೆಮ್ಮದಿಯಾಗಿ ಇರಬಹುದು ಎಂದು ಆಲೋಚನೆ ಮಾಡಿದ್ದಾಳೆ.

Latest Videos


'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ' ಎಂದು ಸಂತಸದಿಂದ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಅಜೆಕಾರಿನಲ್ಲಿ ಹೆಂಡತಿಯೊಂದಿಗೆ ಸಂಸಾರ ಮಾಡಿಕೊಂಡಿದ್ದ ಬಾಲಕೃಷ್ಣ ಪೂಜಾರಿಗೆ ತನ್ನ ಹೆಂಡತಿ ಪ್ರತಿಮಾ ಮುಹೂರ್ತ ಇಟ್ಟಿದ್ದ ಬಗ್ಗೆ ಒಂಚೂರೂ ಅನುಮಾನ ಬಂದಿಲ್ಲ. ಹೆಂಡತಿ ಐಷಾರಾಮಿಯಾಗಿ ಜೀವನ ಮಾಡುವುದಕ್ಕೆ ಹಾಗೂ ಮಾರ್ಡನ್ ಹೆಣ್ಣುಮಕ್ಕಳಂತೆ ಫ್ಯಾಷನ್ ಮಾಡಲು ಕೂಡ ಅವಕಾಶ ನೀಡಿದ್ದಾನೆ. ಹೆಂಡತಿಯ ಪ್ರತಿಯೊಂದು ಆಸಕ್ತಿ, ಅಭಿರುಚಿಗೆ ಪ್ರೋತ್ಸಾಹ ನೀಡುತ್ತಿದ್ದ ಗಂಡನ ಜೀವವನ್ನೇ ಹೆಂಡತಿ ಕೊನೆಗಾಣಿಸಿದ್ದಾಳೆ.

ಮಾರ್ಡನ್ ಡ್ರೆಸ್ ಹಾಕಿಕೊಂಡು ಹುಡುಗಿಯಂತೆ ಕಾಣುತ್ತಿದ್ದ ಹೆಂಡತಿ ತನ್ನ ಸೌಂದರ್ಯವನ್ನು ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾಳೆ. ಮುಂದುವರೆದು ಗಂಡನ ಅನುಮತಿಯೊಂದಿಗೆ ರೀಲ್ಸ್ ಮಾಡಲು ಆರಂಭಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಂಚಿಕೊಂಡ ಪ್ರತಿಮಾಗೆ ಪ್ರಪೋಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದ್ಯಾವಾಗ ಪ್ರೇಮಿಯೊಬ್ಬ ಸಿಕ್ಕಿದನೋ ಆಗ ಗಂಡನ ಮುಂದೆ ಬಂದು 'ಕರಿಮಣಿ ಮಾಲೀಕ ನೀನಲ್ಲ...' ಎಂದು ರೀಲ್ಸ್ ಮಾಡಿದ್ದಾಳೆ. ಆದರೆ, ಗಂಡ ಈ ರೀಲ್ಸ್‌ನ ಒಳಮರ್ಮವನ್ನು ಅರಿತುಕೊಂಡಿಲ್ಲ. ರೀಲ್ಸ್‌ಗೋಸ್ಕರ ಹೀಗೆ ಮಾಡಿದ್ದಾಳೆ, ಹೆಂಡತಿಯ ಖುಷಿಯೇ ತನ್ನ ಖುಷಿ ಎಂದು ಗಂಡ ಸುಮ್ಮನಿದ್ದಾನೆ.

ಇದ್ದಕ್ಕಿದ್ದಂತೆ ಮಾರ್ಡನ್ ಬ್ಯೂಟಿ ಪ್ರತಿಮಾಳ ಗಂಡ ಬಾಲಕೃಷ್ಣನಿಗೆ ಅನಾರೋಗ್ಯ ಉಂಟಾಗುತ್ತದೆ. ಕಳೆದ 25 ದಿನಗಳಿಂದ ವಾಂತಿ, ಬೇಧಿ ಶುರುವಾಗಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನಿಗೆ ಕಾಮಾಲೆ ರೋಗವಿದೆ ಎಂದು ಸಂಬಂಧಿಕರಿಗೆ ತಿಳಿಸಿ, ಆತನನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸುತ್ತಾರೆ. ನಂತರ, ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ, ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಯಾವುದೇ ಆಸ್ಪತ್ರೆಯಲ್ಲಿಯೂ ಬಾಲಕೃಷ್ಣ ಮಾತ್ರ ಚೇತರಿಕೆ ಕಾಣಿಸಿಕೊಳ್ಳಲೇ ಇಲ್ಲ.

ರಾಜ್ಯದ ವಿವಿಧ ಆಸ್ಪತ್ರೆಗಳನ್ನು ಸುತ್ತಿದರೂ ಬಾಲಕೃಷ್ಣ ಮಾತ್ರ ಗುಣಮುಖ ಆಗಲಿಲ್ಲ. ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ ಎಂದು ಔಷಧಿ ಕೊಟ್ಟರೆ ಅದನ್ನು ಗಂಡನಿಗೆ ಕೊಡುತ್ತಿದ್ದರೋ ಅಥವಾ ಬೇರೆ ಔಷಧಿ ಕೊಟ್ಟು ಗಂಡನನ್ನು ಕೊಲೆ ಮಾಡಬೇಕು ಎಂದುಕೊಂಡಿದ್ದಳೋ ಗೊತ್ತಿಲ್ಲ. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಗುಣಮುಖ ಆಗದ ಬಾಲಕೃಷ್ಣ ಪೂಜಾರಿ (44) ಅ.20ರಂದು (ಕಳೆದ 4 ದಿನಗಳ ಹಿಂದೆ) ಮೃತಪಟ್ಟಿದ್ದಾರೆ. ಆದರೆ, ಬಾಲಕೃಷ್ಣನ ಸಾವಿನ ಬಗ್ಗೆ ಮನೆಯವರಿಗೆ ಸಂಶಯ ಶುರುವಾಗಿದ್ದು, ಈ ಸಂಬಂಧಪಟ್ಟಂತೆ ಮೃತ ಬಾಲಕೃಷ್ಣ ಸಹೋದರ ರಾಮಕೃಷ್ಣ ಅವರು ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಗ್ಯಕ್ಕೆ ತುತ್ತಾಗಿದ್ದ ಬಾಲಕೃಷ್ಣ ಏಕಾಏಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರತಿಮಾ ಮೇಲೆ ದೂರು ದಾಖಲಾಗುತ್ತಿದ್ದಂತೆ ಆಕೆಯ ಸಹೋದರ ಸಂದೀಪನಿಗೂ ಭಾವನ ಸಾವಿನ ಬಗ್ಗೆ ಅನುಮಾನ ಬಂದಿದೆ. ಆಗ ತನ್ನ ಸಹೋದರಿಗೆ ಯಾರೊಂದಿಗಾದರೂ ಅನೈತಿಕ ಸಂಬಂಧ ಇದೆಯೇ ಎಂಬುದರ ಬಗ್ಗೆ ಪತ್ತೆ ಮಾಡಿದಾಗ ಆಕೆಗೆ ದಿಲೀಪ್ ಹೆಗ್ಡೆ ಎಂಬ ಯುವಕನೊಂದಿಗೆ ಅನೈತಿಕ ಸಂಬಂಧ ಇರುವುದು ಕಂಡುಬಂದಿದೆ. ಆಗ ತನ್ನ ಸಹೋದರನ ಮುಂದೆ ತಾನೇ ಗಂಡನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ನನಗೆ ದಿಲೀಪ್ ಹೆಗ್ಡೆ ಬಿಟ್ಟು ಇರಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಗಂಡನನ್ನು ದೂರ ಮಾಡಲೂ ಕಾರಣ ಇರಲಿಲ್ಲ. ಹೀಗಾಗಿ, ಗಂಡ ಬಾಲಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪ್ರಿಯಕರ ದಿಲೀಪ್ ಹೆಗ್ಡೆಯೊಂದಿಗೆ ಸೇರಿಕೊಂಡು ಬೆಡ್‌ಶೀಟ್ ಮತ್ತು ದಿಂಬನ್ನು ಮುಖದ ಮೇಲೆ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದೇವೆ ಎಂದು ಸ್ವತಃ ಪ್ರತಿಮಾ ಒಪ್ಪಿಕೊಂಡಿದ್ದಾಳೆ. ಇದಾದ ನಂತರ ಪೊಲೀಸರಿಗೆ ಪ್ರತಿಮಾಳ ಸಹೋದರ ಮಾಹಿತಿ ನೀಡಿದ್ದು, ಕೊಲೆ ಆರೋಪಿಗಳಾದ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ.

click me!