ಹಬ್ಬದ ದಿನ ಚೆನ್ನಾಗಿ ತಿನ್ನೋ ಮುಂಚೆ ಒಮ್ಮೆ ಯೋಚಿಸಿ!

Published : Oct 07, 2019, 05:00 PM IST
ಹಬ್ಬದ ದಿನ ಚೆನ್ನಾಗಿ ತಿನ್ನೋ ಮುಂಚೆ ಒಮ್ಮೆ ಯೋಚಿಸಿ!

ಸಾರಾಂಶ

ಹೊಟ್ಟೆತುಂಬ ತಿನ್ನಿ, ಹೊಟ್ಟೆಬಿರಿಯೋ ಹಾಗೆ ತಿಂದ್ರೆ ಪ್ರಾಬ್ಲೆಮ್ಮು | ಹಬ್ಬ ಬಂತು ಕೆಲಸ ಜಾಸ್ತಿ ಅಂತ ತರಕಾರಿ ತಿನ್ನದೆ ಹೋದರೆ ನಾರಿನಂಶ, ಪೌಷ್ಠಿಕಾಂಶ ದೇಹಕ್ಕೆ ಹೋಗಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಶುರುವಾಗುತ್ತೆ.

ಹೊಟ್ಟೆತುಂಬ ತಿನ್ನಿ, ಹೊಟ್ಟೆಬಿರಿಯೋ ಹಾಗೆ ತಿಂದ್ರೆ ಪ್ರಾಬ್ಲೆಮ್ಮು

‘ಹಬ್ಬ ಯಾವಾಗ್ಲೂ ಬರುತ್ತಾ, ಬಂದಾಗ ಚೆನ್ನಾಗಿ ತಿಂದು ಬಿಡಬೇಕು. ಡಯೆಟ್‌, ಗಿಯಟ್ಟೆಲ್ಲ ಆಮೇಲೆ ಇದ್ದಿದ್ದೇ..’

ಹಬ್ಬದೂಟ ಮಾಡೋ ಮುಂಚೆ ಹೀಗೊಂದು ಡೈಲಾಗ್‌. ನಮ್ಮೊಳಗಿನ ಪಾಪಪ್ರಜ್ಞೆಯೇ ನಮ್ಮಿಂದ ಇಂಥ ಮಾತುಗಳನ್ನು ಆಡಿಸುತ್ತೋ ಏನೋ ಗೊತ್ತಿಲ್ಲ. ಆದರೂ ನಮ್ಮನ್ನು ನಾವೇ ಸಮಾಧಾನ ಮಾಡಿ ಊಟಕ್ಕಿಳಿಯುತ್ತೇವೆ. ಸಾಕು.. ಸಾಕು ಅಂತ ದೇಹ ಸೂಚನೆ ಕೊಡ್ತಿದ್ರೂ, ‘ಹಬ್ಬ ಮತ್ತೆ ಬರುತ್ತಾ..’ ಎಂಬ ಮಾತೇ ಮತ್ತಷ್ಟುಊಟ ಮಾಡುವಂತೆ ಪ್ರೇರೇಪಿಸುತ್ತದೆ. ಹಾಗಿದ್ದರೆ ಹಬ್ಬದ ಒಂದೆರಡು ದಿನವಾದ್ರೂ ತಿನ್ನೋದು ತಪ್ಪಾ ಎಂಬ ಮಾತು ಬರಬಹುದು. ಖಂಡಿತ ತಪ್ಪಲ್ಲ. ಆದರೆ ದೇಹಕ್ಕೆ ಬೇಡದಷ್ಟುತಿಂದರೆ ಆಮೇಲೆ ಕಷ್ಟಪಡೋದು ನಾವು ನೀವೇ. ಹಬ್ಬದ ವೇಳೆ ನಾವು ಮಾಡೋ ತಪ್ಪುಗಳು ಮತ್ತು ಸರಿಕ್ರಮದ ಬಗ್ಗೆ ಸಣ್ಣ ಡೀಟೈಲ್‌ ಇಲ್ಲಿದೆ.

1. ತರಕಾರಿಯಿಂದ ದೂರ ಇರೋದ್ಯಾಕೆ?

ಉಳಿದ ಸಮಯದಲ್ಲಿ ರುಚಿಸಿದ್ರೂ ರುಚಿಸದಿದ್ರೂ ಆರೋಗ್ಯಕ್ಕೊಳ್ಳೆಯದು ಅಂತ ಒಂಚೂರು ತರಕಾರಿ ತಿಂತಿರುತ್ತೇವೆ. ಹಸಿ ತರಕಾರಿ, ಬೇಯಿಸಿದ್ದು, ತರಕಾರಿ ಜ್ಯೂಸ್‌, ಸಲಾಡ್‌ ಇತ್ಯಾದಿ ನಮ್ಮ ದಿನಚರಿಯ ಭಾಗವಾಗಿರುತ್ತೆ. ಆದ್ರೆ ಯಾವಾಗ ಹಬ್ಬ ಬರುತ್ತೋ ಆಗ ಇದನ್ನೆಲ್ಲ ಮಾಡ್ಕೊಂಡು ಕೂರಲಿಕ್ಕೆ ಟೈಮ್‌ ಇರಲ್ಲ. ಹಾಗಾಗಿ ಹಬ್ಬದಲ್ಲಿ ತರಕಾರಿ ನಮ್ಮ ಡಯೆಟ್‌ನಿಂದ ದೂರ ಉಳಿಯುತ್ತೆ.

ನವರಾತ್ರಿ ಹಬ್ಬದಲ್ಲಿ ರುಚಿ ನೋಡಲೇಬೇಕಾದ ತಿಂಡಿಗಳ ರೆಸಿಪಿ

2. ನೀರು ಕುಡಿಯೋ ಬಗ್ಗೆ ಗಮನವೇ ಇರಲ್ಲ

ಉಳಿದ ಸಮಯದಲ್ಲಿ ಬಾಟಲಿಗಟ್ಟಲೆ ನೀರು ಕುಡಿಯುವ ನಾವು ಹಬ್ಬದ ಸಮಯದಲ್ಲಿ ಮಾತ್ರ ನೀರು ಕುಡಿಯೋ ಬಗ್ಗೆ ಕಾಳಜಿ ಮಾಡಲ್ಲ. ನಮ್ಮ ಗಮನವೆಲ್ಲ ಬೇರೆ ಕಡೆ ಇರುತ್ತೆ. ಆದರೆ ಈ ಟೈಮ್‌ನಲ್ಲಿ ಓಡಾಟ, ಕೆಲಸ ಜಾಸ್ತಿ. ಮೈಯಿಂದ ಬೆವರು ಹರಿಯುತ್ತಲೇ ಇರುತ್ತದೆ.

3. ಸ್ವೀಟು, ಬೋಂಡಾ ಕಾರುಬಾರು

ಮನೆಯಲ್ಲೇ ಮಾಡಿದ್ದೋ ಹೊರಗಿನಿಂದ ತಂದದ್ದೋ ಸ್ವೀಟ್‌ ಅಂತೂ ಇರಲೇಬೇಕು. ಜೊತೆಗೆ ಬೋಂಡಾ, ಚಿಫ್ಸ್‌, ಮಿಕ್ಸ$್ಚರ್‌ ಇತ್ಯಾದಿ. ಸ್ವೀಟ್‌ ಆಗಲ್ಲ ಅಂತ ಹೇಳೋರು ತುಂಬ ಜನ ಸಿಗಬಹುದು. ಆದರೆ ಬೋಂಡಾ ತಿನ್ನದವರು ಕಡಿಮೆ. ಸ್ವೀಟ್ಸ್‌ ತಿಂದು ಖಾರಕ್ಕೆ ಅಂತ ಬೋಂಡಾ, ಮಿಕ್ಸ$್ಚರ್‌ ಸ್ವಾಹಾ. ಹಬ್ಬ ಅಲ್ವಾ, ಕಡಿಮೆ ತಿನ್ನೋ ಮಾತೇ ಇಲ್ಲ. ಮಧುಮೇಹ ಇರುವವರೂ ಇನ್ಸುಲಿನ್‌ ಮೇಲೆ ಭಾರ ಹಾಕಿ ಚೆನ್ನಾಗಿ ತಿನ್ನೋದು.

ತಾವರೆಗೊಳದಿ ಅವಿತ ಮಖಾನ ಬಲು ರುಚಿ!

ಮತ್ತೇನು ಮಾಡ್ಬೇಕು ಅಂತಿರೋರಿಗೆ

- ಹಬ್ಬ ಬಂತು ಕೆಲಸ ಜಾಸ್ತಿ ಅಂತ ತರಕಾರಿ ತಿನ್ನದೆ ಹೋದರೆ ನಾರಿನಂಶ, ಪೌಷ್ಠಿಕಾಂಶ ದೇಹಕ್ಕೆ ಹೋಗಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಶುರುವಾಗುತ್ತೆ.

- ಸ್ವೀಟು ಬೋಂಡಾ ತಿನ್ನೋದು ತಪ್ಪಲ್ಲ. ಆದರೆ ಹೆಚ್ಚು ತಿನ್ನಬೇಡಿ. ಬಾಯಿ ರುಚಿಗೆ ಎಷ್ಟುಬೇಕೋ ಅಷ್ಟುತಿನ್ನಿ. ಚಪಲಕ್ಕೆ ತಿನ್ನೋದು ಬೇಡ. ಆಮೇಲೆ ನೀವೇ ಅನುಭವಿಸಬೇಕಾಗುತ್ತೆ.

- ನೀರು ಚೆನ್ನಾಗಿ ಕುಡೀದಿದ್ರೆ ಡೀ ಹೈಡ್ರೇಶನ್‌ ಆಗಬಹುದು. ಜೊತೆಗೆ ನೀರು ಕಡಿಮೆ ಕುಡಿದು ಖಾರ, ಎಣ್ಣೆ ತಿಂಡಿ ಹೆಚ್ಚು ತಿಂದ್ರೆ ಕೆಲವೊಮ್ಮೆ ಮೂತ್ರಕೋಶದಲ್ಲಿ ಸಮಸ್ಯೆ ಬರಬಹುದು.

- ಹಬ್ಬದ ಟೈಮ್‌ನಲ್ಲಿ ಚೆನ್ನಾಗಿ ತಿಂದು ತೂಕ ಹೆಚ್ಚಿಸಿಕೊಂಡರೆ ಅದನ್ನು ಕರಗಿಸೋಕೆ ಎಷ್ಟುಟೈಮ್‌ ಬೇಕಾಗಬಹುದು ಅಂತ ಯೋಚಿಸಿ, ನಿಮ್ಮ ಚಪಲ ತಕ್ಷಣ ಹತೋಟಿಗೆ ಬರುತ್ತೆ.

- ಯಾವ ಟೈಮೇ ಇರಲಿ, ನಾರಿನಂಶ ಇರುವ ಪದಾರ್ಥ, ತರಕಾರಿ, ಹಣ್ಣು ಸೇವನೆ ನಿಲ್ಲಿಸಬೇಡಿ. ಆ ಕ್ಷಣಕ್ಕಲ್ಲದಿದ್ರೂ ಕ್ರಮೇಣ ಇದರ ಪರಿಣಾಮ ಗೊತ್ತಾಗುತ್ತೆ.

- ಯಾವ ಟೈಮ್‌ನಲ್ಲೂ ಎಕ್ಸರ್‌ಸೈಸ್‌ ತಪ್ಪಿಸಬೇಡಿ. ಅಷ್ಟುದಿನ ಶಿಸ್ತಿನಿಂದ ಪಾಲಿಸಿದ್ದನ್ನು ಒಮ್ಮೆ ಬ್ರೇಕ್‌ ಮಾಡಿದರೆ ಪರ್ಮನೆಂಟಾಗಿ ವರ್ಕೌಟ್‌ ಗೆ ಬ್ರೇಕ್‌ ಬೀಳೋ ಸಾಧ್ಯತೆ ಇರುತ್ತೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Krishna Janmashtami Recipe: 10 ನಿಮಿಷದಲ್ಲಿ 1 ಕಪ್ ಅವಲಕ್ಕಿಯಿಂದ ಸಕ್ಕರೆ ಬಳಸದೆ ಮಾಡಿ ರುಚಿಯಾದ ಲಡ್ಡು
Kitchen Hacks: ಅಡುಗೆಮನೆಯ ಪ್ರತಿದಿನದ ಸಮಸ್ಯೆ; ಹಾಲು ಉಕ್ಕೋದನ್ನು ತಡೆಯೋದು ಹೇಗೆ?