ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?

By Suvarna NewsFirst Published Jul 30, 2021, 3:37 PM IST
Highlights

ಮಹಾಭಾರತದಲ್ಲಿ ಶ್ರೀಕೃಷ್ಣನನ್ನು ಕೊಂದ ಬೇಡನಿಗೂ ರಾಮಾಯಣಕ್ಕೂ ಒಂದು ಲಿಂಕ್ ಇದೆ. ಅದೇನು ಎಂದು ತಿಳಿಯೋಣ.

ಮಹಾಭಾರತ ಹಾಗೂ ಭಾಗವತಗಳ ಮಹಾಪುರುಷ, ಭಗವಾನ್ ಶ್ರೀಕೃಷ್ಣನಿಗೂ ಒಂದು ಅಂತ್ಯ ನಿಗದಿಯಾಗಿತ್ತು. ಆದರೆ ಶ್ರೀಕೃಷ್ಣನಿಗೆ ತನ್ನ ಸಾವು ಹೇಗೆ ಆಗಲಿದೆ, ಯಾವಾಗ ಆಗಲಿದೆ ಎಂಬುದು ಗೊತ್ತಿತ್ತು. ಅದಕ್ಕೆ ಆತನ ಹಿಂದಿನ ಅವತಾರದ ಒಂದು ಹಿನ್ನೆಲೆಯಿದೆ; ಒಂದು ಶಾಪದ ಹಿನ್ನೆಲೆಯೂ ಇದೆ. ಆ ಕತೆಯನ್ನು ಈಗ ಕೇಳೋಣ.

ಶ್ರೀಕೃಷ್ಣನನ್ನು ಕೊಂದವನ್ಯಾರು?

ಪುರಾಣಗಳ ಪ್ರಕಾರ ಶ್ರೀ ಕೃಷ್ಣನನ್ನು ಕೊಂದ ಬೇಡನು ಮತ್ತೆ ಯಾರೂ ಅಲ್ಲದೆ ಬೇಡನಾಗಿ ಜನ್ಮ ತಾಳಿದ ವಾನರ ರಾಜ ವಾಲಿ. ಶ್ರೀ ಕೃಷ್ಣನು ಹಿಂದಿನ ಜನ್ಮದಲ್ಲಿ ಶ್ರೀ ರಾಮನಾಗಿ ವಾನರ ರಾಜ ವಾಲಿಯನ್ನು ಮರಗಳ ಹಿಂದೆ ನಿಂತು ಕೊಂದಿದ್ದ. ಆಗ ವಾಲಿ ಈತನ ಕೃತ್ಯದ ನೈತಿಕತೆ ಏನೆಂದು ಪ್ರಶ್ನಿಸುತ್ತಾನೆ. ತಮ್ಮನ ಪತ್ನಿಯನ್ನು ಬಲಾತ್ಕಾರ ಮಾಡಿದ್ದರಿಂದ ವಾಲಿ ವಧಾರ್ಹನೇ ಹೌದು.

ನಿಮಗೆ ಗೊತ್ತೇ, ಶ್ರೀಕೃಷ್ಣನ ಮೈಬಣ್ಣವೇಕೆ ನೀಲಿ?

ಆದರೆ ಮರದ ಮರೆಯಲ್ಲಿ ನಿಂತು ಕೊಂದದ್ದು ರಾಮನ ತಪ್ಪು ಆಗಿತ್ತು. ಇದಕ್ಕೆ ಆತ ಬೆಲೆ ತೆರಲೇ ಬೇಕಾಗಿತ್ತು. ಸರಿ, ಹಾಗಿದ್ದರೆ ಮುಂದಿನ ಜನ್ಮದಲ್ಲಿ ನೀನು ಮರೆಯಲ್ಲಿ ನಿಂತು ನನ್ನನ್ನು ಕೊಲ್ಲು ಎಂದು ಶ್ರೀರಾಮ ಅಪ್ಪಣೆ ನೀಡಿರುತ್ತಾನೆ. ಅದರಂತೆ ವಾಲಿಯೇ ಮುಂದಿನ ಜನ್ಮದಲ್ಲಿ ಬೇಡನಾಗಿ ಬಂದು, ಕೃಷ್ಣನನ್ನು ಕೊಲ್ಲುವ ಬಾಣವನ್ನು ಪ್ತಯೋಗಿಸುತ್ತಾನೆ.

ಗಾಂಧಾರಿಯ ಶಾಪ

ಕುರುಕ್ಷೇತ್ರ ಯುದ್ಧದಲ್ಲಿ ತನ್ನ ನೂರು ಮಕ್ಕಳ ಸಾವಿನಿಂದ ದುಃಖಿತಳಾಗಿ ಗಾಂಧಾರಿಯು ಸಂಪೂರ್ಣ ರಕ್ತಪಾತಕ್ಕೆ ಶ್ರೀ ಕೃಷ್ಣನನ್ನು ಆರೋಪಿಸಿದಳು. ಶ್ರೀ ಕೃಷ್ಣನು ಸ್ವತಃ ದೇವರಾಗಿದ್ದರಿಂದ ಕುರುಕ್ಷೇತ್ರ ಯುದ್ಧವನ್ನು ಸುಲಭವಾಗಿ ತಪ್ಪಿಸಬಹುದಾಗಿತ್ತೆಂದು ಗಾಂಧಾರಿ ಹೇಳಿದಳು. ಆದರೆ ಅವನು ಸಹೋದರರು ಒಬ್ಬರೊನ್ನೊಬ್ಬರು ಪರಸ್ಪರ ಕೊಲ್ಲಲು ಅವಕಾಶ ಮಾಡಿದನು. ಹಾಗಾಗಿ, ಗಾಂಧಾರಿಯು ಕೃಷ್ಣನಿಗೆ ಯಾದವ ಕುಲವೂ ಕೂಡ ಕುರುವಂಶವು ನಾಶವಾದ ರೀತಿಯಲ್ಲಿ ನಾಶವಾಗಿಹೋಗಲಿ ಎಂದು ಶಪಿಸಿದಳು.

ಕೌರವನ ಪತ್ನಿ ಭಾನುಮತಿಗೂ ಕರ್ಣನಿಗೂ ಇದ್ದ ಸಂಬಂಧವೇನು?

ಯಾದವ ಕುಲದಲ್ಲಿಯೂ ಸಹೋದರರು ಪರಸ್ಪರ ಕೊಂದು ಕೃಷ್ಣನ ರಾಜ್ಯವು ಅಂತ್ಯವಾಗಲಿಯೆಂದು ಹೇಳಿದಳು. ಹಾಗೆಯೇ ಶ್ರೀ ಕೃಷ್ಣನು ಏಕಾಂಗಿಯಾಗಿ ಸಾಯುವನೆಂದು ಮತ್ತು ದ್ವಾರಕಾ ಪಟ್ಟಣವನ್ನು ಸಮುದ್ರವು ನುಂಗಿ ಹಾಕಲಿ ಎಂದೂ ಶಾಪ ಕೊಟ್ಟಳು. ಶ್ರೀ ಕೃಷ್ಣನು ಎಷ್ಟಾದರೂ ಗಾಂಧಾರಿಯು ತನ್ನ ಉತ್ಕಟ ಭಕ್ತಳೆಂದು ಮುಗುಳ್ನಗೆಯಿಂದ ಶಾಪವನ್ನು ಸ್ವೀಕರಿಸಿದನು. 

ಯಾದವರ ಅಹಂಕಾರ

ಕೃಷ್ಣ ಬಲರಾಮರ ಆಳ್ವಿಕೆಯಲ್ಲಿ ಯಾದವ ಪ್ರವರ್ಧಮಾನರಾಗಿದ್ದರು. ಆದರೆ ಕಾಲಕ್ರಮೇಣ ಅವರು ತಮ್ಮ ಶಕ್ತಿ ಮತ್ತು ಶ್ರೀಮಂತಿಕೆಯ ಜೊತೆ ಮೈಮರೆತರು. ಯಾದವರು ಎಲ್ಲಾ ರೀತಿಯ ಅನೈತಿಕತೆ, ವ್ಯಭಿಚಾರಗಳಲ್ಲಿ ತೊಡಗಿದ್ದರು.  ಕೊನೆಗೆ ಒಬ್ಬ ಋಷಿಯಿಂದ ಶಪಿತರಾಗಿ, ಸಹೋದರರುಗಳಲ್ಲಿಯೇ ಕಾದಾಟಗಳು ನಡೆಯಿತು. ಇದರ ಫಲವಾಗಿ ದೊಡ್ದ ಪ್ರಮಾಣದ ಯುದ್ಧಗಳಾಗಿ ಕೊನೆಗೆ ಯಾದವರು ರಣರಂಗದಲ್ಲಿ ಪರಸ್ಪರ ಕೊಲ್ಲಲ್ಪಟ್ಟರು. ಈ ಯುದ್ಧಗಳಲ್ಲಿ ಕೃಷ್ಣನ ಮಗನಾದ ಪ್ರದ್ಯುಮ್ನನೂ ಸಹ ಕೊಲ್ಲಲ್ಪಟ್ಟನು. ಶ್ರೀ ಕೃಷ್ಣನು ಈ ವಿನಾಶವನ್ನು ನೋಡಿ ಬೇಸರದಿಂದ ದ್ವಾರಕಾ ಪಟ್ಟಣವನ್ನು ಬಿಟ್ಟು ಅರಣ್ಯದೊಳಗೆ ಹೊರಟುಹೋದ. ಶ್ರೀ ಕೃಷ್ಣನು ದ್ವಾರಕಾ ಪಟ್ಟಣವನ್ನು ಬಿಟ್ಟಮೇಲೆ ಪಟ್ಟಣವನ್ನು ಸಮುದ್ರವು ಆವರಿಸಿ ಕೊನೆಗೆ ಸಂಪೂರ್ಣವಾಗಿ ಮುಳುಗಿಹೋಯಿತು. ಆ ನೈಜ ದ್ವಾರಕಾ ಪಟ್ಟಣವು ಈಗಲೂ ಸಹ ಅರಬ್ಬಿ ಸಮುದ್ರದೊಳಗೆ ಅಡಗಿದೆ.

ಕೃಷ್ಣನು ಅರಣ್ಯದೊಳಗೆ ತನ್ನ ಅಣ್ಣ ಬಲರಾಮನ ಜೊತೆ ಹೋದ ಕೆಲವು ಸಮಯದ ನಂತರ ಬಲರಾಮನು ಯೋಗಸಮಾಧಿಯಲ್ಲಿ ಕುಳಿತು ತನ್ನ ದೇಹವನ್ನು ತ್ಯಜಿಸಿದ. ಕೃಷ್ಣನು ಬಹಳ ದುಃಖಿತನಾಗಿ ಒಂದು ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದನು. ಆಗ ಜರಾ ಎಂಬ ಒಬ್ಬ ಬೇಡ ಬೇಟಿಗೆ ಕಾಡಿಗಾಗಿ ಬಂದವನು, ಕೃಷ್ಣನ ಪಾದವನ್ನು ಮಾತ್ರ ನೋಡಿ, ಇದು ಜಿಂಕೆಯ ಮುಖವೆಂದು ತಿಳಿದು ಅದನ್ನು ಕೊಲ್ಲಲೆಂದು ಬಾಣ ಪ್ರಯೋಗಿಸಿದ. ಅದು ಕೃಷ್ಣನ ಪಾದಕ್ಕೆ ಹೊಡೆಯಿತು. ಬೇಡನು ಬಳಿಗೆ ಬಂದು, ತನ್ನ ತಪ್ಪು ಅರಿವಾದ ತಕ್ಷಣವೇ ಕೃಷ್ಣನ ಬಳಿ ಬಂದು ಕ್ಷಮೆ ಯಾಚಿಸಿದನು. ಶ್ರೀ ಕೃಷ್ಣನು ಇದೆಲ್ಲ ವಿಧಿನಿಯಮವೆಂದು ಹೇಳಿದ. ನಂತರ ಅದೇ ನಿಮಿತ್ತವಾಗಿ ಶ್ರೀ ಕೃಷ್ಣನು ಇಹಲೋಕವನ್ನು ತೊರೆದು ತನ್ನ ನಿಜಲೋಕಕ್ಕೆ ಹೊರಟುಹೋದ. ಶ್ರೀಕೃಷ್ಣನ ಮರಣದೊಂದಿಗೇ ದ್ವಾಪರಯುಗದ ಅಂತ್ಯವಾಯಿತು.

click me!