ನವರಾತ್ರಿಯಲ್ಲಿ ಯಾವ ದಿನ ದೇವಿಗೆ ಯಾವ ಭಕ್ಷ್ಯ ...!?

By Suvarna NewsFirst Published Oct 24, 2020, 4:11 PM IST
Highlights

ನವರಾತ್ರಿಯಲ್ಲಿ ದೇವಿಯನ್ನು ಒಲಿಸಿಕೊಳ್ಳಲು ಹಲವು ಸರಳ ಉಪಾಯಗಳಿವೆ. ಶ್ರದ್ಧೆಯಿಂದ ದೇವಿಯ ಆರಾಧನೆ, ಭಜನೆ, ಉಪಾಸನೆ, ಪಾರಾಯಣವನ್ನು ಮಾಡುವುದರಿಂದ ದೇವಿಯ ಕೃಪೆ ಸಿಗುತ್ತದೆ. ಅಷ್ಟೇ ಅಲ್ಲದೆ ಕೆಲವು ಸಿಹಿ ಪದಾರ್ಥವನ್ನು  ಅರ್ಪಿಸುವುದರಿಂದ ಸಹ ದೇವಿಯ ಕೃಪೆ ಪ್ರಾಪ್ತವಾಗುತ್ತದೆ. ಹಾಗಾದರೆ ಯಾವ ದಿನ ಯಾವ ಸಿಹಿಯನ್ನ ನೈವೇದ್ಯ ಮಾಡಬೇಕೆಂದು ತಿಳಿಯೋಣ...

ನವರಾತ್ರಿಯು ಅತ್ಯಂತ ಮಹತ್ವದ ಆಚರಣೆಯಾಗಿದ್ದು,  ಒಂಭತ್ತು  ದಿನ ದುರ್ಗೆಯ  ಒಂಭತ್ತು ಅವತಾರಗಳನ್ನು  ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಶ್ರದ್ಧಾ ಭಕ್ತಿಯಿಂದ ದೇವಿಯ ಆರಾಧನೆ ಮಾಡಿದಲ್ಲಿ ಮನೋವಾಂಛಿತ ಫಲಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ. 

ದೇವಿಯ ಕೃಪೆ ಪಡೆಯಲು ಹಲವಾರು  ದಾರಿಗಳಿವೆ, ಪೂಜೆ, ಆರಾಧನೆ, ಭಜನೆ , ಸ್ತೋತ್ರಗಳನ್ನು ಹೇಳುವುದರ ಮೂಲಕ  ದೇವಿಯನ್ನು ಪ್ರಸನ್ನಗೊಳಿಸಿಕೊಳ್ಳ ಬಹುದಾಗಿದೆ. ಅಷ್ಟೇ ಅಲ್ಲದೆ ದೇವಿಗೆ ಪ್ರಿಯವಾದ  ಸಿಹಿ ತಿನಿಸುಗಳನ್ನು ನೈವೇದ್ಯ ಮಾಡುವುದರಿಂದಲೂ ತಾಯಿಯ ಕೃಪೆ ಪಡೆಯಬಹುದಾಗಿದೆ. ಹಾಗಾದರೆ ನವರಾತ್ರಿಯ ಯಾವ ದಿನ ಯಾವ ತಿನಿಸನ್ನು ದೇವಿಗೆ ನೈವೇದ್ಯ ಮಾಡಬೇಕೆಂಬುದನ್ನು ತಿಳಿಯೋಣ....

ಮೊದಲನೇ ದಿನ 
ನವರಾತ್ರಿಯ ಮೊದಲನೇ ದಿನ ದೇವಿಯ ಶೈಲಪುತ್ರಿ ಸ್ವರೂಪವನ್ನು ಆರಾಧಿಸಲಾಗುತ್ತದೆ. ವೃಷಭವನ್ನೇರಿ ಬರುವ ದೇವಿಯ ಈ  ಸ್ವರೂಪವನ್ನು ವೃಷಾರೂಢ ಎಂದೂ ಸಹ ಕರೆಯಲಾಗುತ್ತದೆ. ದೇವಿಗೆ ಈ ದಿನ ಹಸುವಿನ ಶುದ್ಧ ತುಪ್ಪ ಮತ್ತು ಪಾಯಸವನ್ನು ಅರ್ಪಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ. ಇದರಿಂದ ಆರೋಗ್ಯ ಭಾಗ್ಯವು ಲಭಿಸುವುದಲ್ಲದೆ, ದೇವಿಯ ಆಶೀರ್ವಾದವು ಸಿಗುತ್ತದೆ.

ಇದನ್ನು  ಓದಿ: ಶುಕ್ರಗ್ರಹದ ಪರಿವರ್ತನೆಯಿಂದ ನಿಮ್ಮ ರಾಶಿ ಮೇಲಾಗುವ ಪರಿಣಾಮಗಳೇನು? 

ಎರಡನೇ ದಿನ 
ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಸರ್ಪವನ್ನು ಆರಾಧಿಸಲಾಗುತ್ತದೆ. ದೇವಿಯು ಕಠಿಣ ತಪಸ್ಸನ್ನಾಚರಿಸಿದ ಕಾರಣ  ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ. ಈ ದಿನ ದೇವಿಗೆ  ಕೀರು ಮತ್ತು  ಸಕ್ಕರೆಯನ್ನು ನೈವೇದ್ಯ ಮಾಡುವುದರಿಂದ ಆಯಸ್ಸು ವೃದ್ಧಿಸುವುದಲ್ಲದೇ ದೇವಿಯ ಕೃಪೆ ಸಿಗಲಿದೆ.

ಮೂರನೇ ದಿನ
ನವರಾತ್ರಿಯ ಮೂರನೇ ದಿನ ದೇವಿಯ ಚಂದ್ರಘಂಟಾ ಸ್ವರೂಪವನ್ನು ಆರಾಧಿಸಲಾಗುತ್ತದೆ.  ಈ ದಿನ ದೇವಿಗೆ ಹಾಲು ಅಥವಾ ಹಾಲಿನಿಂದ ಮಾಡಿದ ಸಿಹಿ ತಿನಿಸನ್ನು ದೇವಿಗೆ ಅರ್ಪಿಸಿ ನಂತರ ಬ್ರಾಹ್ಮಣರಿಗೆ ನೀಡಬೇಕು. ಇದರಿಂದ ಕಷ್ಟಗಳು ನಿವಾರಣೆಯಾಗಿ ಮನೆಯಲ್ಲಿ ನೆಮ್ಮದಿ ಮತ್ತು ಸಂತೋಷ ನೆಲೆಸುತ್ತದೆ. ಕಷ್ಟಗಳು ನಿವಾರಣೆಯಾಗುತ್ತದೆ.

ನಾಲ್ಕನೇ ದಿನ 
ನವರಾತ್ರಿಯ ನಾಲ್ಕನೇ ದಿನ ದೇವಿಯ ಕೂಷ್ಮಾಂಡ ಸ್ವರೂಪವನ್ನು ಆರಾಧಿಸಲಾಗುತ್ತದೆ. ಜಗತ್ತನ್ನು ರಚಿಸಿದ ಈಕೆಗೆ ಜಗತ್ಸ್ವರೂಪಿ ಎಂದು ಸಹ ಕರೆಯಲಾಗುತ್ತದೆ. ದೇವಿಗೆ ಈ ದಿನ ಅತ್ರಸ ಎಂಬ ಸಿಹಿಯನ್ನು ನೈವೇದ್ಯ ಮಾಡಲಾಗುತ್ತದೆ. ಇದರಿಂದ ಬುದ್ಧಿಯ ವಿಕಾಸ ವಾಗುವುದಲ್ಲದೆ,  ಆತ್ಮವಿಶ್ವಾಸ ಹೆಚ್ಚುತ್ತದೆ. 

ಇದನ್ನು  ಓದಿ: ನವರಾತ್ರಿ ದೇವಿಯ ಒಂಭತ್ತು ಸ್ವರೂಪದ ಮಹತ್ವ, ಮತ್ತದರ ಲಾಭ!

ಐದನೇ ದಿನ 
ನವರಾತ್ರಿಯ ಐದನೇ ದಿನ ದೇವಿಯ ಸ್ಕಂದಮಾತಾ ಸ್ವರೂಪವನ್ನು ಆರಾಧಿಸಲಾಗುತ್ತದೆ. ಸ್ಕಂದ ಮಾತಾ ಸ್ವರೂಪದ ಆರಾಧನೆಯು ಮೋಕ್ಷಕ್ಕೆ ರಹದಾರಿ ಆಗುವುದಲ್ಲದೆ, ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಪಡೆಯಬಹುದಾಗಿದೆ. ಶ್ರದ್ಧೆಯಿಂದ ಸ್ಕಂದಮಾತೆಯನ್ನು ಆರಾಧಿಸುವುದರಿಂದ ಮನೋ ವಾಂಚಿತ ಫಲಗಳು ಸಿದ್ಧಿಸುತ್ತವೆ. ಈ ದಿನ ದೇವಿಗೆ ಬಾಳೆ ಹಣ್ಣು  ಕೀರನ್ನು ನೈವೇದ್ಯ ಮಾಡುವುದರಿಂದ ಒಳಿತಾಗುತ್ತದೆ.

ಆರನೇ ದಿನ 
ನವರಾತ್ರಿಯ ಆರನೇ ದಿನ ದೇವಿಯ ಕಾತ್ಯಾಯನಿ ಸ್ವರೂಪವನ್ನು ಆರಾಧಿಸಲಾಗುತ್ತದೆ. ದೇವಿ ಕಾತ್ಯಾಯನಿಯ ಆರಾಧನೆಯಿಂದ ಧರ್ಮ, ಅರ್ಥ, ಮೋಕ್ಷಗಳು ಪ್ರಾಪ್ತವಾಗುವುದಲ್ಲದೆ ಸರ್ವ  ಪಾಪಗಳು ನಷ್ಟವಾಗುತ್ತವೆ. ಈ ದಿನ ದೇವಿಗೆ ಸಿಹಿಯ ಜೊತೆ ಜೇನುತುಪ್ಪವನ್ನು ನೈವೇದ್ಯ ಮಾಡುವುದರಿಂದ ಒಳಿತಾಗುತ್ತದೆ.

ಇದನ್ನು  ಓದಿ: ಈ ನವರಾತ್ರಿಯ ದುರ್ಲಭ ಯೋಗದ ಪ್ರಭಾವ ಯಾವ ರಾಶಿಗೆ, ಹೇಗಿದೆ ಗೊತ್ತಾ..?

ಏಳನೇ ದಿನ 
ನವರಾತ್ರಿಯ ಏಳನೇ ದಿನ ದೇವಿಯ ಕಾಲರಾತ್ರಿ ಸ್ವರೂಪವನ್ನು ಆರಾಧಿಸಲಾಗುತ್ತದೆ. ದೇವಿ ಕಾಲರಾತ್ರಿಯ ಆರಾಧನೆಯಿಂದ ಸಕಲ ಸಿದ್ಧಿಗಳು ಪ್ರಾಪ್ತವಾಗುತ್ತವೆ. ಈ ದಿನ ದೇವಿಗೆ ಬೆಲ್ಲವನ್ನು ಅಥವಾ ಬೆಲ್ಲದಿಂದ ಮಾಡಿದ ಯಾವುದಾದರೂ ಸಿಹಿಯನ್ನು ನೈವೇದ್ಯ ಮಾಡುವುದರಿಂದ ಸಕಲ ಶೋಕಗಳಿಂದ ಮುಕ್ತಿ ದೊರೆಯುತ್ತದೆ.

ಎಂಟನೇ ದಿನ 
ನವರಾತ್ರಿಯ ಎಂಟನೇ ದಿನ ಮಹಾಗೌರಿ ದೇವಿಯನ್ನು ಆರಾಧಿಸಲಾಗುತ್ತದೆ. ಮಹಾಗೌರಿ ಪೂಜೆ ಮತ್ತು ಅರ್ಚನೆಯಿಂದ ಮನೆಗೆ ಒಳಿತಾಗುತ್ತದೆ. ಈ ದಿನ ದೇವಿಗೆ ಶ್ರೀ ಫಲವನ್ನು ನೈವೇದ್ಯ ರೂಪದಲ್ಲಿ ನೀಡುವುದರಿಂದ ಸಂತಾನ ಸಂಬಂಧೀ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ.

ಒಂಭತ್ತನೇ ದಿನ 
ನವರಾತ್ರಿಯ ಒಂಭತ್ತನೇ ದಿನ ದೇವಿಯ ಸಿದ್ಧಿಧಾತ್ರಿ ಸ್ವರೂಪವನ್ನು  ಆರಾಧಿಸಲಾಗುತ್ತದೆ. ಈ ದಿನ ದೇವಿಗೆ ಎಳ್ಳಿನಿಂದ ಮಾಡಿದ ಸಿಹಿಯನ್ನು ಅರ್ಪಿಸಬೇಕು, ನಂತರ ಅದನ್ನು ಬ್ರಾಹ್ಮಣರಿಗೆ ದಾನ ಮಾಡುವುದರಿಂದ ಮೃತ್ಯುಭಯ ನಾಶವಾಗುತ್ತದೆ.

click me!