ಋಷಿಗಳ ಕಾಮಾಸಕ್ತಿ ಹಿಂದೆ ಏನಿದೆ ರಹಸ್ಯ? ಈ ಇಂಟರೆಸ್ಟಿಂಗ್ ಕತೆ ಕೇಳಿ!

By Suvarna NewsFirst Published Jan 28, 2021, 3:44 PM IST
Highlights

ಪುರಾಣ ಕತೆಗಳಲ್ಲಿ ನೀವು ಹಲವಾರು ಋಷಿಗಳು ತೀವ್ರ ಕಾಮಾಸಕ್ತಿಯಿಂದ ನಡೆದುಕೊಳ್ಳುವುದನ್ನು ನೋಡಿರಬಹುದು. ಆ ನಡವಳಿಕೆ ಹಿಂದೆ ಏನಾದರೂ ರಹಸ್ಯ ಇದೆಯಾ?

ಭಾರತೀಯ ಪುರಾಣಗಳಲ್ಲಿ ಬರುವ ಋಷಿಗಳು ಕೆಲವು ಸಂದರ್ಭದಲ್ಲಿ ಹೆಚ್ಚು ಕಾಮಾಸಕ್ತಿ ಇರುವವರಂತೆ ನಡೆದುಕೊಳ್ಳುವುದನ್ನು ನೀವು ನೋಡಿರಬಹುದು. ಅದು ಯಾಕೆ ಎಂಬ ಕುತೂಹಲ ನಿಮಗಿರಬಹುದು. ಅಂಥ ಕೆಲವು ಇಲ್ಲಿರುವ ಕತೆಗಳನ್ನು ಇಲ್ಲಿ ಓದಿದರೆ ನಿಮಗೆ ಉತ್ತರ ಹೊಳೆಯಬಹುದು.

ಇದು ದೇವತೆಗಳ ಮಹಾಗುರು ಬೃಹಸ್ಪತಿಯ ಕತೆ. ಇವರು ಮಹಾ ಧೀಮಂತ, ವಿದ್ವಾಂಸ, ಸುರರಿಂದ ಪೂಜಿತರಾದವರು. ಇವರ ತಮ್ಮ ಉತಥ್ಯ ಎಂಬ ಮಹಾ ಋಷಿ. ಉತಥ್ಯರಿಗೆ ಮಮತೆ ಎಂಬ ಪತ್ನಿ. ಒಮ್ಮೆ ಆಶ್ರಮದಲ್ಲಿ ಉತಥ್ಯರು ಇಲ್ಲದೇ ಇದ್ದಾಗ ಬೃಹಸ್ಪತಿಯು ಮಮತೆಯನ್ನು ನೋಡಿದರು. ಆಕೆಯನ್ನು ನೋಡಿ ಅವರ ವಿಷಯಾಭಿಲಾಷೆ ಕೆರಳಿತು. ತನ್ನನ್ನು ಬಯಸಿದ ಬೃಹಸ್ಪತಿಯನ್ನು ಕಂಡು ಮಮತೆ ಹೇಳಿದಳು- 'ಭಾವ, ನೀವು ಹೀಗೆ ಮಾಡಬಾರದು. ನಾನು ನಿಮ್ಮ ತಮ್ಮನ ಪತ್ನಿ. ನಿಮಗೆ ಮಗಳ ಸಮಾನ. ಅದಲ್ಲದೇ ನಾನೀಗ ನಿಮ್ಮ ತಮ್ಮನಿಂದ ಗರ್ಭವತಿಯಾಗಿದ್ದೇನೆ. ಇದು ಸಲ್ಲದು.'

ಆದರೆ ಕಾಮಾಂಧನಾಗಿದ್ದ ಬೃಹಸ್ಪತಿಗೆ ಈ ಮಾತು ಕೇಳಿಸಲೇ ಇಲ್ಲ. ಅವನು ಆತುರದಿಂದ ಆಕೆಯನ್ನು ಕೂಡಿದನು. ಆಗ ಮಮತೆಯ ಹೊಟ್ಟೆಯಲ್ಲಿದ್ದ, ವೇದ ವೇದಾಂಗ ಜ್ಞಾನಿಯಾಗಿದ್ದ ಮಗುವು ಬೃಹಸ್ಪತಿಯ ವೀರ್ಯವನ್ನು ತಡೆಯಿತು, ಇದರಿಂದ ಕ್ರುದ್ಧನಾದ ಬೃಹಸ್ಪತಿ. 'ಆನಂದದ ಸ್ಥಿತಿಯಲ್ಲಿದ್ದ ನನ್ನನ್ನು ನಿರಸನಗೊಳಿಸಿದ ನೀನು ಹುಟ್ಟು ಗುರುಡನಾಗು,' ಎಂದು ಶಪಿಸಿದ. ಇದರಿಂದಾಗಿ ಮುಂದೆ ಜನಿಸಿದ ಮಗು ದೀರ್ಘತಮ ಎಂದು ಪ್ರಸಿದ್ಧನಾದ. ಈತನೇ ಗೌತಮಾದಿ ಋಷಿಗಳ ಸೃಷ್ಟಿಗೆ ಕಾರಣನಾದ.

ಯಾವ ರಾಶಿಗೆ ಏನ್ ಸೇವಿಸಿದ್ರೆ ಒಳ್ಳೇದು..? ಸಿಕ್ಕಿದ್ದೆಲ್ಲಾ ತಿಂದ್ರೆ ಸಂಕಷ್ಟ ...

ಎರಡನೇ ಕತೆ ವಿಶ್ವಾಮಿತ್ರ ಹಾಗೂ ಮೇನಕೆಯದು. ಕೌಶಿಕ ಎಂಭ ರಾಜ, ಋಷಿ ವಸಿಷ್ಠರಲ್ಲಿ ಇದ್ದ ಕಾಮಧೇನುವನ್ನು ಕಂಡು, ಅದನ್ನು ತನಗೆ ಕೊಡು ಎಂದು ವಸಿಷ್ಠರನ್ನು ಪೀಡಿಸಿದ. ಆದರೆ ದೇವರ ಪ್ರಸಾದದಿಂದ ಸಿಕ್ಕಿದ ಅದನ್ನು ಹಾಗೆಲ್ಲ ಕೊಡಲಾಗದು ಎಂದು ವಸಿಷ್ಠರು ನಿರಾಕರಿಸಿದರು. ಕ್ರುದ್ಧನಾದ ಕೌಶಿಕ ಅದನ್ನು ಸೆಳೆದೊಯ್ಯಲು ಯತ್ನಿಸಿ ವಿಫಲನಾದ. ನಂತರ ತಾನೂ ವಸಿಷ್ಠರಂತೆ ಬ್ರಹ್ಮರ್ಷಿಯಾಗುವೆ ಎಂದು ನಿರ್ಧರಿಸಿ ಉಗ್ರವಾದ ತಪಸ್ಸು ಮಾಡಿದ. ಈತನ ತಪಸ್ಸಿನಿಂದ ದೇವತೆಗಳು ವಿಚಲಿತರಾದರು. ಕ್ರೋಧತಪ್ತನಾದ ಈ ರಾಜ ತನ್ನ ತಪಸ್ಸಿನಲ್ಲಿ ಸಫಲನಾದರೆ, ಮುಂದೆ ತಮಗೆ ಏನು ಗತಿ ಕಾದಿದೆಯೋ ಎಂದು ಭೀತರಾಗಿ, ಆತನ ತಪಸ್ಸನ್ನು ಕೆಡಿಸಲು ಮೇನಕೆ ಎಂಬ ಅಪ್ಸರೆಯನ್ನು ಕಳುಹಿಸಿದರು. ಆಕೆ ವಸಂತ ಕಾಲದಲ್ಲಿ, ವಿಶ್ವಾಮಿತ್ರರ ಮುಂದೆ ಬಂದು, ತನ್ನ ಸೆರಗು ಅರೆ ಜಾರಿಸಿ ಓಡಾಡತೊಡಗಿದಳು. ವಿಶ್ವಾಮಿತ್ರರ ಕಣ್ಣು ಆಕೆಯ ಮೇಲೆ ಬಿತ್ತು. ಅವರ ಚಿತ್ತ ವಿಚಲಿತವಾಯಿತು. ಆಕೆಯನ್ನು ಕೂಡಿ, ಆಕೆಯ ಜೊತೆ ಸಂಸಾರ ಹೂಡಿದರು. ಹೀಗೇ ಹಲವು ವರ್ಷಗಳು ಕಳೆದವು. ಒಂದು ಹೆಣ್ಣು ಮಗು ಜನಿಸಿತು. ಆಕೆಯೇ ಶಕುಂತಲೆ. ಈಕೆ ಭರತನ ತಾಯಿ. ಈ ಭರತವಂಶದಲ್ಲಿಯೇ ಮುಂದೆ ಕೌರವರು- ಪಾಂಡವರು ಜನಿಸಿದ್ದು. ಈತನಿಂದಲೇ ಭರತವರ್ಷ ಎಂದು ಈ ದೇಶಕ್ಕೆ ಹೆಸರಾದುದು.



ಮೂರನೇ ಕತೆ ಕೃಷ್ಣ ದ್ವೈಪಾಯನ ಎಂಬ ಋಷಿಗಳದು. ಇವರು ವೇದ ವಿದ್ವಾಂಸ, ಮಹಾ ಪಂಡಿತ, ಮಹಾ ತಪಸ್ವಿ. ಒಮ್ಮೆ ಇವರು ಯಮುನಾ ನದಿಯನ್ನು ದಾಟವುದಕ್ಕೆಂದು ಬಂದರು. ಅಗ ಅಲ್ಲಿ ದಾಶರಾಜ ಎಂಬ ಮೀನುಗಾರರ ರಾಜನ ಮಗಳು ದೋಣಿ ನಡೆಸುತ್ತಿದ್ದಳು. ಈಕೆಯ ಮೈಯು ಮೀನಿನ ಪರಿಮಳ ಬರುತ್ತಿದ್ದುದರಿಂದ ಮತ್ಸ್ಯಗಂಧಿ ಎಂದು ಕರೆಯುತ್ತಿದ್ದರು. ಈಕೆಯನ್ನು ನೋಡಿದ ಕೃಷ್ಣ ದ್ಪೈಪಾಯನರಲ್ಲಿ ಕಾಮಾಸಕ್ತಿ ಕೆರಳಿತು. ಆಕೆಯನ್ನು ಮಿಲನಕ್ಕೆ ಆಹ್ವಾನಿಸಿದರು. ಆಕೆ ಒಪ್ಪಲಿಲ್ಲ. ಕೂಡಲೇ ಋಷಿಗಳು ಆಕೆಯ ಭಯ ಹೋಗಲಾಡಿಸಲು ಯಮುನಾ ನದಿಯ ನಡುವೆ ದೋಣಿ ನಿಲ್ಲಿಸಿ. ಅದರ ಸುತ್ತ ಮಂಜಿನ ಪರದೆ ಕವಿಯುವಂತೆ ಮಾಡಿ, ಅಲ್ಲಿ ಆಕೆಯನ್ನು ಕೂಡಿದರು. ಮಿಲನದ ಬಳಿಕವೂ ಆಕೆಯ ಕನ್ಯತ್ವ ಕೆಡದಂತೆ ಆಶೀರ್ವಾದ ನೀಡಿದರು. ಆಕೆ ಸತ್ಯವನ್ನೇ ಹೇಳುವವಳಾದುದರಿಂದ ಆಕೆಗೆ ಸತ್ಯವತಿ ಎಂದರು. ಆಕೆಯ ಮೀನಿನ ಪರಿಮಳ ಹೋಗಲಾಡಿಸಿ ಕಸ್ತೂರಿ ಕಂಪನ್ನು ಯೋಜನಗಳ ದೂರಕ್ಕೆ ಬರುವಂತೆ ಮಾಡಿದರು. ಅದರಿಂದ ಮುಂದೆ ಆಕೆಗೆ ಯೋಜನಗಂಧಿ ಎಂದೂ ಹೆಸರಾಯಿತು. ಈ ಯೋಜನಗಂಧಿಯಲ್ಲಿ ಕೃಷ್ಣ ದ್ವೈಪಾಯನರಿಂದ ಹುಟ್ಟಿದ ಮಹನೀಯನೇ ವೇದವ್ಯಾಸ. ಈತ ಹುಟ್ಟಿದ ಕೂಡಲೇ ತಮ್ಮ ಜೊತೆ ಕರೆದುಕೊಂಡು ಕೃಷ್ಣದ್ವೈಪಾಯನರು ಹೋಗಿ ಆತನನ್ನು ವೇದವೇದಾಂಗ ಪಾರಂಗತನನ್ನಾಗಿ ಮಾಡುತ್ತಾರೆ. ಮುಂದೆ ಇವರೇ ಮಹಾಭಾರತ ಬರೆದದ್ದು. ವೇದಗಳನ್ನು ನಾಲ್ಕಾಗಿ ವಿಗಂಡಿಸಿದ್ದು. ಚಂದ್ರವಂಶದಲ್ಲಿ ಮಕ್ಕಳು ಹುಟ್ಟುವಂತೆ ಮಾಡಿ ಮಹಾಭಾರತ ನಡೆಯಲು ಕಾರಣರಾದದ್ದೂ ಇವರೇ.



ಹಾಗಿದ್ದರೆ ಋಷಿಗಳಿಗೆ ಇಷ್ಟೊಂದು ತೀವ್ರ ಕಾಮ ಯಾಕೆ? ಸಹಜವಾಗಿಯೇ ಎಲ್ಲ ಮನುಷ್ಯರಲ್ಲೂ ಕಾಮ ಇರುತ್ತದೆ. ಋಷಿಗಳು ಸಾವಿರಾರು ವರ್ಷಗಳ ಇಂದ್ರಿಯ ನಿಗ್ರಹದಿಂದ ಅದನ್ನು ಕಟ್ಟಿಕೊಂಡಿರುತ್ತಾರೆ. ಅವಕಾಶ ಸಿಕ್ಕಿದಾಗ ಅದು ಅಣೆಕಟ್ಟು ಒಡೆದಂತೆ ಹೊರಬರುತ್ತದೆ. ಆದರೆ, ಅಂಥ ಪ್ರತಿಯೊಂದು ಸನ್ನಿವೇಶದಲ್ಲೂ ಲೋಕಕ್ಕೆ ಒಳಿತೇ ಆಗಿದೆ. ಇವರಿಂದ ಹುಟ್ಟಿದ ಮಕ್ಕಳು ಮುಂದೆ ಲೋಕ ಕಲ್ಯಾಣಕ್ಕೆ ಕಾರಣರಾಗಿದ್ದಾರೆ. ಇದೇ ಋಷಿಗಳ ಕಾಮಾಸಕ್ತಿಯ ರಹಸ್ಯ.

click me!