ಯುಗಾದಿ ಹಬ್ಬ: ಭಾರತೀಯರಿಗಿಂದು ಹೊಸ ವರ್ಷದ ಸಂಭ್ರಮ..!

By Kannadaprabha NewsFirst Published Apr 9, 2024, 8:17 AM IST
Highlights

ಹಬ್ಬದ ವಿಷಯಕ್ಕೆ ಬರುವುದಾದರೆ ಚೈತ್ರ ಮಾಸದ ಮೊದಲ ದಿನವನ್ನು ನಾವು ಯುಗಾದಿ ಹಬ್ಬವನ್ನಾಗಿ ಆಚರಿಸುತ್ತೇವೆ. ಚಂದ್ರಮಾನ ಮತ್ತು ಸೌರಮಾನ ಎಂಬ ಎರಡು ರೀತಿಯಲ್ಲಿ ಇದನ್ನು ಆಚರಿಸುತ್ತಾರೆ. ಚಂದ್ರಮಾನ ಯುಗಾದಿಯನ್ನು ಚಂದ್ರನ ಚಲನೆ ಆಧರಿಸಿ ಆಚರಿಸುವ ಪದ್ಧತಿಯಾಗಿದ್ದು, ಇದನ್ನು ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತಗಳಲ್ಲಿ ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದ ಕೆಲವು ಕಡೆಗಳಲ್ಲಿ ಅನುಸರಿಸುತ್ತಾರೆ. ಇದು ಸೂರ್ಯನ ಚಲನೆಯನ್ನು ಆಧರಿಸಿರುತ್ತದೆ.

ಶಿವರಾಜ ವಿಶ್ವನಾಥ

ಬೆಂಗಳೂರು(ಏ.09):  ಚೈತ್ರ ಮಾಸದ ಮೊದಲ ದಿನವೇ ಯುಗಾದಿ. ಚಂದ್ರಮಾನ ಮತ್ತು ಸೌರಮಾನ ಎಂಬ 2 ರೀತಿಯಲ್ಲಿ ಇದರ ಆಚರಣೆ ಭಾರತದಲ್ಲಿದೆ. ಯುಗದ ಆದಿಯಾದ ಈ ದಿನವೇ ಬ್ರಹ್ಮ ದೇವನು ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆ ಎಂಬುದು ಹಿಂದು ನಂಬಿಕೆ. ನಿಸರ್ಗದಲ್ಲಿ ಇಂದಿನಿಂದ ಬದಲಾವಣೆ ಆರಂಭವಾಗಿ, ವಸಂತ ಶುರುವಾಗುತ್ತದೆ.

ಯುಗಾದಿ ಹಬ್ಬ ಎಂದಾಕ್ಷಣ ನೆನಪಾಗುವುದು ಬೇಂದ್ರೆಯವರ ವಿರಚಿತ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬ ಅದ್ಭುತವಾದ ಪದ್ಯ. ರಸಋಷಿ ಬೇಂದ್ರೆಯವರ ಈ ಹಾಡು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ!
ಹಬ್ಬದ ವಿಷಯಕ್ಕೆ ಬರುವುದಾದರೆ ಚೈತ್ರ ಮಾಸದ ಮೊದಲ ದಿನವನ್ನು ನಾವು ಯುಗಾದಿ ಹಬ್ಬವನ್ನಾಗಿ ಆಚರಿಸುತ್ತೇವೆ. ಚಂದ್ರಮಾನ ಮತ್ತು ಸೌರಮಾನ ಎಂಬ ಎರಡು ರೀತಿಯಲ್ಲಿ ಇದನ್ನು ಆಚರಿಸುತ್ತಾರೆ. ಚಂದ್ರಮಾನ ಯುಗಾದಿಯನ್ನು ಚಂದ್ರನ ಚಲನೆ ಆಧರಿಸಿ ಆಚರಿಸುವ ಪದ್ಧತಿಯಾಗಿದ್ದು, ಇದನ್ನು ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತಗಳಲ್ಲಿ ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದ ಕೆಲವು ಕಡೆಗಳಲ್ಲಿ ಅನುಸರಿಸುತ್ತಾರೆ. ಇದು ಸೂರ್ಯನ ಚಲನೆಯನ್ನು ಆಧರಿಸಿರುತ್ತದೆ.

HAPPY UGADI 2024: ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಯುಗಾದಿಗೆ ''ಉಗಾದಿ'' ಎಂತಲೂ ಕರೆಯುವುದುಂಟು. ಯುಗದ ಆದಿಯನ್ನು ‘ಯುಗ+ಆದಿ’ ಯುಗಾದಿ ಅಥವಾ ಉಗಾದಿ ಎಂದು ಸಂಬೋಧಿಸುತ್ತಾರೆ. ಈ ದಿನವೇ ಹಿಂದುಗಳಾದ ನಮಗೆ ಹೊಸ ವರ್ಷದ ಆರಂಭದ ದಿನವಾಗಿರುತ್ತದೆ. ದಕ್ಷಿಣ ಭಾರತದಲ್ಲಿ ಬ್ರಹ್ಮ ದೇವನು ಉಗಾದಿಯಲ್ಲಿ ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆಂದು ಹಿಂದುಗಳು ಬಲವಾಗಿ ನಂಬುತ್ತಾರೆ. ಈ ಕಾರಣದಿಂದ ಈ ದಿನ ಸೃಷ್ಟಿಯ ದಿನವೂ ಹೌದು!
ಚೈತ್ರ ಮಾಸದ ಮೊದಲ ದಿನವೇ ಈ ಹಬ್ಬವನ್ನು ಆಚರಿಸಲು ಕಾರಣ ಈ ದಿನದಿಂದ ನೈಸರ್ಗಿಕವಾಗಿ ನಮ್ಮ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಮರ-ಗಿಡಗಳ ಹಣ್ಣೆಲೆಗಳು ಉದುರಿ ಹೊಸ ಚಿಗುರು ಮೂಡುವುದು ಈ ವಸಂತ ಸಮಯದಲ್ಲೇ.

ಈ ಹಬ್ಬದ ವಿಶೇಷತೆ:

ಈ ದಿನ ಮನೆಯ ಮುಂದೆ ಸಾಮಾನ್ಯವಾಗಿ ಹೆಂಗಳೆಯರು ಸುಂದರವಾದ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಬಾಗಿಲುಗಳಿಗೆ ಮಾವು- ಬೇವಿನ ತೋರಣವನ್ನು ಕಟ್ಟಿ ಮನೆಯನ್ನು ಸಿಂಗರಿಸುತ್ತಾರೆ. ಬೇವು ಹಾಕಿದ ನೀರಿನಿಂದ  ಅಭ್ಯಂಜನ ಸ್ನಾನ ಮಾಡುವುದು. ಹೊಸ ಧಿರಿಸನ್ನು ಧರಿಸಿ ದೇವರನ್ನು ಪೂಜಿಸುವುದು ಹಾಗೂ ಗುರು-ಹಿರಿಯರ ಆಶೀರ್ವಾದ ಪಡೆಯುವುದು ವಾಡಿಕೆ. ಈ ದಿನ ಸಂವತ್ಸರದ ಆರಂಭ ದಿನವಾದ್ದರಿಂದ ಹಿರಿಯರು ಪಂಚಾಂಗವನ್ನು ಪಠಿಸುತ್ತಾರೆ. ಪಂಚಾಂಗ ಶ್ರವಣದಿಂದ ಮುಂದಿನ ಶುಭ ಮೂಹೂರ್ತಗಳು, ಹಬ್ಬ-ಹರಿದಿನಗಳು ಯಾವ ದಿನದಂದು ಇವೆಯೆಂಬುದು ಮನೆ ಮಂದಿಯೆಲ್ಲ ತಿಳಿದುಕೊಳ್ಳಬಹುದು.

ಯುಗಾದಿ ವರ್ಷ ಭವಿಷ್ಯ: ಕ್ರೋಧಿನಾಮ ಸಂವತ್ಸರದಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ

ಬೇವು-ಬೆಲ್ಲ ಸೇವನೆ:

ಬೇವು, ಬೆಲ್ಲ, ಹುಣಸೆ, ಮಾವು, ಉಪ್ಪು, ಕರಿಮೆಣಸು ಇನ್ನಿತರ ಕೆಲವು ಹಣ್ಣುಗಳನ್ನು ಬಳಸಿ ಬೇವನ್ನು ತಯಾರಿಸಿ ಕುಡಿಯುತ್ತಾರೆ. ಇಲ್ಲವೇ ಪಚಡಿ ತರಹ ಮಾಡಿ ಬೇವು - ಬೆಲ್ಲವನ್ನು ಸವಿಯುತ್ತಾರೆ. ಈ ಬೇವು-ಬೆಲ್ಲವು ಸುಖ-ದುಃಖದ, ನೋವು-ನಲಿವಿನ ಸಂಕೇತವಾಗಿದೆ. ಇವೆರಡನ್ನೂ ಸಮಾನವಾಗಿ ಸ್ವೀಕರಿಸಿ ಈ ಬೇವು ಬೆಲ್ಲವನ್ನು ಸವಿಯುವುದುಂಟು. ಈ ಹಬ್ಬದಲ್ಲಿ ಹೋಳಿಗೆ ಊಟ ಅಥವಾ ಒಬ್ಬಟ್ಟು ವಿಶೇಷವಾದ ಖಾದ್ಯ ಆಗಿರುತ್ತದೆ. ಮಹಾರಾಷ್ಟ್ರದಲ್ಲಿ ಈ ಹಬ್ಬವನ್ನು ಗುಡಿ ಪಾಡ್ವ ಎಂದು ಕರೆಯುತ್ತಾರೆ. ಗುಡಿ ಎಂದರೆ ಧ್ವಜ. ಒಂದು ಕೋಲಿಗೆ ರೇಷ್ಮೆ ಬಟ್ಟೆ ಕಟ್ಟಿ ತುದಿಯಲ್ಲಿ ತಾಮ್ರ ಅಥವಾ ಬೆಳ್ಳಿಯ ತಂಬಿಗೆ ಇಟ್ಟು ಅದಕ್ಕೆ ಬೇವು, ಮಾವು, ಹೂವಿನಿಂದ ಅಲಂಕೃತಗೊಳಿಸಿ ಪೂಜಿಸುತ್ತಾರೆ. ಹೀಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಾಗಿ, ಬೇರೆ ಬೇರೆ ಹೆಸರುಗಳಿಂದ ಆಚರಿಸಲಾಗುತ್ತದೆ.

ಚಂದ್ರದರ್ಶನದ ಪೌರಾಣಿಕ ಹಿನ್ನೆಲೆ:

ಗಣೇಶ ಚತುರ್ಥಿಯಂದು ವಿನಾಯಕ ತನ್ನ ವಾಹನ ಇಲಿಯ ಮೇಲೆ ಸವಾರಿ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದನು. ಇದನ್ನು ನೋಡಿದ ಚಂದ್ರನು ಗಹಗಹಿಸಿ ನಗುತ್ತಾನೆ. ಇದಕ್ಕೆ ಏಕದಂತ ಸಿಟ್ಟಿನಿಂದ ನಿನ್ನನ್ನು ಈ ದಿನ ಯಾರಾದರು ದರ್ಶನ ಮಾಡಿದರೆ ಅವರಿಗೆ ಅಪವಾದ ಎಂಬ ಶಾಪ ನೀಡುತ್ತಾನೆ. ಆಗ ಚಂದ್ರ ತನ್ನಿಂದಾದ ತಪ್ಪನ್ನು ಮನ್ನಿಸುವಂತೆ ಗಣೇಶನಲ್ಲಿ ಕ್ಷಮೆಯಾಚಿಸುತ್ತಾನೆ. ಅದಕ್ಕೆ ಗಣೇಶ ಪರಿಹಾರವಾಗಿ ಯುಗಾದಿ ದಿನದಂದು ಚಂದ್ರ ದರ್ಶನ ಮಾಡಿದರೆ ಪರಿಹಾರವಾಗುತ್ತದೆ ಎಂದು ನುಡಿಯುತ್ತಾನೆ. ಹೀಗಾಗಿ ಯುಗಾದಿಯ ದಿನ ರಾತ್ರಿ ಚಂದ್ರದರ್ಶನ ಮಾಡಿ, ಜನರು ಒಳಿತು ಮಾಡುವಂತೆ ಬೇಡಿಕೊಳ್ಳುತ್ತಾರೆ.

click me!