Sankranti: ಕಬ್ಬಿನ ಗಣೆ ಕಟ್ಟಿ, ಹಾಲುಕ್ಕಿಸಿ ಸಂಭ್ರಮಿಸಿದ ಮುಳ್ಳೂರು ಶಾಲೆ ವಿದ್ಯಾರ್ಥಿಗಳು

By Suvarna NewsFirst Published Jan 14, 2023, 5:26 PM IST
Highlights

ಸಂಕ್ರಾಂತಿ ಆಚರಿಸಿದ ಮುಳ್ಳೂರು ಶಾಲೆ ವಿದ್ಯಾರ್ಥಿಗಳು
ಹಳ್ಳಿ ಹೆಂಗಸರಿಗೆ ಬಾಗೀನ ಕೊಟ್ಟು ಸಂಭ್ರಮ
ನಲಿ- ಕಲಿಗೆ ಸಾಕ್ಷಿಯಾದ ಸುಗ್ಗಿ ಹಬ್ಬದ ಆಚರಣೆ

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು : ಸಂಕ್ರಾಂತಿ ಅಂದರೆ ಅದು ಸುಗ್ಗಿಯ ಹಬ್ಬ. ವರ್ಷವಿಡೀ ಬೆಳೆದು ಒಕ್ಕಣೆ ಮಾಡಿ ಮನೆಗೆ ದವಸ ಧಾನ್ಯಗಳನ್ನು ತುಂಬಿಕೊಳ್ಳುವ ಕಾಲವಿದು. ಅದು ರೈತರಿಗೆ ಇನ್ನಿಲ್ಲದ ಸಂಭ್ರಮದ ಹಬ್ಬವೇ ಸರಿ. ಈ ಹಬ್ಬವನ್ನು ರೈತರಷ್ಟೇ ವಿದ್ಯಾರ್ಥಿಗಳು ಸಂಭ್ರಮದಿಂದ ಆಚರಿಸಿದ ಪರಿ ಹೇಗಿತ್ತು ಗೊತ್ತಾ?

ಹೌದು, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಮುಳ್ಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ, ಶಿಕ್ಷಕರು ಆಚರಿಸಿದ್ದ ಸಂಕ್ರಾಂತಿ ಸಂಭ್ರಮ ಸಂಭ್ರಮ, ಸಡಗರ ವಿಶೇಷವಾಗಿತ್ತು. ಶಿಕ್ಷಣ ಇಲಾಖೆಯ 'ಸಂಭ್ರಮ ಶನಿವಾರ' ಕಾರ್ಯಕ್ರಮದ ಅಡಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಭಾರತದ ವಿವಿಧ ರಾಜ್ಯಗಳ ಆಚಾರ ವಿಚಾರ ಉಡುಗೆ ತೊಡುಗೆ ಸಂಸ್ಕೃತಿ ಇವುಗಳ ಅರಿವು ಮೂಡಿಸುವ ದೃಷ್ಟಿಯಿಂದ ಬಹಳ ವಿನೂತನವಾಗಿ ಮತ್ತು ವಿಶೇಷವಾಗಿ ಸಂಕ್ರಾಂತಿ ಆಚರಿಸಲಾಯಿತು. 

ಶಾಲಾ ಆವರಣದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂಥ, ಅದರಲ್ಲೂ, ಹಳ್ಳಿಯ ಆ ಸೊಗಡು ಮನೆ ಮಾಡುವಂತೆ ಹಳ್ಳಿಯ ವಾತಾವರಣದಂತೆ ಗುಡಿಸಲು, ಎತ್ತಿನಗಾಡಿ, ಭತ್ತದ ಕಣಜ, ಕೋಳಿ, ಹಸು ಹೀಗೆ ಹಲವಾರು ವಸ್ತುಗಳಿಂದ ಆಕರ್ಷಣೀಯ ಪರಿಸರ ನಿರ್ಮಾಣ ಮಾಡಿ ಮಕ್ಕಳು ಸಂಭ್ರಮಿಸುವಂತೆ ಮಾಡಲಾಗಿತ್ತು. ಭಾರತ ಕೃಷಿ ಪ್ರಧಾನ ದೇಶ. ವರ್ಷವಿಡೀ ದುಡಿಯುವ ರೈತ ಬೆಳೆ ಪಡೆದು ಸುಗ್ಗಿ ಆಚರಿಸುವ ಸಂಭ್ರಮವನ್ನು ವಿದ್ಯಾರ್ಥಿಗಳು ಕೂಡ ಅನುಭವಿಸಿದರು. 

ಶಾಲಾ ಆವರಣದಲ್ಲಿ ರಂಗೋಲಿಗಳನ್ನು ಹಾಕಿ ಎಳ್ಳುಬೆಲ್ಲ, ಕಬ್ಬಿನ ಗೊನೆಗಳಿಂದ ಸಿಂಗಾರ ಮಾಡಲಾಗಿತ್ತು. ಜೊತೆಗೆ ಒಲೆ ಹಚ್ಚಿ, ಹಾಲುಕ್ಕಿಸಿದ ಆ ಕ್ಷಣದ ಸಂಭ್ರಮ ಮುಗಿಲು ಮುಟ್ಟಿತ್ತು. ಇದೇ ಸಂದರ್ಭ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಾಮದ ಮಹಿಳೆಯರು ಮತ್ತು ಶಾಲಾ ಶಿಕ್ಷಕಿಯರಿಗೆ ವಿದ್ಯಾರ್ಥಿನಿಯರು ಹೂ, ಕುಂಕುಮ ನೀಡಿ ಮಡಿಲು ತುಂಬಿದ ಕ್ಷಣವಂತೂ ಗ್ರಾಮದ ಮಹಿಳೆಯರನ್ನು ಭಾವುಕಗೊಳಿಸುವಂತೆ ಇತ್ತು.   

Makar Sankranti 2023: ಬಯಸಿದ ಭಾಗ್ಯಕ್ಕಾಗಿ ಸೂರ್ಯನನ್ನು ರಾಶಿ ಪ್ರಕಾರ ಪೂಜಿಸಿ

ಮುಖ್ಯ ಶಿಕ್ಷಕರಾದ ಸತೀಶ್ ಸಿ ಎಸ್ ಹಾಗೂ ಅತಿಥಿ ಶಿಕ್ಷಕಿ ನವ್ಯ ಎಮ್.ಆರ್ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭಾರತದ ವಿವಿಧ ರಾಜ್ಯಗಳಲ್ಲಿ ಜನರು ಧರಿಸುವ ವೇಷಭೂಷಣ ಧರಿಸಿ ರಾಂಪ್ ವಾಕ್ ನಡೆಸಿ ಸಂಭ್ರಮಿಸಿದರು. ಸದಾ ಪಠ್ಯ ಚಟುವಟಿಕೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಸುಗ್ಗಿ ಮತ್ತು ಜನಾಂಗೀಯ ದಿನವನ್ನು ಒಂದೇ ದಿನ ಆಚರಿಸಿ ಪೊಂಗಲ್ ಸಿಹಿಯೂಟ ತಯಾರಿಸಿ ಸೇವಿಸಿ ಆನಂದಿಸಿದರು.

 ಮುಖ್ಯ ಶಿಕ್ಷಕರಾದ ಸತೀಶ್ ಸಿಎಸ್ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶ. ವರ್ಷವಿಡೀ ದುಡಿಯುವ ರೈತ ಬೆಳೆಯನ್ನು ಸುಗ್ಗಿ ಆಚರಿಸುವ ಮೂಲಕ ಸಂಭ್ರಮದಿಂದ ಸ್ವೀಕರಿಸುತ್ತಾನೆ. ಕೃಷಿ ಹಾಗೂ ಅದರ ಹಿಂದಿನ ರೈತನ ಶ್ರಮ, ಬೆಳೆ ಬಂದಾಗ ರೈತರ ಸಂಭ್ರಮ ವಿದ್ಯಾರ್ಥಿಗಳಿಗೆ ಅರಿವಾಗಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. 

ಅತಿಥಿ ಶಿಕ್ಷಕಿ ನವ್ಯ ಎಮ್ ಆರ್ ಮಾತನಾಡಿ, ಭಾರತದ ಹಲವಾರು ರಾಜ್ಯಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಇದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹಬ್ಬ. ಈ ಒಂದು ಹಬ್ಬದ ಮೂಲಕ ಭಾರತದ ವಿವಿಧ ರಾಜ್ಯಗಳಲ್ಲಿನ ಆಚಾರ ವಿಚಾರ ಸಂಸ್ಕೃತಿ ವೇಷಭೂಷಣದ ಅರಿವು ವಿದ್ಯಾರ್ಥಿಗಳಿಗೆ ಆಗಬೇಕು ಎಂಬ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ರಾಜ್ಯಗಳಲ್ಲಿನ ವೇಷಭೂಷಣ ಧರಿಸಿ ಜನಾಂಗೀಯ ದಿನವನ್ನು (ಎಥ್ನಿಕ್ ಡೇ)ಆಚರಿಸಲಾಗಿದೆ ಎಂದು ತಿಳಿಸಿದರು. 

Makar Sankranti 2023: ಹಬ್ಬದ ದಿನ ಹೀಗೆ ಮಾಡಿದರೆ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ..

ವಿದ್ಯಾರ್ಥಿನಿ ವರ್ಷ ಮಾತನಾಡಿ, ರಾಜ್ಯದಲ್ಲಿ ಸಂಕ್ರಾಂತಿ ಹೆಸರಿನಲ್ಲಿ ಆಚರಿಸಿದರೆ, ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಇವೆಲ್ಲವನ್ನು ನಾವು ಶಾಲೆಯಲ್ಲಿ ಸಂಕ್ರಾಂತಿ ಆಚರಿಸುವ ಮೂಲಕ ತಿಳಿದುಕೊಂಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದಳು.

click me!