Chikkamagaluru: ಕಣ್ಮನ ಸೆಳೆಯುವ ಅಯ್ಯಪ್ಪ ದೇವಾಲಯ, ವರ್ಷಪೂರ್ತಿ ಅಯ್ಯಪ್ಪನ ದರ್ಶನ

By Suvarna NewsFirst Published Jan 7, 2023, 6:07 PM IST
Highlights

ಶಬರಿಮಲೆಗೆ ಹೋಗುವುದು ಅಸಾಧ್ಯ ಎನ್ನುವವರಿಗೆ ನಿರಾಶೆಯಾಗಬಾರದು ಹಾಗೂ  ಸ್ಥಳೀಯವಾಗಿ ಭಕ್ತರಿಗೆ ಸ್ವಾಮಿಯ ದರ್ಶನವಾಗಬೇಕೆನ್ನುವ  ಉದ್ದೇಶದಿಂದ  ಚಿಕ್ಕಮಗಳೂರು ನಗರದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣಗೊಂಡಿದೆ.  ಮಕರಸಂಕ್ರಾಂತಿ ಬಂತೆಂದರೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಸಾವಿರಾರು ಭಕ್ತರು ಹಾತೊರೆಯುತ್ತಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಜ.7): ಮಾಗಿ ಕಾಲ ಬಂತೆಂದರೆ ಎಲ್ಲೂ ನೋಡಿದರೂ ಅಯ್ಯಪ್ಪಸ್ವಾಮಿಮಾಲೆ ಧರಿಸಿದ ಭಕ್ತರನ್ನು ಕಾಣಬಹುದಾಗಿದೆ. ಸ್ವಾಮಿ ಶರಣಂ, ಅಯ್ಯಪ್ಪಶರಣಂ ಎಂಬ ಭಕ್ತಿಗೀತೆಗಳು ಕೇಳಿಬರುತ್ತದೆ. ಮಾಲೆಧರಿಸಿದವರು ಕಟ್ಟುನಿಟ್ಟಿನ ವ್ರತಾಚರಣೆ ಕೈಗೊಳ್ಳುವ ಮೂಲಕ ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿಯ ದರ್ಶನಪಡೆದು ಪುನೀತರಾಗುತ್ತಾರೆ. ವರ್ಷಪೂರ್ತಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಲು, ವಿವಿಧ ಕಾರಣಗಳಿಗೆ ಶಬರಿಮಲೆಗೆ ಹೋಗಲು ಸಾಧ್ಯವಾಗದವರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾಫಿನಾಡಿನ ಕೇಂದ್ರ ಸ್ಥಾನದಲ್ಲಿ ಕಣ್ಮನ ಸೆಳೆಯುವ ಸುಂದರ, ಭವ್ಯ ಅಯ್ಯಪ್ಪಸ್ವಾಮಿ ದೇವಾಲಯ ತಲೆ ಎತ್ತಿ ನಿಂತಿದೆ. ಚಿಕ್ಕಮಗಳೂರು ನಗರದಲ್ಲಿ 1992ರಲ್ಲಿ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 2003ಕ್ಕೆ ದೇಗುಲನಿರ್ಮಾಣ ಕಾರ್ಯ ಆರಂಭಗೊಂಡಿತು. ದೇಗುಲ ನಿರ್ಮಾಣಕ್ಕೆ ಬೇಕಾಗುವ ವಸ್ತುಗಳನ್ನು ದಾನಿಗಳೇ ನೀಡಿದ್ದು, ನಿವೇಶನ ಹೊರತುಪಡಿಸಿದರೆ ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ  ಭವ್ಯ ದೇಗುಲ ದಾನಿಗಳ ಸಹಕಾರದಿಂದ ದೇಗುಲ ಮೈದಾಳಿನಿಂತಿದೆ.

ಮಹಿಳೆಯರಿಗೆ ಮುಕ್ತ ಅವಕಾಶ: 
ಶಬರಿಮಲೆಗೆ ಹೋಗುವುದು ಅಸಾಧ್ಯ ಎನ್ನುವವರಿಗೆ ನಿರಾಶೆಯಾಗಬಾರದು ಹಾಗೂ  ಸ್ಥಳೀಯವಾಗಿ ಭಕ್ತರಿಗೆ ಸ್ವಾಮಿಯ ದರ್ಶನವಾಗಬೇಕೆನ್ನುವ  ಉದ್ದೇಶದಿಂದ  ಚಿಕ್ಕಮಗಳೂರು ನಗರದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣಗೊಂಡಿದೆ.  ಮಕರಸಂಕ್ರಾಂತಿ ಬಂತೆಂದರೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಸಾವಿರಾರು ಭಕ್ತರು ಹಾತೊರೆಯುತ್ತಾರೆ. ಶಬರಿಮಲೆಗೆ ಹೋಗಲು ಮಾಲೆಧರಿಸಿದ ನಗರದ ಭಕ್ತರಲ್ಲಿ ಬಹುತೇಕರು ಇಲ್ಲಿಂದಲೇ ಇರುಮುಡಿಕಟ್ಟಿ ಪ್ರಯಾಣ ಆರಂಭಿಸುತ್ತಾರೆ.

ವರ್ಷದ 365 ದಿನವೂ ಅಯ್ಯಪ್ಪಸ್ವಾಮಿ ದರ್ಶನದೊಂದಿಗೆ ಮಹಿಳೆಯರಿಗೂ ಮುಕ್ತ ಅವಕಾಶ ನೀಡಲಾಗಿದೆ. ಈ ದೇವಾಲಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಪ್ರತಿವರ್ಷ ಸಾವಿರಾರು ಭಕ್ತರು ವ್ರತಾಚರಣೆ ನಡೆಸಿ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಹೋಗುವುದು ವಾಡಿಕೆ ಸಾಕಷ್ಟುಜನರಿಗೆ ಶಬರಿಮಲೆಗೆ ಹೋಗಬೇಕೆನ್ನುವ ಮಹಾದಾಸೆ ಇದ್ದರೂ ವಿವಿಧ ಕಾರಣಗಳಿಂದ ಹೋಗಲು ಸಾಧ್ಯವಿಲ್ಲದ ಭಕ್ತರ ಮನದಾಳದ  ಬೇಡಿಕೆ ಈಡೇರಿಸಬೇಕು.

ಅಯ್ಯಪ್ಪಸ್ವಾಮಿ ದರ್ಶನವಾಗಬೇಕೆನ್ನುವ ಕಾರಣಕ್ಕೆ ಸುಂದರ, ಭವ್ಯ ಅಯ್ಯಪ್ಪ ಸ್ವಾಮಿ ದೇಗುಲವನ್ನು ನಿರ್ಮಿಸಲಾಗಿದೆ.ಅಯ್ಯಪ್ಪನಗರದಲ್ಲಿ ನಿರ್ಮಾಣಗೊಂಡಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪ್ರತಿನಿತ್ಯ ಶಬರಿಮಲೆಯಲ್ಲಿ ನಡೆಯುವ ರೀತಿಯಲ್ಲಿ ಸಂಪ್ರದಾಯ ಬದ್ಧವಾಗಿ ಅರ್ಚಕರಿಂದ ಪೂಜೆನಡೆದು ಪ್ರಸಾದ ವಿನಿಯೋಗವಾಗುತ್ತದೆ. ಹೀಗಾಗಿ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪಾವನರಾಗುತ್ತಿದ್ದಾರೆ.

ಇರುಮುಡಿಹೋತ್ತು ಬರುವ ಭಕ್ತರಿಗೆ ಮೆಟ್ಟಿಲು ತುಳಿಯುವ ಭಾಗ್ಯ: 
ಮಾಲೆಧರಿಸಿ, ಇರುಮುಡಿಹೊತ್ತು ಬರುವ ಭಕ್ತರಿಗೆ ಶಬರಿಮಲೆಯಂತೆ ೧೮ ಮೆಟ್ಟಿಲು ತುಳಿಯುವ ಅವಕಾಶವಿದೆ. ಇಲ್ಲವಾದರೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶಕಲ್ಪಿಸಲಾಗಿದೆ. ಮಹಿಳೆಯರು ಮೆಟ್ಟಿಲು ತುಳಿಯೋದಲ್ಲ ಮುಟ್ಟೋದಕ್ಕೂ ಆಗುವುದಿಲ್ಲ. ಶಬರಿಮಲೆಯಂತೆ ಇಲ್ಲೂ ೧೦ ವರ್ಷದೊಳಗೆ ೫೦ ವರ್ಷ ಮೇಲ್ಪಟ್ಟ ಮಹಿಳೆಯರು ಇರುಮುಡಿಹೊತ್ತು. ಮೆಟ್ಟಿಲು ಹತ್ತಿಸ್ವಾಮಿಯ ದರ್ಶನ ಪಡೆಯಬಹುದು.ಇಲ್ಲಿ ಮಾಲೆಧರಿಸದ ಮಹಿಳೆಯರಿಗೂ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮುಕ್ತ ಅವಕಾಶವಿದೆ. ಅಯ್ಯಪ್ಪಸ್ವಾಮಿಯ ಮೂರ್ತಿಯಿಂದ 10 ಅಡಿ ದೂರದಲ್ಲಿ ಹಾಕಿರುವ ಬ್ಯಾರಿಕೇಡಿನ ಮುಂದೆ ನಿಂತು ದರ್ಶನ ಮಾಡಿ, ಹರಕೆಕಟ್ಟಿಕೊಳ್ಳೊಬಹುದು.

ಒಂದು ವೇಳೆ ಮಾಲೆಧರಿಸಿದವರು ಶಬರಿಮಲೆಗೆ ಹೋಗಲು ಹಣದ ಕೊರತೆ, ಅನಾರೋಗ್ಯ ಸಮಸ್ಯೆ ಅಥವಾ ಸೂತಕದ ಸಮಸ್ಯೆ ಬಂದಲ್ಲಿ  ಶಬರಿ ಮಲೆಯಂತೆ ಇಲ್ಲೆ ಇರುಮುಡಿಹೊತ್ತು ಮೆಟ್ಟಿಲು ಹತ್ತಿ ತುಪ್ಪದ ಕಾಯಿಯಲ್ಲಿ ಪೂಜೆ ಮಾಡಿಸಿ ಧರಿಸಿರುವ ಮಾಲೆಯನ್ನು ತೆಗೆಯಬಹುದಾಗಿದೆ. ಮಹಿಳೆಯರಿಗೆಂದೇ ದೇವಾಲಯ ಎರಡು ಬದಿಯಲ್ಲಿ ದಾರಿಯಿದ್ದು, ಅಲ್ಲಿಂದ ಹೋಗಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಪುನೀತರಾಗಬಹುದಾಗಿದೆ. 

ಒಟ್ಟಾರೆ ಈ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ದೇವರ ಕೆತ್ತನೆಗಳು,ಶಿಲ್ಪಕಲೆ, ವಿಗ್ರಹಗಳು ನೋಡುಗರ ಮನ ಸೆಳೆಯುತ್ತಿವೆ. ಅದರಲ್ಲೂ ಅಯ್ಯಪ್ಪಸ್ವಾಮಿಯ ಮೂರ್ತಿಯಂತೂ ಭಕ್ತರ ಕಣ್ಮನ ಸೆಳೆದು ಮಂತ್ರಮುಗ್ಧರನ್ನಾಗಿಸುತ್ತದೆ. 18 ಮಟ್ಟಿಲು ಎದುರು ಶಬರಿಮಲೆಯಂತೆ ಬೃಹತ್ತಾದ ಎತ್ತರದ ಗರುಡಗಂಭವಿದೆ. ವಿಶೇಷವಾದ ದಿನಗಳಲ್ಲಿ ದೇವಾಲಯಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ಒಟ್ಟಾರೆಯಾಗಿ ಕಾಫಿನಾಡಿನಲ್ಲೊಂದು ಸುಂದರ ಭವ್ಯ ಅಯ್ಯಪ್ಪಸ್ವಾಮಿ ದೇಗು ಮೈದಾಳಿನಿಂತಿದೆ. ದೇವಾಲಯ ನಿರ್ಮಾಣವಾದಾಗ ಮೊದಲು ಗೋಪಾಲಕೃಷ್ಣ ಗುರುಸ್ವಾಮಿಯವರು ಅಯ್ಯಪ್ಪಸ್ವಾಮಿ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದರು. ಅವರ ನಿಧನದ ನಂತರ ರವಿ ಎಂಬುವರು ಪೂಜೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ದೇಗುಲದ ಟ್ರಸ್ಟಿಗಳಾಗಿ ಎಂ.ಆರ್.ನಾಗರಾಜ್, ಚೂಡನಾಥಅಯ್ಯರ್, ಐಶ್ವರ್ಯಮಹೇಶ್, ಕೋಟೆ ನಾಗರಾಜ್, ಪೂಜಾ ಸಮಿತಿ ಅಧ್ಯಕ್ಷರಾಗಿ ಬಿ.ಎಂ. ಸಂದೀಪ್ ಕಾರ್ಯನಿರ್ವಹಿಸುತ್ತಿದ್ದಾರೆ

click me!