ಕೊಪ್ಪಳ: 8 ಲಕ್ಷ ಭಕ್ತ ಸಾಗರದ ಮಧ್ಯೆ ಗವಿಸಿದ್ದೇಶ್ವರ ತೇರು, ಮುಗಿಲು ಮುಟ್ಟಿದ ಹರ್ಷೋದ್ಗಾರ

By Kannadaprabha NewsFirst Published Jan 28, 2024, 12:14 PM IST
Highlights

ಮೈಸೂರಿನ ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಸದಪಟ ಆರೋಹಣ ನೆರವೇರಿಸುವ ಮೂಲಕ ಐತಿಹಾಸಿಕ ರಥೋತ್ಸವಕ್ಕೆ ಚಾಲನೆ ನೀಡಿದರು. ಗವಿಸಿದ್ದೇಶ್ವರ ಶ್ರೀ ಲಕ್ಷಾಂತರ ಭಕ್ತರಿಗೆ ರಥ ಎಳೆಯಲು ಸನ್ನೆ ಮಾಡಿದಾಗ 58 ಅಡಿ ಎತ್ತರದ ತೇರು ಗಜಗಾಂಭೀರ್ಯರದಿಂದ ರಥಬೀದಿಯಲ್ಲಿ ಸಾಗಿತು.  ಹೀಗೆ ಸಾಗುತ್ತಿದ್ದಂತೆಯೇ ಭಕ್ತಗಣ ಉತ್ತತ್ತಿ ಎಸೆದು ಭಕ್ತಿ ಪ್ರದರ್ಶಿಸಿದರು.
 

ಕೊಪ್ಪಳ(ಜ.28):  ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಇಲ್ಲಿಯ ಗವಿಸಿದ್ದೇಶ್ವರರ 208ನೇ ಮಹಾರಥೋತ್ಸವ ಶನಿ ವಾರ ಸಂಜೆ ಸುಮಾರು 8 ಲಕ್ಷ ಭಕ್ತರ ಹರ್ಷೋದ್ದಾರ ನಡುವೆ ಅದ್ದೂರಿಯಾಗಿ ನೆರವೇರಿತು. ಸೇರಿದ್ದ ಭಕ್ತಕೋಟಿಯ ಜೈಕಾರ ಮುಗಿಲು ಮುಟ್ಟಿತ್ತು. ಮೈಸೂರಿನ ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಸದಪಟ ಆರೋಹಣ ನೆರವೇರಿಸುವ ಮೂಲಕ ಐತಿಹಾಸಿಕ ರಥೋತ್ಸವಕ್ಕೆ ಚಾಲನೆ ನೀಡಿದರು. ಗವಿಸಿದ್ದೇಶ್ವರ ಶ್ರೀ ಲಕ್ಷಾಂತರ ಭಕ್ತರಿಗೆ ರಥ ಎಳೆಯಲು ಸನ್ನೆ ಮಾಡಿದಾಗ 58 ಅಡಿ ಎತ್ತರದ ತೇರು ಗಜಗಾಂಭೀರ್ಯರದಿಂದ ರಥಬೀದಿಯಲ್ಲಿ ಸಾಗಿತು.  ಹೀಗೆ ಸಾಗುತ್ತಿದ್ದಂತೆಯೇ ಭಕ್ತಗಣ ಉತ್ತತ್ತಿ ಎಸೆದು ಭಕ್ತಿ ಪ್ರದರ್ಶಿಸಿದರು.

ಡಾ.ಅಭಿನವ ಚೆನ್ನಬಸದ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಹರಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮೊದಲು 11ನೇ ಪೀಠಾಧಿಪತಿ ಆಗಿದ್ದ ಗವಿಸಿದ್ದೇಶ್ವರ ಶ್ರೀಗಳ ಕರ್ತೃ ಗದ್ದುಗೆಯಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಬಳಿಕ ಗವಿಸಿದ್ದೇಶ್ವರ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಮೆರವಣಿಗೆಯಲ್ಲಿ ಕರೆತರಲಾಯಿತು. ಗವಿಸಿದ್ದೇಶ್ವರಶ್ರೀ ಸೇರಿ ಹರಗುರು ಚರಮೂರ್ತಿಗಳು ಮುಂದೆ ಸಾಗುತ್ತಿದ್ದಂತೆ ಅವರ ಬೆನ್ನ ಹಿಂದೆ ಉಳಿದ ಶ್ರೀಗಳು ಸಾಗುವ ದೃಶ್ಯ ಶರಣ ಸಂಸ್ಕೃತಿಯ ಪ್ರತೀಕದಂತೆ ಕಾಣುತ್ತಿತ್ತು. 

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ; ಅಂಜನಾದ್ರಿಯಲ್ಲಿ ಮೆಟ್ಟಿಲು ದೀಪೋತ್ಸವಕ್ಕೆ ರೆಡ್ಡಿ ದಂಪತಿ ಚಾಲನೆ

ವಾದ್ಯ ವೃಂದದ ಮೂಲಕ ಮೆರವಣಿಗೆ ಮಾಡುತ್ತಾ ರಥದ ಸುತ್ತ ಐದು ಸುತ್ತು ಪ್ರದಕ್ಷಿಣೆ ಹಾಕಿ, ಮೂರ್ತಿಯನ್ನು ರಥದಲ್ಲಿ ಇರಿಸಲಾಯಿತು. ಬಳಿಕ ಪಾದಗಟ್ಟೆ ತಲುಪಿ ರಥ ವಾಪಸಾಗುತ್ತಿದ್ದಂತೆ ಜಯಕಾರ ಹಾಗೂ ಕರತಾಡನ ಮುಗಿಲು ಮುಟ್ಟಿತ್ತು. ನೆರೆದಿದ್ದ ಲಕ್ಷಾಂತರ ಭಕ್ತರು ಏಕಧ್ವನಿಯಲ್ಲಿ ಗವಿಸಿದ್ದೇಶ್ವರ ಮಹಾರಾಜಕೀ ಜೈ ಎಂದು ಜಯಕಾರ ಕೂಗಿದರು.

2 ಲಕ್ಷ ಭಕ್ತರಿಂದ ಪ್ರಸಾದ ಸ್ವೀಕಾರ

ಅನ್ನ ಅಕ್ಷರ ದಾಸೋಹಕ್ಕೆ ಹೆಸರುವಾಸಿಯಾದ ಕೊಪ್ಪಳ ಗವಿಸಿದ್ದೇಶ್ವರ ಮಠದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವದ ರಥೋತ್ಸವದ ದಿನವೇ ಬರೋಬ್ಬರಿ ಎರಡು ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಈವರೆಗೂ ನಡೆದ ಜಾತ್ರೆಯ ಮಹಾದಾಸೋಹದಲ್ಲಿ ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಪ್ರಸಾದ ಸ್ವೀಕರಿಸಿರುವುದು ಇದೇ ಮೊದಲು 100 ಕ್ವಿಂಟಲ್‌ ಅಕ್ಕಿ ಬಳಕೆಯಾಗಿದೆ. ಮಹಾರಥೋತ್ಸವ ದಿನ ಅನ್ನ ದಾಸೋಹಕ್ಕೆ ಬರೋಬ್ಬರಿ 100 ಕ್ವಿಂಟಲ್ ಅಕ್ಕಿ ಬಳಕೆಯಾಗಿದೆ. ಮಹಾದಾಸೋಹದಲ್ಲಿ ಸಿ, ರೊಟ್ಟಿಗಳ ಬಳಕೆ ಲೆಕ್ಕವೇ ಇಲ್ಲದಂತಾಗಿದೆ. ಜಾತ್ರೆಗೆ 8 ಲಕ್ಷ ಶೇಂಗಾ ಹೋಳಿಗೆ, 15 ಲಕ್ಷಕ್ಕೂ ಅಧಿಕ ರೊಟ್ಟಿಗಳು ಬಂದಿದ್ದು, ಬೇಡಿಕೆಗೆ ತಕ್ಕಂತೆ ಬಳಕೆ ಮಾಡಲಾಗುತ್ತದೆ.  

click me!