Mahashivaratri 2023: ಉಜ್ಜಯನಿ ಮಹಾಕಾಲನಿಗೆ 21 ಲಕ್ಷ ದೀಪಗಳ ಸೇವೆ

By Suvarna NewsFirst Published Feb 14, 2023, 4:24 PM IST
Highlights

ಫೆ.18ರಂದು ದೀಪಾವಳಿಯಂತೆ ಉಜ್ಜಯಿನಿಯಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದ್ದು, 21 ಲಕ್ಷ ದೀಪಗಳನ್ನು ಬೆಳಗಿಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಾರಿ ಮಹಾಶಿವರಾತ್ರಿಯ ಮಹಾವೈಭೋಗವನ್ನು ಕಣ್ತುಂಬಿಕೊಳ್ಳಲು ಉಜ್ಜಯನಿಯತ್ತ ಪಯಣ ಬೆಳೆಸಿ..

‘ಶಿವಜ್ಯೋತಿ ಅರ್ಪಣಂ-2023’ ಕಾರ್ಯಕ್ರಮದಡಿ ಫೆಬ್ರವರಿ 18 ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಉಜ್ಜಯಿನಿಯಲ್ಲಿ ಸುಮಾರು 21 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಕಳೆದ ವರ್ಷ ಉಜ್ಜಯಿನಿಯಲ್ಲಿ ಮಹಾಶಿವರಾತ್ರಿಯಂದು 11,71,078 ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು. ಇದೀಗ 21 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ‘ಗಿನ್ನಿಸ್ ದಾಖಲೆ’ ಸೃಷ್ಟಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮಹಾಶಿವರಾತ್ರಿ ಹಬ್ಬದ ಸಿದ್ಧತೆಗಳ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಫೆ.18ರಂದು ಉಜ್ಜಯಿನಿಯಲ್ಲಿ ದೀಪಾವಳಿಯಂತೆ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

'ಮಹಾಶಿವರಾತ್ರಿಯಂದು ಉಜ್ಜಯಿನಿಯ ನಿವಾಸಿಗಳು 21 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಮಹಾಕಾಲ ದೇವರಿಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಸಮಾಜ ಮತ್ತು ಸರ್ಕಾರದ ಸಹಭಾಗಿತ್ವದಿಂದ ಮಾತ್ರ ಈ ಅಭೂತಪೂರ್ವ ಕಾರ್ಯಕ್ರಮ ಸಾಧ್ಯ. ಉಜ್ಜಯಿನಿಯಲ್ಲಿ ಶಿವಜ್ಯೋತಿ ಅರ್ಪಣಂ ಕಾರ್ಯಕ್ರಮದಡಿ ನಗರದ ದೇವಾಲಯಗಳು, ವಾಣಿಜ್ಯ ಸ್ಥಳಗಳು, ಮನೆಗಳು, ಕ್ಷಿಪ್ರಾ ನದಿಯ ದಡದಲ್ಲಿ ಹಾಗೂ ನಗರದ ಪ್ರಮುಖ ಸಂದಿಗಳಲ್ಲಿ ಹಾಗೂ ಸ್ಥಳಗಳಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸಲಾಗುವುದು' ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

Latest Videos

ಉಜ್ಜಯಿನಿಯ ಪ್ರಮುಖ ಸ್ಥಳಗಳನ್ನು ವಿದ್ಯುತ್ ಅಲಂಕಾರ ಮತ್ತು ರಂಗೋಲಿಗಳಿಂದ ಅಲಂಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಮಹಾಶಿವರಾತ್ರಿಯಂದು ಉಜ್ಜಯಿನಿಯಲ್ಲಿ 11,71,078 ದೀಪಗಳನ್ನು ಬೆಳಗಿಸಿದ ನಂತರ, 2022 ರಲ್ಲಿ ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ದೀಪಾವಳಿಯಂದು 15.76 ಲಕ್ಷ ದೀಪಗಳನ್ನು ಬೆಳಗಿಸಲಾಗಿತ್ತು. ಮಹಾಶಿವರಾತ್ರಿಯಂದು ಉಜ್ಜಯಿನಿಯಲ್ಲಿ ಈ ಬಾರಿಯ ಸಂಪೂರ್ಣ ಕಾರ್ಯಕ್ರಮ ಶೂನ್ಯ ತ್ಯಾಜ್ಯ ತತ್ವವನ್ನು ಆಧರಿಸಿದೆ. ಈ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಲಿದ್ದಾರೆ.

ಒಂದು ರಾಶಿಗೆ ವಿವಾಹ ಯೋಗ, ಮತ್ತೊಂದಕ್ಕೆ ಧನಯೋಗ ತರಲಿರುವ 'ಮಾಳವ್ಯ ರಾಜಯೋಗ'

ಮಹಾಕಾಳೇಶ್ವರ ದೇವಾಲಯ ವಿಶೇಷತೆ
ಮಹಾಕಾಳೇಶ್ವರ ದೇವಾಲಯವು ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಕಾಶಿಯ ವಿಶ್ವನಾಥ, ಉತ್ತರಾಖಂಡದ ಕೇದಾರನಾಥನ ಬಳಿಕ ಮೂರನೇ ಜ್ಯೋತಿರ್ಲಿಂಗದ ಸ್ಥಾನ ಮಹಾಕಾಲೇಶ್ವರನದ್ದು. ಇದು ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಸುಂದರವಾದ ವಿವರಣೆಯು ಪುರಾಣಗಳು, ಮಹಾಭಾರತ ಮತ್ತು ಕಾಳಿದಾಸರಂತಹ ಮಹಾನ್ ಕವಿಗಳ ಕೃತಿಗಳಲ್ಲಿ ಕಂಡುಬರುತ್ತದೆ. ಮಹಾಕಾಳೇಶ್ವರ ಮಹಾದೇವನು ಸ್ವಯಂಪೂರ್ಣ, ಭವ್ಯ ಮತ್ತು ದಕ್ಷಿಣಾಭಿಮುಖನಾಗಿರುವುದರಿಂದ ಬಹಳ ಪುಣ್ಯ ಪ್ರಾಮುಖ್ಯತೆಯನ್ನು ಹೊಂದಿದ್ದಾನೆ. ಇದರ ದರ್ಶನ ಮಾತ್ರದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಮಹಾಕವಿ ಕಾಳಿದಾಸರು ಮೇಘದೂತದಲ್ಲಿ ಉಜ್ಜಯಿನಿ ಕುರಿತು ಚರ್ಚಿಸುವಾಗ ಈ ದೇವಾಲಯವನ್ನು ಹೊಗಳಿದ್ದಾರೆ. ಕ್ರಿ.ಶ 1235 ರಲ್ಲಿ ಇಲ್ತುಮಿಶ್ ಈ ಪ್ರಾಚೀನ ದೇವಾಲಯವನ್ನು ನಾಶಪಡಿಸಿದ ನಂತರ, ಇಲ್ಲಿನ ಆಡಳಿತಗಾರರು ಈ ದೇವಾಲಯದ ಜೀರ್ಣೋದ್ಧಾರ ಮತ್ತು ಸೌಂದರ್ಯೀಕರಣಕ್ಕೆ ವಿಶೇಷ ಗಮನವನ್ನು ನೀಡಿದರು, ಅದಕ್ಕಾಗಿಯೇ ದೇವಾಲಯವು ಅದರ ಪ್ರಸ್ತುತ ಸ್ವರೂಪವನ್ನು ಪಡೆದುಕೊಂಡಿದೆ. 

ಉಜ್ಜಯಿನಿಯ ಚಕ್ರವರ್ತಿಯಾದ ಭಗವಾನ್ ಮಹಾಕಾಳೇಶ್ವರನನ್ನು ಭಸ್ಮದಿಂದ ಪೂಜಿಸಲಾಗುತ್ತದೆ ಮತ್ತು ಅದನ್ನು ಆರತಿಯ ರೂಪದಲ್ಲಿ ತಲುಪಿಸಲಾಗುತ್ತದೆ. ಇದಕ್ಕೆ ಭಸ್ಮ ಆರತಿ ಎನ್ನಲಾಗುತ್ತದೆ.  

Mahashivratri 2023: ಶಿವನಿಗೆ ತುಳಸಿ, ಅರಿಶಿನ, ಕುಂಕುಮ ಬಳಸಿ ಪೂಜಿಸಬಾರದು, ಇಲ್ಲಿದೆ ಕಾರಣ..

ಭಸ್ಮವು ಪ್ರಪಂಚದ ನಿಜವಾದ ರೂಪವಾಗಿದೆ. ಒಂದು ದಿನ ಈ ಇಡೀ ಜಗತ್ತು ಈ ಬೂದಿ ಅಥವಾ ಭಸ್ಮವಾಗಿ ಪರಿವರ್ತನೆಯಾಗುತ್ತದೆ. ಪ್ರಪಂಚದ ಈ ನೈಜ ರೂಪವನ್ನು ಶಿವನು ತನ್ನ ಚರ್ಮದ ಮೇಲೆ ಯಾವಾಗಲೂ ಹಿಡಿದಿದ್ದಾನೆ. ಅಂದರೆ ಮುಂದೊಂದು ದಿನ ಈ ಜಗತ್ತು ಶಿವನಲ್ಲಿಯೇ ಕರಗುತ್ತದೆ ಎಂದರ್ಥ.
ಮೊದಲು ಅವಂತಿ ಎಂದು ಕರೆಯಲ್ಪಡುತ್ತಿದ್ದ ಇಡೀ ಉಜ್ಜಯಿನಿಯು ಸ್ಮಶಾನ ಸ್ಥಳವಾಗಿದೆ ಎಂದು ನಂಬಲಾಗಿದೆ. ಮರಣದ ಅಧಿಪತಿಯೇ ಇಲ್ಲಿ ಮಹಾಕಾಲನ ರೂಪದಲ್ಲಿ ಕುಳಿತಿದ್ದಾನೆ.

click me!