
ನವದೆಹಲಿ, (ಸೆ.01): ಕೊರೋನಾ ಹಾವಳಿ ಇರದೇ ಹೋಗಿದ್ರೆ, ಇಷ್ಟೊತ್ತಿಗಾಗಲೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಜೋರಾಗಿರುತಿತ್ತು. ಆದ್ರೆ, ಕೊರೋನಾ ಎನ್ನುವ ಮಹಾಮಾರಿ ಬಂದು ಎಲ್ಲವನ್ನೂ ಬಂದ್ ಮಾಡಿದೆ. ಇನ್ನು ಇದೀಗ ಲಾಕ್ಡೌನ್ ಸಡಿಲಿಕೆಯಿಂದ ಬಹುತೇಕ ಕೆಲಸ ಕಾರ್ಯಗಳು ಆರಂಭವಾಗಿವೆ. ಅದೇ ರೀತಿ ಶಿಕ್ಷಣ ಸಂಸ್ಥೆಗಳನ್ನ ಪ್ರಾರಂಭಿಸಲು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
ಕೇಂದ್ರ ಸರ್ಕಾರ ಅನ್ ಲಾಕ್ 4.0ನಲ್ಲಿ ಬಹುತೇಕ ಎಲ್ಲಾ ಸಡಿಲಿಕೆ ಮಾಡಿದೆ. ಆದ್ರೆ, ಶಿಕ್ಷಣ ಕ್ಷೇತ್ರಗಳನ್ನ ತೆಗೆಯಲು ಯಾವುದೇ ಮನಸ್ಸು ಮಾಡಿಲ್ಲ. ಮತ್ತೊಂದೆಡೆ ಸಾರ್ವಜನಿಕ ಆರೋಗ್ಯ ತಜ್ಞರ ತಂಡ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಶ್ರೇಣೀಕೃತ ರೀತಿಯಲ್ಲಿ ಪುನಃ ತೆರೆಯಬೇಕೆಂದು ಶಿಫಾರಸು ಮಾಡಿದೆ.
ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ (ಐಪಿಎಚ್ಎ), ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ (ಐಎಪಿಎಸ್ಎಂ) ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ಸ್ (ಐಎಇ) ತಜ್ಞರು ಸಂಗ್ರಹಿಸಿದ ವರದಿ ಆಧಾರ ಮೇಲೆ ಈ ಶಿಫಾರಸು ಮಾಡಲಾಗಿದೆ.
ಶಾಲೆ-ಕಾಲೇಜು ಪ್ರಾರಂಭದ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ
ಈಗ ಸಾಮಾನ್ಯ ಸ್ಥಿತಿಗೆ ಸಾಗುವ ಸಮಯ ಬಂದಿದ್ದು, ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳ ಶ್ರೇಣೀಕೃತ ರೀತಿಯಲ್ಲಿ ಪ್ರಾರಂಭಿಸಬಹುದು. ಕಡಿಮೆ ಸೋಂಕಿನ ಪ್ರದೇಶಗಳಲ್ಲಿಯೂ ಸಹ ಸರಿಯಾದ ಸುರಕ್ಷತಾ ಕ್ರಮಗಳೊಂದಿಗೆ ಅಂದ್ರೆ ಸಾಮಾಜಿ ಅಂತರ ಸೇರಿದಂತೆ ಇತರೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯಬಹುದು ಎಂದು ತಜ್ಞರ ವರದಿ ಹೇಳಿದೆ.
ಶಿಕ್ಷಣ ಸಂಸ್ಥೆಗಳ ಮುಚ್ಚುವಿಕೆಯಿಂದ ವಿಶೇಷವಾಗಿ 5 ರಿಂದ18 ವರ್ಷದ ಮಕ್ಕಳ ಬೋಧನಾ ಕಲಿಕೆಯ ವ್ಯವಸ್ಥೆಯ ಮೇಲೆ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಶೈಕ್ಷಣಿಕ ವರ್ಷ ಮುರ್ನಾಲ್ಕು ತಿಂಗಳು ತಡವಾಗಿದ್ದು, ತಜ್ಷರ ಈ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ, ಶೈಕ್ಷಣಿಕ ಕಾರ್ಯಚಟುವಟಿಕೆಗಳ ಪ್ರಾರಂಭಕ್ಕೆ ಯಾವ ರೀತಿ ಕ್ರಮಗಳನ್ನ ಕೈಗೊಳ್ಳುತ್ತೆ ಎನ್ನುವುದನ್ನು ಕಾದನೋಡಬೇಕಿದೆ.
"