ಇತಿಹಾಸ ಸೃಷ್ಟಿಸಿದ ‘ಕೆಂಪುಕೋಟೆ’: ಮಂಗಳೂರು ವಿವಿ ಕಾಲೇಜಿಗೆ 150 ವರ್ಷದ ಸಂಭ್ರಮ!

By Kannadaprabha NewsFirst Published Jan 23, 2020, 9:41 AM IST
Highlights

ಪಿಯುಸಿಯನ್ನು ಶೇ.83ರ ಸಾಧನೆಯೊಂದಗೆ ಪಾಸು ಮಾಡಿ ಮುಂದೇನು ಎಂದು ಆಲೋಚಿಸುತ್ತಿದಂತೆ ಗುರುಗಳು ನೀಡಿದ ಸಲಹೆಯಂತೆ ಪದವಿಯಲ್ಲಿ ಪತ್ರಿಕೋದ್ಯಮವನ್ನು ಆರಿಸಿಕೊಳ್ಳುವುದು ಉತ್ತಮ ಎಂದೆನಿಸಿತು. ಆದರೆ ಮನೆಗೆ ಹತ್ತಿರವಿರುವ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಇರಲಿಲ್ಲ. ಪತ್ರಿಕೋದ್ಯಮ ಕಾಲೇಜಿನ ಹುಡುಕಾಟದಲ್ಲಿಯೇ ನನಗೆ ಮಂಗಳೂರು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ಪರಿಚಯವಾದದ್ದು. ಮೊದಲ ದಿನ ಕಾಲೇಜಿಗೆ ಬಂದಾಗ ಹಳೆ ಮಣ್ಣಿನ ಪರಿಮಳವನ್ನು ಬಹಳ ಸೊಗಸಾಗಿ ಉಸಿರಾಡಿದ್ದು ಈಗಲೂ ನೆನಪಿದೆ. ಅಂದು ಕಾಲೇಜಿಗೆ ಪ್ರವೇಶಿಸುವಾಗ ಕಾಲೇಜಿನ ಬಗ್ಗೆ ಏನೂ ತಿಳಿಯದೆ ಬಂದೆ. ಆದರೆ ಇಂದು ಕಾಲೇಜಿನ ಇತಿಹಾಸ ಪುಟಗಳ ಬಗ್ಗೆ ತಿಳಿದ ನಂತರ ಎಂತಹ ಅದ್ಭುತ ಅವಕಾಶ ನನಗೆ ದೊರಕಿದೆ ಎಂದು ಖುಷಿಯಾಗುತ್ತಿದೆ.

ಗ್ರೀಷ್ಮಾ ಭಂಡಾರಿ, ಮಂಗಳೂರು

ಮಂಗಳೂರಿನ ಇತಿಹಾಸ ಆರಂಭವಾಗುವುದೇ ನನ್ನ ವಿಶ್ವವಿದ್ಯಾನಿಲಯ ಕಾಲೇಜಿನಿಂದ. ಜಾತಿ, ಸಮುದಾಯಗಳ ತಾರತಮ್ಯವಿಲ್ಲದೇ ಸರ್ವರಿಗೂ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭವಾದ ಸಂಸ್ಥೆ 150 ವರ್ಷಗಳಲ್ಲಿ ಅದೆಷ್ಟೋ ವಿದ್ಯಾಕಾಂಕ್ಷಿಗಳಿಗೆ ಶಿಕ್ಷಣ ನೀಡಿದೆ. ಭವಿಷ್ಯದ ಕನಸುಗಳನ್ನು ನನಸಾಗಿಸಲು ದಾರಿದೀಪವಾದಂತಹ ವಿದ್ಯಾಸಂಸ್ಥೆ. ಸುಮಾರು 155 ವರ್ಷಗಳ ಹಿಂದೆ ನಗರದ ಹಿರಿಯರು ಸುಮಾರು 65,000 ರೂಪಾಯಿಗಳನ್ನು ಸಂಗ್ರಹಿಸಿ ಶಾಲೆ ಆರಂಭಿಸಿದ್ದು ಶಿಕ್ಷಣದ ಪ್ರೀತಿಯ ದ್ಯೋತಕವಾಗಿದೆ.

1868ರಲ್ಲಿ ಸ್ಥಾಪನೆ

1868ರಲ್ಲಿ ಅಂದಿನ ಬ್ರಿಟಿಷ್‌ ಸರ್ಕಾರ ಮೆಟ್ರಿಕ್ಯುಲೇಶನ್‌ ಬರೆದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಮದ್ರಾಸ್‌ ಹೋಗುವ ಅನಿವಾರ್ಯತೆ ತಪ್ಪಿಸಲು ನಗರದಲ್ಲೇ ಕಾಲೇಜೊಂದನ್ನು ಸ್ಥಾಪಿಸಲು ಮುಂದಾಗಿ ಗೋಥಿಕ್‌ ಶೈಲಿಯ ಕಟ್ಟಡವನ್ನು ನಿರ್ಮಿಸಲಾಯಿತು. ಆಗ ಅದಕ್ಕೆ ವೆಚ್ಚವಾದ ಹಣ 28,490 ರೂಪಾಯಿಗಳು ಅಂತೆ. ಇಂದಿಗೂ ಅ ಕಟ್ಟಡ ಬಲಿಷ್ಠವಾಗಿದೆ ಮತ್ತು ವಿದ್ಯಾರ್ಥಿಗಳ ಸವಿನೆನಪುಗಳ ಮಾಮರವಾಗಿದೆ.

1901ರಿಂದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೂ ಪ್ರವೇಶ ಕಲ್ಪಿಸಲಾಯಿತು. ಕಾಲೇಜ್‌ ಡೇ ಆರಂಭಿಸಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಯಿತು. ಎಷ್ಟೋ ಪ್ರತಿಭೆಗಳು ಹೊರ ಬರುವುದು ಸಾಂಸ್ಕೃತಿಕ ವೇದಿಕೆಗಳಿಂದ ಅಲ್ಲವೇ? ಉತ್ತಮ ಅವಕಾಶಗಳು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಬೆಟ್ಟದಷ್ಟಿದೆ ಎಂದು ಹೇಳಿದರೆ ಖಂಡಿತ ತಪ್ಪಗಲಾರದು.

1922ರಲ್ಲಿ ಕವಿ ರವೀಂದ್ರನಾಥ ಠಾಗೋರ್‌ ನಮ್ಮ ಕಾಲೇಜಿಗೆ ಬಂದ ಮಧುರ ನೆನಪಿಗಾಗಿ ‘ರವೀಂದ್ರ ಕಲಾಭವನ’ ಸ್ಥಾಪಿಸಲಾಯಿತು.ಈ ಕಲಾಭವನ ಪ್ರವಾಸಿಗರತಾಣವೇ ಸರಿ ಅಷ್ಟೊಂದು ಮನಮೋಹಕವಾಗಿದೆ. ನಂತರದ ವರುಷಗಳಲ್ಲಿ ಶಿವರಾಮ ಕಾರಂತ ಭವನ ಹಾಗೂ ಅದಕ್ಕೆ ಹೊಂದಿಕೊಂಡಿರುವ ಕೊಠಡಿ ಆರಂಭವಾಯಿತು. ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ ವೀರಪ್ಪ ಮೊಯಿಲಿ ಶಿಕ್ಷಣ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಸರ್ಕಾರಿ ಕಾಲೇಜು ಮಂಗಳೂರು ವಿ.ವಿ.ಅಧೀನಕ್ಕೊಳಪಟ್ಟವಿಶ್ವವಿದ್ಯಾನಿಲಯ ಕಾಲೇಜು ಎಂದು ಕರೆಯಲ್ಪಟ್ಟಿತು.

ಇದೀಗ ಇಲ್ಲಿ, ದೂರದಿಂದ ಓದಲು ಬರುವಂತಹ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ದಾನಿಗಳ ಸಹಕಾರದಿಂದ ನೀಡಲಾಗುತ್ತಿದೆ. ಶಿಕ್ಷಕರೂ ಸಹ ಕಲಿಕೆಯಲ್ಲೂ ಹಾಗೂ ಸಾಂಸ್ಕೃತಿಕವಾಗಿಯೂ ವಿದ್ಯಾರ್ಥಿಗಳ ಬೆನ್ನುಲುಬಾಗಿ ನಿಂತಿದ್ದಾರೆ.

ಕನ್ಫ್ಯೂಷನ್ನೇ ಜಾಸ್ತಿ, ಸೊಲ್ಯೂಷನ್ನು ನಾಸ್ತಿ;ಗರ್ಲ್ ಫ್ರೆಂಡಾ, ಬೆಸ್ಟ್‌ ಫ್ರೆಂಡಾ!

ಕಾರಂತರು ಓದಿದ ಕಾಲೇಜು

ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಸಮಾಜದ ವಿವಿಧ ರಂಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು ಡಾ. ಶಿವರಾಮ ಕಾರಂತ, ಡಾ. ಎಂ. ವೀರಪ್ಪ ಮೊಯಿಲಿ, ಮಂಜೇಶ್ವರ ಗೋವಿಂದ ಪೈ, ರಾಜಕೀಯದಲ್ಲಿ ಪ್ರಸಿದ್ಧಿ ಪಡೆದ ಗಣ್ಯರಾದ ಎ. ಬಿ. ಶೆಟ್ಟಿ, ಯು. ಪಿ. ಮಲ್ಯ, ವೈಕುಂಠ ಬಾಳಿಗ, ಡಾ. ಎಂ. ವೀರಪ್ಪ ಮೊಯಿಲಿ, ರಮಾನಾಥ ರೈ, ವಿನಯಕುಮಾರ್‌ ಸೊರಕೆ, ಜಯರಾಮ ಶೆಟ್ಟಿಮುಂತಾದವರು ಇಲ್ಲಿನ ವಿದ್ಯಾರ್ಥಿಗಳು, ಕೇಂದ್ರ ಸರಕಾರದ ಮಾಜಿ ಸಚಿವರಾಗಿದ್ದ ದಿ.ಪಿ. ಎಂ. ಸಯಿದ್‌ ಅವರೂ ಇಲ್ಲಿನ ವಿದ್ಯಾರ್ಥಿ, ರಂಗಕರ್ಮಿ ಡಾ. ಡಿ.ಕೆ. ಚೌಟ, ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ದಿ. ಡಾ. ಎಂ.ವಿ. ಕಾಮತ್‌, ಸಂತೋಷ್‌ ಕುಮಾರ್‌ ಗುಲ್ವಾಡಿ, ಮಲಬಾರ್‌ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಬ್ದುಲ್‌ ರೆಹಮಾನ್‌, ರಾಷ್ಟ್ರ ಪ್ರಶಸ್ತಿ ವಿಜೇತರಾದ ಶ್ರೀ ಬಾಲಕೃಷ್ಣ ಆಚಾರ್ಯ, ಉದ್ಯಮಿಗಳಾದ ಡಾ. ದಯಾನಂದ ಪೈ, ಸೈನಿಕ ಸೇವೆಯಲ್ಲಿ ಪರಮೋಚ್ಛ ಪದಕ ಪಡೆದಿರುವ ಬ್ರಿಗೇಡಿಯರ್‌ ಗೋಖಲೆ, ವಿಶೇಷವಾಗಿ ಕಲೆಯ ಪುನರುಜ್ಜೀವನದಲ್ಲಿ ಕೆಲಸ ಮಾಡಿದ ದಿ. ಶ್ರೀಮತಿ ಕಮಲಾ ದೇವಿ ಚಟ್ಟೋಪಧ್ಯಾಯ ಸಹಿತ ಸಹಸ್ರ ಸಹಸ್ರ ವಿದ್ಯಾರ್ಥಿಗಳು ಇಲ್ಲಿ ಶೈಕ್ಷಣಿಕ ಬದುಕು ಕಟ್ಟಿಕೊಂಡವರು.

ಅಜ್ಞಾನವನ್ನು ಹೋಗಲಾಡಿಸಿ,ಅಂಧಕಾರವ ಹೊಡೆದೂಡಿಸಿ, ಜ್ಞಾನದ ಬೆಳಕ ನೀಡಿ, ಸುಜ್ಞಾನದ ಪಥದಲ್ಲಿ ನಡೆಸುವ ಮಾರ್ಗದರ್ಶನಕವಾಗಿ ವಿದ್ಯಾರ್ಥಿಗಳ ಕನಸುಗಳಿಗೆ ದಾರಿದೀಪವಾದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಈಗ 150ರ ಸಂಭ್ರಮ. ಫೆ.6ರಂದು ದಿನಪೂರ್ತಿ ಕಾಲೇಜಿನಲ್ಲಿ ಸಂಭ್ರಮಾಚರಣೆಯಿದೆ.

ಲಾಸ್ಟ್‌ಬೆಂಚ್‌ಗೆ ಜೀವ ಬಂದರೆ ಏನೇನು ಹೇಳಬಹುದು?

ಅನೇಕ ಸಿನಿಮಾಗಳಲ್ಲಿ ಇದೇ ಕಾಲೇಜು

ಜನಪ್ರಿಯ ಸಿನಿಮಾಗಳಾದ ‘ಅರ್ಜುನ್‌ ರೆಡ್ಡಿ’, ‘ಒಂದು ಮೊಟ್ಟೆಯ ಕಥೆ’, ಇತ್ತೀಚೆಗೆ ತೆರೆಗೆ ಬಂದ ‘99’, ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು (ಕೋರ್ಟ್‌ ದೃಶ್ಯ) ಮತ್ತಿತರ ಚಿತ್ರಗಳಲ್ಲಿ ಕಂಡು ಬರುವ ಕೆಂಪು ಕಟ್ಟಡ ವಿ.ವಿ.ಕಾಲೇಜಿನದ್ದೇ. ಅನೇಕ ಚಲನಚಿತ್ರಗಳು ಈ ಪಾರಂಪರಿಕ ಕಟ್ಟಡದಲ್ಲಿ ಚಿತ್ರೀಕರಣಗೊಂಡಿವೆ. ವಿಶ್ವಾದ್ಯಂತ ಮೆಚ್ಚುಗೆಗೂ ಪಾತ್ರವಾಗಿದೆ.

click me!