ಹತ್ಯೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಹಂತಕಿ ಪತ್ನಿ, ಅನೈತಿಕ ಸಂಬಂಧಕ್ಕೆ ಗಂಡನ ಮುಗಿಸಿದ ಹೆಂಡತಿ!

By Suvarna NewsFirst Published Jul 24, 2023, 9:11 PM IST
Highlights

ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿ  ಪತಿಯ ಆತ್ಮಹತ್ಯೆಯೆಂದು ಬಿಂಬಿಸಿದ ಹಂತಕಿ ಪತ್ನಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಅನೈತಿಕ ಸಂಬಂಧವೇ ಕೊಲೆಗೆ ಕಾರಣವಾಗಿದ್ದು, ಯಾದಗಿರಿಯಲ್ಲಿ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.

ಯಾದಗಿರಿ (ಜು.24): ಗುರುಮಠಕಲ್‌ ತಾಲೂಕಿನ ಕೊಂಕಲ್‌ ಗ್ರಾಮದಲ್ಲಿ ಪತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಕಥೆ ಸೃಷ್ಟಿಸಿ ಕಣ್ಣೀರು ಹಾಕಿದ್ದ ಹಂತಕಿ ಜೈಲು ಪಾಲು ಆಗಿರುವ ಘಟನೆ ಜರುಗಿದೆ.

ಕಳೆದ ತಿಂಗಳು 15ರಂದು ಕಾಶೆಪ್ಪ ಎಂಬ ವ್ಯಕ್ತಿಯ ಸಾವಿನ ಘಟನೆ ನಡೆದಿತ್ತು. ಕೊಂಕಲ್‌ ಗ್ರಾಮದ ಜಮೀನಿನ ಮರವೊಂದಕ್ಕೆ 35 ವರ್ಷದ ಕಾಶೆಪ್ಪನ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಘಟನೆಯಿಂದ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಕಾಶೆಪ್ಪ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಹೀಗಾಗಿ, ಸಾವಿನ ಬಗ್ಗೆ ಸಂಶಯವಿದೆ ಎಂದು ಗುರುಮಠಕಲ್‌ ಠಾಣೆಯಲ್ಲಿ ಮೃತ ಕಾಶೆಪ್ಪನ ಸಹೋದರಿ ಕಾಶೆಮ್ಮ ದೂರು ನೀಡಿದ್ದರು. ಈ ಬಗ್ಗೆ ಗುರುಮಠಕಲ್‌ ಸಿಪಿಐ ದೌಲತ್‌ ಕುರಿ ಅವರು, ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ವಿಷಯ ಬೆಳಕಿಗೆ ಬಂದಿದೆ.

Latest Videos

ರಾಜ್ಯದಲ್ಲಿ ಇನ್ನೂ ಜೀವಂತ ಭ್ರೂಣ ಹತ್ಯೆ, 4 ತಿಂಗಳ ಭ್ರೂಣದ ಶವ ರಸ್ತೆ ಬದಿ ಎಸೆದ ಕಿಡಿಗೇಡಿಗಳು!

ಅನೈತಿಕ ಸಂಬಂಧವೇ ಕೊಲೆಗೆ ಕಾರಣ: ತಾಲೂಕಿನ ಕೊಂಕಲ್‌ ಗ್ರಾಮದ ಕಾಶೆಪ್ಪ ಹಾಗೂ ಅನಿತಾ ದಂಪತಿಗಳು ಕೃಷಿ ಮಾಡಿಕೊಂಡು ನೆಮ್ಮದಿ ಬದುಕು ಕಟ್ಟಿಕೊಂಡಿದ್ದರು. 15 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗಳಿಗೆ 3 ಮಕ್ಕಳಿದ್ದಾರೆ. ಆದರೆ, ಕಾಶೆಪ್ಪನ ಪತ್ನಿಯು ಮನೆ ಹಿಂಭಾಗದ ನಾಗೇಶನ ಜಮೀನಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಜಮೀನು ಕೆಲಸಕ್ಕೆ ಹೋದಾಗ ಅನಿತಾ ಹಾಗೂ ನಾಗೇಶನ ನಡುವೆ ಪ್ರೇಮಾಂಕುರವಾಗಿದೆ. ಕಳೆದ ಮೂರು ವರ್ಷದಿಂದ ಪ್ರೀತಿ, ಪ್ರೇಮ ಎಂದು ಸಂಬಂಧ ಹೊಂದಿದ್ದಾರೆ. ಈ ವಿಷಯದಲ್ಲಿ ಕಾಶೆಪ್ಪ ಹಾಗೂ ಅನಿತಾ ದಂಪತಿಗಳ ನಡುವೆ ಸಾಕಷ್ಟುಬಾರಿ ಜಗಳವಾಗಿದೆ. ನ್ಯಾಯ ಪಂಚಾಯಿತಿ ಮಾಡಿದರೂ ನಾಗೇಶ್‌ ಮತ್ತು ಅನಿತಾ ಪ್ರೇಮಿಗಳು ಬಿಟ್ಟಿರಲು ಆಗಿಲ್ಲ. ಆದರೆ, ಎರಡು ತಿಂಗಳ ಹಿಂದೆ ನಾಗೇಶ ಬೆಂಗಳೂರಿಗೆ ತೆರಳಿದ್ದ, ಇಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದರು. ಫೋನಿನಲ್ಲಿಯೇ ಪ್ರೀತಿಗೆ ಅಡ್ಡಿಯಾಗಿರುವ, ಕಾಶೆಪ್ಪನನ್ನು ಕೊಲೆ ಮಾಡಲು ಸ್ಕೇಚ್‌ ಹಾಕುತ್ತಾರೆ. ತಾನು ಬೆಂಗಳೂರಿನಲ್ಲಿ ಇದ್ದಾನೆಂದು ಸೃಷ್ಟಿಮಾಡಲು ಯಾದಗಿರಿಗೆ ಬಂದರೂ ನಾಗೇಶ ಹಗಲು ಹೊತ್ತಿನಲ್ಲಿ ಊರಿಗೆ ಬಂದಿರಲಿಲ್ಲ.

ಜೂ.15ರಂದು ಮನೆಯಲ್ಲಿ ಮಲಗಿದ್ದ ಕಾಶೆಪ್ಪನನ್ನು ಕೊಲೆ ಮಾಡಲು ರಾತ್ರಿ ನಾಗೇಶ ಬಂದು, ಪ್ರೇಮಿ ಜೊತೆ ಸೇರಿ ಪತ್ನಿ ಅನಿತಾ ಹಗ್ಗದಿಂದ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಬೈಕ್‌ ಮೇಲೆ ಶವ ಇಟ್ಟುಕೊಂಡು ಜಮೀನಿನ ಮರಕ್ಕೆ ನೇಣು ಹಾಕಿದ್ದಾರೆ. ನಾಗೇಶ ಊರಲ್ಲಿ ಕಾಣಿಸದೇ ಪಾರಾದರೆ, ಅನಿತಾ ಮನೆಯಲ್ಲಿ ಇದ್ದು ಬುತ್ತಿ ಮಾಡಿಕೊಂಡು ಜಮೀನಿಗೆ ತೆರಳಿದ್ದಾಳೆ. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕಥೆ ಕಟ್ಟಿದ್ದಾಳೆ. ಗಂಡನ ಅಂತ್ಯಕ್ರಿಯೆ ಕಾರ್ಯದಲ್ಲಿ ಕೂಡ ಮಕ್ಕಳ ಎದುರು ಕಣ್ಣೀರು ಹಾಕಿದ್ದಾಳೆ.

ಹುನ್ನೂರು ವರ್ತಕನ ಹತ್ಯೆಗೆ ಸಂಚು, ಐವರು ಸುಪಾರಿ ಹಂತಕರ ಬಂಧ‌ನ

ಬೈಕ್‌ಗೆ ಅಂಟಿದ್ದ ರಕ್ತದ ಕಲೆ, ಒಡೆದ ಬಳೆಗಳು ಹಾಗೂ ಹಲವು ಸಾಕ್ಷಿಗಳನ್ನು ಆಧರಿಸಿ, ಗುರುಮಠಕಲ್‌ ಪೊಲೀಸರು ತನಿಖೆ ನಡೆಸಿದಾಗ ಪತ್ನಿ ಅನಿತಾ ಹಾಗೂ ನಾಗೇಶ ಹಂತಕರೆಂದು ಗೊತ್ತಾಗುತ್ತದೆ. ನಂತರ ಹತ್ಯೆ ಮಾಡಿದ ಅನಿತಾ ಹಾಗೂ ನಾಗೇಶ ಅವರನ್ನು ಗುರುಮಠಕಲ್‌ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಗನ ಕೃತ್ಯದಿಂದ ನಾಗೇಶ್‌ ತಾಯಿ ನೀಲಮ್ಮ ನೊಂದು ಹೋಗಿದ್ದಾಳೆ. ಗುರುಮಠಕಲ್‌ ಸಿಪಿಐ ದೌಲತ್‌ ಕುರಿ ಅವರ ಪೊಲೀಸ ತಂಡವು, ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

click me!