ಹುಬ್ಬಳ್ಳಿ: ಗುರೂಜಿ ಹತ್ಯೆ, ಆಂತರಿಕ ವಿಚಾರ ಬಯಲಿಗೆ ಪ್ರತ್ಯೇಕ ತಂಡ

By Kannadaprabha NewsFirst Published Jul 10, 2022, 9:05 PM IST
Highlights

*  ತಾಂತ್ರಿಕ ತಜ್ಞರ ತಂಡ ರಚನೆ
*  ಆರೋಪಿಗಳ ಸಆಪ್ತರ ವಿಚಾರಣೆ
*  ಮತ್ತಷ್ಟು ತೀವ್ರಗೊಳಿಸಿದ ವಿಚಾರಣೆ 
 

ಹುಬ್ಬಳ್ಳಿ(ಜು.10): ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಬಗೆಗಿನ ಆಂತರಿಕ ವಿಚಾರಗಳನ್ನು ಬಯಲು ಮಾಡಲು ತಾಂತ್ರಿಕ ತಜ್ಞರನ್ನೊಳಗೊಂಡ ಪ್ರತ್ಯೇಕ ತಂಡವನ್ನು ಪೊಲೀಸ್‌ ಕಮಿಷನರೇಟ್‌ ರಚಿಸಿದೆ. ಈ ನಡುವೆ ಕೊಲೆ ಆರೋಪಿಗಳ ಆಪ್ತರ ವಿಚಾರಣೆಯನ್ನೂ ಪೊಲೀಸರು ನಡೆಸಿರುವುದುಂಟು. ಈ ಮೂಲಕ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದಂತಾಗಿದೆ.

ಗುರೂಜಿ ಹತ್ಯೆಯ ಹಿಂದಿನ ರಹಸ್ಯ ಭೇದಿಸಲು ಪೊಲೀಸ್‌ ಆಯುಕ್ತರ ಕಚೇರಿ ಹರಸಾಹಸ ಪಡುತ್ತಿದೆ. ಕಮಿಷನರ್‌ ಖುದ್ದು ಆರೋಪಿಗಳ ವಿಚಾರಣೆ ನಡೆಸಿದರೂ ಅಷ್ಟೊಂದು ಫಲ ನೀಡುತ್ತಿಲ್ಲ. ಬರೀ ಆಸ್ತಿ, ನೌಕರಿಯಲ್ಲಿದ್ದಾಗ ಕಿರುಕುಳ ಎಂಬಂತಹ ಮಾಹಿತಿಯಷ್ಟೇ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ತಜ್ಞರ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ವಿವಿಧ ಠಾಣೆಯಲ್ಲಿರುವ ನುರಿತ ಪೊಲೀಸ್‌ ಸಿಬ್ಬಂದಿ ಈ ತಂಡದಲ್ಲಿ ಇದ್ದಾರೆ. ಸ್ವತಃ ಪೊಲೀಸ್‌ ಕಮಿಷನರ್‌ ತಂಡದ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಕೊಲೆಗೆ ಹೋಟೆಲ್‌ ಭದ್ರತಾ ವೈಫಲ್ಯ ಕಾರಣವೇ?

ಈಗಾಗಲೇ ಈ ತಂಡ ಚುರುಕಿನಿಂದ ಕಾರ್ಯಾಚರಣೆ ನಡೆಸಿದ್ದು, ಅವಶ್ಯಕ ಮಾಹಿತಿ ಕಲೆ ಹಾಕುತ್ತಿದೆ. ಗುರೂಜಿ ಕೊಲೆ ಹಿಂದಿನ 8ರಿಂದ10 ದಿನಗಳ ಕಾಲದಲ್ಲಿ ಆರೋಪಿಗಳ ಚಲನವಲನ ಪತ್ತೆ, ಆರೋಪಿಗಳು ಯಾರಾರ‍ಯರ ಜತೆ ಸಂಪರ್ಕದಲ್ಲಿದ್ದರು ಎಂಬುದರ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೊಲೆಗೆ ಈಗ ಆರೋಪಿಗಳು ಹೇಳಿರುವುದಷ್ಟೇ ಕಾರಣವಿದೆಯೋ ಅಥವಾ ಹತ್ಯೆಯ ಹಿಂದೆ ಮತ್ತೆ ಬೇರೆಯವರೇನಾದರೂ ಕುಮ್ಮಕ್ಕು ನೀಡಿದ್ದಾರೆಯೇ? ಎಂಬ ಬಗ್ಗೆ ಅರಿಯುವ ಪ್ರಯತ್ನ ಈ ತಂಡ ಮಾಡುತ್ತಿದೆ.

ಈಗಾಗಲೇ ಕೊಲೆ ನಡೆದ ಹೋಟೆಲ್‌ ಹಾಗೂ ಆರೋಪಿಗಳು ಓಡಾಡಿದ ಸ್ಥಳಗಳಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಪಡೆಯುವ ಕಾರ್ಯ ಚುರುಕಿನಿಂದ ನಡೆದಿದೆ. ಇದಕ್ಕಾಗಿ ನಾಲ್ಕೈದು ಜನ ನುರಿತ ಪೊಲೀಸರ ಪ್ರತ್ಯೇಕ ತಂಡ ಕಾರ್ಯ ಮಾಡುತ್ತಿದೆ. ಇನ್ನು ಮೊಬೈಲ್‌ ಟಾವರ್‌ ಲೋಕೇಶನ್‌ ಹಾಗೂ ಯಾರಾರ‍ಯರು ಮೊಬೈಲ್‌ಗೆ ಕರೆ ಮಾಡಿದ್ದಾರೆ ಎಂಬ ಶೋಧಕ್ಕೆ ಪ್ರತ್ಯೇಕ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಚಂದ್ರಶೇಖರ ಗುರೂಜಿ ಹತ್ಯೆ ಕೇಸ್: ವಿಚಾರಣೆ ವೇಳೆ ರೋಚಕ ಅಂಶಗಳನ್ನ ಬಾಯ್ಬಿಟ್ಟ ಹಂತಕರು

ಇದರೊಟ್ಟಿಗೆ ಇಬ್ಬರು ಆರೋಪಿಗಳ ನಿಕಟ ಸಂಪರ್ಕದಲ್ಲಿರುವ ವ್ಯಕ್ತಿಗಳ ಪತ್ತೆ ಕಾರ್ಯವೂ ನಡೆದಿದೆ. ಈಗಾಗಲೇ ಹಲವರನ್ನು ಪತ್ತೆ ಹಚ್ಚಿರುವ ಪೊಲೀಸರ ತಂಡ ಅವರ ಮೇಲೆ ವಿಶೇಷ ನಿಗಾವಹಿಸುತ್ತಿದೆ. ಅಲ್ಲದೇ, ಅವಶ್ಯ ಬಿದ್ದರೆ ಅವರನ್ನು ಸಹ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಆಪ್ತರ ವಿಚಾರಣೆ:

ಗುರೂಜಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿಗಳ ಜತೆ ಉತ್ತಮ ಒಡನಾಟ ಹೊಂದಿದ ಆರೇಳು ಜನ ಆಪ್ತರನ್ನು ಪೊಲೀಸರ ತಂಡ ಶನಿವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಅದರೊಟ್ಟಿಗೆ ಆರೋಪಿಗಳ ಕುಟುಂಬದ ಸದಸ್ಯರ ಮೇಲೆಯೂ ವಿಶೇಷ ನಿಗಾ ವಹಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
 

click me!