Paresh Mesta Murder Case: ಪ್ರಕರಣದ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ!

By Ravi NayakFirst Published Aug 12, 2022, 1:26 PM IST
Highlights

ಕೋಮು ಗಲಭೆಯಲ್ಲಿ ಮೃತಪಟ್ಟಿದ್ದ ಪರೇಶ್ ಮೇಸ್ತಾನ ಸಾವಿಗೆ ನ್ಯಾಯ ಒದಗಿಸಲು ಬಿಜೆಪಿ ಸಾಕಷ್ಟು ಹೋರಾಟ ನಡೆಸಿತ್ತು ಆದರೆ ಇದೀಗ ಬಿಜೆಪಿ ಸರ್ಕಾರದಲ್ಲೇ ಕೊಲೆ ಪ್ರಕರಣದ ಎ1 ಆರೋಪಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ! ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಉತ್ತರ ಕನ್ನಡ (ಆ.12) : ಕೋಮು ಗಲಭೆಯಲ್ಲಿ ಮೃತಪಟ್ಟಿದ್ದ ಪರೇಶ್ ಮೇಸ್ತಾ(Paresh Mesta)ನ ಸಾವಿಗೆ ನ್ಯಾಯ ಒದಗಿಸಲು ಬಿಜೆಪಿ(BJP) ಸಾಕಷ್ಟು ಹೋರಾಟ ನಡೆಸಿತ್ತು. ಆದರೆ, ಇದೀಗ ಬಿಜೆಪಿ ಸರ್ಕಾರದಲ್ಲಿಯೇ ಪರೇಶ್ ಮೇಸ್ತಾ ಸಾವಿನ A1 ಆರೋಪಿಗೆ ಜಿಲ್ಲಾ ವಕ್ಫ್ ಬೋರ್ಡ್(wakf board) ಉಪಾಧ್ಯಕ್ಷ ಸ್ಥಾನ ನೀಡಿದೆ. ಈ ಕಾರಣದಿಂದ ಬಿಜೆಪಿ ಕಾರ್ಯಕರ್ತ(BJP Workers)ರಲ್ಲಿ ಆಕ್ರೋಶ ಬುಗಿಲೆದ್ದಿದ್ದು,ಆರೋಪಿಯನ್ನು ಸ್ಥಾನದಿಂದ ಉಚ್ಚಾಟಿಸಲು ಒತ್ತಾಯಿಸಿದ್ದಾರೆ.

ಹೊನ್ನಾವರದ ಪರೇಶ್ ಮೇಸ್ತ ಸಾವಿನ ಹಿಂದೆ ಬಿಜೆಪಿಯವರೇ ಭಾಗಿ: ಡಿಕೆಶಿ ಗಂಭೀರ ಆರೋಪ

 2017ರ ಡಿಸೆಂಬರ್ ತಿಂಗಳಿನಲ್ಲಿ ಉತ್ತರಕನ್ನಡ(Uttara Kannada) ಜಿಲ್ಲೆಯ ಹೊನ್ನಾವರ(Honnavara) ಪಟ್ಟಣದಲ್ಲಿ ನಡೆದ ಕೋಮು ಗಲಭೆಯಲ್ಲಿ ಪಟ್ಟಣದ ಪರೇಶ್ ಮೆಸ್ತಾ ಅನ್ನೋ ಯುವಕ ನಾಪತ್ತೆಯಾಗಿದ್ದು, ಎರಡು ದಿನಗಳ ನಂತರ ಆತನ ಶವ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಪರೇಶ್ ಮೇಸ್ತಾನನ್ನು ಕೋಮು ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ವಿರೋಧಿಸಿದ್ದ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ(Protest) ಕೂಡಾ ನಡೆಸಿತ್ತು.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ(Kumata), ಶಿರಸಿ(Sirsi), ಕಾರವಾರ(Karwar)ದಲ್ಲಿ ಈ ಘಟನೆ ದೊಡ್ಡ ಗಲಭೆಗೆ ಕಾರಣವಾಗಿದ್ದರಿಂದ ಅಂದಿನ ಕಾಂಗ್ರೆಸ್ ಸರ್ಕಾರ(Congress Govt) ಸಿಬಿಐ(CBI) ತನಿಖೆಗೆ ಸಹ ಒಪ್ಪಿಸಿತ್ತು. ಈ ಪ್ರಕರಣ ಸಂಬಂಧ ಹೊನ್ನಾವರ ಪೊಲೀಸ್ ಠಾಣೆ(Honnavar Police Station)ಯಲ್ಲಿ ದೂರು ಕೂಡಾ ದಾಖಲಾಗಿದ್ದು, ಜಮಾಲ್ ಅಜಾದ್ ಅಣ್ಣಿಗೇರಿ ಎಂಬಾತನನ್ನು A1 ಆರೋಪಿಯನ್ನಾಗಿ ಮಾಡಿ ಬಂಧನ ಮಾಡಲಾಗಿತ್ತು. ಸದ್ಯ ಪ್ರಕರಣ ಸಂಬಂಧಿಸಿ ಸಿಬಿಐ ತನಿಖೆ ಮುಂದುವರಿಸಿರೋದ್ರಿಂದ ಬಂಧಿತರೆಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ನಡುವೆ ಕೆಲವು ದಿನಗಳ ಹಿಂದೆ ಜಿಲ್ಲಾ ವಕ್ಫ್ ಬೋರ್ಡ್ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಅಜಾದ್ ಅಣ್ಣಿಗೇರಿಗೆ ನೀಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.‌ 

ರಾಜ್ಯಪಾಲರ ಅಂಗಳಕ್ಕೆ ಪರೇಶ್ ಮೆಸ್ತಾ ಪ್ರಕರಣ

ಪರೇಶ್ ಮೇಸ್ತಾ ಹತ್ಯೆ ವಿರುದ್ಧವೇ ಹೋರಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪ್ರಕರಣದ ಆರೋಪಿಗೆ ವಕ್ಫ್ ಬೋರ್ಡ್‌ನಲ್ಲಿ ಸ್ಥಾನವನ್ನು ಕೊಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದಲೇ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದ್ದು, ಬಿಜೆಪಿಗೆ ಏನು ನೈತಿಕತೆ ಇದೆ ಎಂದು ವಿರೋಧ ಕೂಡಾ ವ್ಯಕ್ತವಾಗಿದೆ. ಅಜಾದ್ ಅಣ್ಣಿಗೇರಿ ನೇಮಕ ವಿಚಾರ ಸಂಬಂಧಿಸಿ ಬಿಜೆಪಿಯಲ್ಲೂ ವಿರೋಧಕ್ಕೆ ಕಾರಣವಾಗಿದ್ದು, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರ ಪಟ್ಟಿಯಲ್ಲಿ ಬೇರೆ ಪಕ್ಷದ ಅಜಾದ್ ಅಣ್ಣಿಗೇರಿ ಹಾಗೂ ಕೆ.ಹೆಚ್ ಕರೀಂ ಹಾಜಿ ಅವರ ಬದಲಿಗೆ ಪದಾಧಿಕಾರಿಗಳನ್ನ ಬದಲಿಸುವಂತೆ  ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಅನೀಸ್ ತಹಶೀಲ್ದಾರ್ ಮುಜರಾಯಿ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಪರೇಶ್ ಮೇಸ್ತ ಪ್ರಕರಣವನ್ನು ಇಟ್ಟುಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ, ಪ್ರಕರಣದ ಆರೋಪಿಗೆ ನೀಡಿರುವ ಸ್ಥಾನವನ್ನು ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.

click me!