ನನ್ನ ಸ್ನೇಹಿತೆಯನ್ನು 6 ಮಂದಿ ಪೊದೆಗೆ ಎಳೆದೊಯ್ದರು: ಮೈಸೂರು ರೇಪ್‌ ಘಟನೆ ಬಿಚ್ಚಿಟ್ಟ ಯುವಕ!

By Kannadaprabha NewsFirst Published Aug 28, 2021, 7:52 AM IST
Highlights

* ಮೈಸೂರು ರೇಪ್‌ ಘಟನೆ ಬಿಚ್ಚಿಟ್ಟ ಯುವಕ

* ನನ್ನ ಸ್ನೇಹಿತೆಯನ್ನು 6 ಮಂದಿ ಪೊದೆಗೆ ಎಳೆದೊಯ್ದರು

* ನನಗೆ ದೊಣ್ಣೆ, ಕಲ್ಲಿನಿಂದ ಹಲ್ಲೆ ನಡೆಸಿದರು

* ಪೊಲೀಸರ ಮುಂದೆ ಹೇಳಿಕೆ: ಮೂಲಗಳು

ಮೈಸೂರು(ಆ.28): ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಸ್ನೇಹಿತ ಅಂದು ನಡೆದ ಘೋರ ಕೃತ್ಯವನ್ನು ಪೊಲೀಸರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ‘ಸ್ನೇಹಿತೆ ಜತೆ ಇದ್ದಾಗ 6 ಮಂದಿ ಏಕಾಏಕಿ ಬಂದು ದೊಣ್ಣೆಗಳಿಂದ ಹಲ್ಲೆ ಮಾಡಿದರು. ಸ್ನೇಹಿತೆಯನ್ನು ಎಳೆದುಕೊಂಡು ಹೋದರು. ಆ ಪೈಕಿ ಒಬ್ಬಾತ ಕಲ್ಲಿನಿಂದ ನನ್ನ ತಲೆಗೆ ಹೊಡೆದಿದ್ದರಿಂದ ನಾನು ಪ್ರಜ್ಞೆ ಕಳೆದುಕೊಂಡೆ. ಪ್ರಜ್ಞೆ ಬಂದಾಗ ಸ್ನೇಹಿತೆ ಬಗ್ಗೆ ವಿಚಾರಿಸಿದೆ. ಆಗ ಆಕೆಯನ್ನು ಪೊದೆಯಿಂದ ಕರೆದುಕೊಂಡು ಬಂದರು’ ಎಂದು ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

"

‘ನನಗೆ ಪ್ರಜ್ಞೆ ಬಂದಾಗ ಆರೋಪಿಗಳು ಪಕ್ಕದಲ್ಲೇ ಬಂದು ನಿಂತಿದ್ದರು. ನನ್ನ ತಂದೆಗೆ ಕರೆ ಮಾಡಿ 3 ಲಕ್ಷ ರು. ಹಣ ತರಲು ಒತ್ತಾಯಿಸಿದರು’ ಎಂದೂ ಹೇಳಿಕೆ ನೀಡಿದ್ದಾನೆ. ತನ್ಮೂಲಕ ಕಾಮಾಂಧರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಹಣ ಸುಲಿಗೆ ಮಾಡಲೂ ಯತ್ನಿಸಿದ್ದರು ಎಂಬ ಸಂಗತಿ ಬಯಲಾಗಿದೆ.

ಯುವಕ ಹೇಳಿದ್ದೇನು?:

‘ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿಯ ಪ್ರದೇಶ ನಾನು ವಾಕಿಂಗ್‌ ಮಾಡುವ ಸ್ಥಳ. ಆ.24ರಂದು ಸಂಜೆ ತರಗತಿಗಳು ಮುಗಿದ ಬಳಿಕ ಬೈಕ್‌ನಲ್ಲಿ ಸ್ನೇಹಿತೆ ಜತೆ ಹೋಗಿ ಅಲ್ಲಿ ಕುಳಿತಿದ್ದೆ. ಏಕಾಏಕಿ 6 ಜನ ಅಲ್ಲಿಗೆ ಬಂದು ದೊಣ್ಣೆಗಳಿಂದ ಹಲ್ಲೆ ಮಾಡಿದರು. ನನ್ನ ಸ್ನೇಹಿತೆಯನ್ನು ಎಳೆದುಕೊಂಡು ಹೋದರು. ಗುಂಪಿನಲ್ಲಿದ್ದ ಒಬ್ಬ ಕಲ್ಲಿನಿಂದ ನನ್ನ ತಲೆಗೆ ಹೊಡೆದಿದ್ದರಿಂದ ನಾನು ಪ್ರಜ್ಞೆ ತಪ್ಪಿ ಅಲ್ಲೇ ಬಿದ್ದೆ. ಪ್ರಜ್ಞೆ ಬಂದಾಗ ಅವರು ಪಕ್ಕದಲ್ಲಿ ನಿಂತಿದ್ದರು. ನನ್ನ ತಂದೆಗೆ ಕರೆ ಮಾಡಿ .3 ಲಕ್ಷ ಹಣ ತರಿಸುವಂತೆ ಒತ್ತಾಯಿಸಿದರು. ನಾನು ನನ್ನ ಸ್ನೇಹಿತೆಯ ಬಗ್ಗೆ ಕೇಳಿದೆ. ಆಗ ಪಕ್ಕದ ಪೊದೆಯಿಂದ ಆಕೆಯನ್ನು ಕರೆದುಕೊಂಡು ಬಂದರು. ಆಕೆಯನ್ನು ನನ್ನ ಪಕ್ಕದಲ್ಲಿ ಕೂರಿಸಿದರು. ಆಕೆಗೂ ಗಾಯಗಳಾಗಿತ್ತು’ ಎಂದು ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ, ಈ ಅಂಶವು ಎಷ್ಟುಸತ್ಯ ಎಂಬುದು ಪೊಲೀಸರ ತನಿಖೆಯಿಂದ ಮಾತ್ರ ಸಾಬೀತಾಗಬೇಕಿದೆ.

ನಂತರ ಪೊದೆಯಿಂದ ಕರೆದು ತಂದರು...

ನನಗೆ ಪ್ರಜ್ಞೆ ಬಂದಾಗ ಅವರು ಪಕ್ಕದಲ್ಲಿ ನಿಂತಿದ್ದರು. ನನ್ನ ತಂದೆಗೆ ಕರೆ ಮಾಡಿ .3 ಲಕ್ಷ ಹಣ ತರಿಸುವಂತೆ ಒತ್ತಾಯಿಸಿದರು. ನಾನು ನನ್ನ ಸ್ನೇಹಿತೆಯ ಬಗ್ಗೆ ಕೇಳಿದೆ. ಆಗ ಪಕ್ಕದ ಪೊದೆಯಿಂದ ಆಕೆಯನ್ನು ಕರೆದುಕೊಂಡು ಬಂದರು.

- ಪೊಲೀಸರಿಗೆ ಸ್ನೇಹಿತ ನೀಡಿದ್ದಾನೆನ್ನಲಾದ ಹೇಳಿಕೆ

ರೇಪಿಸ್ಟ್‌ಗಳ ಪತ್ತೆಗೆ ಸಮಯ ಬೇಕು

ಗ್ಯಾಂಗ್‌ ರೇಪ್‌ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ. ಯಾವ ಹಂತದಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಲಾಗುವುದಿಲ್ಲ. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಪತ್ತೆಗೆ ಸ್ವಲ್ಪ ಸಮಯ ಬೇಕಿದೆ. ಸಂತ್ರಸ್ತೆಯು ಪೊಲೀಸರಿಗೆ ಹೇಳಿಕೆ ನೀಡಿಲ್ಲ.

- ಆರಗ ಜ್ಞಾನೇಂದ್ರ, ಗೃಹ ಸಚಿವ

click me!