ವೈದ್ಯೆಯ ಮೇಲೆ ರೇಪ್, ಕೊಲೆ: ಪೊಲೀಸರಿಗೇಕೆ ಸಂತ್ರಸ್ತೆ ಕರೆ ಮಾಡಲಿಲ್ಲ? ಮಂತ್ರಿ ವಿವಾದ!

By Web DeskFirst Published Nov 30, 2019, 11:51 AM IST
Highlights

ವೈದ್ಯೆ ಮೇಲೆ ಪೈಶಾಚಿಕ ಗ್ಯಾಂಗ್‌ರೇಪ್‌, ಕೊಲೆ! ‘ನಿರ್ಭಯಾ’ ನಂತರದ ಕಠಿಣ ಕಾನೂನಿಗೂ ಬಗ್ಗದ ಜನ| ಹೈದರಾಬಾದ್‌ ಸಮೀಪ ಹೇಯ ಕೃತ್ಯ| ದೇಶಾದ್ಯಂತ ಆಕ್ರೋಶ| ಸ್ಕೂಟರ್‌ ಪಂಕ್ಚರ್‌ ಹಾಕಿಸಿಕೊಡುವ ಸೋಗಲ್ಲಿ ಬಂದ ಟ್ರಕ್‌ ಚಾಲಕರು| ಸಮೀಪದ ಟೋಲ್‌ಪ್ಲಾಜಾದ ಕೋಣೆಗೆ ಕರೆದೊಯ್ದು ಗ್ಯಾಂಗ್‌ರೇಪ್‌| ಉಸಿರುಗಟ್ಟಿಸಿ ಕೊಂದು, ಮೃತದೇಹಕ್ಕೆ ಬೆಂಕಿ ಹಚ್ಚಿ ಪೈಶಾಚಿಕ ಕೃತ್ಯ| ಪೊಲೀಸರಿಗೇಕೆ ಸಂತ್ರಸ್ತೆ ಕರೆ ಮಾಡಲಿಲ್ಲ? ಮಂತ್ರಿ ವಿವಾದ!

ಹೈದರಾಬಾದ್[ನ.30]: ಪಶುವೈದ್ಯೆಯ ಅತ್ಯಾಚಾರ ಪ್ರಕರಣದ ಬಗ್ಗೆ ದೇಶದಲ್ಲಿ ಸಹಾನುಭೂತಿ ವ್ಯಕ್ತ ವಾಗುತ್ತಿದ್ದರೆ ತೆಲಂಗಾಣದ ಗೃಹ ಸಚಿವ ಮೊಹಮ್ಮದ್ ಮಹ ಮೂದ್ ಅಲಿ ಅವರು ಸಂತ್ರಸ್ತೆ ಯದ್ದೇ ತಪ್ಪು ಎಂಬರ್ಥದ ವಿವಾದಿತ ಹೇಳಿಕೆ ನೀಡಿದ್ದಾರೆ.

‘ಘಟನೆಯಿಂದ ದುಃಖವಾಗಿದೆ. ಆದರೆ ಸಂತ್ರಸ್ತೆ ‘ಭಯವಾಗು ತ್ತಿದೆ’ ಎಂದು ಘಟನೆ ಸಂಭವಿ ಸುವ ಮುನ್ನ ತನ್ನ ಸೋದರಿಗೆ ಕರೆ ಮಾಡಿದ್ದಾಳೆ. ಇದರ ಬದಲು ಆಕೆ ಪೊಲೀಸ್ ತುರ್ತು ಸಹಾ ಯವಾಣಿ ಸಂಖ್ಯೆ ೧೦೦ಕ್ಕೆ ಕರೆ ಮಾಡಬೇಕಿತ್ತು. ಆಗ ಆಕೆಯ ಜೀವ ಉಳಿಯಲು ಸಾಧ್ಯವಿತ್ತು’ ಎಂದು ಅಲಿ ಹೇಳಿದ್ದಾರೆ.

ಆಗಿದ್ದೇನು?:

ಸಂತ್ರಸ್ತ 27 ವರ್ಷದ ಪಶುವೈದ್ಯೆ ಶಂಶಾಬಾದ್‌ನಲ್ಲಿರುವ ತನ್ನ ಮನೆಯಿಂದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಗೆ ಬುಧವಾರ ಕರ್ತವ್ಯಕ್ಕೆ ದ್ವಿಚಕ್ರ ವಾಹನದ ಮೂಲಕ ತೆರಳಿದ್ದಳು. ಸಂಜೆ ಕರ್ತವ್ಯದಿಂದ ವಾಪಸು ಬರುವಾಗ ಗಚ್ಚಿಬೌಲಿಯಲ್ಲಿ ಚರ್ಮರೋಗ ತಜ್ಞರ ಭೇಟಿ ಮಾಡಬೇಕಿತ್ತು. ಹೀಗಾಗಿ ಸಂಜೆ 6ಕ್ಕೆ ತೊಂಡುಪಲ್ಲಿ ಎಂಬಲ್ಲಿನ ಟೋಲ್‌ ಪ್ಲಾಜಾದಲ್ಲಿ ತನ್ನ ದ್ವಿಚಕ್ರ ವಾಹನ ನಿಲ್ಲಿಸಿದ ಈಕೆ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ಗಚ್ಚಿಬೌಲಿಗೆ ತೆರಳಿದಳು. ಆದರೆ ರಾತ್ರಿ 9ರ ಸುಮಾರಿಗೆ ಟೋಲ್‌ ಪ್ಲಾಜಾಗೆ ಮರಳುವ ವೇಳೆ ಆಕೆಯ ಸ್ಕೂಟರ್‌ ಪಂಕ್ಚರ್‌ ಆಗಿತ್ತು.

ಈ ವೇಳೆ ಸ್ಥಳದಲ್ಲಿಯೇ ಇದ್ದ ಕೆಲ ಟ್ರಕ್‌ ಚಾಲಕರು ಹಾಗೂ ಕ್ಲೀನರ್‌ಗಳು, ‘ನಿಮ್ಮ ವಾಹನದ ಪಂಕ್ಚರ್‌ ಹಾಕಿಸಿಕೊಡುತ್ತೇವೆ’ ಎಂದು ಸಹಾಯಕ್ಕೆ ಧಾವಿಸಿದ್ದರು. ಈ ಪೈಕಿ ಒಬ್ಬ ಸ್ಕೂಟರ್‌ ಅನ್ನು ಸಮೀಪದ ಪಂಕ್ಚರ್‌ ಶಾಪ್‌ಗೆ ತೆಗೆದುಕೊಂಡು ಹೋಗಿದ್ದ. ಈ ವೇಳೆ, ತನ್ನ ಸೋದರಿಗೆ ಕರೆ ಮಾಡಿದ ಪಶುವೈದ್ಯೆ, ‘ನನ್ನ ಗಾಡಿ ಪಂಕ್ಚರ್‌ ಆಗಿದೆ. ಇಲ್ಲೊಬ್ಬರು ಬಂದು ವಾಹನವನ್ನು ಪಂಕ್ಚರ್‌ ಶಾಪ್‌ಗೆ ತೆಗೆದುಕೊಂಡು ಹೋಗಿದ್ದಾರೆ. ನನ್ನ ಸುತ್ತ ಕೆಲವು ಟ್ರಕ್‌ ಡ್ರೈವರ್‌ಗಳಿದ್ದು, ಅವರನ್ನು ನೋಡಿ ನನಗೆ ಭಯವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಳು. ಈ ವೇಳೆ ‘ಗಾಡಿಯನ್ನು ಟೋಲ್‌ ಪ್ಲಾಜಾದಲ್ಲೇ ಬಿಡು. ಬಾಡಿಗೆ ಕಾರಿನಲ್ಲಿ ಮನೆಗೆ ಮರಳು’ ಎಂದು ಸೂಚಿಸಿ ಸೋದರಿ ಫೋನ್‌ ಇಟ್ಟಳು. ಇದಾದ ಕೆಲವು ಹೊತ್ತಿನ ಬಳಿಕ ಮತ್ತೆ ಸೋದರಿ ಪಶುವೈದ್ಯೆಗೆ ಕರೆ ಮಾಡಿದಾಗ, ಆಕೆಯ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು.

ಇದೇ ಸಂದರ್ಭ ಬಳಸಿಕೊಂಡ ಟ್ರಕ್‌ ಚಾಲಕರು ಹಾಗೂ ಕ್ಲೀನರ್‌ಗಳು, ಪಶುವೈದ್ಯೆಯನ್ನು ಟೋಲ್‌ ಪ್ಲಾಜಾ ಸಮೀಪದ ನಿರ್ಜನ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು 25 ಕಿ.ಮೀ. ದೂರದ ಚಾತನಪಲ್ಲಿ ಎಂಬಲ್ಲಿಗೆ ಸಾಗಿಸಿ, ಅದನ್ನು ಶಾದ್‌ನಗರ ಪ್ರದೇಶದ ಹೈದರಾಬಾದ್‌-ಬೆಂಗಳೂರು ಹೈವೇ ಬ್ರಿಜ್‌ ಕೆಳಗೆ ಎಸೆದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ನಡುವೆ ಪಶುವೈದ್ಯೆ ನಾಪತ್ತೆಯಾಗಿದ್ದರಿಂದ ಆತಂಕಿತರಾದ ಆಕೆಯ ಕುಟುಂಬದವರು 11 ಗಂಟೆ ಸುಮಾರಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಪೊಲೀಸರು ಹುಡುಕಾಟ ನಡೆಸಿದಾಗ ಶಾದ್‌ನಗರ ಬ್ರಿಜ್‌ ಕೆಳಗೆ ಗುರುವಾರ ಸುಟ್ಟಮೃತದೇಹ ಪತ್ತೆಯಾಗಿದೆ.

ಉದ್ದೇಶಪೂರ್ವಕ ಪಂಕ್ಚರ್‌:

‘ಬಂಧಿತ ನಾಲ್ವರೂ ದುರುಳರು ಉದ್ದೇಶಪೂರ್ವಕವಾಗಿ ಪಶುವೈದ್ಯೆಯ ದ್ವಿಚಕ್ರವಾಹನವನ್ನು ಪಂಕ್ಚರ್‌ ಮಾಡಿದ್ದರು ಎಂದು ದೃಢಪಟ್ಟಿದೆ. ಬಳಿಕ ಸಹಾಯ ಮಾಡುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು’ ಎಂದು ಪೊಲೀಸರು ಹೇಳಿದ್ದಾರೆ.

ಸಿಸಿಟೀವಿಯಲ್ಲಿ ಸುಳಿವು:

‘ಟೋಲ್‌ನಾಕಾದ ಸಿಸಿಟೀವಿಯನ್ನು ಪೊಲೀಸರು ಪರಿಶೀಲಿಸಿದಾಗ, ಗಾಡಿ ರಿಪೇರಿ ಮಾಡಿಸಿಕೊಡುವ ನೆಪದಲ್ಲಿ ನಾಲ್ವರು ಬಂದಿದ್ದು ಕಂಡುಬಂದಿದೆ. ಇದರ ಜಾಡನ್ನು ಹಿಡಿದು ಪೊಲೀಸರು ಶೋಧಿಸಿದಾಗ ಇಬ್ಬರು ಟ್ರಕ್‌ ಚಾಲಕರು ಹಾಗೂ ಇಬ್ಬರು ಕ್ಲೀನರ್‌ಗಳನ್ನು ಬಂಧಿಸಿದ್ದಾರೆ. ಇವರೆಲ್ಲರೂ ಕೃತ್ಯ ಎಸಗಿದಾಗ ಪಾನಮತ್ತರಾಗಿದ್ದು ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿದ್ದು ದೃಢಪಟ್ಟಿದೆ’ ಎಂದು ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿ.ಸಿ. ಸಜ್ಜನರ ಹೇಳಿದರು.

click me!