ಬೆಳಗಾವಿ: ತಾಯಿ, ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಂದ ಪುತ್ರಿ

By Kannadaprabha NewsFirst Published Sep 30, 2022, 2:56 PM IST
Highlights

Belagavi News: ನಗರದ ಕ್ಯಾಂಪ್ ಪ್ರದೇಶದ ಮದ್ರಾಸ್ ಬೀದಿಯಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಸುಧೀರ್ ಕಾಂಬಳೆ ಹತ್ಯೆ ಪ್ರಕರಣವನ್ನು ಕ್ಯಾಂಪ್ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ

ಬೆಳಗಾವಿ (ಸೆ. 30): ಇದು ಸಾಕಿದ ಗಿಣಿಗಳೇ ಹದ್ದಾಗಿ ಕುಕ್ಕಿದ ಕತೆ! ಪತಿ ದುಬೈನಲ್ಲಿ ಕಷ್ಟಪಟ್ಟು ಕೈತುಂಬ ಗಳಿಸಿ ಕಳುಹಿಸುತ್ತಿದ್ದ ಲಕ್ಷ ಲಕ್ಷ ಹಣದಲ್ಲಿ ಐಸಾರಾಮಿ ಮತ್ತು ಶ್ವೇಚ್ಛಾಚಾರದ ಜೀವನ ನಡೆಸುತ್ತಿದ್ದ ಪತ್ನಿ ಮತ್ತು ಪುತ್ರಿ ಇಬ್ಬರೂ ತಮ್ಮ ಹೂರಣ ಬಯಲಾದಾಗ ಆತನನ್ನೇ ಹತ್ಯೆ ಮಾಡಿದ ಸಂಗತಿ ನಗರದ ಪೊಲೀಸರು ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಹೌದು, ಇಲ್ಲಿನ ಕ್ಯಾಂಪ್‌ ಪ್ರದೇಶದ ಮದ್ರಾಸ್‌ ಬೀದಿಯಲ್ಲಿ ನಡೆದಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಸುಧೀರ ಕಾಂಬಳೆ ಹತ್ಯೆ ಪ್ರಕರಣವನ್ನು (Murder) ಕ್ಯಾಂಪ್‌ ಪೊಲೀಸರು ಬೇಧಿಸಿದ್ದಾರೆ. ಹತ್ಯೆಗೀಡಾದ ಸುಧೀರ ಪಾಲಿಗೆ ಪತ್ನಿ, ಪುತ್ರಿ ಮತ್ತು ಪುತ್ರಿಯ ಪ್ರಿಯಕರನೇ ಹಂತಕರಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಹತ್ಯೆಗೀಡಾದ ಸುಧೀರ ಕಾಂಬಳೆ ಪತ್ನಿ ರೋಹಿಣಿ ಕಾಂಬಳೆ ಮತ್ತು ಪುತ್ರಿ ಸ್ನೇಹಾ ಕಾಂಬಳೆ ಹಾಗೂ ಆಕೆಯ ಸ್ನೇಹಿತ ಅಕ್ಷಯ್‌ ಮಹಾದೇವವಿಠಕರ ಬಂಧಿತ ಆರೋಪಿಗಳು. ಪುತ್ರಿ ಸ್ನೇಹಾಳ ಪ್ರೀತಿಗೆ ತಂದೆಯ ವಿರೋಧವಿತ್ತು. ಸುಧೀರ ಕಾಂಬಳೆ ದುಬೈನಲ್ಲಿ ಕೆಲಸಕ್ಕಿದ್ದ. ಆ ವೇಳೆ ಬೆಳಗಾವಿಯಲ್ಲಿ ತಾಯಿ, ಮಗಳು ಇಬ್ಬರೇ ವಾಸವಾಗಿದ್ದರು. ಇವರಿಬ್ಬರ ಜೀವನಕ್ಕೆ ಪತಿ ಸುಧೀರ ಪ್ರತಿ ತಿಂಗಳು ಲಕ್ಷಗಟ್ಟಲೇ ಹಣ ಕಳುಹಿಸಿಕೊಡುತ್ತಿದ್ದ. ಆ ವೇಳೆ ತಾಯಿ, ಮಗಳು ಬಂದ ಹಣದಲ್ಲಿ ಮಜಾ ಮಾಡಿಕೊಂಡು ಸ್ವತಂತ್ರವಾಗಿದ್ದರು. ಆದರೆ, ಅದ್ಯಾವ ಗಳಿಗೆಯಲ್ಲಿ ಮಹಾಮಾರಿ ಕೋವಿಡ್‌ ಬಂತು ನೋಡಿ, ಸುಧೀರ ದುಬೈನಲ್ಲಿದ್ದ ಕೆಲಸ ಕಳೆದುಕೊಂಡು ಮರಳಿ ಬೆಳಗಾವಿಗೆ ಬಂದ. ಆದರೆ, ಇಲ್ಲಿ ಪತ್ನಿ, ಪುತ್ರಿಯ ನಡುವಳಿಕೆ, ಅವರ ಕಾರ್ಯಚಟುವಟಿಕೆಗಳನ್ನು ಕಂಡು ಬೇಸತ್ತು ಅವರಿಬ್ಬರಿಗೂ ಕಡಿವಾಣ ಹಾಕಿದ.

ಇನ್ನು ಪತ್ನಿ ಸ್ನೇಹಾ ಪುಣೆ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದೂ ಸುಧೀರ್‌ ಕೆಂಗಣ್ಣಿಗೆ ಗುರಿಯಾಗಿತ್ತು. ಹಾಗಾಗಿ, ಬೆಳಗಾವಿಯಲ್ಲಿಯೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿದ್ದರೂ ಪುಣೆಯಲ್ಲೇಕೇ ವ್ಯಾಸಂಗ ಮಾಡುತ್ತಿದ್ದೀಯಾ? ಬೆಳಗಾವಿಯಲ್ಲೇ ವ್ಯಾಸಂಗ ಮಾಡು ಎಂದು ಸೂಚಿಸಿದ್ದ. ದಿನಗಳೆದಂತೆ ತಾಯಿ, ಮಗಳ ಎಲ್ಲ ಶ್ವೇಚ್ಛಾಚಾರದ ಚಟುವಟಿಕೆಗಳಿಗೆ ನಿರ್ಬಂಧ ಹಾಕಿದ್ದ. ತಂದೆ ಹಾಕುತ್ತಿದ್ದ ನಿರ್ಬಂಧಗಳಿಂದ ಪುತ್ರಿ ಸ್ನೇಹಾ ರೋಸಿಹೋಗಿದ್ದಳು. ತನ್ನ ಎಲ್ಲ ಕಾರ್ಯಚಟುವಟಿಕೆಗಳಿಗೂ ತಂದೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗೆಳತಿಗೆ ಗುಂಡಿಕ್ಕಿ ಚಲಿಸುತ್ತಿದ್ದ ವಾಹನದ ಕೆಳಗೆ ಹಾರಿದ ಭಗ್ನಪ್ರೇಮಿ: ಇಬ್ಬರೂ ಸಾವು

ತಂದೆಯನ್ನೇ ಹತ್ಯೆ ಮಾಡಲು ಯೋಜನೆ: ಹೀಗಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದು ಹೇಳಿ, ತಂದೆಯನ್ನೇ ಹತ್ಯೆ ಮಾಡಲು ಯೋಜನೆ ರೂಪಿಸಿದರು. ಇದಕ್ಕೆ ತಾಯಿ ಸಾಥ್‌ ನೀಡಿದಳು. ಪುತ್ರಿಯ ಪ್ರಿಯಕರ, ಪುಣೆಯ ಅಕ್ಷಯ ಮಹಾದೇವ ವಿಠಕರ ಜೊತೆಗೂಡಿ, ತಮ್ಮ ಎಲ್ಲ ಕಾರ್ಯಚಟುವಟಿಕೆಗೆ ಅಡ್ಡಿಯಾಗಿರುವ ತಂದೆಯನ್ನೇ ಮುಗಿಸಿಬಿಡುವ ಕುರಿತು ಚರ್ಚಿಸಿ, ಹತ್ಯೆ ಎಲ್ಲಿ ಮಾಡಬೇಕು, ಯಾವಾಗ ಮಾಡಬೇಕು ಎನ್ನುವುದರ ಬಗ್ಗೆ ಮೊದಲೇ ಪ್ಲಾನ್‌ ರೂಪಿಸಿದ್ದರು. ಆದರೆ, ಎಲ್ಲಿ ನಾವು ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂದು ಪೊಲೀಸರ ಕೈಗೆ ಸಿಗದಂತೆ ಹತ್ಯೆ ಮಾಡುವ ಕುರಿತು ತಾಯಿ, ಮಗಳು ಮತ್ತು ಮಗಳ ಪ್ರಿಯಕರ ಮೂವರು ಹಂತಕರು ಸೇರಿ ವಿ.ರವಿಚಂದ್ರನ ಮತ್ತು ನವ್ಯಾ ನಾಯರ್‌ ಅವರ ಪ್ರಮುಖ ಪಾತ್ರದಲ್ಲಿರುವ ದೃಶ್ಯ ಕನ್ನಡ ಚಲನಚಿತ್ರವನ್ನು ವೀಕ್ಷಿಸಿದ್ದಾರೆ.

ಬಳಿಕ ತಾವು ಅಂದುಕೊಂಡಂತೆಯೇ ಕ್ಯಾಂಪ್‌ ಮದ್ರಾಸ್‌ ಬೀದಿಯಲ್ಲಿ ಸುಧೀರ ಕಾಂಬಳೆ ಮೇಲೆ ಮಾರಕಾಸ್ತ್ರದಿಂದ ಥಳಿಸಲಾಗಿದೆ. ಈ ವೇಳೆ ಆತ ಕೂಡ ಪ್ರತಿಯಾಗಿ ದಾಳಿ ನಡೆಸಿರುವುದರಿಂದ ಆರೋಪಿ ಅಕ್ಷಯ ವಿಠಕರ ಕೂಡ ಗಾಯಗೊಂಡಿದ್ದಾನೆ. ಆದರೆ, ಕೊಲೆ ನಂತರ ಆತ ಪುಣೆಗೆ ತೆರಳಿ, ಅಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದ. ಆತ ಆಸ್ಪತ್ರೆಯಿಂದ ಡಿಸ್‌ಚಾರ್‌ಜ್ ಆದ ಮೇಲೆ ಪೊಲೀಸರು ವಿಚಾರಣೆ ನಡೆಸಿದ ವೇಳೆ, ಆತನ ಪ್ರೇಮ ಕಹಾನಿ ಜೊತೆಗೂ ಹತ್ಯೆ ಕಹಾನಿ ಕೂಡ ಬಹಿರಂಗವಾಗುತ್ತದೆ. ಅಲ್ಲದೇ, ಆತ ವಿವಾಹಿತ, ಇಬ್ಬರು ಮಕ್ಕಳ ತಂದೆಯೂ ಆಗಿದ್ದಾನೆ.

ಇಷ್ಟೇಲ್ಲಾ ಘಟನೆಗಳು ಗೊತ್ತಿದ್ದರೂ ತಮಗೆ ಏನೂ ಗೊತ್ತಿಲ್ಲ. ಯಾರು ಕೊಲೆ ಮಾಡಿದ್ದಾರೆ ಎಂದು ತಾಯಿ, ಮಗಳು ನಾಟಕವಾಡಿದ್ದರು. ದೃಶ್ಯ ಸಿನಿಮಿಯ ಮಾದರಿಯಲ್ಲಿ ಪತಿಯನ್ನೇ ಹತ್ಯೆ ಮಾಡಿದ್ದರೂ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಈ ಕುರಿತು ಕ್ಯಾಂಪ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!