Bengaluru Crime News: ನಿವೃತ್ತ ಶಿಕ್ಷಕಿಯ ಉಸಿರುಗಟ್ಟಿಸಿ ಹತ್ಯೆ: ಇಬ್ಬರ ಬಂಧನ

By Manjunath NayakFirst Published Sep 17, 2022, 4:15 PM IST
Highlights

Bengaluru Retired school teacher Murder: ವಿದ್ಯಾರಣ್ಯಪುರ  ವ್ಯಾಪ್ತಿಯಲ್ಲಿ ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ ನಿವೃತ್ತಿ ಶಿಕ್ಷಕಿಯೊಬ್ಬರನ್ನು  ಕೈ-ಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. 

ಬೆಂಗಳೂರು (ಸೆ. 17): ಬೆಂಗಳೂರಿನ ವಿದ್ಯಾರಣ್ಯಪುರ (Vidyaranyapura) ವ್ಯಾಪ್ತಿಯಲ್ಲಿ ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ ನಿವೃತ್ತಿ ಶಿಕ್ಷಕಿಯೊಬ್ಬರನ್ನು (Retired School Teacher) ಕೈ-ಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಂದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ನಾಗೇಂದ್ರ (31),ಕಾಮರಾಜು(28) ಬಂಧಿತ ಆರೋಪಿಗಳು. ಬಂಧಿತರಿಂದ 68ಗ್ರಾಂ ತೂಕದ ಚಿನ್ನಾಭರಣ, ಬೈಕ್ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಿ ವಿದ್ಯಾರಣ್ಯಪುರ ಠಾಣೆ ಪೊಲೀಸರು  ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 

ಇನ್ನು ಆರೋಪಿ ನಾಗೇಂದ್ರ  ಒಂದು ವರ್ಷದಿಂದ ಮೃತ ಪ್ರಸನ್ನ ಕುಮಾರಿ ಮನೆ ಪಕ್ಕದಲ್ಲೆ ಬಾಡಿಗೆ ಮಾನೆಯಲ್ಲಿ ವಾಸವಿದ್ದ. ಕೋಳಿ ಡಿಸ್ಟ್ರಿಬ್ಯೂಟ್ ಕೆಲಸ ಮಾಡುತ್ತಿದ್ದ ನಾಗೇಂದ್ರ 1 ತಿಂಗಳಿನಿಂದ ಪ್ರಸನ್ನ ಕುಮಾರಿ ಚಲನವಲನವನ್ನ  ಗಮನಿಸಿದ್ದ. ಆಕೆ ಒಬ್ಬೊಂಟಿಯಾಗಿರುವುದನ್ನ ಗಮನಸಿದ್ದ ನಾಗೇಂದ್ರ ಬಳಿಕ ಕೊಲೆ ಸ್ಕೆಚ್‌ ಹಾಕಿದ್ದ. 

ಕೈ-ಕಾಲು ಕಟ್ಟಿಹಾಕಿ ಕೊಲೆ: ಅಂಬಾ ಭವಾನಿ ಲೇಔಟ್‌ ನಿವಾಸಿ ಪ್ರಸನ್ನ ಕುಮಾರಿ (65) ಮೃತ ದುರ್ದೈವಿ. ಮೃತರ ಮನೆಗೆ ಸಂಜೆ 5ರ ಸುಮಾರಿಗೆ ಆಗಮಿಸಿದ್ದ ಆರೋಪಿಗಳು, ಪ್ರಸನ್ನಕುಮಾರಿ ಅವರ ಕೈ-ಕಾಲು ಕಟ್ಟಿಹಾಕಿ ಕೊಂದು ಪರಾರಿಯಾಗಿದ್ದರು. ಕೆಲ ಹೊತ್ತಿನ ಬಳಿಕ ಮೃತರ ಮನೆಗೆ ನೆರೆಹೊರೆಯವರು ತೆರಳಿದಾಗ ಘಟನೆ ಬೆಳಕಿಗೆ ಬಂದಿತ್ತು. 

ಮೃತರು ಮೂಲತಃ ಆಂಧ್ರಪ್ರದೇಶದ ವಿಜಯವಾಡದವರಾಗಿದ್ದು, ಕೆಲ ತಿಂಗಳಿಂದ ವಿದ್ಯಾರಣ್ಯಪುರ ಸಮೀಪದ ಅಂಬಾ ಭವಾನಿ ಲೇಔಟ್‌ನಲ್ಲಿ ನೆಲೆಸಿದ್ದರು. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದ ಪ್ರಸನ್ನ ಕುಮಾರಿ ಅವರು, ತಮ್ಮ ಪತಿ ನಿಧನರಾದ ಬಳಿಕ ಕೆಲ ವರ್ಷಗಳು ಮೈಸೂರಿನಲ್ಲಿ ನೆಲೆಸಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಮೈಸೂರು ತೊರೆದು ನಗರಕ್ಕೆ ಬಂದ ಅವರು, ತಮ್ಮ ಪರಿಚಿತರ ಮನೆ ಬಾಡಿಗೆ ಪಡೆದು ಏಕಾಂಗಿಯಾಗಿ ವಾಸವಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂಟಿ ಮಹಿಳೆ ಮನೆಗೆ ನುಗ್ಗಿದ ಕಳ್ಳರು; ಕೈಕಾಲು ಕಟ್ಟಿ ಚಿನ್ನಾಭರಣ ದೋಚಿ ಎಸ್ಕೆಪ್

ಪ್ರತಿದಿನ ಸಂಜೆ ವಾಯು ವಿಹಾರಕ್ಕೆ ಅವರು ತೆರಳುತ್ತಿದ್ದರು. ಆದರೆ ಕೊಲೆಯಾದ ದಿನ ರಾತ್ರಿ 8 ಗಂಟೆಯಾದರೂ ಅವರು ಹೊರ ಬಾರದೆ ಹೋದಾಗ ಅಕ್ಕಪಕ್ಕದವರಿಗೆ ಅನುಮಾನ ಬಂದಿದೆ. ಆಗ ಮೃತರ ಮನೆಗೆ ತೆರಳಿದಾಗ ಪ್ರಜ್ಞಾಹೀನಾರಾಗಿ ಬಾಯಿಗೆ ಬಟ್ಟೆ ತುರಿಕಿದ ಸ್ಥಿತಿಯಲ್ಲಿ ಪ್ರಸನ್ನಕುಮಾರಿ ಅವರನ್ನು ನೋಡಿ ನೆರೆಮನೆಯ ಮಹಿಳೆ ಗಾಬರಿಕೊಂಡಿದ್ದಾರೆ. ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಅವರು ಮಾಹಿತಿ ನೀಡಿದ್ದಾರೆ.

ನಿವೃತ್ತ ಶಿಕ್ಷಕಿಯ ಹತ್ಯೆಯಲ್ಲಿ ಮೃತರ ಪರಿಚಿತರ ಕೈವಾಡದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮೃತರಿಗೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿ ಇದ್ದು, ಅವರಿಗೆ ಮಕ್ಕಳಿಲ್ಲದ ಕಾರಣ ಆಸ್ತಿ ವಿಚಾರಕ್ಕೆ ಹತ್ಯೆ ನಡೆದಿರಲೂಬಹುದು. ಹೀಗಾಗಿ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

click me!