ಮಂಗಳೂರಿನಲ್ಲಿ ಯುವಕನ ಭೀಕರ ಹತ್ಯೆ: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮತ್ತೊಂದು ಮರ್ಡರ್‌

By Suvarna NewsFirst Published Jul 28, 2022, 9:23 PM IST
Highlights

ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಈಗ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಈ ನಡುವೆ ಯುವಕನಿಗೆ ದುಷ್ಕರ್ಮಿಗಳ ತಂಡ ಚಾಕು ಇರಿದು ಕೊಂದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.

ಮಂಗಳೂರು (ಜು. 28): ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಈಗ ದೇಶಾದ್ಯಂತ ಭಾರೀ ಸದ್ದು ಮಾಡಿದೆ.ಈ ನಡುವೆ ಯುವಕನಿಗೆ ದುಷ್ಕರ್ಮಿಗಳ ತಂಡ ಚಾಕು ಇರಿದು ಕೊಂದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ. ಪ್ರವೀಣ ಹತ್ಯೆಗೆ ಬೆಚ್ಚಿ ಬಿದ್ದಿದ್ದ ಕರಾವಳಿಯಲ್ಲಿ ಈಗ ಮತ್ತೆ ನೆತ್ತರು ಹರಿದಿದೆ. ಸುರತ್ಕಲ್ (Surathkal) ‌ಮಂಗಲಪೇಟೆಯಲ್ಲಿ ಫಾಝಿಲ್‌ಗೆ  ದುಷ್ಕರ್ಮಿಗಳ ಚಾಕು ಇರಿದಿದ್ದಾರೆ. ಚಾಕು ಇರಿತದ ಬಳಿಕ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವನ್ನಪ್ಪಿದ್ದಾನೆ. ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಲ್ಲಿ ಇದ್ದಾಗಲೇ ಮತ್ತೊಂದು ಹತ್ಯೆಯಾಗಿದೆ. 

ಅಂಗಡಿಗೆ ನುಗ್ಗಿ ಫಾಜಿಲ್​ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆಸಲಾಗಿದ್ದು ಸುರತ್ಕಲ್ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂರು ಜನರ ಗುಂಪು ಯುವಕನ್ನು ಅಟ್ಟಾಡಿಸಿ ಕೊಂದಿದ್ದಾರೆ. ಸಂಜೆ ಸುಮಾರು 6 ಗಂಟೆಗೆ ಈ ಘಟನೆ ನಡೆದಿದೆ. ಸ್ನೇಹಿತನ ಜತೆ ಮಾತನಾಡುತ್ತಿದ್ದ ವೇಳೆ ಫಾಜಿಲ್ ಮೇಲೆ ಹಲ್ಲೆ ಮಾಡಲಾಗಿದೆ. ಪ್ರವೀಣ್‌ ಹತ್ಯೆ ಬೆನ್ನಲ್ಲೇ ನಡೆದ ಮತ್ತೊಂದು ಹತ್ಯೆಗೆ ಮಂಗಳೂರು ಬೆಚ್ಚಿಬಿದ್ದಿದೆ. ಇನ್ನೂ ಈ ಘಟನೆ ಬೆನ್ನಲ್ಲೇ ಪೊಲೀಸರು ಸುರತ್ಕಲ್‌ನಲ್ಲಿ ಅಂಗಡಿ, ಮುಂಗಟ್ಟು ಮುಚ್ಚಿಸಿದ್ದಾರೆ. ಮಂಗಳೂರು ನಗರದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. 

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಫಾಜಿಲ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಫ್ರೆಂಡ್ ಜತೆ ಮಾತನಾಡಿ ಹೊರಬಂದ ಫಾಜಿಲ್ ಮೇಲೆ  ಕಾರಿನಲ್ಲಿ ಬಂದ ದುಷ್ಕರ್ಮಿಗಳ ಅಟ್ಯಾಕ್ ಮಾಡಿದ್ದಾರೆ.  ಮಾರಕಾಸ್ತ್ರಗಳಿಂದ ಕೊಚ್ಚಿ ಫಾಜಿಲ್ ಭೀಕರ ಕೊಲೆ ಮಾಡಲಾಗಿದೆ. 

ಬಿಜೆಪಿ ಕಾರ‍್ಯಕರ್ತನ ಹತ್ಯೆ ವಿರುದ್ಧ ಭುಗಿಲೆದ್ದ ಆಕ್ರೋಶ: ಇನ್ನು ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಗೆ ಹಿಂದೂ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಪ್ರವೀಣ್‌ ಪಾರ್ಥಿವ ಶರೀರದ ಮೆರವಣಿಗೆ, ಅಂತಿಮ ದರ್ಶನ ವೇಳೆ ಮೂರು ಅಂಗಡಿ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಲ್ಲದೆ, ಸರ್ಕಾರಿ ಬಸ್ಸೊಂದರ ಗಾಜಿಗೂ ಹಾನಿ ಮಾಡಿದ್ದಾರೆ. ದ್ವಿಚಕ್ರ ವಾಹನವೊಂದನ್ನು ಪುಡಿ ಪುಡಿ ಮಾಡಿದ್ದು, ಉದ್ರಿಕ್ತರ ನಿಯಂತ್ರಣ ವೇಳೆ ಪೊಲೀಸರು ನಡೆಸಿದ ಲಾಠಿ ಚಾಜ್‌ರ್‍ನಲ್ಲಿ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ.

ಇದೇ ವೇಳೆ, ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿರುವುದಕ್ಕೆ ಇದೀಗ ಪಕ್ಷದ ನಾಯಕರ ಮೇಲೆಯೇ ಕಾರ್ಯಕರ್ತರು ತಿರುಗಿ ಬಿದ್ದಿದ್ದು, ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌, ಸಚಿವರಾದ ಸುನಿಲ್‌ ಕುಮಾರ್‌, ಅಂಗಾರ ಅವರಿಗೆ ಧಿಕ್ಕಾರ ಕೂಗಿ ಬಿಸಿ ಮುಟ್ಟಿಸಿದ್ದಾರೆ. ಕಟೀಲ್‌ ಕಾರಿಗೆ ಘೇರಾವ್‌ ಹಾಕಿ ಪಲ್ಟಿಮಾಡಲೆತ್ನಿಸಿದ ಘಟನೆಯೂ ನಡೆದಿದೆ. 

click me!