ಉಡುಪಿ ನಾಲ್ವರ ಬರ್ಬರ ಹತ್ಯೆ ಪ್ರಕರಣ: ವರ್ಲ್ಡ್ ರೆಕಾರ್ಡ್ ಎಂದು ಬರೆದು ವಿಕೃತಿ ಮೆರೆದ ಹಿಂದೂ ಮಂತ್ರ ಪೇಜ್!

By Govindaraj SFirst Published Nov 17, 2023, 12:16 PM IST
Highlights

ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯನ್ನು ಸಂಭ್ರಮಿಸಿದ ಹಿಂದೂ ಮಂತ್ರ ಎಂಬ ಇನ್​ಸ್ಟಾಗ್ರಾಮ್ ಪೇಜ್ ವಿರುದ್ಧ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಉಡುಪಿ (ನ.17): ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯನ್ನು ಸಂಭ್ರಮಿಸಿದ ಹಿಂದೂ ಮಂತ್ರ ಎಂಬ ಇನ್​ಸ್ಟಾಗ್ರಾಮ್ ಪೇಜ್ ವಿರುದ್ಧ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಂತಕ ಪ್ರವೀಣ್ ಅರುಣ್ ಚೌಗುಲೆ ಫೋಟೋಗೆ ಕಿರೀಟ ತೊಡಿಸಿ ಹಿಂದೂ ಮಂತ್ರ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡುವ ಮುಖಾಂತರ ಸ್ಟೇಟಸ್ ಹಾಕಲಾಗಿದೆ. 15 ನಿಮಿಷದಲ್ಲಿ 4 ಕೊಲೆ  ಇದು ವರ್ಲ್ಡ್ ರೆಕಾರ್ಡ್ ಎಂದು ಬರೆದು ವಿಕೃತಿ ಮೆರೆದಿದ್ದಾರೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಕ್ರಮ ಕೈಗೊಂಡ ಉಡುಪಿ ಪೋಲಿಸರು, ಪೋಸ್ಟ್ ಹಾಕಿದವರ ವಿರುದ್ದ ಸೆನ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು ಮಾಡಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಹಿಂದೂ ಮಂತ್ರ ಖಾತೆಯಲ್ಲಿ ಆ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ, ಏರ್ ಇಂಡಿಯಾ ಸಿಬ್ಬಂದಿ ಪ್ರವೀಣ್ ಅರುಣ್ ಚೌಗುಲೆ (39)ಗೆ ಸಹೋದ್ಯೋಗಿ ಗಗನಸಖಿ ಐನಾಝ್ ಮೇಲಿನ ಅಸೂಯೆ ಮತ್ತು ದ್ವೇಷವೇ ಈ ಕೊಲೆಗೆ ಕಾರಣ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ. ಕೊಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ನ.14ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ನ.15ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 

ಉಡುಪಿಯಲ್ಲಿ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್‌ ಚೌಗಲೆ ಪೊಲೀಸ್‌ ವಿಚಾರಣೆಯಲ್ಲಿ ಹೇಳಿದ್ದೇನು?

ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿತ್ತು. ಅದರಂತೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿ, ಮಹಜರು ಕಾರ್ಯ ನಡೆಸಿದ್ದಾರೆ. ಈತ ಈಗಾಗಲೇ ಕೊಲೆಗೆ ಎರಡು, ಮೂರು ಕಾರಣಗಳನ್ನು ತಿಳಿಸಿದ್ದು, ಒಟ್ಟಾರೆಯಾಗಿ ಆತ ಐನಾಝ್‌ಳನ್ನು ಅತಿಯಾಗಿ ಹಚ್ಚಿಕೊಂಡು ಆಕೆ ತನ್ನ ನಿಯಂತ್ರಣದಲ್ಲಿಯೇ ಇರಬೇಕೆಂಬ ಮನಸ್ಥಿತಿಯಿಂದ ಈ ಕೊಲೆ ಮಾಡಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ. ಸಾಕಷ್ಟು ಸಾಕ್ಷ್ಯ ಸಂಗ್ರಹ ಹಾಗೂ ಮಾಹಿತಿಗಳನ್ನು ಪಡೆಯುವ ನಿಟ್ಟಿನಲ್ಲಿ ಪೊಲೀಸರು ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆತ ಕೊಲೆಯ ಸಂದರ್ಭ ಡ್ರಗ್ಸ್ ಸೇವಿಸಿದ್ದಾನೆಯೇ ಅಥವಾ ಆತ ಡ್ರಗ್ಸ್ ವ್ಯಸನಿಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ ಚೂರಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.

click me!