ಕಾರ್ಮಿಕರು ಚೆನ್ನಾಗಿದ್ದರೆ ಅದೇ ಹಬ್ಬ: ವಿನೋದ್‌ ರಾಜ್

By Suvarna NewsFirst Published Jul 31, 2020, 5:20 PM IST
Highlights

ಒಂದಷ್ಟು ಕಾಲದಿಂದ ಚಿತ್ರರಂಗದಿಂದ ದೂರ ಇರುವ ಕಲಾವಿದರಲ್ಲಿ ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಪ್ರಮುಖರು. ಆದರೆ ಅವರು ತಾವಾಗಿ ದೂರದಲ್ಲಿದ್ದರೂ  ಚಂದನವನ ಎಂದಿಗೂ ಮರೆಯದಂಥ ಚಿತ್ರಗಳನ್ನು ಕೊಟ್ಟವರು. ಹಾಗಾಗಿಯೇ ನಟಿಯಾಗಿ ಲೀಲಾವತಿಯವರನ್ನು ಮತ್ತು ನೃತ್ಯಪಟುವಾಗಿ ವಿನೋದ್ ರಾಜ್ ಅವರನ್ನು ಪಕ್ಕಕ್ಕೆ ಸರಿಸಿ ಕನ್ನಡ ಸಿನಿಮಾ  ಇತಿಹಾಸ ಬರೆಯಲು ಸಾಧ್ಯವೇ ಇಲ್ಲ. ಇಂದು ಚಿತ್ರರಂಗ ಸೇರಿದಂತೆ ಜಗತ್ತೇ ಕೊರೊನಾ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ತಾಯಿ ಮಗನ ಆರೋಗ್ಯ ಮತ್ತು ಜೀವನ ಶೈಲಿಯ ಹೇಗಿದೆ ಎಂದು ವಿಚಾರಿಸಿದಾಗ ಸುವರ್ಣ ನ್ಯೂಸ್.ಕಾಮ್ ಗೆ ವಿನೋದ್ ರಾಜ್ ನೀಡಿರುವ ವಿಶೇಷ ಮಾಹಿತಿಗಳು ಇಲ್ಲಿವೆ.
 

ಒಂದಷ್ಟು ಕಾಲದಿಂದ ಚಿತ್ರರಂಗದಿಂದ ದೂರ ಇರುವ ಕಲಾವಿದರಲ್ಲಿ ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಪ್ರಮುಖರು. ಆದರೆ ಅವರು ತಾವಾಗಿ ದೂರದಲ್ಲಿದ್ದರೂ  ಚಂದನವನ ಎಂದಿಗೂ ಮರೆಯದಂಥ ಚಿತ್ರಗಳನ್ನು ಕೊಟ್ಟವರು. ಹಾಗಾಗಿಯೇ ನಟಿಯಾಗಿ ಲೀಲಾವತಿಯವರನ್ನು ಮತ್ತು ನೃತ್ಯಪಟುವಾಗಿ ವಿನೋದ್ ರಾಜ್ ಅವರನ್ನು ಪಕ್ಕಕ್ಕೆ ಸರಿಸಿ ಕನ್ನಡ ಸಿನಿಮಾ  ಇತಿಹಾಸ ಬರೆಯಲು ಸಾಧ್ಯವೇ ಇಲ್ಲ. ಇಂದು ಚಿತ್ರರಂಗ ಸೇರಿದಂತೆ ಜಗತ್ತೇ ಕೊರೊನಾ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ತಾಯಿ ಮಗನ ಆರೋಗ್ಯ ಮತ್ತು ಜೀವನ ಶೈಲಿಯ ಹೇಗಿದೆ ಎಂದು ವಿಚಾರಿಸಿದಾಗ ಸುವರ್ಣ ನ್ಯೂಸ್.ಕಾಮ್ ಗೆ ವಿನೋದ್ ರಾಜ್ ನೀಡಿರುವ ವಿಶೇಷ ಮಾಹಿತಿಗಳು ಇಲ್ಲಿವೆ.

ಶಶಿಕರ ಪಾತೂರು

ಕೊರೊನಾ ಕಾಲದಲ್ಲಿ ಹೇಗೆ ಸಾಗಿದೆ ನಿಮ್ಮ ಜೀವನ?

ನಾವು ಇರುವುದು ನೆಲಮಂಗಲದಲ್ಲಿ. ನಾವು ಇಲ್ಲಿನ ತೋಟ ಮತ್ತು ಬೀದಿಗೆ ಔಷಧಿ ಚಿಮುಕಿಸುವ ಮೂಲಕ ಪರಿಸರವನ್ನು ಸ್ಯಾನಿಟೈಸ್ ಮಾಡುವ ಕೆಲಸ ನಡೆಸಿದ್ದೇವೆ. ಯಾಕೆಂದರೆ ನೆಲಮಂಗಲ ಬಾಣಸವಾಡಿಯಲ್ಲಿ ಒಂದಷ್ಟು ಪ್ರಕರಣಗಳು ಆಗಿವೆ. ಪೂರ್ತಿ ರಸ್ತೆಗೆ ಮದ್ದು ಔಷಧಿ ಹೊಡೆದಿದ್ದೇವೆ. ಹಿಂದೆಯೂ ಒಮ್ಮೆ ಔಷಧಿ ಹಾಕಿದ್ದೇವೆ. ಮಳೆ ಬಾರದು ಎನ್ನುವ ಸಮಯ ಖಚಿತ ಪಡಿಸಿಕೊಂಡು ಸ್ಪ್ರೇ ಮಾಡುತ್ತಿದ್ದೇವೆ. 

ಲಾಕ್ಡೌನ್ ದಿನಗಳಲ್ಲಿ ಬೆಳೆನಾಶವಾಗುವ ಪರಿಸ್ಥಿತಿ ಎದುರಿಸಿದಿರಾ?

ಹಾಗೇನಿಲ್ಲ. ಲಾಕ್ಡೌನ್ ಸಮಯದಲ್ಲಿ ತರಕಾರಿಗಳನ್ನು ಕೊಂಡೊಯ್ದು ಮಾರುತ್ತಿದ್ದೆವು. ಇಲ್ಲಿ ಆ ದಿನಗಳಲ್ಲಿ ಸ್ಥಳೀಯ ವ್ಯಾಪಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಬೆಳಿಗ್ಗೆ 6 ಗಂಟೆಗೆ ಎದ್ದು ಅರ್ಧ ಗಂಟೆಯಲ್ಲಿ ಮಾರುಕಟ್ಟೆ ತಲುಪಿದರೆ ಎಲ್ಲಾ ತರಕಾರಿ ಮಾರಾಟವಾಗುತ್ತಿತ್ತು. ತೆಂಗಿನಕಾಯಿ ಮತ್ತು ಅಡಿಕೆ ಮಾತ್ರ ಜಿಲ್ಲೆಯಿಂದ ಜಿಲ್ಲೆಗೆ ಸಾಗಿಸುವುದು ತೊಂದರೆಯಾಯಿತು. ಹಾಗಾಗಿ ಅವುಗಳನ್ನು ವಾಪಾಸು ಕರೆಸಿಕೊಂಡು ಲಾಕ್ಡೌನ್ ಬಳಿಕ ಮತ್ತೆ ಕಳಿಸಬೇಕಾಯಿತು. ನಾನು ನನ್ನ ಸಮಯವನ್ನು ತೋಟದಲ್ಲಿ ದುಡಿಯುವ ಮೂಲಕ ಕಳೆದೆ. ನನ್ನ ಜೊತೆ ನಮ್ಮ ಜನ ಕೂಡಾ ಕೆಲಸ ಮಾಡ್ತಾರೆ.  ಇದು ಹಳ್ಳಿಯಾಗಿರುವುದರಿಂದ  ಬೆಂಗಳೂರಲ್ಲಿ ಹರಡಿರುವ  ಮಟ್ಟದಲ್ಲಿ ಕೊರೊನಾ ಬಂದಿರಲಿಲ್ಲ. ಆದರೂ ನಾನು ಕೂಡ ಟೆಂಪರೇಚರ್ ಚೆಕ್ ಮಾಡುವ ಮೆಷಿನ್ ತಂದಿಟ್ಟುಕೊಂಡಿದ್ದೆ. ಟೆಂಪರೇಚರ್ ಚೆಕ್ ಮಾಡಿಯೇ ಕೆಲಸ ಮಾಡಿಸುತ್ತಿದ್ದೆ. ನಾನು ಚೆನ್ನಾಗಿ ದುಡಿತೀನಿ. ಇಂದಿಗೂ ನಮ್ಮಮ್ಮನೇ ಅಡುಗೆ ಮಾಡ್ತಾರೆ. ಜೊತೆಗೆ ತೋಟದ ವಿಷಯದಲ್ಲಿ ಕೂಡ ಅವರೇ ಉಸ್ತುವಾರಿ ನೋಡಿಕೊಳ್ತಾರೆ. 

ಮೆಚ್ಚುವ ಕೆಲಸ; ಲೀಲಾವತಿ ಮತ್ತು ವಿನೋದ್ ರಾಜ್‌ರಿಂದ ಬಡವರಿಗೆ ದಿನಸಿ

ಲೀಲಾವತಿಯವರಿಗೆ ಈಗ ಕೃಷಿಯ ಮೇಲಿರುವ ಆಸಕ್ತಿ ಹೇಗಿದೆ?

ಏನೇ ಬೆಳೆದರೂ ಅವರಿಗೆ ಅವರದೇ ಆದ ಒಂದು ರೀತಿ ಇದೆ. ತೆಂಗಿನಕಾಯಿ, ಅಡಿಕೆ ಬೆಳೆಯುವ ಶೈಲಿ, ಯೋಜನೆ ಎಲ್ಲವೂ ಅವರದ್ದೇ. ಇದರ ನಡುವೆ ಕೆಲಸದವರಿಲ್ಲದೆ ಒಂದಷ್ಟು ತೊಂದರೆ ಆಯಿತು. ಕೆಲಸದವರು ಇದ್ದಾಗ ಕೂಡ ಏನೇ ಮಾಡಿದರೂ ಅದರಲ್ಲಿ ಅಮ್ಮನಿಗೆ ಅಚ್ಚುಕಟ್ಟುತನ ಇರಲೇಬೇಕು.‌ ಕಂಗು, ತೆಂಗುಗಳಿಗೆ ಬದುವು ಹಾಕುವಾಗಲೂ ಅಷ್ಟೇ; ಅವರಿಗೆ ನಮ್ಮ ಮಂಗಳೂರು ಶೈಲಿಯ ಪರ್ಫೆಕ್ಷನ್ ಕಾಣಿಸಬೇಕು. ಮುಖ್ಯವಾಗಿ ಕಳೆದ ತಿಂಗಳುಗಳಲ್ಲಿ ನಾನು ಮತ್ತು ಅಮ್ಮ ತೆಗೆದುಕೊಂಡ ನಿರ್ಧಾರ ಏನು ಅಂದರೆ, ನಮ್ಮ ಹಾಗೆ ನಮ್ಮನ್ನು ನಂಬಿರುವ ಕೆಲಸಗಾರರನ್ನು ಈ ಸಂದರ್ಭದಲ್ಲಿ ನಾವು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದೇ ಆಗಿತ್ತು. 

ಹಬ್ಬಗಳ ಆಚರಣೆಯನ್ನು ಯಾವ ರೀತಿ ಮಾಡುತ್ತೀರಿ?

ಮೊದಲು ನಾವು, ನಮ್ಮ ಜೊತೆಗಿರುವವರು ಚೆನ್ನಾಗಿರಬೇಕು. ಕಣ್ಣೆದುರಿಗಿರುವ ಜನರೆಲ್ಲ ಒಳ್ಳೆಯ  ವ್ಯವಸ್ಥೆಯಲ್ಲಿ ಚೆನ್ನಾಗಿದ್ದರೆ ಅದೇ ನಮಗೆ ಹಬ್ಬ. ಅದು ಬಿಟ್ಟರೆ ನಾವು ಹುಟ್ಟಿದ ಹಬ್ಬ ಕೂಡ ಮಾಡಿದವರಲ್ಲ! ನನ್ನ ಜನ್ಮದಿನವನ್ನು ಮೊದಲಿಂದಲೂ ಹಬ್ಬದಂತೆ ಆಚರಣೆ ಮಾಡುತ್ತಿಲ್ಲ. ತಾಯಿಯ ಬರ್ತ್ ಡೇ ಎಂದರೆ ದೇವರಿಗೆ ಕೈ ಮುಗಿಯುವುದು. ನನ್ನ ಬರ್ತ್ ಡೇ ಅಂದರೆ ಅಮ್ಮನಿಂದ ವಿಶೇಷ ಆಶೀರ್ವಾದ ಪಡೆದುಕೊಳ್ಳುವುದು. ಇನ್ನು ವರಮಹಾಲಕ್ಷ್ಮಿ ಹಬ್ಬವಾಗಲೀ, ಯುಗಾದಿಯಾಗಲೀ ಅಥವಾ ಯಾವುದೇ ಹಬ್ಬವಾಗಲೀ ಅದನ್ನು ಮಾಡುವುದು ಬಿಡುವುದು ಕೆಲಸದವರಿಗೆ ಬಿಟ್ಟಿದ್ದೇವೆ. ಅವರು ಆಚರಿಸಿ ಪ್ರಸಾದ ಕೊಟ್ಟರೆ ನಾವು ತಿನ್ನುತ್ತೇವೆ. ಇದು ನನ್ನ ಅಮ್ಮನ ಪಾಲಿಸಿ. ನಾನು ಅದನ್ನು ಪಾಲಿಸುತ್ತಿದ್ದೇನೆ. ನಮ್ಮ‌ಕೆಲಸಗಾರರು, ಸಮಾಜದ ಮಂದಿ ಸಂತೋಷವಾಗಿದ್ರೆ ನಮಗೆ ಅದೇ ಖುಷಿ. ಸದ್ಯಕ್ಕಂತೂ ಆರೋಗ್ಯ ಚೆನ್ನಾಗಿ ಇರಿಸಿಕೊಂಡರೆ ಅದೇ ಹಬ್ಬ ಎನ್ನುವ ಸಂದರ್ಭ ಬಂದಿದೆ. ಆದರೆ ಎಲ್ಲ ಹಬ್ಬಗಳನ್ನು ಆಚರಿಸುವವರಿಗೆ ನಮ್ಮಿಬ್ಬರ ಶುಭಾಶಯಗಳು.
 

click me!