ಬಾಂಬೆ ಡೈಯಿಂಗ್‌ ಖ್ಯಾತಿಯ ವಾಡಿಯಾ ಗ್ರೂಪ್‌ನ ಗೋ ಫಸ್ಟ್‌ ದಿವಾಳಿಗೆ ಕಾರಣ ಏನು?

By Kannadaprabha NewsFirst Published May 3, 2023, 9:05 AM IST
Highlights

17 ವರ್ಷಗಳ ಹಿಂದೆ ಆರಂಭವಾಗಿದ್ದ ಗೋ ಫಸ್ಟ್‌ ಪ್ರಸಕ್ತ ಒಟ್ಟಾರೆ 9000 ಕೋಟಿ ರು. ಸಾಲದ ಬಾಧೆ ಹೊಂದಿದೆ. ಎಂಜಿನ್‌ ಸಮಸ್ಯೆಯ ಪರಿಣಾಮ 2022ರಲ್ಲಿ ಮಾರುಕಟ್ಟೆಯಲ್ಲಿ ಶೆ.8.8ರಷ್ಟು ಪಾಲು ಹೊಂದಿದ್ದ ಸಂಸ್ಥೆ ಪ್ರಸಕ್ತ ವರ್ಷದ ಪಾಲು ಶೇ.6ರ ಆಸುಪಾಸಿಗೆ ಕುಸಿದಿತ್ತು.

ಮುಂಬೈ: 17 ವರ್ಷಗಳ ಹಿಂದೆ ಆರಂಭವಾಗಿದ್ದ ಗೋ ಫಸ್ಟ್‌ ಪ್ರಸಕ್ತ ಒಟ್ಟಾರೆ 9000 ಕೋಟಿ ರು. ಸಾಲದ ಬಾಧೆ ಹೊಂದಿದೆ. ಎಂಜಿನ್‌ ಸಮಸ್ಯೆಯ ಪರಿಣಾಮ 2022ರಲ್ಲಿ ಮಾರುಕಟ್ಟೆಯಲ್ಲಿ ಶೆ.8.8ರಷ್ಟು ಪಾಲು ಹೊಂದಿದ್ದ ಸಂಸ್ಥೆ ಪ್ರಸಕ್ತ ವರ್ಷದ ಪಾಲು ಶೇ.6ರ ಆಸುಪಾಸಿಗೆ ಕುಸಿದಿತ್ತು. ವಿಮಾನಯಾನ ಸಂಸ್ಥೆ ಪುನರುಜ್ಜೀವನಕ್ಕಾಗಿ ಪ್ರವರ್ತಕರು ಕಳೆದ 3 ವರ್ಷದಲ್ಲಿ 3200 ಕೋಟಿ ಹೂಡಿಕೆ ಮಾಡಿದ್ದರು. ಜೊತೆಗೆ ಐಪಿಐ ಬಿಡುಗಡೆ ಮೂಲಕ ಹಣ ಸಂಗ್ರಹಕ್ಕೂ ಕಂಪನಿ ಯೋಜಿಸಿತ್ತು. ಆದರೆ ಒಂದಾದ ಮೇಲೊಂದರಂತೆ ವಿಮಾನಗಳ ಸಂಚಾರ ರದ್ದಾಗಿ ಕಂಪನಿಯ ಎಲ್ಲಾ ಆಸೆಗಳಿಗೆ ಪೆಟ್ಟು ನೀಡಿತ್ತು. 

ದಿವಾಳಿಯಿಂದ ರಕ್ಷಣೆ ಕೋರಿ ಕಾನೂನು ನ್ಯಾಯಾಧಿಕರಣಕ್ಕೆ ಅರ್ಜಿ

ಕಿಂಗ್‌ಫಿಶರ್‌, ಜೆಟ್‌ ಏರ್‌ವೇಸ್‌ ಕಂಪನಿಗಳು ಬಾಗಿಲು ಹಾಕಿದ ಬೆನ್ನಲ್ಲೇ, ಗೋ ಫಸ್ಟ್‌ ವಿಮಾನಯಾನ ಸಂಸ್ಥೆ ಕೂಡಾ ದಿವಾಳಿಯಾಗಿದೆ. ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಕಂಪನಿ, ಬುಧವಾರದಿಂದ 3 ದಿನಗಳ ಕಾಲ ತನ್ನ ಎಲ್ಲಾ ಸಂಚಾರ ರದ್ದುಗೊಳಿಸಿರುವುದಾಗಿ ಪ್ರಕಟಿಸಿದೆ. ಜತೆಗೆ ದಿವಾಳಿಯಿಂದ ರಕ್ಷಣೆ ಕೋರಿ ಸ್ವಯಂ ಅದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದೆ.

ಎಂಜಿನ್‌ ಸಮಸ್ಯೆಯಿಂದಾಗಿ 28 ವಿಮಾನದ ಸಂಚಾರ ಸ್ಥಗಿತಗೊಳಿಸಿದ್ದೇವೆ. ಇದು ಹಣದ ಹರಿವಿನ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಅನಿವಾರ್ಯವಾಗಿ ದಿವಾಳಿಯಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಇದೊಂದು ದುರದೃಷ್ಟಕರ ನಿರ್ಧಾರ. ಆದರೆ ಕಂಪನಿಯ ಹಿತದೃಷ್ಟಿಯಿಂದ ಇಂಥ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಕಂಪನಿ ಮುಖ್ಯಸ್ಥ ಕೌಶಿಕ್‌ ಕೋನಾ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ರದ್ದಾದ ಸಂಚಾರದ ಹಣವನ್ನು ನಾವು ಪಾವತಿ ಮಾಡಲಿದ್ದೇವೆ. ನಮ್ಮ ಮುಂದಿನ ಯೋಜನೆ ಬಗ್ಗೆ ಸರ್ಕಾರಕ್ಕೆ ವಿಸ್ತೃತ ಮಾಹಿತಿ ಸಲ್ಲಿಸಲಿದ್ದೇವೆ ಎಂದು ಹೇಳಿದ್ದಾರೆ.

ದಿವಾಳಿ ಪತ್ರ ಸಲ್ಲಿಸಿದ ಗೋ ಫರ್ಸ್ಟ್‌ ಏರ್‌ ಲೈನ್ಸ್‌, ಮೇ, 3, 4ರ ಎಲ್ಲಾ ವಿಮಾನ ರದ್ದು!

ಅದರ ಬೆನ್ನಲ್ಲೇ ಏಕಾಏಕಿ ಸಂಚಾರ ಸ್ಥಗಿತಗೊಳಿಸಿದ ಗೋ ಫಸ್ಟ್‌ಗೆ ನಾಗರಿಕ ವಿಮಾನಯಾನ ಸಚಿವಾಲಯ ನೋಟಿಸ್‌ ಜಾರಿ ಮಾಡಿದೆ. ಮತ್ತೊಂದೆಡೆ ಘಟನೆ ಬಗ್ಗೆ ನೋವು ಮತ್ತು ಕಳವಳ ವ್ಯಕ್ತಪಡಿಸಿರುವ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ನ್ಯಾಯಾಂಗದ ಪ್ರಕ್ರಿಯೆಯನ್ನು ನಾವು ಕಾದು ನೋಡಲಿದ್ದೇವೆ ಎಂದು ಹೇಳಿದ್ದಾರೆ. 

ಗೋ ಫಸ್ಟ್‌ 2004ರಲ್ಲಿ ಆರಂಭವಾದ ಕಂಪನಿ. 59 ವಿಮಾನಗಳ ಮೂಲಕ ದೇಶೀಯವಾಗಿ 27 ಮತ್ತು ವಿದೇಶಗಳ 7 ಸ್ಥಳಗಳಿಗೆ ಸೇವೆ ನೀಡುತ್ತಿತ್ತು. ಬಾಂಬೆ ಡೈಯಿಂಗ್‌, ಬ್ರಿಟಾನಿಯಾ ಮೊದಲಾದ ಖ್ಯಾತ ಉತ್ಪನ್ನಗಳ ಮಾಲೀಕತ್ವ ಹೊಂದಿರುವ ವಾಡಿಯಾ ಗ್ರೂಪ್‌ ಇದರ ಮಾಲೀಕತ್ವ ಹೊಂದಿದೆ. ಕಂಪನಿಯಲ್ಲಿ 5000ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ.

ದಿವಾಳಿಯಾಗಲು ಕಾರಣ ಏನು?

ಗೋ ಫಸ್ಟ್‌ನ ಹಲವು ವಿಮಾನಗಳು ಎಂಜಿನ್‌ ಸಮಸ್ಯೆ ಎದುರಿಸುತ್ತಿವೆ. ಇವುಗಳನ್ನು ಕಾಲಮಿತಿಯಲ್ಲಿ ದುರಸ್ತಿಗೊಳಿಸುವ, ಹೊಸ ಎಂಜಿನ್‌ ಪೂರೈಸುವ, ಪರ್ಯಾಯ ಪರಿಹಾರ ಕಲ್ಪಿಸುವ ಹೊಣೆ ಪ್ರಾಟ್‌ ಆ್ಯಂಡ್‌ ವಿಟ್ನಿ (ಪಿ ಆ್ಯಂಡ್‌ ವಿ) ಕಂಪನಿಯದ್ದಾಗಿತ್ತು. ಈ ಕುರಿತು ಉಭಯ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿದ್ದರೂ ಕಳೆದ 3 ವರ್ಷಗಳಿಂದ ತನ್ನ ಹೊಣೆ ಪೂರೈಸುವಲ್ಲಿ ಪಿ ಆ್ಯಂಡ್‌ ವಿ ವಿಫಲವಾಗಿತ್ತು. ಒಪ್ಪಂದ ಪಾಲಿಸುವಂತೆ ಸಿಂಗಾಪುರದ ಮಧ್ಯಸ್ಥಿಕೆ ಕೋರ್ಟ್ ಸೂಚಿಸಿದ್ದರೂ 'ಪಿ ಆ್ಯಂಡ್‌ ವಿ' ಅದನ್ನು ಪಾಲಿಸಿರಲಿಲ್ಲ. ಹೀಗಾಗಿ ಗೋ ಫಸ್ಟ್‌ ಹಲವು ತಿಂಗಳಿನಿಂದ ತನ್ನ 28 ವಿಮಾನಗಳ ಸಂಚಾರ ಸ್ಥಗಿತಗೊಳಿಸಿತ್ತು. ಹೀಗಾಗಿ ಕಂಪನಿಯ ಆದಾಯಕ್ಕೆ ಧಕ್ಕೆ ಬಿದ್ದು, ಭಾರೀ ನಷ್ಟಅನುಭವಿಸಿತ್ತು.

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟಲ್ಲಿ ಗೋ‌ ಫಸ್ಟ್ ಏರ್ಲೈನ್ಸ್ ನಿರ್ಲಕ್ಷ್ಯ, ಪ್ರಯಾಣಿಕರಿಂದ ಭಾರೀ ಆಕ್ರೋಶ


ಇತೀಚೆಗೆ ಮುಚ್ಚಿದ ಪ್ರಮುಖ ಕಂಪನಿಗಳು
ಕಿಂಗ್‌ಫಿಶರ್‌
ಜೆಟ್‌ ಏರ್‌ವೇಸ್‌
ಏರ್‌ ಡೆಕ್ಕನ್‌
ಕಳಿಂಗ್‌
ಮೋದಿಲುಫ್ತ
ಈಸ್ಟ್‌ವೆಸ್ಟ್‌
ಏರ್‌ ಸಹಾರ
 

click me!