ಧಾರ್ಮಿಕ ಸಮನ್ವಯತೆಯ ಹರಿಕಾರ ಸಂತ ಶಿಶುನಾಳ ಶರೀಫರು

By Kannadaprabha NewsFirst Published Jul 26, 2018, 2:18 PM IST
Highlights

ಶರೀಫರ ಬದುಕೇ ಒಂದು ರಮ್ಯ ಕಾವ್ಯ. ಮುಸ್ಲಿಂ ಧರ್ಮಿಯನಾಗಿ ಹುಟ್ಟಿಯೂ ಹಿಂದೂ ಶಕ್ತಿ ಆರಾಧಕ ಕಳಸದ ಗೋವಿಂದ ಭಟ್ಟರನ್ನು ಗುರುವಾಗಿ ಸ್ವೀಕರಿಸಿ ಸುದೀರ್ಘ ಅವಧಿ ಜತೆಯಾಗಿ ಆಧ್ಯಾತ್ಮ ಚಿಂತನೆಯಲ್ಲಿ ಸಾಗುವ ಮೂಲಕ ಕರ್ನಾಟಕದಲ್ಲಿ ಬಹುದೊಡ್ಡ ‘ಧಾರ್ಮಿಕ ಸಮನ್ವಯತೆ’ ಹುಟ್ಟುಹಾಕಿದ ದೃಷ್ಟಾರರು.

ಶರೀಫರ ಜನನ-ಮರಣ ಒಂದೇ ದಿನವಾಗಿದ್ದು (1819- 1819) ಕಾಕತಾಳಿಯ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಶಿಶುನಾಳ(ಈಗ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು) ಗ್ರಾಮದಲ್ಲಿ ಹುಟ್ಟಿ ಬೆಳೆದು, ಮುಲ್ಕಿ ಪರೀಕ್ಷೆ ಪಾಸುಮಾಡಿಕೊಂಡು ಕೆಲವು ದಿನ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದರು. ಅದಾಗಲೇ ಅವರಲ್ಲಿ ಆಧ್ಯಾತ್ಮದ ಒಲವು ಮೊಳಕೆಯೊಡೆದು ಗುರುಗೋವಿಂದ ಭಟ್ಟರತ್ತ ಆಕರ್ಷಣೆಯಾಗಿತ್ತು.

ಪತ್ನಿ ಪಕ್ಕದ ಕುಂದಗೋಳದವರು. ಬಳಸಿ ಬ್ರಹ್ಮಚಾರಿ ಎನ್ನುವ ಮಾತಿನಂತೆ ಅವರ ಬದುಕು ಇಹದಲ್ಲಿ ಸಂಚರಿಸುತ್ತಿದ್ದರೆ, ಆತ್ಮ ಪರಮಾತ್ಮನಲ್ಲಿ ನೆಲೆ ನಿಂತಿತ್ತು. ಇಂತ ಹೊತ್ತಿನಲ್ಲಿ ಮಗಳು ಮತ್ತು ಪತ್ನಿಯ ಅಕಾಲಿಕ ನಿಧನ. ಈ ಆಘಾತದಿಂದ ದೃತಿಗೆಡದ ಶರೀಫರು ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ’ ಎನ್ನುತ್ತ ಗೋವಿಂದ ಭಟ್ಟರ ನೆರಳಲ್ಲಿ ಹೆಜ್ಜೆ ಹಾಗುತ್ತಾ ಆತ್ಮೋನ್ನತಿಯತ್ತ ಸಾಗಿದರು.

ಕಣ್ಣಿಗೆ ಕಂಡದ್ದನ್ನೆಲ್ಲ ಹಾಡಾಗಿಸಿದರು. ಅದರಲ್ಲೊಂದು ತತ್ವ ಹುಡುಕಿ, ಆ ಮೂಲಕ ಜನಸಾಮಾನ್ಯರಿಗೆ ನೀತಿ ಮಾರ್ಗ ಬೋಧಿಸಿದರು. ಬದುಕನ್ನು ಹುಲಗೂರ ಸಂತೆಗೆ ಹೋಲಿಸಿ ವಿಷಯಾಸೆಗಳಲ್ಲೇ ಹೊರಳಾಡುವ ಮನಸ್ಸೆಂಬ ಮುದುಕಿಗೆ ಕಿವಿಮಾತು ಹೇಳಿದರು. ಜನ್ಮಭೂಮಿಯ ಅಧಿದೈವ ಶಿಶುನಾಳದೀಶನನ್ನು (ಬಯಲು ಬಸವಣ್ಣ) ಪ್ರಮಾಣವಾಗಿಸಿ ‘ಅಹಂಬ್ರಹ್ಮಾಸ್ಮಿ’ ಎಂದು ‘ಅದ್ವೈತ’ವನ್ನು ಗಟ್ಟಿಯಾಗಿ ಕೂಗಿ ಹೇಳಿದರು.

ಇದೇಕಾರಣಕ್ಕೆ ಶರೀಫರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರಂತ ತತ್ವಜ್ಞಾನಿಗಳಿಗೂ, ಎಲ್ಲವನ್ನೂ ಕಳೆದುಕೊಂಡ ತತ್ವಾರ ಬಡಪಾಯಿಗಳಿಗೂ ಅಪ್ಯಾಯ ಮಾನವಾಗುವ ಸಂತಕವಿ.ಇವರ ಬಹುತೇಕ ತತ್ವಪದಗಳು ರಾಜ್ಯದ ಹೆಸರಾಂತ ಗಾಯಕರ ಕಂಠದಿಂದ ಹಾಡಾಗಿ ನಾಡಿನ ಮನೆ-ಮನದಲ್ಲಿ ರಿಂಗಣಿಸುತ್ತಿವೆ. ಕರುನಾಡ ಜನತೆ ಇವರನ್ನು ‘ಕನ್ನಡದ ಕಬೀರ' ಎಂದು ಹೆಮ್ಮೆಯಿಂದ ಸ್ಮರಿಸುತ್ತಿದ್ದಾರೆ.

click me!