Asianet Suvarna News Asianet Suvarna News

ಬಸವನಬಾಗೇವಾಡಿ: ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ, ಗ್ರಾಹಕರ ಜೇಬಿಗೆ ಕತ್ತರಿ

ಪ್ರತಿ ಕ್ವಿಂಟಾಲ್‌ಗೆ 2500-3000 ಇದ್ದದ್ದು, 13000-18000ಕ್ಕೆ ಏರಿಕೆ|ದರ ಕಡಿಮೆಯಾದರೆ ಬೀಜಕ್ಕೆ ಹಾಕಿದ ಹಣ ಸಹ ಬಾರದೇ ರೈತರು ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕ| ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಬಳ್ಳೊಳ್ಳಿ ಬೀಜ ಸಿಗುತ್ತಿಲ್ಲ| ಗದಗ, ಹಾವೇರಿ ಜಿಲ್ಲೆಯ ಬಳ್ಳೊಳ್ಳಿ ಬೀಜಕ್ಕೆ ಬಲು ಬೇಡಿಕೆ| 

Garlic Price Rise in Basavanabagevadi in Vijayapura District
Author
Bengaluru, First Published Oct 24, 2019, 11:29 AM IST

ಬಸವರಾಜ ನಂದಿಹಾಳ

ಬಸವನಬಾಗೇವಾಡಿ[ಅ.24]: ಮಾರುಕಟ್ಟೆಯಲ್ಲಿ ಇದುವರೆಗೂ ಈರುಳ್ಳಿಗೆ ಬಂಗಾರದ ಬೆಲೆ ಬಂದು ಇದೀಗ ಕೊಂಚ ಕಡಿಮೆಯಾಗಿದೆ. ಈಗ ಬೆಳ್ಳುಳ್ಳಿಗೆ ಬಂಗಾರದ ಧಾರಣೆ ಬಂದಿದೆ. ಹೀಗಾಗಿ ಖರೀದಿದಾರಿಗೆ ಬಿಸಿ ಮುಟ್ಟುವ ಜತೆ ಬೆಳ್ಳುಳ್ಳಿ ಬೀಜ ಖರೀ​ದಿ​ಸುವ ರೈತರಿಗೂ ಬಿಸಿ ಮುಟ್ಟಿಸಿದೆ.

ಕಳೆದ ವರ್ಷ ಈ ಅವಧಿಯಲ್ಲಿ ಬೆಳ್ಳುಳ್ಳಿಗೆ ಪ್ರತಿ ಕ್ವಿಂಟಾಲ್‌ಗೆ 2500-3000 ಧಾರಣೆಯಿತ್ತು. ಈ ವರ್ಷ 13000-18000 ಪ್ರತಿ ಕ್ವಿಂಟಾಲ್‌ಗೆ ಧಾರಣೆ ಇದೆ. ಬೆಳ್ಳುಳ್ಳಿ ಬೆಳೆ ಬೆಳೆಯುವ ರೈತರಿಗೆ ಈ ಬೆಲೆಯಿಂದಾಗಿ ಬೆಳ್ಳುಳ್ಳಿ ಹಾಕುವುದಕ್ಕೆ ಆಲೋಚನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ದರದಲ್ಲಿ ಬೀಜ ಖರೀದಿಸಿ ಜಮೀನಿನಲ್ಲಿ ಬೆಳ್ಳು​ಳ್ಳಿ ಹಾಕಿದರೆ ಮುಂದೆ ಇದೇ ಧಾರಣೆ ಇದ್ದರೆ ಲಾಭವಾಗುತ್ತದೆ. ಒಂದು ವೇಳೆ 12000 ಧಾರಣೆ ಬಂದರೆ ಲಾಭ. ದರ ಕಡಿಮೆಯಾದರೆ ಬೀಜಕ್ಕೆ ಹಾಕಿದ ಹಣ ಸಹ ಬಾರದೇ ರೈತರು ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕ ಎದು​ರಾ​ಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಬಳ್ಳೊಳ್ಳಿ ಬೀಜ ಸಿಗುತ್ತಿಲ್ಲ. ಗದಗ, ಹಾವೇರಿ ಜಿಲ್ಲೆಯ ಬಳ್ಳೊಳ್ಳಿ ಬೀಜಕ್ಕೆ ಬಲು ಬೇಡಿಕೆ. ಈ ಬಾರಿ ಅಲ್ಲಿ ಮಳೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಸರಿಯಾಗಿ ಬೆಳೆದಿಲ್ಲ. ಇದರಿಂದಾಗಿ ಬೀಜ ಅಷ್ಟಾಗಿ ಬೆಳೆದಿಲ್ಲ. ಇದುವೇ ಬೆಳ್ಳುಳ್ಳಿ ಧಾರಣೆ ಗಗನಕ್ಕೇರಲು ಪ್ರಮುಖ ಕಾರಣವಾಗಿದೆ.

ತಾಲೂಕಿನ ಹೂವಿನಹಿಪ್ಪರಗಿ, ಅಗಸಬಾಳ, ನರಸಲಗಿ, ಕಣಕಾಲ, ಕಾನ್ನಾಳ, ಕರಭಂಟನಾಳ ಭಾಗದಲ್ಲಿ ರೈತರು ಹೆಚ್ಚಾಗಿ ಬೆಳ್ಳುಳ್ಳಿ ಬೆಳೆಯುತ್ತಾರೆ. ಈ ಸಲ ಧಾರಣೆ ಹೆಚ್ಚಾಗಿದ್ದರಿಂದ ಬೆಳ್ಳುಳ್ಳಿ ಬಿತ್ತು​ವ ಸಾಧ್ಯತೆ ಕಡಿಮೆಯಾಗಲಿದೆ. ಬೆಳ್ಳುಳ್ಳಿ ಬೀಜ ತರಲು ಗದಗ ಜಿಲ್ಲೆ ರೈತರು ಅಲೆದಾಡುತ್ತಿದ್ದಾರೆ.

ಈ ಸಲ ಬೆಳ್ಳುಳ್ಳಿ ದರ ಬಹಳವಾಗಿದೆ. ನಾನು ಈ ವರ್ಷ 6 ಕ್ವಿಂಟಾಲ್‌ ಬೆಳ್ಳುಳ್ಳಿ ಬೀಜ ಗದಗದಿಂದ ತಂದಿ​ದ್ದೇ​ನೆ. ಮಳೆಯಿಂದಾಗಿ ಇನ್ನೂ ಹಸಿ ಪ್ರಮಾಣ ಇರುವುದರಿಂದಾಗಿ ಬೆಳ್ಳುಳ್ಳಿ ಹಾಕಲು ಸಾಧ್ಯವಾಗುತ್ತಿಲ್ಲ. ಹಸಿ ಆರಿದ ಕೂಡಲೆ ಬೆಳ್ಳುಳ್ಳಿ ಹಾಕುವೆ. ಈ ಭಾಗದ ಅಗಸಬಾಳ ಭಾಗದಲ್ಲಿ ಸುಮಾರು 50-60 ಎಕರೆ ಪ್ರದೇಶದಲ್ಲಿ ಬೆಳ್ಳುಳ್ಳಿ ಹಾಕುತ್ತಾರೆ. ಇಷ್ಟುದರದಲ್ಲಿ ನಾವು ಖರೀದಿಸಿ ಬೆಳ್ಳುಳ್ಳಿ ಹಾಕುತ್ತೇವೆ. ನಮ್ಮ ಫಸಲು ಜನವರಿ ತಿಂಗಳಲ್ಲಿ ಬರುತ್ತದೆ. ಆಗ ಬೆಳ್ಳುಳ್ಳಿ ಬೆಲೆ ಇದೇ ರೀತಿ ಇದ್ದರೆ ನಮಗೆ ಅನುಕೂಲವಾಗುತ್ತದೆ ಎಂದು ಹೂವಿನಹಿಪ್ಪರಗಿಯ ರೈತ ಶಿವಣ್ಣ ಗುಂಡನ್ನವರ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಅಧಿಕಾರಿ ಸಿ.ಬಿ. ಪಾಟೀಲ ಅವರು, ಈ ಭಾಗದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳ್ಳುಳ್ಳಿಯನ್ನು ರೈತರು ತಮ್ಮ ಜಮೀನುಗಳಲ್ಲಿ ಬಿತ್ತು​ತ್ತಾರೆ. ತಾಲೂಕಿನಲ್ಲಿ 5-6 ಗ್ರಾಮಗಳಲ್ಲಿ ಮಾತ್ರ ಈ ಬೆಳೆ ಕಂಡುಬರುತ್ತದೆ. ಅಂದಾಜು 50-100 ಹೆಕ್ಟೇರ್‌ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತದೆ. ಮಳೆ ಹೆಚ್ಚಾದರೆ ಈ ಬೆಳೆ ಕೊಳೆಯುತ್ತದೆ. ಕೀಟಬಾಧೆ ಆದಾಗ ರೈತರು ಕೀಟನಾಶಕ ಸಿಂಪಡಣೆ ಮಾಡುವ ಮೂಲಕ ಬೆಳೆ ಸಂರಕ್ಷಣೆ ಮಾಡುತ್ತಾರೆ. ಈಗಾಗಲೇ ಮುಂಗಾರು ಸರ್ವೆ ಆಗಿದೆ. ಮುಂದಿನ ತಿಂಗಳು ಹಿಂಗಾರು ಸರ್ವೆ ಮಾಡಲಾಗುತ್ತದೆ. ಆಗ ನಮಗೆ ನಿಖರವಾದ ಮಾಹಿತಿ ಲಭ್ಯವಾಗುತ್ತದೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios