ಶಿರಸಿ ಮಾರ್ಗದಲ್ಲಿ ಭಾರಿ ವಾಹನ ನಿಷೇಧ
ಬೇಡ್ತಿ ಸೇತುವೆ ಪ್ರಸ್ತುತ ವರ್ಷದ ಭಾರಿ ಮಳೆಯಿಂದ ಶಿಥಿಲಗೊಂಡಿದ್ದು, ಸುರಕ್ಷತಾ ಕ್ರಮವಾಗಿ 10 ಟನ್ಗೂ ಮೀರಿದ ಭಾರಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಕಾರವಾರ[ಅ.23]: ಶಿರಸಿ-ಯಲ್ಲಾಪುರ ಮಾರ್ಗ ಮಧ್ಯದ ಬೇಡ್ತಿ ಸೇತುವೆ ಪ್ರಸ್ತುತ ವರ್ಷದ ಭಾರಿ ಮಳೆಯಿಂದ ಶಿಥಿಲಗೊಂಡಿದ್ದು, ಸುರಕ್ಷತಾ ಕ್ರಮವಾಗಿ 10 ಟನ್ಗೂ ಮೀರಿದ ಭಾರಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ.
ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ-93ರ ಕಿ.ಮೀ. 111.85ರಲ್ಲಿ ಬೇಡ್ತಿ ಸೇತುವೆ ಮೇಲೆ ನೀರು ಹರಿದು ಸೇತುವೆಯ ಹ್ಯಾಂಡರೇಲ್ ಹಾಳಾಗಿದ್ದು, ಸಾಮಾನ್ಯ ಪರಿಶೀಲನೆಯಿಂದ 10 ಟನ್ಗೂ ಮೀರಿದ ಭಾರಿ ವಾಹನ ಸಂಚಾರದಿಂದ ಸೇತುವೆಗೆ ಹಾನಿಯಾಗಬಹುದೆಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶಿರಸಿ-ಯಲ್ಲಾಪುರ ಮಾರ್ಗ ಮಧ್ಯದ ಸಂಪರ್ಕ ಕೊಂಡಿಯಾಗಿರುವ ಸೇತುವೆಗೆ ಹಾನಿಯಾದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ಕಾರಣದಿಂದ 10 ಟನ್ಗಳಿಗೂ ಅಧಿಕ ಭಾರ ಮೀರಿದ ಲಾರಿಗಳು ಮುಂಡಗೋಡ ಮಾರ್ಗವಾಗಿ ಯಲ್ಲಾಪುರ ಹಾಗೂ ಯಲ್ಲಾಪುರದಿಂದ ಮುಂದೆ ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಕಡೆ ಸಾಗುವ ವಾಹನಗಳು ಕುಮಟಾ-ತಡಸ ರಾಜ್ಯ ಹೆದ್ದಾರಿ ಮೂಲಕ ಸಂಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.