Asianet Suvarna News Asianet Suvarna News

ಸತ್ಯ ಬಹಿರಂಗ: ಬಿಗ್‌ಬಾಸ್ ಮನೆಯಲ್ಲಿ ಸಿಗರೇಟಿಗೂ ಇದೆ ಒಂದು ರೂಮ್!

ಅಕ್ಟೋಬರ್‌ 12ರಂದು ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ ಸೀಸನ್‌ 7 ಆರಂಭ. ಸೋಮವಾರದಿಂದ ಪ್ರತಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಬಿಗ್‌ಬಾಸ್‌ ಕಳೆದ ಐದು ಸೀಸನ್‌ಗಳನ್ನು ನಿರ್ದೇಶನ ಮಾಡಿದ ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ಬಾಸ್‌ ಪರಮೇಶ್ವರ ಗುಂಡ್ಕಲ್‌ ತಮ್ಮ ಇಷ್ಟದ ಶೋ ಬಿಗ್‌ಬಾಸ್‌ ಬಗ್ಗೆ ಇಲ್ಲಿ ಮಾತನಾಡಿದ್ದಾರೆ

Colors Kannada Bigg Boss Parameshwar Gundkal Exclusive interview
Author
Bangalore, First Published Oct 11, 2019, 10:32 AM IST

ರಾಜೇಶ್‌ ಶೆಟ್ಟಿ

ಈ ಸಲ ಮತ್ತೆ ಸೆಲೆಬ್ರಿಟಿ ಸೀಸನ್‌ ಮಾಡುತ್ತಿದ್ದೀರಿ. ಯಾಕೆ ಈ ನಿರ್ಧಾರ?

ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ ಪ್ರಸಾರವಾದಾಗಲೆಲ್ಲಾ ಸೆಲೆಬ್ರಿಟಿ ಸೀಸನ್‌ಗಳೇ ಇತ್ತು. ಕಲರ್ಸ್‌ ಸೂಪರ್‌ನಲ್ಲಿ ಬಿಗ್‌ಬಾಸ್‌ ಪ್ರಸಾರವಾದಾಗ ಜನ ಸಾಮಾನ್ಯರನ್ನು ಸೇರಿಸಿದ್ದೆವು. ಜನ ಸೆಲೆಬ್ರಿಟಿಗಳು ಜಾಸ್ತಿ ಇರಬೇಕು ಅಂದರು. ಈಸಲ ಒಂದೆರಡು ಜನಸಾಮಾನ್ಯರೂ ಇದ್ದರೆ ಚೆನ್ನಾಗಿತ್ತು ಅನ್ನುತ್ತಿದ್ದಾರೆ. ಎರಡು ವರ್ಷ ಎಕ್ಸ್‌ಪೆರಿಮೆಂಟ್‌ ಮಾಡಿದೆ. ಈ ಸಲ ಬೇರೆ ಥರ ಇದೆ. ಬಿಗ್‌ಬಾಸ್‌ ಅಂದ್ರೆ ಸ್ಪರ್ಧಿಗಳಿಗೆ, ಮನೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳಿಗೆ, ನನಗೆ, ಚಾನಲ್‌ಗೆ ಬೆಂಕಿ ಹತ್ತಿಕೊಂಡೇ ಇರುತ್ತದೆ. ಎಷ್ಟುಹೊತ್ತಿಗೆ ಏನಾಗುತ್ತದೆ ಅಂತ ಹೇಳಕಾಗಲ್ಲ. ಈ ಸಲ 17 ಜನ ಸೆಲೆಬ್ರಿಟಿಗಳೇ ಇದ್ದಾರೆ. ಸೆಲೆಬ್ರಿಟಿಗಳು ಅಂತ ಬಂದಾಗ ಅವರ ವ್ಯಕ್ತಿತ್ವ ಅನಾವರಣಕ್ಕೆ ಜಾಸ್ತಿ ಸಮಯ ಬೇಕಿಲ್ಲ. ಜನರಿಗೆ ಗೊತ್ತು ಅವರು. ಹಾಗಾಗಿ ಬೇಗ ಜನರಿಗೆ ಕನೆಕ್ಟ್ ಆಗುತ್ತಾರೆ.

ಬಿಗ್ ಬಾಸ್ ಓಪನಿಂಗ್‌ಗೆ ಕ್ಷಣಗಣನೆ, ಬೆಳೆಗೆರೆ ಸೇರಿ ಕಂಟೆಸ್ಟಂಟ್ ಗಳ ಫೈನಲ್ ಲಿಸ್ಟ್

ಕಳೆದ ವರ್ಷಕ್ಕೂ ಈ ವರ್ಷಕ್ಕೂ ಏನು ವ್ಯತ್ಯಾಸ ಇದೆ?

ಕಳೆದ ವರ್ಷ ಕಾನ್ಫಿಡೆಂಟ್‌ ಆಗಿದ್ದೆ. ಈ ಸಲ ಸ್ವಲ್ಪ ನರ್ವಸ್‌ ಆಗಿದ್ದೇನೆ. ಆದರೆ ಯಾವಾಗ ನಾನು ನರ್ವಸ್‌ ಆಗಿದ್ನೋ ಆಗೆಲ್ಲಾ ಒಳ್ಳೆಯದೇ ಆಗಿದೆ ನನಗೆ.

ಮನುಷ್ಯನ ವರ್ತನೆಗಳ ಅಧ್ಯಯನ ಬಿಗ್‌ಬಾಸ್‌ ಅಂತ ಹೇಳಿದ್ರಿ. ಏಳನೇ ಸೀಸನ್‌ ಇದು. ಏನನ್ನಿಸ್ತಿದೆ?

ನನ್ನ ಪ್ರಕಾರ ಬಿಗ್‌ಬಾಸ್‌ ದೊಡ್ಡ ಸೋಷಿಯಲ್‌ ಎಕ್ಸ್‌ಪೆರಿಮೆಂಟ್‌. ಇದಕ್ಕಿಂತ ದೊಡ್ಡ ಸೋಷಿಯಲ್‌ ಎಕ್ಸ್‌ಪೆರಿಮೆಂಟ್‌ ಮಾಡೋಕೆ ಸಾಧ್ಯವೇ ಇಲ್ಲ. ಈ ಆರು ವರ್ಷಗಳಲ್ಲಿ ಮೂರು ಚಾನಲ್‌ ಮಾಡಿದ್ದೀನಿ. ಹತ್ತಾರು ಶೋ ಬರೆದಿದ್ದೀನಿ, ಎಷ್ಟೋ ಶೋ ಲಾಂಚ್‌ ಮಾಡಿದ್ದೀನಿ. ಆದರೆ ಈ ಶೋ ನನಗೆ ತುಂಬಾ ಸ್ಪೆಷಲ್‌. ಯಾಕೆ ಸ್ಪೆಷಲ್‌ ಅಂದ್ರೆ ರಿಯಾಲಿಟಿ ಶೋ ಎಂಬ ಪದಕ್ಕೆ ನಿಜವಾದ ಅರ್ಥ ಬರುವ ಶೋ ಇದು. ಇದಕ್ಕಿಂತ ರಿಯಲ್‌ ಆದ ಶೋ ಬೇರೆ ಯಾವುದೂ ಇಲ್ಲ. ಬಂದಿರುವ ಸ್ಪರ್ಧಿಗಳನ್ನು ಒಂದು ಸವಾಲಿಗೆ ಒಡ್ಡಿದಾಗ ಅವರು ಹೇಗೆ ರೆಸ್ಪಾನ್ಸ್‌ ಮಾಡುತ್ತಾರೆ ಅನ್ನುವುದು ಇಂಟರೆಸ್ಟಿಂಗ್‌ ಆಗಿರುತ್ತದೆ.

ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್​: ನಿವೇದಿತಾ-ಚಂದನ್ ಶೆಟ್ಟಿಗೆ ಸಂಕಷ್ಟ

ಬಿಗ್‌ಬಾಸ್‌ನಿಂದ ಸಿಕ್ಕಿದ್ದೇನು, ದಕ್ಕಿದ್ದೇನು?

ಇಲ್ಲಿನ ಒಬ್ಬೊಬ್ಬ ಸ್ಪರ್ಧಿಗಳೂ ನನಗೆ ಒಂದೊಂದು ಪುಸ್ತಕ. ಹಾಗಾಗಿ ಹತ್ತಾರು ಪುಸ್ತಕಗಳನ್ನು ಓದಿದ ಅನುಭವ ಆಗಿದೆ. ಈ ಶೋ ಮಾಡುವ ಮೊದಲು ಒಂದಷ್ಟುಪುಸ್ತಕಗಳನ್ನು ಓದಬೇಕಾಗುತ್ತದೆ. ಬೇರೆ ಬೇರೆ ಪುಸ್ತಕಗಳ ಓದು ಇರಬಹುದು, ಸಿನಿಮಾ ಓದು ಇರಬಹುದು, ಕತೆ ಓದು ಇರಬಹುದು ಅಥವಾ ಮನುಷ್ಯರ ಓದು ಇರಬಹುದು. ಎಲ್ಲವೂ ಇಲ್ಲಿ ಇಂಪಾರ್ಟೆಂಟು. ಕತೆ ಮಾಡೋಕೆ ರಿಯಾಲಿಟಿ ಇಂಪಾರ್ಟೆಂಟು. ರಿಯಾಲಿಟಿ ಮಾಡೋಕೆ ಕತೆ ಇಂಪಾರ್ಟೆಂಟು. ಒಂದು ಕತೆ ರಿಯಲ್‌ ಆಗಿದ್ದರೆ ಚೆಂದ. ರಿಯಾಲಿಟಿ ಸ್ವಲ್ಪ ಕತೆ ಇದ್ದಂತೆ ಇದ್ದರೆ ಚೆಂದ. ಕತೆಗಿಂತ ಬ್ಯೂಟಿಫುಲ್‌ ಟ್ವಿಸ್ಟ್‌ಗಳನ್ನು ನಾನು ಇಲ್ಲಿ ನೋಡಿದ್ದೇನೆ. ಹಾಗೆಲ್ಲಾ ಆದಾಗ ಲೈಫ್‌ ಇಸ್‌ ಸ್ಪ್ರೇಂಜರ್‌ ದ್ಯಾನ್‌ ಫಿಕ್ಷನ್‌ ಅಂತ ನನಗೆ ಅನ್ನಿಸುತ್ತದೆ. ಬಿಗ್‌ಬಾಸ್‌ಗೆ ಬಂದಿರುವ ಕಂಟೆಸ್ಟೆಂಟ್‌ಗಳು, ಅಲ್ಲಿ ಆಗಿರುವ ಅನುಭವಗಳು, ಅವರನ್ನು ಓದಿದಾಗ ಸಿಕ್ಕಿರುವ, ದಕ್ಕಿರುವ ಕಾಣ್ಕೆಗಳು ನನಗೆ ಕತೆಗಾರನಾಗಿಯೂ ಬಹಳ ಉಪಯೋಗ ಆಗಿವೆ.

ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?

ಇದರಲ್ಲಿ ನಿಮಗೆ ಫೇವರಿಟ್‌ ಪುಸ್ತಕ ಯಾವುದು, ಕೆಟ್ಟಪುಸ್ತಕ ಯಾವುದು?

ಕೆಟ್ಟಪುಸ್ತಕ ಅಂತ ಇರಲ್ಲ. ಕೆಟ್ಟಓದುಗ ಇರುತ್ತಾನೆ. ನಾನು ಒಂದು ಪುಸ್ತಕ ಅಂತ ತೆಗೆದುಕೊಳ್ಳುವುದು ಕಷ್ಟಇದೆ. ನಾನು ಈವರೆಗೆ ಒಟ್ಟು ಐದು ಸೀಸನ್‌ ಮಾಡಿದ್ದೀನಿ. ಅದರಲ್ಲಿ ಹೆಸರುಗಳನ್ನು ತೆಗೆದುಕೊಳ್ಳುವುದಾದರೆ. ಮೊದಲ ಸೀಸನ್ನಲ್ಲಿ ವಿಜಯ ರಾಘವೇಂದ್ರ ಒಂದು ಒಳ್ಳೆಯ ಪುಸ್ತಕ. ಅದರಲ್ಲಿ ಬಂದಿರುವ ಚಿತ್ರಗಳು, ತಿರುವುಗಳನ್ನು ನೋಡಿದರೆ ಉತ್ತಮ ಪುಸ್ತಕ ಅನ್ನಿಸುತ್ತದೆ. ಅರುಣ್‌ ಸಾಗರ್‌ ಥ್ರಿಲ್ಲರ್‌, ಆ್ಯಕ್ಷನ್‌, ಕಾಮಿಡಿ ಹೀಗೆ ಬೇರೆ ಬೇರೆ ಜಾನರ್‌ಗಳನ್ನು ಮಿಕ್ಸ್‌ ಮಾಡಿದ ಬ್ಯೂಟಿಫುಲ್‌ ಪುಸ್ತಕ. ನಿಖಿತಾ ಮತ್ತೊಂದು ಥರ. ಅರ್ಧ ಇಂಗ್ಲಿಷ್‌, ಅರ್ಧ ಹಿಂದಿ, ಅರ್ಧ ಕನ್ನಡದಲ್ಲಿ ಬರೆದ ಇಂಟರೆಸ್ಟಿಂಗ್‌ ಪುಸ್ತಕ.

 

ಮೂರನೇ ಸೀಸನ್‌ಗೆ ಬಂದ್ರೆ ಮಾಸ್ಟರ್‌ ಆನಂದ್‌ ಬಹಳ ಹೊಳಹುಗಳು ತುಂಬಿರುವ ಒಂದು ಚೆಂದದ ಪುಸ್ತಕ. ಶ್ರುತಿ, ಚಂದನ್‌ ಕೂಡ ಅಷ್ಟೇ ಮುಖ್ಯ ಇಲ್ಲಿ. ನಾಲ್ಕನೇ ಸೀಸನ್‌ಗೆ ಬಂದ್ರೆ ಕಳೆದ ಆರೂ ಸೀಸನ್‌ಗಳಲ್ಲಿ ಅತ್ಯುತ್ತಮ ನಡವಳಿಕೆ ತೋರಿರುವ ಮತ್ತು ತಮ್ಮ ಅಭಿಪ್ರಾಯವನ್ನು ಆರಾಮಾಗಿ ಹೇಳಿದ ಮತ್ತು ತಮ್ಮತನವನ್ನು ಉಳಿಸಿಕೊಂಡು ಸಮಾಧಾನದಿಂದ ಆಡಿ ಬಂದಂತಹ ರೇಖಾಗಿಂತ ಅದ್ಭುತ ಪುಸ್ತಕ ಬೇರೆ ಸಿಗುವುದಿಲ್ಲ. ಅಲ್ಲಿ ಕೀರ್ತಿ ಬೇರೆ ಥರದ ಪುಸ್ತಕ. ಐದನೇ ಸೀಸನ್‌ಗೆ ಬಂದ್ರೆ ಚಂದನ್‌, ನಿವೇದಿತಾ ಚೆನ್ನಾಗಿ ಓದೋಕೆ ಆಯ್ತು ಅನ್ನಿಸಿತು. ಆರನೇ ಸೀಸನ್ನಲ್ಲಿ ಕವಿತಾ, ನವೀನ್‌ ಸಜ್ಜು. ಉಳಿದಂತೆ ಅನುಪಮಾ, ಶ್ರುತಿ ಪ್ರಕಾಶ್‌ ಪುಸ್ತಕ ನನಗಿಷ್ಟ. ಇವೆಲ್ಲಾ ನನ್ನ ವೈಯಕ್ತಿಕ ಅಭಿಪ್ರಾಯಗಳು. ನಾನೂ ವೋಟ್‌ ಮಾಡುತ್ತೇನೆ. ನಾನು ವೋಟ್‌ ಮಾಡಿದವರು ಗೆಲ್ಲಬೇಕು ಅಂತೇನೂ ಇಲ್ಲ.

ಅಶ್ಲೀಲತೆ, ಧಾರ್ಮಿಕ ಭಾವನೆಗೆ ಧಕ್ಕೆ: ಬಿಗ್‌ ಬಾಸ್‌ಗೆ ನಿಷೇಧ ಭೀತಿ!

ಬಿಗ್‌ಬಾಸ್‌ನಂತ ಶೋ ಬೇಕಾ ಎಂಬ ಟೀಕೆಗಳಿವೆ...

ಹಾಗೆ ಕೇಳುವವರಿಗೆ ನನ್ನದೊಂದು ಪ್ರಶ್ನೆ ಇದೆ. ಅವರೆಲ್ಲಾ ಮನರಂಜನೆಗಾಗಿ ಏನೂ ಮಾಡೋದೇ ಇಲ್ವಾ? ಹಾಗೆ ನೋಡಿದರೆ ಸಿನಿಮಾ ಎಲ್ಲಾ ಇರಲೇಬಾರದು. ಕ್ರಿಕೆಟ್‌ ಆಡಲೇಬಾರದು. ಎಲ್ಲರೂ ರೈತನಾಗಲು ಸಾಧ್ಯವಿಲ್ಲ. ರೈತ ರೈತನ ಕೆಲಸ ಮಾಡಬೇಕು. ಬ್ಯಾಡ್ಮಿಂಟನ್‌ ಆಡುವವರು ಬ್ಯಾಡ್ಮಿಂಟನ್‌ ಆಡಬೇಕು. ಅದೆಲ್ಲಾ ಸೇರಿದಾಗಲೇ ಜೀವನ ಅಲ್ವಾ. ಬೇಸಿಕ್‌ ಅಂತ ಬಂದಾಗ ರೈತನ ಕೆಲಸಕ್ಕಿಂತ ಬೇರೆ ಕೆಲಸ ಇಲ್ಲ. ನಾನು ಒಪ್ಪಿಕೊಳ್ಳುತ್ತೇನೆ. ನಾನೂ ಐದು ವರ್ಷ ರೈತನಾಗಿ ಕೆಲಸ ಮಾಡಿದ್ದೇನೆ. ಟಿಲ್ಲರ್‌ ತೆಗೆದುಕೊಂಡು ಗದ್ದೆ ಉತ್ತು ಬಿತ್ತಿದ್ದೇನೆ. ರೈತನ ಕೆಲಸ, ಅದರ ನಶ್ವರತೆ, ರೈತನಿಗೂ ಇರಬಹುದಾದ ದುಡ್ಡಿನ ಆಸೆಯ ಅನುಭವ ಇದೆ. ರೈತನದು ಸೃಷ್ಟಿಕ್ರಿಯೆ. ಭತ್ತದ ಬೀಜ ಬಿತ್ತಿ, ಅದು ಗಿಡವಾಗಿ, ಭತ್ತವಾಗಿ, ಅದನ್ನು ಕೊಯ್ದು, ಚೀಲದಲ್ಲಿ ತುಂಬಿ, ಒಂದು ಮೂಟೆಯಿಂದ ಆಗಿರುವ ನೂರು ಮೂಟೆ ಆಗಿದ್ದನ್ನು ನೋಡಿ ಖುಷಿ ಪಟ್ಟಅನುಭವ ಇದೆ. ಆದೆ ಬಿಗ್‌ಬಾಸ್‌ ಇಷ್ಟುಸರಳವಾಗಿಲ್ಲ. ತಿನ್ನಲು ಸಾಧ್ಯವಾಗುವಂತಹದ್ದನ್ನು ಇಲ್ಲಿ ಯಾವುದೂ ನಾವು ಕ್ರಿಯೇಟ್‌ ಮಾಡಿರಲ್ಲ. ಆದರೆ ಎರಡೂ ಅವಶ್ಯಕತೆ ಇರುವಾಗ ಯಾವುದು ಹೆಚ್ಚು, ಯಾವುದು ಕಡಿಮೆ ಅಂತ ಹೇಗೆ ಹೇಳುವುದು.

 

ರೈತನಲ್ಲಿ ದುಡ್ಡಿನ ಆಸೆ ಇರಲ್ಲ ಅಂತ ಹೇಳೋಕಾಗಲ್ಲ. ಬಿಗ್‌ಬಾಸ್‌ ಶೋದಲ್ಲಿ ರೈತನ ಜೀವಂತಿಕೆ ಇಲ್ಲ ಅಂತ ಹೇಳಕಾಗಲ್ಲ. ಎರಡೂ ಇದೆ. ಅಕ್ಕಿ ಬೆಳೆಯುವಷ್ಟುಉಪಯೋಗ ಇದರಿಂದ ಆಗಲಿಕ್ಕಿಲ್ಲ. ಆದರೆ ಬೇರೆ ಎಲ್ಲಾ ಕೆಲಸಗಳಷ್ಟೇ ಉಪಯೋಗ ಇದರಲ್ಲೂ ಇದೆ. ಶಿಕ್ಷಣ ಅಂತ ನೋಡಿದ್ರೆ ಬಿಗ್‌ಬಾಸ್‌ನಲ್ಲೂ ಇದೆ. ಓದುವುದಕ್ಕೆ ಎಲ್ಲಾ ಕಡೆ ಸಿಗುತ್ತದೆ. ನೀವು ಹೇಗೆ ಓದುತ್ತೀರಿ ಅನ್ನುವುದು ಇಂಪಾರ್ಟೆಂಟು. ರೈತನ ಕೆಲಸ ಬಿಟ್ಟು ಉಳಿದೆಲ್ಲಾ ಕೆಲಸಗಳಷ್ಟೇ ಉಪಯುಕ್ತ ಅಥವಾ ಅನುಪಯುಕ್ತ.

ವೆಂಕಟ್‌ ಥರದವರನ್ನು ಸೃಷ್ಟಿಸುವುದೇ ಈ ಥರದ ಶೋಗಳು ಎಂಬ ಆರೋಪಕ್ಕೆ ನಿಮ್ಮ ಉತ್ತರ ಏನು?

ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈವರೆಗಿನ 103 ಸ್ಪರ್ಧಿಗಳಲ್ಲಿ ಒಬ್ಬ ವೆಂಕಟ್‌ ಥರದ ಉದಾಹರಣೆಗಳಿಗೆ ನಾನು ತುಂಬಾ ಎಚ್ಚರಿಕೆಯಿಂದ ಇರಬೇಕು ಅಂತ ಅನ್ನಿಸುತ್ತದೆ. ಆದರೆ 104 ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಹೀಗಾಗಿದ್ದಕ್ಕೆ ನೀವು ದೂರುತ್ತೀರಿ ಎಂದರೆ ಬೇರೆ ವ್ಯಕ್ತಿಗಳು ಸರಿ ಇದ್ದಾರಲ್ಲವೇ.. ವೆಂಕಟ್‌ ಸೃಷ್ಟಿಯಾಗಿದ್ದು ಬಿಗ್‌ಬಾಸ್‌ನಿಂದ ಅಂತೂ ಅಲ್ಲ. ಬಿಗ್‌ಬಾಸ್‌ಗಿಂತ ಮೊದಲೇ ಅವರೊಂದು ವ್ಯಕ್ತಿತ್ವವಾಗಿದ್ದರು. ಬಿಗ್‌ಬಾಸ್‌ಗೆ ಅವರನ್ನು ತರುವ ನನ್ನ ನಿರ್ಧಾರವನ್ನು ಬೇಕಾದರೆ ಪ್ರಶ್ನೆ ಮಾಡಿಕೊಳ್ಳಬಹುದು. ಅದರ ಬಗ್ಗೆ ನನಗೆ ಹೆಮ್ಮೆ ಇಲ್ಲ. ಆದರೆ ಅವರನ್ನು ಇಟ್ಟುಕೊಂಡು ಇಂಥಾ ಕ್ಯಾರೆಕ್ಟರ್‌ಗಳನ್ನೇ ಸೃಷ್ಟಿಮಾಡುತ್ತೀರಿ ಎಂದರೆ ಎಂಥಾ ಕ್ಯಾರೆಕ್ಟರ್‌ಗಳನ್ನು ಸೃಷ್ಟಿಮಾಡುತ್ತೇವೆ ಹೇಳಿ ನೀವು.. ಬಿಗ್‌ಬಾಸ್‌ ಆದ ಮೇಲೆ ಆಗುವುದು ನನ್ನ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ ಅನಂತರ ಅವರು ಏನು ಮಾಡಿದರೂ ನನ್ನ ಮೇಲೇ ಬರುತ್ತದೆ. ಖ್ಯಾತಿ ಬಂದಾಗ ಅದನ್ನು ಹೇಗೆ ನಿಭಾಯಿಸುತ್ತಾರೆ ಅನ್ನುವುದು ಅವರವರಿಗೆ ಬಿಟ್ಟಿದ್ದು. ಬಿಗ್‌ಬಾಸ್‌ ಅಂತ ಅಲ್ಲ ಸಿನಿಮಾ ಮಾಡಿ ಖ್ಯಾತಿ ಬಂದು ಆಮೇಲೆ ಜೀವನ ಹಾಳು ಮಾಡಿಕೊಂಡವರು ಎಷ್ಟೋ ಜನ ಇದ್ದಾರೆ.

ಸುದೀಪ್‌ ಯಾಕೆ?

ಈ ಶೋ ನಡೆಸಿಕೊಡುವುದಕ್ಕೆ ಸುದೀಪ್‌ ಅತ್ಯಂತ ಸರಿಯಾದ ವ್ಯಕ್ತಿ ಅಂತ ಹೇಳುವುದಕ್ಕೆ ನನ್ನ ಬಳಿ ಹತ್ತಾರು ಕಾರಣಗಳಿವೆ.

1. ಬಿಗ್‌ಬಾಸ್‌ ನಡೆಸಿಕೊಡಲು ಸ್ಕಿ್ರಪ್ಟ್‌ ಇಲ್ಲದೆ ಒಂದು ಸಿಚುವೇಷನ್ನಿಗೆ ಪ್ರತಿಕ್ರಿಯೆ ಕೊಡುವ ಒಬ್ಬ ಸೂಕ್ಷ್ಮ ಸಂವೇದನೆಯ ಬುದ್ಧಿವಂತ ವ್ಯಕ್ತಿ ಬೇಕಾಗಿತ್ತು.

2. ಬಿಗ್‌ ಅನ್ನುವುದರಲ್ಲೇ ಒಂದು ವಿಷಯ ಇದೆ. ಬಿಗ್‌ ಅಂದ್ರೆ ಶನಿವಾರದ ಪಂಚಾಯಿತಿ ನಡೆಸುವಾಗ ಅಲ್ಲಿ ಯಾರೋ ಒಬ್ಬರು ಮಾತನಾಡಿದರೆ ಅವರಿಗೆ ಒಂದು ತೂಕ ಇರಬೇಕಾಗುತ್ತದೆ. ಇಲ್ಲದಿದ್ದರೆ ಪಂಚಾಯಿತಿ ಮಾಡೋಕಾಗಲ್ಲ. ಕಿತ್ತಾಟ ಆದ್ರೆ ಐದು ಜನ ಗೃಹಸ್ಥರನ್ನು ಕೂರಿಸಿ ಅಂತೀವಿ. ಗೃಹಸ್ಥರು ಅಂದ್ರೆ ಜೀವನ ನೋಡಿದವರು. ತೂಕ ಇರುವ ವ್ಯಕ್ತಿಗಳು. ಆ ತೂಕ ಯಾರೂ ಅವರಿಗೆ ಕೊಡೋಕಾಗಲ್ಲ. ಅದನ್ನು ಅವರೇ ಗಳಿಸಿಕೊಂಡಿರುವುದು. ಹಾಗೊಂದು ಪಂಚಾಯಿತಿ ನಡೆಸುವುದಕ್ಕೆ ಸುದೀಪ್‌ ಅವರಿಗಿಂತ ಒಳ್ಳೆಯ ವ್ಯಕ್ತಿ ಇರಲಿಲ್ಲ.

3. ಬಿಗ್‌ಬಾಸ್‌ ನಡೆಸಿಕೊಡುವುದಕ್ಕೆ ಪ್ರತ್ಯುತ್ಪನ್ನಮತಿತ್ವ ಬೇಕಾಗುತ್ತದೆ. ಸ್ಪಾಂಟೇನಿಟಿ ಬೇಕು. ಯಾರೋ ಒಬ್ಬ ಸ್ಪರ್ಧಿ ಮಾತಾಡಿದಾಗ ಉತ್ತರ ಕೊಡಲು ಸ್ಕಿ್ರಪ್ಟ್‌ಗಾಗಿ ಕಾಯೋಕಾಗಲ್ಲ. ಅದನ್ನು ಅವರೇ ಕೊಡಬೇಕು. ಇಂಟರೆಸ್ಟಿಂಗ್‌ ಆಗಿ ಕೊಡಬೇಕು.

'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'

4. ಈ ಶೋ ದೊಡ್ಡದಾಗುವುದು ಹೊಸಬರು ಇಲ್ಲಿಗೆ ಬಂದಾಗ. ಸುದೀಪ್‌ ಅವರನ್ನು ಇಷ್ಟಪಡುವ ದೊಡ್ಡದೊಂದು ಬಳಗ ಇದನ್ನೊಮ್ಮೆ ಎಕ್ಸ್‌ಪೆರಿಮೆಂಟ್‌ ಆಗಿ ನೋಡುವುದಕ್ಕೆ ಆಸೆ ಪಡುತ್ತಾರೆ. ಅವರ ಆ ಬಳಗ ಬೇರೆ ರಾಜ್ಯದವರೂ ಆಗಿರಬಹುದು. ಅವರೆಲ್ಲಾ ಬಂದಾಗ ಈ ಶೋ ಬೇರೆ ಲೆವೆಲ್ಲಿಗೆ ಹೋಗುತ್ತದೆ. ಅದು ಒಬ್ಬ ನಟನ ಶಕ್ತಿ. ಅವರ ಪವರ್‌ ಅನ್ನು ಕೂಡ ಇಲ್ಲಿ ಅವರು ಒಂದು ರೀತಿಯಲ್ಲಿ ಧಾರೆ ಎರೆಯುತ್ತಾರೆ.

5. ಕನ್ನಡದ ಬಗ್ಗೆ ಪ್ರೀತಿ ಇರಬೇಕು. ಕನ್ನಡ ಬಳಸುವಾಗ ಸಣ್ಣ ಎಚ್ಚರಿಕೆ ಇರಬೇಕು. ಸುದೀಪ್‌ ಅವರಿಗೆ ಎರಡೂ ಇದೆ.

6. ಅಷ್ಟುದೊಡ್ಡ ಸಾಧನೆಯ ಹಿನ್ನೆಲೆಯಲ್ಲಿ ಒಂದು ಗಡುಸಾದ ಧ್ವನಿಯಲ್ಲಿ ಹೇಳಿದಾಗ ಯಾರು ಬೇಕಾದರೂ ಮಾತು ಕೇಳುತ್ತಾರೆ. ಸುಮ್ಮನೆ ಮಾತಾಡಿದರೇ ಚೆನ್ನಾಗಿರುತ್ತದೆ. ಅಂಥದ್ದರಲ್ಲಿ ಇಂಟರೆಸ್ಟಿಂಗ್‌ ಆಗಿ ಮಾತಾಡಿದರೆ ಅದಕ್ಕಿಂತ ಇನ್ನೇನು ಬೇಕು. ಅವರು ಎತ್ತರದ ವ್ಯಕ್ತಿತ್ವ ಅನ್ನುವುದು ಆರಡಿ ಹೈಟು ಅನ್ನುವುದೂ ಹಿಡಿದು ಅವರ ಸಾಧನೆಯ ಲೆಕ್ಕವೂ ಹೌದು. ಅವರು ಅಷ್ಟೆತ್ತರ ಇದ್ದಾರೆ. ಆ ಎತ್ತರ ನಮ್ಮ ಶೋಗೆ ಅಗತ್ಯ.

7. ಅತ್ಯಂತ ಸಜ್ಜನ, ಸ್ನೇಹ ಇದೆ. ಪ್ರತೀ ಸಲ ನಾನು ಶೋ ಮಾಡೋ ಮೊದಲು ಅವರ ಬಳಿ ಕೇಳುತ್ತೇನೆ. ಮಾಡೋದಾ ಬೇಡ್ವಾ ಎನ್ನುತ್ತೇನೆ. ಅವರು ಮಾಡೋಣ, ಮಾಡೋಣ ಎನ್ನುತ್ತಾರೆ. ಅವರಿಗೂ ಬಿಗ್‌ಬಾಸ್‌ ಅಂದ್ರೆ ಇಷ್ಟಇದೆ.

8. ಹಾಡಬೇಕು ಅಂದ್ರೆ ಹಾಡುತ್ತಾರೆ. ಕ್ರಿಕೆಟ್‌ ಬಗ್ಗೆ ಅಥೆಂಟಿಕ್‌ ಬಗ್ಗೆ ಮಾತಾಡುತ್ತಾರೆ. ಬಹಳ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅವರು ನಿಜವಾಗಲೂ ಮಲ್ಟಿಟ್ಯಾಲೆಂಟೆಡ್‌. ಇಂಥಾ ಒಂದು ಪ್ರತಿಭೆ ನಮ್ಮ ಶೋ ನಡೆಸಿಕೊಡುತ್ತಾರೆ ಅನ್ನುವುದೇ ನಮಗೆ ದೊಡ್ಡ ಹೆಮ್ಮೆ.

ಹಿಂದಿ ಬಿಗ್‌ಬಾಸ್‌ ಸಲ್ಮಾನ್‌ ಖಾನ್‌, ಕನ್ನಡ ಬಿಗ್‌ಬಾಸ್‌ ಸುದೀಪ್‌ ಈಗ ಆತ್ಮೀಯರಾಗಿದ್ದಾರೆ. ಸಲ್ಮಾನ್‌ ಖಾನ್‌ ಕನ್ನಡ ಬಿಗ್‌ಬಾಸ್‌ ಮನೆಗೆ ಬರುವ ಸಾಧ್ಯತೆ ಉಂಟಾ?

ಕರೆಸುವ ಆಸೆಯೂ ಇದೆ. ಪ್ರಯತ್ನವೂ ನಡೆಯುತ್ತದೆ. ಅವರು ಬಂದರೆ ಚೆನ್ನಾಗಿರುತ್ತದೆ. ನೋಡೋಣ.

ಬಿಗ್‌ಬಾಸ್‌ ಟಾಸ್ಕ್‌ಗಳು ಹೇಗಿರುತ್ತವೆ?

ಬಿಗ್‌ಬಾಸ್‌ ಇನ್‌ಸ್ಟ್ರಕ್ಷನ್‌ಗಳೇ ಅಸಭ್ಯವಾಗಿ ಇರಬಾರದು. ಒಳಗಿರುವವರು ಹೇಗೆ ವರ್ತಿಸುತ್ತಾರೆ ಅನ್ನುವುದು ಹೇಳುವುದಕ್ಕಾಗಲ್ಲ. ಆದರೆ ಒಂದಂತೂ ನಾನು ಭರವಸೆ ಕೊಡುತ್ತೇನೆ. ಕನ್ನಡ ಬಿಗ್‌ಬಾಸ್‌ನಲ್ಲಿ ಸಿಲ್ಲಿ ಟಾಸ್ಕ್‌ಗಳು ಇರುವುದಿಲ್ಲ.

ಸ್ಪರ್ಧಿಗಳನ್ನು ಆರಿಸುವಾಗ ನಿಮ್ಮ ಮಾನದಂಡಗಳೇನು?

ಖಂಡಿತಾ ಇರುತ್ತದೆ. ಸ್ಪರ್ಧಿಗಳಿಗೆ ಸ್ಕಿ್ರಪ್ಟ್‌ ಇರಲ್ಲ. ಏನೂ ಇರಲ್ಲ. ಹಾಗಾಗಿ ಸ್ಪರ್ಧಿಗಳಲ್ಲಿ ಡೆಪ್‌್ತ ಇದೆಯಾ ಅಂತ ನೋಡುತ್ತೇವೆ. ಅನುಭವ ಭಂಡಾರ ಎಷ್ಟಿದೆ ಅನ್ನುವುದು ನಮಗೆ ಮುಖ್ಯ. ಒಂದೇ ವಾರದಲ್ಲಿ ಖಾಲಿಯಾಗಬಾರದು. ಹೋಗ್ತಾ ಹೋಗ್ತಾ ಹೊಸತಾಗಬೇಕು. ಅವರನ್ನು ಅವರು ಇಂಪ್ರೂವ್‌ ಮಾಡಿಕೊಳ್ಳುತ್ತಾ, ಬದಲಾದ ತಮ್ಮನ್ನು ತಾವು ತೋರಿಸಿಕೊಳ್ಳುವುದೇ ಇಲ್ಲಿನ ವಿಶೇಷತೆ.

ಬಿಗ್‌ಬಾಸ್‌ ಬರೋಕೆ ಸೆಲೆಬ್ರಿಟಿಗಳು ಹೆದರ್ತಾರಾ?

ಈ ಶೋ ಚೆನ್ನಾಗಿಲ್ಲ ಅಂತ ಹೆದರುವವರು ಸಿಕ್ಕಿಲ್ಲ ಅಂತ ಅಲ್ಲ. ಸಿಕ್ಕಿದ್ದಾರೆ. ಮೂರು ತಿಂಗಳು ದೂರ ಇರಬೇಕಲ್ಲ ಅನ್ನುವ ಕಾರಣಕ್ಕೆ ಹೆದರುತ್ತಾರೆ. ಅಯ್ಯೇ ನಾನೇನೋ ಹೇಳಿಕೊಂಡು ಬಿಡ್ತೀನಿ, ನನ್ನ ಹುಳುಕು ಬಿಟ್ಟುಕೊಟ್ಟುಬಿಡುತ್ತೇನೆ ಎಂಬ ಭಾವನೆಗಳು ಕೆಲವರಲ್ಲಿ ಇದೆ. ಇಲ್ವೇ ಇಲ್ಲ ಅಂತ ಹೇಳಕಾಗಲ್ಲ. ಹಾಗಂತ ತುಂಬಾ ಜನರಲ್ಲಿದೆ ಅಂತಾನೂ ಅಲ್ಲ. ಇಂಟರೆಸ್ಟಿಂಗ್‌ ಅಂದ್ರೆ ತುಂಬಾ ಜನ ನಮ್ಮನ್ನು ಓಡಿಸಿಕೊಂಡು ಬರುತ್ತಾರೆ. ಈ ಶೋದಲ್ಲಿ ನಾನೂ ಇರಬೇಕು ಅಂತ ಕಾಲ್‌ಗಳು ಬರುತ್ತವೆ.

ಬಿಗ್‌ಬಾಸ್‌ ಮನೆಗೆ ಹೋಗುವಾಗ ಸೇಫ್‌ ಗೇಮ್‌ ಆಡ್ತೀನಿ ಅಂತ ಹೋದವರು ಇದ್ದಾರಾ?

ಇದ್ದಾರೆ. ನಿಮಗೂ ಗೊತ್ತಿರುತ್ತದೆ. ಆದರೆ ಅವರು ಹೆಚ್ಚು ದಿನ ಒಳಗೆ ಉಳಿಯಲ್ಲ.

ಮನೆಯೊಳಗೆ ಸಿಗರೇಟು, ಮೆಡಿಕೇಷನ್‌ ಕೊಡುತ್ತೀರಾ?

ಮನೆಯಲ್ಲೇ ಡಾಕ್ಟರ್‌ ಇರುತ್ತಾರೆ. ಸಿಗರೇಟು ಬೇಕೇಬೇಕು ಅನ್ನುವವರಿಗೆ ಕೊಡುತ್ತೇವೆ. ಅದರಲ್ಲೂ ಆಟ ಆಡುತ್ತೇವೆ. ಕೆಲವೊಮ್ಮೆ ಕೊಡುತ್ತೇವೆ. ಮತ್ತೊಮ್ಮೆ ಕೊಡಲ್ಲ. ಒಮ್ಮೊಮ್ಮೆ ಏಸಿ ಜಾಸ್ತಿ ಮಾಡುತ್ತೇವೆ. ಕಡಿಮೆ ಮಾಡುತ್ತೇವೆ. ಇರಿಟೇಟ್‌ ಮಾಡುತ್ತಾ ಇರುತ್ತೇವೆ.

ಬಿಗ್‌ಬಾಸ್‌ ಬಜೆಟ್‌ ಎಷ್ಟು?

ಹೊಸ ಮನೆ ಇದೆ. ಆರಂಭದ ಸೀಸನ್ನಿಗಿಂತ ಈ ಸೀಸನ್ನಿಗೆ ಒಂದೆರಡು ಕೋಟಿ ರೂಪಾಯಿ ಖರ್ಚು ಜಾಸ್ತಿಯಾಗಿರಬಹುದು. ಒಂದು ಮಾತು ಸತ್ಯ. ಇದು ಕನ್ನಡದ ಅತ್ಯಂತ ಕಾಸ್ಟಿ$್ಲೕ ಶೋ.

Follow Us:
Download App:
  • android
  • ios