ಮಲೆನಾಡಿಗರಿಗೆ ಗುಡ್ ನ್ಯೂಸ್ ! ಬೆಂಗಳೂರು - ಶಿವಮೊಗ್ಗ ಈಗ ಇನ್ನಷ್ಟು ಹತ್ತಿರ!
ಮಲೆನಾಡಿಗರಿಗೆ ಇಲ್ಲಿದೆ ಗುಡ್ ನ್ಯೂಸ್. ಇನ್ನುಮುಂದೆ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಯಲ್ಲಿ ಪ್ರಯಾಣ ಮಾಡಬಹುದಾಗಿದೆ. ಜನಶತಾಬ್ದಿ ರೈಲು ಇನ್ನು ನಾಲ್ಕು ದಿನಗಳಲ್ಲಿ ಸಂಚಾರ ಆರಂಭಿಸಲಿದೆ.
ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರಿನ ನಡುವೆ ಫೆ.3 ರಂದು ಸಂಜೆ ಜನಶತಾಬ್ಧಿ ರೈಲಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಜನಶತಾಬ್ದಿ ರೈಲಿಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಫೆ.3 ರಂದು ಸಭಾ ಕಾರ್ಯಕ್ರಮ ನಡೆಯಲಿದ್ದು ಫೆ.4 ರಂದು ಬೆಳಿಗ್ಗೆ 5.30ಕ್ಕೆ ಶಿವಮೊಗ್ಗದಿಂದ ಜನಶತಾಬ್ಧಿ ಹೊರಡಲಿದೆ. 10 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಸಂಜೆ 5-30 ಕ್ಕೆ ತೆರಳಲಿದ್ದು ರಾತ್ರಿ ಶಿವಮೊಗ್ಗ 10 ಗಂಟೆ ತಲುಪಲಿದೆ ಎಂದರು.
ವಾರದಲ್ಲಿ ಮೂರು ದಿನ ಈ ರೈಲು ಸಂಚರಿಸಲಿದ್ದು ರೈಲಿನ ದರ 450 ರು. ನಿಗದಿಪಡಿಸಲಾಗಿದೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ರೈಲು ಸಂಚರಿಸಲಿದ್ದು, ಶನಿವಾರ ಹಾಗೂ ಭಾನುವಾರ ಸಂಚರಿಸಲೂ ಮಾತುಕತೆ ನಡೆಯಲಿದೆ ಎಂದರು.
ನಿಲ್ದಾಣ : ಶಿವಮೊಗ್ಗ-ಬೆಂಗಳೂರಿನ ನಡುವೆ ಸಂಚರಿಸಲು ಭದ್ರಾವತಿ, ಬೀರೂರು, ಕಡೂರು, ಅರಸೀಕೆರೆ ಹಾಗೂ ತುಮಕೂರಿನ ನಡುವೆ ನಿಲುಗಡೆ ನೀಡಲಾಗುತ್ತಿದೆ.
ಹೇಗಿರುತ್ತೆ? : ಜನ್ ಶತಾಬ್ಧಿ ರೈಲಿನಲ್ಲಿ ಎಸಿ ಹಾಗೂ ನಾನ್ ಎಸಿ ಎರಡೂ ವ್ಯವಸ್ಥೆ ಇರಲಿದೆ. ಸಾಮಾನ್ಯ ಜನರ ಪ್ರಯಾಣಕ್ಕೆ ಹೆಚ್ಚು ಅನುಕೂಲಕಾರಿಯಾಗಿದೆ.