ಶಿವಣ್ಣ-ಶಿವೈಕ್ಯರಾಗೋ ತನಕ: ನಡೆದಾಡುವ ದೇವರ ಜೀವನಗಾಥೆ...
ನಡೆದಾಡುವ ದೇವರು, ಕಾಯಕಯೋಗಿ ತುಮಕೂರು ಸಿದ್ಧಗಂಗಾ ಶ್ರೀಗಳ ಅಗಲಿಕೆಯಿಂದ ನಾಡಿನೆಲ್ಲೆಡೆ ಶೋಕ ಮಡುಗಟ್ಟಿದೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು ಸಾರ್ಥಕ ಜೀವನ ನಡೆಸಿದ ತ್ರಿವಿಧ ದಾಸೋಹಿಯ ಹೆಜ್ಜೆಗುರುತುಗಳು
ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳು 111ನೇ ವಯಸ್ಸಿನಲ್ಲಿ ಶಿವೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಯಿಂದ ಭಕ್ತಗಣದಲ್ಲಿ ಶೋಕ ಮಡುಗಟ್ಟಿದೆ. ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ 'ಕಾಯಕಯೋಗಿ' ಶ್ರೀಗಳ ಬದುಕು ಕೂಡಾ ಅತ್ಯಂತ ಸರಳ. ಇಲ್ಲಿದೆ 'ನಡೆದಾಡುವ ದೇವರ' ಹೆಜ್ಜೆ ಗುರುತು.
1908: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಹೊನ್ನಪ್ಪ , ಗಂಗಮ್ಮ ದಂಪತಿ ಪುತ್ರರಾಗಿ ಶಿವಕುಮಾರ ಸ್ವಾಮೀಜಿ ಜನನ. ಸಿದ್ದಗಂಗಾ ಶ್ರೀಗಳ ಪೂರ್ವಶ್ರಾಮದ ಹೆಸರು ಶಿವಣ್ಣ
1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಕೆ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣದಲ್ಲಿತೇರ್ಗಡೆ
1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ ಪೂರೈಸಿದ್ದ ಶ್ರೀಗಳು
1930: ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ
1941: ಜ.11ರಂದು ಶ್ರೀ ಉದ್ಧಾನ ಶಿವಯೋಗಿ ಸ್ವಾಮೀಜಿ ಲಿಂಗೈಕ್ಯ, 1941ರಲ್ಲೇ ಮಠಾಧ್ಯಕ್ಷರಾಗಿ ಶಿವಕುಮಾರ ಸ್ವಾಮೀಜಿ ಅಧಿಕಾರ ಸ್ವೀಕಾರ
1960: ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ
1965: ನ.6 ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ
1970: ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
1972: ಮೇ 26 ಶ್ರೀಮಠದ ಪೀಠಾಧಿಕಾರ ಸ್ವೀಕಾರದ ರಜತ ಮಹೋತ್ಸವ
1984: ನೆಲಮಂಗಲದಲ್ಲಿ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
1988: ಮಾ.30 ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಸ್ವಾಮೀಜಿ ನೇಮಕ
1992: ಫೆ.16 ಶ್ರೀಗಳ ವಜ್ರ ಮಹೋತ್ಸವ ಸ್ಮಾರಕ ಕಟ್ಟಡಗಳ ಶಿಲಾನ್ಯಾಸ
1995: ಫೆ.2 ಸಿದ್ಧಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ
2000-05: ಪ್ರಧಾನಿ ವಾಜಪೇಯಿಯಿಂದ ಸಂಸ್ಕೃತ ಕಾಲೇಜು ಉದ್ಘಾಟನೆ
2005: ಏ.24, 98ನೇ ಜನ್ಮದಿನೋತ್ಸವ ಸಮಾರಂಭ, ದೇಶದ ಗಣ್ಯರು ಭಾಗಿ
2006: ಏ.7 ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಅಬ್ಬುಲ್ ಕಲಾಂ ಭಾಗಿ
2007: ಕರ್ನಾಟಕ ರತ್ನ ಪ್ರಶಸ್ತಿ, ಸಿದ್ದಗಂಗಾ ಶ್ರೀಗಳ ಜನ್ಮಶತಮಾನೋತ್ಸವ
2012: ಗುರುವಂದನಾ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಭಾಗಿ
2013: ಬೆಂಗಳೂರು ವಿವಿಯಿಂದ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನ
2015: ಜುಲೈನಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ
ಹೀಗಿತ್ತು ‘ದೇವರ’ ದಿನಚರಿ
ಶ್ರೀಗಳು ಬೆಳಗಿನ ನಾಲ್ಕು ಗಂಟೆಗೆ ಎದ್ದು ಪೂಜೆ ಮಾಡಿ, ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನ ಮಾಡುತ್ತಿದ್ದರಿು. ಭಕ್ತರಿಗೆ ತ್ರಿಪುಂಡ ಭಸ್ಮವನ್ನು ಕೊಟ್ಟು ಪೂಜೆ ಮುಗಿಸುತ್ತಿದ್ದರು. ಬೆಳಗ್ಗೆ 6.30ಕ್ಕೆ ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರು ಬೇಳೆ-ದಾಲ್, ಖಾರ ಚಟ್ನಿ, ಎರಡು ತುಂಡು ಸೇಬು, ಬಳಿಕ, ಬೇವಿನ-ಚಕ್ಕೆ ಕಷಾಯ ಸೇವಿಸುತ್ತಿದ್ದರು.
ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರತಿ ದಿನವೂ ಭಾಗಿಯಾಗಿ ಪ್ರಾರ್ಥನೆ. ನಂತರ ಕಚೇರಿಗೆ ಧಾವಿಸಿ ಪತ್ರಿಕೆ ಓದುತ್ತಿದ್ರು. ಪ್ರತಿದಿನ ಮಧ್ಯಾಹ್ನ ಭಕ್ತರ ಕಷ್ಟ-ಸುಖಕ್ಕೆ ಸ್ಪಂದಿಸುತ್ತಿದ್ದರು. ಬಳಿಕ ಮುದ್ದೆ, ಅನ್ನ, ಮತ್ತು ತೊಗರಿಬೇಳೆ ಸಾಂಬಾರ್ ಸೇವನೆ ಹಾಗೂ ದಾಸೋಹದ ಮಾಹಿತಿ, ರಾತ್ರಿ 9 ಗಂಟೆಯವರೆಗೂ ನಡೆಯುತ್ತಿತ್ತು. ಓದಿನೊಂದಿಗೆ ಆರಂಭವಾಗಿ ಓದಿನೊಂದಿಗೆ ದಿನ ಮುಕ್ತಾಯಗೊಳಿಸುತ್ತಿದ್ದ ಶ್ರೀಗಳು ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಕುಡಿಯುತ್ತಿದ್ದರು.