ಸರ್ಕಾರದ ವಿರುದ್ಧವೇ ಸಿಡಿದೆದ್ದ ಸಚಿವ : ಕಾರಣವೇನು..?
ಕರ್ನಾಟಕ ಸರ್ಕಾರದ ವಿರುದ್ಧ ಸಚಿವರೋರ್ವರು ತಿರುಗಿಬಿದ್ದಿದ್ದಾರೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ‘ನೇರ ಮೀಸಲಾತಿಗೆ ಅರ್ಹತೆಯಿರುವ ಪ್ರತಿಭಾವಂತ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವರ್ಗದಡಿ (ಜನರಲ್ ಕೆಟಗರಿ) ಗೆಜೆಟೆಡ್ ಹುದ್ದೆ ಪಡೆಯಲು ಲಭ್ಯವಿರುವ ಹಾಲಿ ಅವಕಾಶವನ್ನು ಕರ್ನಾಟಕ ಲೋಕಸೇವಾ ಆಯೋಗವು ನ್ಯಾಯಾಲಯದ ಆದೇಶದ ನೆಪದಲ್ಲಿ ರದ್ದುಪಡಿಸಲು ಮುಂದಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಖಾರವಾದ ಪತ್ರ ಬರೆದಿದ್ದಾರೆ.
ಖರ್ಗೆ ಅವರ ಈ ಪತ್ರವು ಸರ್ಕಾರದಲ್ಲಿ ಒಂದೆಡೆ ಒಡಕು ಮೂಡಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಸರ್ಕಾರದ ವಿರುದ್ಧ ಮೀಸಲಿಗೆ ಅರ್ಹರಾದ ಉದ್ಯೋಗಾಕಾಂಕ್ಷಿಗಳು ಹಾಗೂ ದಲಿತಪರ ಸಂಘಟನೆಗಳು ಹೋರಾಟಕ್ಕಿಳಿಯುವ ಸಾಧ್ಯತೆ ಇದೆ.
‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) 2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. ನೇರ ಮೀಸಲಾತಿಗೆ ಅರ್ಹತೆಯಿರುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಮೆರಿಟ್ ಇದ್ದರೂ ಸಾಮಾನ್ಯ ಪ್ರವರ್ಗದ (ಜನರಲ್ ಕೆಟಗರಿ) ಪಟ್ಟಿಯಲ್ಲಿ ಅವಕಾಶ ಸಿಗದು. ಈ ವಿಚಾರದಲ್ಲಿ ಹೈಕೋರ್ಟ್ ಆದೇಶ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಸರ್ಕಾರವು ಲೋಕಸೇವಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಇದು ಸರಿಯಲ್ಲ. ಇದರಿಂದ ಸಂವಿಧಾನದ ಆಶಯಕ್ಕೆ ಚ್ಯುತಿಯುಂಟಾಗಲಿದ್ದು, ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು’ ಎಂದು ಅವರು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಹೈಕೋರ್ಟ್ ಆದೇಶದ ನೆಪ ಇಟ್ಟುಕೊಂಡು ರಾಜ್ಯ ಸರ್ಕಾರವು ಕೆಪಿಎಸ್ಸಿಗೆ ನೀಡಿರುವ ನಿರ್ದೇಶನವು ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಸೀಮಿತವಾಗಿದ್ದರೂ, ಮುಂದಿನ ದಿನಗಳಲ್ಲಿ ಎಲ್ಲಾ ನೇಮಕಗಳಿಗೂ ಈ ನಿರ್ದೇಶನವು ಮಾದರಿಯಾಗಿ ಪರಿಗಣಿಸಿ ಅನ್ವಯವಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಖರ್ಗೆ ಅವರು ಈ ಪತ್ರ ಬರೆದಿದ್ದಾರೆ.
‘ಸರ್ಕಾರವು ಮೆರಿಟ್ ಇದ್ದರೂ ಆಯಾ ಹಿಂದುಳಿದ ವರ್ಗದ ಸಮುದಾಯದವರು ತಮಗೆ ಮೀಸಲಿರುವ ಮೀಸಲಾತಿ ಹುದ್ದೆಗಳನ್ನು ಮಾತ್ರವೇ ಪಡೆಯಬೇಕು ಎಂಬ ನಿಯಮ ಜಾರಿ ಮಾಡಿದರೆ ಪರಿಶಿಷ್ಟರು, ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳು ಸೇರಿದಂತೆ ಮೀಸಲಾತಿ ಅರ್ಹತೆ ಹೊಂದಿರುವ ವರ್ಗಗಳಿಗೆ ಭಾರಿ ಅನ್ಯಾಯವಾಗಲಿದೆ. ಮುಂದುವರಿದ ಕೆಲವೇ ಸಮುದಾಯಗಳು ಶೇ. 50 ರಷ್ಟುಭಾರಿ ಮೀಸಲಾತಿಯನ್ನು ಅನುಭವಿಸುವಂತಾಗುತ್ತದೆ. ಇದರಿಂದ ಸಮಾಜದಲ್ಲಿ ಮತ್ತೆ ತಾರತಮ್ಯ ಹೆಚ್ಚಾಗಿ, ಹಿಂದುಳಿದ ಸಮುದಾಯಗಳು ಮತ್ತಷ್ಟುಹಿಂದುಳಿಯುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕ ಖರ್ಗೆ ಪತ್ರದಲ್ಲೇನಿದೆ: ‘ಇಲ್ಲಿಯವರೆಗಿನ ನಿಯಮಗಳ ಪ್ರಕಾರ ಪರಿಶಿಷ್ಟಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೆರಿಟ್ ಇದ್ದರೆ, ಸಾಮಾನ್ಯ ಪ್ರವರ್ಗದಡಿ ನಿಗದಿಯಾಗಿರುವ ಹುದ್ದೆಗಳಲ್ಲಿ ನೇಮಕಾತಿಯಾಗುವ ಅವಕಾಶ ಇತ್ತು. ಇದರಿಂದ ಪ್ರತಿಭಾವಂತರು ನೇರ ನೇಮಕ ಹೊಂದುತ್ತಿದ್ದರು. ಕೆಪಿಎಸ್ಸಿಯ ಈಗಿನ ನಿರ್ಧಾರದಿಂದ ಈ ಸಮುದಾಯಗಳನ್ನು ಅವಕಾಶ ವಂಚಿತರನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಸಂವಿಧಾನ ಕಲ್ಪಿಸಿರುವ ನೇರ ಮೀಸಲಾತಿಗೆ ಶೇ.93 ರಷ್ಟುಸಮುದಾಯಗಳು ಅರ್ಹವಾಗಿವೆ. ಇದೀಗ ಮೀಸಲಾತಿಯನ್ನು ಶೇ.50ಕ್ಕೆ ಸೀಮಿತಗೊಳಿಸಿ ಸಾಮಾನ್ಯ ಮೆರಿಟ್ನ ಶೇ.50 ರಷ್ಟುಸ್ಥಾನಗಳನ್ನು ಪಡೆಯುವಂತಿಲ್ಲ ಎಂದು ಹೇಳಿದರೆ ಅಷ್ಟೂಸಮುದಾಯದ ಜನರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಕೂಡಲೇ ಸರ್ಕಾರದ ಚಿಂತನೆಯನ್ನು ಬದಲಿಸಿಕೊಳ್ಳಬೇಕು’ ಎಂದು ಒತ್ತಾಯ ಮಾಡಿದ್ದಾರೆ.
‘ಸಂವಿಧಾನಬದ್ಧವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಪ್ರಾಪ್ತವಾಗಿದೆ. ಪರಿಶಿಷ್ಟಜಾತಿಗೆ ಶೇ.15, ಪರಿಶಿಷ್ಟಪಂಗಡಕ್ಕೆ ಶೇ.3, ಪ್ರವರ್ಗ 1ಕ್ಕೆ ಶೇ.4, ಪ್ರವರ್ಗ 2ಎಗೆ ಶೇ. 15, ಪ್ರವರ್ಗ 2ಬಿಗೆ ಶೇ.4, ಪ್ರವರ್ಗ 3ಎಗೆ ಶೇ.4, ಪ್ರವರ್ಗ 3ಬಿಗೆ ಶೇ.5 ರಂತೆ ಶೇ. 100 ರಷ್ಟುಮೀಸಲಾತಿಯಲ್ಲಿ ಶೇ.50 ರಷ್ಟನ್ನು ಹಿಂದುಳಿದ ವರ್ಗಗಳಿಗೆ ನೀಡಿದೆ. ಉಳಿದ ಶೇ.50 ರಷ್ಟುಸಾಮಾನ್ಯ ವರ್ಗದ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ ಮೀಸಲಾತಿ ಅರ್ಹ ವರ್ಗಗಳ ಅಭ್ಯರ್ಥಿಗಳು ಸೇರಿದಂತೆ ಯಾರು ಬೇಕಾದರೂ ಪಡೆಯಬಹುದು’ ಎಂದಿದ್ದಾರೆ.
‘ಆದರೆ, ಸರ್ಕಾರವು ಮೆರಿಟ್ ಇದ್ದರೂ ಆಯಾ ಹಿಂದುಳಿದ ವರ್ಗದ ಸಮುದಾಯದವರು ತಮಗೆ ಮೀಸಲಿರುವ ಮೀಸಲಾತಿ ಹುದ್ದೆಗಳನ್ನು ಮಾತ್ರವೇ ಪಡೆಯಬೇಕು ಎಂಬ ನಿಯಮ ಜಾರಿ ಮಾಡಿದರೆ ಪರಿಶಿಷ್ಟರು, ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳು ಸೇರಿದಂತೆ ಮೀಸಲಾತಿ ಅರ್ಹತೆ ಹೊಂದಿರುವ ವರ್ಗಗಳಿಗೆ ಭಾರಿ ಅನ್ಯಾಯವಾಗಲಿದೆ. ಮುಂದುವರಿದ ಕೆಲವೇ ಸಮುದಾಯಗಳು ಶೇ. 50 ರಷ್ಟುಭಾರಿ ಮೀಸಲಾತಿಯನ್ನು ಅನುಭವಿಸುವಂತಾಗುತ್ತದೆ. ಇದರಿಂದ ಸಮಾಜದಲ್ಲಿ ಮತ್ತೆ ತಾರತಮ್ಯ ಹೆಚ್ಚಾಗಿ, ಹಿಂದುಳಿದ ಸಮುದಾಯಗಳು ಮತ್ತಷ್ಟುಹಿಂದುಳಿಯುತ್ತವೆ. ಹೀಗಾಗಿ ಕೂಡಲೇ ಈ ನೀತಿಯಿಂದ ಹಿಂದಕ್ಕೆ ಸರಿಯಬೇಕು’ ಎಂದು ಅವರು ಪತ್ರದಲ್ಲಿ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ಆಗಿರುವುದೇನು?
2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಕ್ಕೆ 2017ರಲ್ಲಿ ಪರೀಕ್ಷೆ ನಡೆಸಲಾಗಿದೆ, ಈಗ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಗೆ 1:5 ಅನುಪಾತದ ಪಟ್ಟಿಸಿದ್ಧಪಡಿಸಬೇಕಿದೆ. ಆದರೆ, ಕರ್ನಾಟಕ ಹೈಕೋರ್ಟ್ ‘ನೇರ ಮೀಸಲಾತಿಗೆ ಅರ್ಹವಾದ ವ್ಯಕ್ತಿಗಳು ಜನರಲ್ ಮೆರಿಟ್ ಅಡಿ ಪ್ರವೇಶ ಪಡೆಯುವಂತಿಲ್ಲ’ ಎಂದು ಆದೇಶಿಸಿದೆ. ಹಾಗಾಗಿ, ಪಟ್ಟಿಸಿದ್ಧಪಡಿಸುವಾಗ ಯಾವ ಮಾನದಂಡ ಅಳವಡಿಸಬೇಕು ಎಂದು ಕೇಳಿ ಕಳೆದ ಅ.20ಕ್ಕೆ ಕೆಪಿಎಸ್ಸಿಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಸಂಬಂಧ ನ.3ಕ್ಕೆ ಸುತ್ತೋಲೆ ಹೊರಡಿಸಿರುವ ಸರ್ಕಾರ, ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶಿಸಿತ್ತು. ಇದರರ್ಥ, ಎಸ್ಸಿ, ಎಸ್ಟಿ, ಒಬಿಸಿ ಮೀಸಲು ಸಿಗುವವರು ಜನರಲ್ ಕೆಟಗರಿ ಅಡಿ ಉದ್ಯೋಗ ಪಡೆಯುವಂತಿಲ್ಲ ಎಂದಾಗಿತ್ತು.
ಖರ್ಗೆ ಆಕ್ಷೇಪ ಏನು?
ಹೈಕೋರ್ಟ್ ತೀರ್ಪಿನನ್ವಯ ಸರ್ಕಾರದ ಸುತ್ತೋಲೆ ಸದ್ಯಕ್ಕೆ 2015ರ ಗೆಜೆಟೆಡ್ ಪ್ರೊಬೇಷನರಿ ನೇಮಕಕ್ಕೆ ಅನ್ವಯವಾದರೂ, ಮುಂದಿನ ನೇಮಕಾತಿಗೆ ಸಂಬಂಧಪಟ್ಟಂತೆ ಹೊಸ ಸಂಪ್ರದಾಯವನ್ನು ಹುಟ್ಟುಹಾಕುತ್ತದೆ. ಸಂವಿಧಾನದ ಪ್ರಕಾರ ಶೇ.93ರಷ್ಟುಸಮುದಾಯ ನೇರ ಮೀಸಲಾತಿಗೆ ಒಳಪಟ್ಟಿದೆ. ಆದರೆ, ಸರ್ಕಾರದ ಹೊಸ ಸುತ್ತೋಲೆಯಿಂದಾಗಿ ಮೀಸಲಾತಿ ಕೋಟಾದವರಿಗೆ ಒಟ್ಟಾರೆ ಹುದ್ದೆಗಳ ಪೈಕಿ ಶೇ.50ರಷ್ಟುಮಾತ್ರ ಪ್ರಯೋಜನ ದೊರೆಯುತ್ತದೆ. ಉಳಿದ ಶೇ.50 ಸಾಮಾನ್ಯ ಪ್ರವರ್ಗಕ್ಕೆ ದೊರೆಯುತ್ತದೆ. ಇದರಿಂದಾಗಿ ಮೀಸಲಾತಿ ವರ್ಗಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ, ಸರ್ಕಾರ ತನ್ನ ನಿರ್ಧಾರ ಬದಲಿಸಿಕೊಳ್ಳಬೇಕು, ಹೈಕೋರ್ಟ್ ತೀರ್ಪು ಸಂಬಂಧ ಮೇಲ್ಮನವಿ ಸಲ್ಲಿಸಬೇಕು ಎಂಬುದು ಪ್ರಿಯಾಂಕ್ ಪತ್ರದ ಹೂರಣ.