ಮುಂಬೈಗೆ ತೆರಳಿದ್ದ ಕಾರಣ ಬಿಚ್ಚಿಟ್ಟ ಗೋಕಾಕ್ ಅತೃಪ್ತ ಶಾಸಕ
ತಾವು ಮುಂಬೈ ತೆರಳಿದ್ದ ಕಾರಣವೇನೆಂದು ಗೋಕಾಕ್ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಇದೀಗ ಮಾಹಿತಿ ನೀಡಿದ್ದಾರೆ.
ಗೋಕಾಕ್ : ರಾಜ್ಯ ರಾಜಕಾರಣದಲ್ಲಿ ಅತೃಪ್ತರ ಗುಂಪಿನಲ್ಲಿ ಪ್ರಮುಖರೆಂದು ಗುರುತಿಸಿಕೊಂಡಿದ್ದ ಗೋಕಾಕ್ ಶಾಸಕ ಇದೀಗ ತಾವು ಮುಂಬೈಗೆ ತೆರಳಿದ್ದ ಕಾರಣ ಬಿಚ್ಚಿಟ್ಟಿದ್ದಾರೆ.
ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಆದರೆ ಮಾಧ್ಯಮದವರು ಏನೇನೋ ಸೃಷ್ಟಿ ಮಾಡುತ್ತೀರಾ. ಇದರಿಂದ ನಮ್ಮ ಬಗ್ಗೆ ಕೆಟ್ಟ ಹೆಸರು ಹರಿದಾಡುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
ಹೈಕಮಾಂಡ್ ಗೆ ನಾನು ಚಾಲೆಂಜ್ ಮಾಡಿಲ್ಲ. ಮಗಳ ಮದುವೆಗೆ ನಾನು ಮುಂಬೈಗೆ ಹೊಗಿದ್ದೆ. ಇದೇ 24ಕ್ಕೆ ನನ್ನ ಮಗಳ ಮದುವೆ ಇದ್ದು, ಇದರಿಂದ ನಾನು ಮುಂಬೈನಲ್ಲಿದ್ದೆ ಎಂದರು.
ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾನು ಬೆಂಗಳೂರಿಗೆ ಆಗಮಿಸಿದ್ದೇನೆ. ಪಕ್ಷದ ಅಸಮಾಧಾನದ ಬಗ್ಗೆ ಹೈ ಕಮಾಂಡ್ ಜೊತೆಗೆ ಮಾತನಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.
ಬಿಜೆಪಿಯಲ್ಲಿ ನನಗೆ ಹೆಚ್ಚು ಜನ ಗೆಳೆಯರಿದ್ದಾರೆ. ಪಕ್ಷದ ವಿಚಾರದಲ್ಲಷ್ಟೇ ನಾವು ಕಿತ್ತಾಡಿಕೊಳ್ಳುತ್ತೇವೆ. ನೀವೆ ಪ್ರಶ್ನೆ ಕೇಳಿ, ನೀವೇ ಉತ್ತರ ಹೇಳುತ್ತೀರಾ ಎಂದು ಮಾಧ್ಯಮದ ವಿರುದ್ಧ ಗುಡುಗಿದ್ದು, ತಾವು ಮುಂಬೈಗೆ ಹೋಗಿದ್ದ ಕಾರಣ ಬಿಚ್ಚಿಟ್ಟಿದ್ದಾರೆ.