ಸಿಎಂ ಕುಮಾರಸ್ವಾಮಿಯಿಂದ ರೈತರ ಖಾತೆಗೆ 18 ಸಾವಿರ
ಕೇಂದ್ರ ಸರ್ಕಾರ ರೈತರ ಖಾತೆಗೆ ವಾರ್ಷಿಕವಾಗಿ 6 ಸಾವಿರ ಹಣ ನೀಡಿದರೆ ಕರ್ನಾಟಕವು ವಿದ್ಯುತ್ ಸಬ್ಸಿಡಿ ಸೇರಿದಂತೆ ವಿವಿಧ ಬಾಬ್ತುಗಳಲ್ಲಿ ರೈತರಿಗೆ ನೀಡಿರುವ ಲಾಭಗಳನ್ನು ನಗದು ರೂಪಕ್ಕೆ ಪರಿವರ್ತಿಸಿದರೆ ಅದು 17-18 ಸಾವಿರ ರು. ಆಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಬೆಂಗಳೂರು : ಇಡೀ ದೇಶದಲ್ಲಿ ರೈತರಿಗೆ ಅತ್ಯಂತ ಹೆಚ್ಚು ಪ್ರಯೋಜನ ಒದಗಿಸುವ ಹಾಗೂ ಅವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿರುವ ರಾಜ್ಯವಿದ್ದರೆ ಅದು ಕರ್ನಾಟಕ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐದು ಎಕರೆ ಜಮೀನು ಹೊಂದಿರುವವರಿಗೆ ವರ್ಷಕ್ಕೆ ಆರು ಸಾವಿರ ರು. ನೀಡಿ ಅದನ್ನು ದೊಡ್ಡದು ಎಂದು ಬಿಂಬಿಸುತ್ತಾರೆ.
ಕರ್ನಾಟಕವು ವಿದ್ಯುತ್ ಸಬ್ಸಿಡಿ ಸೇರಿದಂತೆ ವಿವಿಧ ಬಾಬ್ತುಗಳಲ್ಲಿ ರೈತರಿಗೆ ನೀಡಿರುವ ಲಾಭಗಳನ್ನು ನಗದು ರೂಪಕ್ಕೆ ಪರಿವರ್ತಿಸಿದರೆ ಅದು 17-18 ಸಾವಿರ ರು. ಆಗುತ್ತದೆ.
ಹೀಗೆಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕಿಂತ ಕರ್ನಾಟಕ ಸರ್ಕಾರವೇ ಕೃಷಿಕ ಪರ ಸರ್ಕಾರ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಬಲವಾಗಿ ವಾದಿಸಿದರು.
ಶುಕ್ರವಾರ 2019-20ನೇ ಸಾಲಿನ ಮುಂಗಡಪತ್ರ ಮಂಡಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕೃಷಿ ಸಾಲವನ್ನು ವ್ಯಂಗ್ಯವಾಡುವ ಮೋದಿ ಅವರ ಧೋರಣೆಯನ್ನು ಮತ್ತೊಮ್ಮೆ ಖಂಡಿಸಿದರು. ಜತೆಗೆ, ಕರ್ನಾಟಕವೇ ಅತಿ ಹೆಚ್ಚು ರೈತ ಪರ ರಾಜ್ಯ ಎಂದು ವಾದಿಸಿದರು. ಜತೆಗೆ, ಈ ಬಾರಿಯ ಮುಂಗಡಪತ್ರದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ತಾವು ನೀಡಿರುವ ಕೊಡುಗೆಗಳನ್ನು ಪಟ್ಟಿಮಾಡಿ ಸಮ್ಮಿಶ್ರ ಸರ್ಕಾರ ರೈತ ಪರ ಎಂದು ಬಿಂಬಿಸಿಕೊಂಡರು.
ಅಲ್ಲದೆ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ರಾಜೀವ್ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ ಜಾರಿಗೊಳಿಸಿದ್ದ ಗೃಹ ನಿರ್ಮಾಣ ಯೋಜನೆಯ ಉದ್ಘಾಟನೆಗೆ ಈಗ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಯೋಜನೆಗೆ ದೊಡ್ಡ ಮೊತ್ತವನ್ನು ನೀಡಿರುವ ಕರ್ನಾಟಕ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ. ಸಿದ್ದರಾಮಯ್ಯ ಅವರು ಕಾರ್ಯಗತಗೊಳಿಸಿದ ಈ ಯೋಜನೆ ತಮ್ಮದೇ ಕೊಡುಗೆ ಎಂಬಂತೆ ಪ್ರಚಾರ ಪಡೆದುಕೊಳ್ಳಲು ಮೋದಿ ಆಗಮಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡುವ ಸೌಜನ್ಯವನ್ನು ಅವರು ತೋರಿಲ್ಲ ಎಂದು ಹೇಳಿದರು.
ಕೃಷಿ ಸಾಲ ಮನ್ನಾ ಯೋಜನೆಗೆ ಒಂದು ಕಂತಿನಲ್ಲಿ ಪೂರ್ಣವಾಗಿ ಏಕೆ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಾರಿ 12, 650 ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ಈ ಯೋಜನೆಗೆ ಅಗತ್ಯ ಹಣವನ್ನು ಒದಗಿಸಿ ಈ ವರ್ಷದೊಳಗೆ ಯೋಜನೆಯನ್ನು ಸಂಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಔರಾದಕರ್ ವರದಿ ಜಾರಿಗೆ ಬದ್ಧ: ಪೊಲೀಸರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಔರಾದಕರ್ ವರದಿ ಬಗ್ಗೆ ಮುಂಗಡಪತ್ರದಲ್ಲಿ ಉಲ್ಲೇಖವೇ ಇಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಔರಾದಕರ್ ವರದಿಯ ಶಿಫಾರಸುಗಳನ್ನು ಜಾರಿ ಹೇಗೆ ಮಾಡಬೇಕು ಎಂಬ ಕುರಿತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಇನ್ನು ವಿಸ್ತೃತ ವರದಿಯನ್ನು ನೀಡಿಲ್ಲ. ಈ ಪ್ರಕ್ರಿಯೆಯಲ್ಲಿ ಅವರು ತೊಡಗಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಕಾರಿಗಳಿಂದ ವರದಿ ಬಂದ ಕೂಡಲೇ ಅದನ್ನು ಜಾರಿಗೊಳಿಸುತ್ತೇನೆ ಎಂದರು.
ಅಲ್ಲದೆ, ಔರಾದಕರ್ ವರದಿಯನ್ನು ಬಜೆಟ್ನಲ್ಲೇ ಜಾರಿಗೊಳಿಸಬೇಕು ಎಂದೇನಿಲ್ಲ. ವರದಿ ಯಾವಾಗ ಬಂದರೂ ಅದನ್ನು ಜಾರಿಗೊಳಿಸಬಹುದು. ಅಧಿಕಾರಿಗಳು ನೀಡುವ ತಮ್ಮ ಪ್ರಕ್ರಿಯೆ ಮುಗಿಸಿ ವರದಿ ಮಂಡಿಸಿದ ಕೂಡಲೇ ಜಾರಿಗೊಳಿಸುವುದಾಗಿ ಸಮಜಾಯಿಷಿ ನೀಡಿದರು.