ಸಾಕು ಬನ್ರಿ ಮೋದಿನಾ ಎಷ್ಟು ಬೈತಿರಾ?: ಖಾದರ್, ಈಶ್ವರಪ್ಪ ಜುಗಲ್ಬಂದಿ!
ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಸ್ವಾರಸ್ಯಕರ ಪ್ರಸಂಗ| ಯು.ಟಿ. ಖಾದರ್ ಪತ್ರಿಕಾ ಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ| ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಸಚಿವ ಯು.ಟಿ. ಖಾದರ್| ಇದೇ ಸಮಯಕ್ಕೆ ಕಾಯರ್ಯಕ್ರಮಕ್ಕೆ ಬಂದ ಕೆಎಸ್ ಈಶ್ವರಪ್ಪ| ಮೋದಿಯನ್ನು ಬೈದಿದ್ದು ಸಾಕು ಕಾರ್ಯಕ್ರಮ ಉದ್ಘಾಟನೆ ಮಾಡೋಣ ಎಂದ ಈಶ್ವರಪ್ಪ!
ಶಿವಮೊಗ್ಗ(ಫೆ.24): ಸಚಿವ ಯುಟಿ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಸ್ವಾರಸ್ಯಕರ ಪ್ರಸಂಗವೊಂದು ಜರುಗಿದೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಖಾದರ್ ಮತ್ತು ಈಶ್ವರಪ್ಪ ನಡುವೆ ತಿಳಿ ಹಾಸ್ಯದ ಮಾತುಕತೆ ನಡೆದಿದೆ.
ಸ್ಮಾರ್ಟ್ ಸಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಯುಟಿ ಖಾದರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಪುಲ್ವಾಮಾ ದಾಳಿ ಖಂಡಿಸಿದ ಅವರು, ಪಾಕ್ ಸೈನಿಕರ ತಲೆ ತೆಗೆಯುವುದಾಗಿ ಅಬ್ಬರಿಸುತ್ತಿದ್ದ ಮೋದಿ ಇದುವರೆಗೂ ಎಷ್ಟು ತಲೆ ತಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಮಾಡುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿ ಬೆಂಬಲವಿದೆ ಎಂದು ಖಾದರ್ ಆರೋಪಿಸಿದರು.
"
ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ, ‘ಸಾಕು ಬನ್ನಿ ಸರ್, ಎಷ್ಟು ಅಂತಾ ಪ್ರಧಾನಿ ಮೋದಿ ಅವರನ್ನು ಬೈಯ್ತಿರಾ?. ಸದನದ ಒಳಗೂ, ಹೊರಗೂ ಮೋದಿಯನ್ನು ಬೈಯುವುದೇ ಕೆಲಸ’ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಅಷ್ಟೇ ಸ್ವರಸ್ಯಕರವಾಗಿ ಉತ್ತರಿಸಿದ ಖಾದರ್, ‘ಸ್ವಲ್ಪ ಇರಿ ಇನ್ನೂ ಸ್ವಲ್ಪ ಹೇಳಿ ಬಂದ್ಬಿಡ್ತಿನಿ’ ಎಂದಾಗ ಈಶ್ವರಪ್ಪ ಅವರೂ ಸೇರಿದಂತೆ ನೆರೆದವರೆಲ್ಲರೂ ಜೋರಾಗಿ ನಕ್ಕರು.