ಸಿದ್ದು ಬಿಜೆಪಿಗೆ: ರಾಜಕಾರಣವೇ ಅಲುಗಾಡಿತು ರವಿ ಹೇಳಿಕೆಗೆ!
ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸೇರ್ಪಡೆ?! ಸಂಚಲನ ಮೂಡಿಸಿದ ಮಾಜಿ ಸಚಿವ ಸಿಟಿ ರವಿ ಹೇಳಿಕೆ! ಸಿದ್ದರಾಮಯ್ಯ ಬಿಜೆಪಿಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದ ಸಿಟಿ ರವಿ! ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂದ ಮಾಜಿ ಸಚಿವ! ಸಮ್ಮಿಶ್ರ ಸರ್ಕಾರ ಉಳಿಯಲ್ಲ ಎಂದು ಗುಡುಗಿದ ಬಿಜೆಪಿ ನಾಯಕ
ಬೆಂಗಳೂರು(ನ.29): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸೇರುತ್ತಾರೆ ಎಂಬ ವದಂತಿ ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿದ್ದು, ಈ ಕುರಿತು ಬಿಜೆಪಿ ನಾಯಕ, ಮಾಜಿ ಸಚಿವ ಸಿಟಿ ರವಿ ನೀಡಿರುವ ಪ್ರತಿಕ್ರಿಯೆ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಸಿದ್ದು ಬಿಜೆಪಿಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಸರ್ಕಾರ ಮಾತ್ರ ಉಳಿಯುವುದಿಲ್ಲ ಎಂದು ಸಿಟಿ ರವಿ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ಸಿದ್ದರಾಮಯ್ಯ ನಮ್ಮ ಪಕ್ಷದವರನ್ನೇನು ಸಂಪರ್ಕಿಸಿಲ್ಲ ಅವರ ಪಕ್ಷದ ಯಾವುದೇ ಶಾಸಕರು ನಮ್ಮನ್ನು ಸಂಪರ್ಕಿಸಿಲ್ಲ ಆದರೆ ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಪರಮ ಶತ್ರುವಾಗಿದ್ದ ದೇವೇಗೌಡರೊಂದಿಗೆ ಸಿದ್ದರಾಮಯ್ಯ ಹೋಗಿರುವುದೇ ಇದಕ್ಕೆ ಸಾಕ್ಷಿ ಎಂದು ರವಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
"
ರಾಷ್ಟ್ರ ಮೊಲು ಎಂಬುದು ಬಿಜೆಪಿಯ ತತ್ವ ಸಿದ್ದಾಂತವಾಗಿದ್ದು, ಈ ತತ್ವವನ್ನು ಒಪ್ಪಿಕೊಂಡು ಯಾರೇ ಬಂದರೂ ಅವರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ರವಿ ಇದೇ ವೇಳೆ ಹೇಳಿದರು.
ಇದೇ ವೇಳೆ ವಿಷ್ಣು ಸ್ಮಾರಕದ ಕುರಿತು ಮಾತನಾಡಿದ ಮಾಜಿ ಡಿಸಿಎಂ ಆರ್. ಅಶೋಕ್, ಮುಖ್ಯಮಂತ್ರಿಯಾದವರಿಗೆ ತಾಳ್ಮೆ ಇರಬೇಕು. ಗಡುವು ನೀಡುವುದು ದೇವರು, ರಾಜ್ಯದ ಜನತೆ, ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಮುಖ್ಯಮಂತ್ರಿಗಳು ಬೇಜವಾಬ್ಧಾರಿತನ ತೋರುತ್ತಿದ್ದಾರೆ ಎಂದು ಹರಿಹಾಯ್ದರು.
ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರದಲ್ಲೂ ಮುಖ್ಯಮಂತ್ರಿ ತಾಳ್ಮೆ ಕಳೆದುಕೊಂಡು ಮಾತನಾಡಿದ್ದು ಸರಿಯಿಲ್ಲ ಎಂದು ಅಶೋಕ್ ಇದೇ ವೇಳೆ ಅಭಿಪ್ರಾಯಪಟ್ಟರು.