ಕೈನಿಂದ ಹೊರನಡೆಯುತ್ತಾರಾ ಈ ನಾಯಕರು : ಬಿಜೆಪಿ ಮುಖಂಡ ಹೇಳಿದ್ದೇನು..?
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ನಡೆಯುತ್ತಿದ್ದು, ಈ ಸಭೆಗೆ ಗೈರಾದ ಮುಖಂಡರಿಗೆ ನೋಟಿಸ್ ನೀಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಈ ಬಗ್ಗೆ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಪ್ರತಿಕ್ರಿಯಿಸಿ ಗೈರಾದವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ಶಿವಮೊಗ್ಗ : ಶಾಸಕಾಂಗ ಪಕ್ಷದ ಸಭೆಗೆ ಶಾಸಕರು ಗೈರಾದಲ್ಲಿ ಸಂವಿಧಾನದ 10ನೇ ಪರಿಚ್ಛೇದದ ಅನ್ವಯ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ ಎಂದು ವಿಧಾನ ಮಂಡಲ ಶಿಷ್ಟಾಚಾರ ಸಮಿತಿ ಅಧ್ಯಕ್ಷ ಆಯನೂರು ಮಂಜುನಾಥ್ ಹೇಳಿದ್ದಾರೆ.
ಸದನದ ಒಳಗೆ , ವ್ಯಾಪ್ತಿಯೊಳಗೆ ವಿಪ್ ಜಾರಿ ಮಾಡಬೇಕು. ಅದನ್ನು ವಿರೋಧಿಸಿದರೆ , ತಟಸ್ಥರಾದರೇ, ಗೈರು ಹಾಜರಾದರೇ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ ಎಂದು ಸುವರ್ಣ ನ್ಯೂಸ್.ಕಾಂಗೆ ತಿಳಿಸಿದ್ದಾರೆ.
ವಿಧಾನ ಮಂಡಲದ ಹೊರಗೆ ನಡೆಯುವ ಚಟುವಟಿಕೆಗಳಿಗೆ ಪಕ್ಷಾಂತರ ನಿಷೇಧ ಕಾಯ್ದೆ ತರಲು ಸಾಧ್ಯವಿಲ್ಲ. ಹೆಚ್ಚೆಂದರೇ ಪಕ್ಷದಿಂದ ಅಮಾನತು ಮಾಡಬಹುದಾಗಿದೆ.
ಈ ಕಾಂಗ್ರೆಸ್ ನಾಯಕರಿಗೆ ಸಿಗುತ್ತಾ ಪಕ್ಷದಿಂದ ಗೇಟ್ ಪಾಸ್ ..?
ತಪ್ಪು ತಪ್ಪಾಗಿ ನೋಟಿಸ್ ಕೊಟ್ಟಿದ್ದು ಸಭೆಗೆ ಬಾರದೇ ಇದ್ದರೇ ಪಕ್ಷಾಂತರ ಕಾಯ್ದೆ ಅನ್ವಯವಾಗುತ್ತೆ ಎಂದು ಅನಗತ್ಯವಾಗಿ ಭಯ ಹುಟ್ಟಿಸುವ ಯತ್ನಗಳು ನಡೆಯುತ್ತಿವೆ. ಇದೊಂದು ಪಕ್ಷದ ನೋಟಿಸ್ ಹೊರತು 3 ಲೈನ್ ವಿಪ್ ಅಲ್ಲ. ಇದರಿಂದ 100 ಪರ್ಸೆಂಟ್ ಶಾಸಕತ್ವ ಕಳೆದುಕೊಳ್ಳುವುದಿಲ್ಲ ಎಂದು ಆಯನೂರು ಮಂಜುನಾಥ್ ತಿಳಿಸಿದ್ದಾರೆ.
ಶಾಸಕರನ್ನು ಪ್ರೀತಿಯಿಂದ ಕರೆಯದೇ ಹೆದರಿಸಿ ಕರೆಯುತ್ತಿರುವುದು ಇಂದಿನ ಸಮ್ಮಿಶ್ರ ಸರ್ಕಾರದ ನಡೆಯನ್ನು ತಿಳಿಸುತ್ತದೆ. ತಮ್ಮಲ್ಲಿನ ಭಿನ್ನಾಭಿಪ್ರಾಯ , ಸರ್ಕಾರದ ಮೇಲೆ ಶಾಸಕರಿಗಿರುವ ಅಸಮಾಧಾನ , ಅತೃಪ್ತಿ ಈ ನೋಟಿಸ್ ಮೂಲಕ ಹೊರ ಬಿದ್ದಿದೆ. ಕಾನೂನಿನ ಅರಿವಿರುವ ಶಾಸಕರಿಗೆ ಈ ನೋಟಿಸ್ ಬಟ್ಟೆಯ ಹಾವಿದ್ದಂತೆ, ಹಲ್ಲಿಲ್ಲದ ಹಾವು ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರು ಹಾಜರಾಗಿ ಸಭೆಯ ನಂತರವೂ ತಮ್ಮ ಬಂಡಾಯ ಚಟುವಟಿಕೆ ನಡೆಸಿದರೆ ಸಿದ್ದರಾಮಯ್ಯ ಎನೂ ಮಾಡಲು ಸಾಧ್ಯವಿಲ್ಲ ಎಂದರು.