ರಾಜ್ಯ ಕಂಡ ಮಹಾ ಜಲದುರಂತಗಳಿವು!
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಖಾಸಗಿ ಬಸ್ ನಾಲೆಗೆ ಬಿದ್ದ ಪರಿಣಾಮ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಇಂತಹ ದುರಂತ ಘಟನೆಗಳು ಈ ಹಿಂದೆಯೂ ರಾಜ್ಯದಲ್ಲಿ ನಡೆದಿವೆ.
ಹರಿಹರದಲ್ಲಿ 96 ಸಾವು
ಹರಿಹರ ತಾಲೂಕು ದೇವರ ಬೆಳಕೆರೆ ಪಿಕಪ್ ಡ್ಯಾಮ್ಗೆ 1999ರ ಜೂ.7 ರಂದು ಖಾಸಗಿ ಬಸ್ ಉರುಳಿ ಬಿದ್ದು 96 ಮಂದಿ ಜಲಸಮಾಧಿಯಾಗಿದ್ದರು. ಮಲ್ಲಿಕಾರ್ಜುನ ಹೆಸರಿನ ಖಾಸಗಿ ಬಸ್ ದಾವಣಗೆರೆಯಿಂದ 120 ಜನ ಪ್ರಯಾಣಿಕರನ್ನು ಹೊತ್ತು ಮಲೆಬೆನ್ನೂರು ಕಡೆ ಹೊರಟಿದ್ದಾಗ ದುರಂತ ಸಂಭವಿಸಿತ್ತು.
ಸಂತೆಹೊಂಡ ದುರಂತಕ್ಕೆ 61 ಬಲಿ
ಚಿತ್ರದುರ್ಗದಲ್ಲಿ ಖಾಸಗಿ ಬಸ್ಸೊಂದು ಪುಷ್ಕರಣಿಗೆ ಬಿದ್ದು 61 ಮಂದಿ ಮೃತಪಟ್ಟಘಟನೆ 1996ರ ಅ.24 ರಂದು ನಡೆದಿತ್ತು. ನಗರದ ಸಂತೆಹೊಂಡದ ಬಳಿ ನಿಂತಿದ್ದ ಬಸ್ ಅನ್ನು ಚಾಲನೆ ಮಾಡಲು ಕೆಲ ಪ್ರಯಾಣಿಕರು ತಳ್ಳುವಾಗ ಬಸ್ ಮುಂದಕ್ಕೆ ಹೋಗಿ ಪುಷ್ಕರಣಿಗೆ ಬಿದ್ದಿತ್ತು.
ಇದನ್ನೂ ಓದಿ: ಮಂಡ್ಯ ಬಸ್ ದುರಂತಕ್ಕೂ ಮೊದಲು ಕೇಳಿ ಬಂದಿತ್ತು ಆ ಶಬ್ಧ!
ಆಲಮಟ್ಟಿನಾಲೆಯಲ್ಲಿ 58 ಸಾವು
2005ರ ಜ.10ರಂದು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಳಿ ಬಸ್ಸೊಂದು ಆಲಮಟ್ಟಿಜಲಾಶಯದ ನಾಲೆಗೆ ಬಿದ್ದು 58 ಜನ ಪ್ರಯಾಣಿಕರು ಮೃತಪಟ್ಟಿದ್ದರು. ಹುಬ್ಬಳ್ಳಿಯಿಂದ ಚಿತ್ತಾಪುರಕ್ಕೆ ಹೊರಟಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ರಾತ್ರಿ 2.30ರ ವೇಳೆ ಕಾಲುವೆಗೆ ಬಿದ್ದಿತ್ತು.
ಹರಪನಹಳ್ಳಿ: 41 ಮಂದಿ ನೀರುಪಾಲು
1999ರ ಆ.26ರಂದು ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಮಹದೇವ ಎಂಬ ಹೆಸರಿನ ಖಾಸಗಿ ಬಸ್ ಅನ್ನು ಚಾಲಕ ಹಿಂದಕ್ಕೆ ತಿರುಗಿಸಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಬಸ್ ನೇರವಾಗಿ ಪಕ್ಕದ ಸಂತೆ ಹೊಂಡದಲ್ಲಿ ಮುಳುಗಿತ್ತು. 41 ಮಂದಿ ಜಲ ಸಮಾಧಿಯಾಗಿದ್ದರು.
ಇದನ್ನೂ ಓದಿ: ಮಂಡ್ಯದಲ್ಲಿ ಮುಳುಗಿದ ಬಸ್ ನಿಂದ ಪಾರಾದವನ ಸಾಹಸಗಾಥೆ
ಮೈಸೂರು ಕೆರೆ 31 ಮಂದಿ ಜಲಸಮಾಧಿ
2010ರ ಡಿ.14 ರಂದು ಮೈಸೂರು- ನಂಜನಗೂಡು ರಸ್ತೆಯಲ್ಲಿರುವ ಉಂಡುಬತ್ತಿನ ಕೆರೆಗೆ ಟೆಂಪೋ ಬಿದ್ದು ಮಗು ಸೇರಿದಂತೆ 31 ಮಂದಿ ಜಲಸಮಾಧಿಯಾಗಿದ್ದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಅರಳುಕುಪ್ಪೆ ಗ್ರಾಮದವರು ಸಂಬಂಧಿಕರ ಬೀಗರ ಊಟಕ್ಕೆ ನಂಜನಗೂಡಿಗೆ ಹೋಗಿ ವಾಪಸ್ ಮರಳುವಾಗ ದುರ್ಘಟನೆ ನಡೆದಿತ್ತು.
ವಿಜಯಪುರದಲ್ಲಿ ಕ್ಯಾಬ್ ಬಿದ್ದು 29 ಸಾವು
2006ರ ಆ.30ರಂದು ವಿಜಯಪುರ ಜಿಲ್ಲೆಯ ನಿಡಗುಂದಿ ಬಳಿ ಮದುವೆ ದಿಬ್ಬಣದ ಮ್ಯಾಕ್ಸಿಕ್ಯಾಬ್ ಆಲಮಟ್ಟಿನದಿಗೆ ಬಿದ್ದ ಪರಿಣಾಮ 29 ಮಂದಿ ಸಾವನ್ನಪ್ಪಿದ್ದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿಗೆ ಸೇರಿದ ಈ ಮ್ಯಾಕ್ಸಿಕ್ಯಾಬ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆಯಿಂದ ಕೆಳಕ್ಕೆ ಬಿದ್ದಿತ್ತು.
ಇದನ್ನೂ ಓದಿ: ಬಸ್ ದುರಂತಕ್ಕೆ ಸಂತಾಪ ಹೇಳಿದ್ದ 'ಮಂಡ್ಯದ ಗಂಡು' ಅಂಬಿ!
ಸೂಳೆಕೆರೆ ಬಸ್ ಬಿದ್ದು 23 ಬಲಿ
1994ರಲ್ಲಿ ಹರಿಹರ ತಾಲೂಕಿನ ಬ್ಯಾಲದಹಳ್ಳಿ ಗ್ರಾಮದ ಸೇತುವೆ ಮೇಲೆ ಸಾಗುತ್ತಿದ್ದ ಬಸ್ ಸೂಳೆಕೆರೆ ಹಳ್ಳಿ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ 23 ಮಂದಿ ಜಲಸಮಾಧಿಯಾಗಿದ್ದರು. ಕೆಲವರು ಮಾತ್ರ ಈಜಿ ದಡ ಸೇರಿದ್ದರು.