ವಿಜಯ್ ಹಜಾರೆ ಟೂರ್ನಿ: ರಾಜ್ಯಕ್ಕೆ ಶುಭಾರಂಭದ ಗುರಿ
2019-20ನೇ ಸಾಲಿನ ವಿಜಯ್ ಹಜಾರೆ ಟೂರ್ನಿ ಇಂದಿನಿಂದ ಆರಂಭವಾಗಿದೆ. ಕರ್ನಾಟಕ ತಂಡವು ಬೆಂಗಳೂರಿನ ಆಲೂರು ಮೈದಾನದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲು ಸಜ್ಜಾಗಿದ್ದು, ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ
ಬೆಂಗಳೂರು[ಸೆ.24]: 2019-20ರ ದೇಸಿ ಕ್ರಿಕೆಟ್ ಋುತುಗೆ ಚಾಲನೆ ಸಿಕ್ಕಿದ್ದು, ಮಂಗಳವಾರದಿಂದ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿ ಆರಂಭಗೊಳ್ಳಲಿದೆ. ಒಟ್ಟು 38 ತಂಡಗಳು ಸೆಣಸಲಿರುವ ಟೂರ್ನಿಯಲ್ಲಿ 169 ಪಂದ್ಯಗಳು ನಡೆಯಲಿವೆ. ಟೂರ್ನಿ ಒಂದು ತಿಂಗಳ ಕಾಲ ನಡೆಯಲಿದ್ದು, ಅ.25ರಂದು ಫೈನಲ್ ನಡೆಯಲಿದೆ.
38 ತಂಡಗಳನ್ನು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎಲೈಟ್ ‘ಎ’, ‘ಬಿ’, ‘ಸಿ’ ಹಾಗೂ ಪ್ಲೇಟ್ ಗುಂಪುಗಳಲ್ಲಿ ತಂಡಗಳಿಗೆ ಸ್ಥಾನ ನೀಡಲಾಗಿದೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ತಲಾ 9 ತಂಡಗಳಿದ್ದು, ‘ಸಿ’ ಹಾಗೂ ಪ್ಲೇಟ್ ಗುಂಪಿನಲ್ಲಿ ತಲಾ 10 ತಂಡಗಳಿವೆ. ಪ್ರತಿ ತಂಡ ಗುಂಪಿನಲ್ಲಿರುವ ಇನ್ನುಳಿದ ತಂಡಗಳ ವಿರುದ್ಧ ಪಂದ್ಯಗಳನ್ನು ಆಡಲಿದೆ.
ಸ್ಫೋಟಕ ಹೊಡೆತ; ಕೂದಲೆಳೆಯುವ ಅಂತರದಲ್ಲಿ ಬೌಲರ್ ಪಾರು!
‘ಎ’ ಹಾಗೂ ‘ಬಿ’ ಗುಂಪು ಸೇರಿ ಅಗ್ರ 5 ಸ್ಥಾನಗಳನ್ನು ಪಡೆಯುವ ತಂಡಗಳು, ‘ಸಿ’ ಗುಂಪಿನಿಂದ ಅಗ್ರ 2 ಹಾಗೂ ಪ್ಲೇಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಇದೇ ಮೊದಲ ಬಾರಿಗೆ ಚಂಡೀಗಢ ತಂಡ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದೆ.
ಬೆಂಗಳೂರಲ್ಲಿ ‘ಎ’ ಗುಂಪಿನ ಪಂದ್ಯಗಳು ನಡೆದರೆ, ವಡೋದರಾದಲ್ಲಿ ‘ಬಿ’ ಗುಂಪಿನ ಪಂದ್ಯಗಳು ನಡೆಯಲಿವೆ. ‘ಸಿ’ ಗುಂಪಿನ ಪಂದ್ಯಗಳಿಗೆ ಜೈಪುರ ಆತಿಥ್ಯ ನೀಡಿದರೆ, ಪ್ಲೇಟ್ ಗುಂಪಿನ ಪಂದ್ಯಗಳು ಡೆಹ್ರಾಡುನ್ನಲ್ಲಿ ನಡೆಯಲಿವೆ. ನಾಕೌಟ್ ಪಂದ್ಯಗಳು ಬೆಂಗಳೂರಲ್ಲಿ ನಡೆಯಲಿವೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ಪರ ಧವನ್, ಸೈನಿ ಕಣಕ್ಕೆ
‘ಎ’ ಗುಂಪಿನಲ್ಲಿ ಕರ್ನಾಟಕ
ಕರ್ನಾಟಕ ತಂಡ ಎಲೈಟ್ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮಂಗಳವಾರ ತನ್ನ ಮೊದಲ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಪಂದ್ಯ ನಗರದ ಹೊರವಲಯದಲ್ಲಿರುವ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. 15 ವರ್ಷಗಳ ಬಳಿಕ ಮೊದಲ ಬಾರಿಗೆ ಕರ್ನಾಟಕ ತಂಡ ಆರ್.ವಿನಯ್ ಕುಮಾರ್ ಇಲ್ಲದೆ ಆಡಲಿದೆ. ವಿನಯ್ ಈ ಬಾರಿ ಪುದುಚೇರಿ ತಂಡಕ್ಕೆ ವಲಸೆ ಹೋಗಿದ್ದು, ತಂಡವನ್ನು ಮುನ್ನಡೆಸುವ ಹೊಣೆ ಮನೀಶ್ ಪಾಂಡೆ ಹೆಗಲಿಗೆ ಬಿದ್ದಿದೆ.
ವಿನಯ್ರಂತಹ ಅನುಭವಿ ಆಟಗಾರನ ಅನುಪಸ್ಥಿತಿ ತಂಡಕ್ಕೆ ಕಾಡಲಿದೆಯಾದರೂ, ರೋನಿತ್ ಮೋರೆ, ಪ್ರಸಿದ್ದ್ ಕೃಷ್ಣ, ವಿ.ಕೌಶಿಕ್ ಹಾಗೂ ಅಭಿಮನ್ಯು ಮಿಥುನ್ ತಂಡದಲ್ಲಿರುವ ಕಾರಣ, ಬೌಲಿಂಗ್ನಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುವುದಿಲ್ಲ.
ವಿಜಯ್ ಹಜಾರೆ ಟ್ರೋಫಿ: ರಾಹುಲ್ ಸತ್ವ ಪರೀಕ್ಷೆಗೆ ವೇದಿಕೆ ರೆಡಿ
ಪಾಂಡೆ ಹಾಗೂ ಕೆ.ಎಲ್.ರಾಹುಲ್ ಎಲ್ಲಾ ಪಂದ್ಯಗಳಿಗೆ ಲಭ್ಯರಿದ್ದು, ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಲಿದ್ದಾರೆ. ದೇವದತ್ ಪಡಿಕ್ಕಲ್, ಕೆ.ವಿ.ಸಿದ್ಧಾರ್ಥ್ ಉತ್ತಮ ಲಯದಲ್ಲಿದ್ದು, ಅಭಿಷೇಕ್ ರೆಡ್ಡಿ ಹಾಗೂ ಪವನ್ ದೇಶಪಾಂಡೆ ಉಪಸ್ಥಿತಿಯಿಂದ ತಂಡದ ಬ್ಯಾಟಿಂಗ್ ಬಲಿಷ್ಠವಾಗಿ ತೋರುತ್ತಿದೆ. ಶ್ರೇಯಸ್ ಗೋಪಾಲ್, ಜೆ.ಸುಚಿತ್, ಪ್ರವೀಣ್ ದುಬೆ ಸ್ಪಿನ್ ಬೌಲರ್ಗಳಾಗಿ ತಂಡದಲ್ಲಿದ್ದಾರೆ.
‘ಎ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಮುಂಬೈ, ಕಳೆದ ಬಾರಿ ಸೆಮೀಸ್ ಪ್ರವೇಶಿಸಿದ್ದ ಜಾರ್ಖಂಡ್, ಸೌರಾಷ್ಟ್ರ, ಆಂಧ್ರ, ಕೇರಳ, ಗೋವಾ, ಛತ್ತೀಸ್ಗಢ ಹಾಗೂ ಹೈದರಾಬಾದ್ ತಂಡಗಳಿವೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿರುವ ಒಟ್ಟು 18 ತಂಡಗಳ ಪೈಕಿ ಕೇವಲ 5 ತಂಡಗಳಿಗೆ ಮಾತ್ರ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಅವಕಾಶವಿದ್ದು, ಯಾವುದೇ ತಪ್ಪುಗಳಿಗೆ ಅವಕಾಶವಿರುವುದಿಲ್ಲ.
ಮಳೆ ಭೀತಿ: ‘ಎ’ ಗುಂಪಿನ ಪಂದ್ಯಗಳು ಬೆಂಗಳೂರಲ್ಲಿ ನಡೆಯಲಿದ್ದು, ಮಳೆ ಭೀತಿ ಎದುರಾಗಿದೆ. ಸೋಮವಾರ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿರಲಿದ್ದು, ಪಂದ್ಯಗಳು ತಡವಾಗಿ ಆರಂಭಗೊಳ್ಳುವ ಸಾಧ್ಯತೆ ಇದೆ. ಮಂಗಳವಾರವೂ ಮಳೆ ಮುನ್ಸೂಚನೆ ಇರುವ ಕಾರಣ, ಪಂದ್ಯ ಪೂರ್ಣಗೊಳ್ಳುವುದು ಅನುಮಾನವೆನಿಸಿದೆ.
ಕರ್ನಾಟಕದ ವೇಳಾಪಟ್ಟಿ
ದಿನಾಂಕ ಎದುರಾಳಿ
ಸೆ.24 ಹೈದರಾಬಾದ್
ಸೆ.26 ಜಾರ್ಖಂಡ್
ಸೆ.28 ಛತ್ತೀಸ್ಗಢ
ಸೆ.29 ಮುಂಬೈ
ಅ.3 ಸೌರಾಷ್ಟ್ರ
ಅ.7 ಗೋವಾ
ಅ.9 ಆಂಧ್ರ
ಅ.13 ಕೇರಳ
ವಿನಯ್ ತಂಡಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಿಂದ ನಾವು ಬಹಳಷ್ಟು ಕಲಿತಿದ್ದೇವೆ. ಆದರೆ ಅವರ ಅನುಪಸ್ಥಿತಿ ಕಾಡುವುದಿಲ್ಲ. ನಮ್ಮ ತಂಡ ಬಲಿಷ್ಠವಾಗಿದೆ. ಅದ್ಭುತ ಪ್ರತಿಭೆಗಳಿದ್ದಾರೆ. ಕಳೆದ ವರ್ಷ ಸಾಂಘಿಕ ಪ್ರದರ್ಶನದಿಂದ ಮುಷ್ತಾಕ್ ಅಲಿ 20 ಟೂರ್ನಿ ಗೆದ್ದಿದ್ದೆವು. ಈ ಬಾರಿಯೂ ಒಟ್ಟಿಗೆ ಆಡಬೇಕಿದೆ’.
- ಮನೀಶ್ ಪಾಂಡೆ, ಕರ್ನಾಟಕ ತಂಡದ ನಾಯಕ
‘ಕಳೆದ ವರ್ಷ ಕೆಪಿಎಲ್ ಮುಗಿದ ಮೂರೇ ದಿನಕ್ಕೆ ವಿಜಯ್ ಹಜಾರೆ ಟೂರ್ನಿ ಆರಂಭವಾಗಿತ್ತು. ಹಾಗಾಗಿ ಸರಿಯಾಗಿ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಸೆ.10ರಿಂದಲೇ ಅಭ್ಯಾಸ ಆರಂಭಿಸಿದ್ದೇವೆ. ಸವಾಲಿಗೆ ನಾವು ಸಿದ್ಧರಿದ್ದೇವೆ’.
- ಯರ್ರೇ ಗೌಡ್, ಕರ್ನಾಟಕ ತಂಡದ ಕೋಚ್
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ[ಮಳೆಯ ಅಡಚಣೆ, ತಡವಾಗಿ ಆರಂಭವಾಗುವ ಸಾಧ್ಯತೆ]